Advertisement

ಜನರ ಹೃದಯದಲ್ಲಿ ಉಳಿದ ‘ಸಾಂಗ್ಲಿಯಾನ’: ಡಿವೈಎಸ್ಪಿ

04:18 PM Nov 10, 2019 | Naveen |

ಯಾದಗಿರಿ: ಶಂಕರನಾಗ್‌ ಅವರ ಕ್ರಿಯಾಶೀಲತೆ, ಸೃಜನಶೀಲತೆಯಿಂದಾಗಿ ಇಂದಿಗೂ ಜನರ ಮನದಲ್ಲಿ ಅದರಲ್ಲೂ ವಿಶೇಷವಾಗಿ ಆಟೋ ಚಾಲಕರ ಮನದಲ್ಲಿ ಉಳಿದುಕೊಂಡಿದ್ದಾರೆ ಎಂದು ಡಿವೈಎಸ್ಪಿ ಯು. ಶರಣಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಮಂಟಪದಲ್ಲಿ ನಗರದ ಶಂಕರನಾಗ್‌ ಆಟೋ ಚಾಲಕರ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಿ| ಶಂಕರನಾಗ್‌ 65ನೇ ಹುಟ್ಟು ಹಬ್ಬದ ಅಂಗವಾಗಿ ಆಟೋರಾಜ ಶಂಕರನಾಗ್‌ ಆಟೋ ನಿಲ್ದಾಣ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರನಾಗ್‌ ಅತ್ಯಲ್ಪ ಸಮಯದಲ್ಲಿನ ಕನ್ನಡ ಚಿತ್ರರಂಗಕ್ಕೆ, ನಾಡು-ನುಡಿಗೆ ನೀಡಿದ ಕೊಡುಗೆ ಅಪಾರವಾಗಿತ್ತು. ಅಂತಹ ಕಲಾವಿದ ಕನ್ನಡದ ಹೆಮ್ಮೆಯಾಗಿದ್ದು, ವಿಶೇಷವಾಗಿ ಆಟೋ ಚಾಲಕರ ಪರವಾದ ಸಿನಿಮಾ ಮಾಡುವ ಮೂಲಕ ಅವರು ಜನಸಾಮಾನ್ಯರ ಪರವಾದ ನಟ ಎಂಬುದನ್ನು ಬಿಂಬಿಸಿದ್ದರು. ಅವರು ಬದುಕಿದ ಅಲ್ಪ ಅವಧಿಯಲ್ಲಿ ಮಹತ್ವದ ಸಂದೇಶ ಕೊಟ್ಟು ಹೋದರು ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಆಟೋ ಚಾಲಕರಾದ ಭಾಗಪ್ಪ ರಾಗೇರ್‌, ಮಲ್ಲಯ್ಯ ಕೊತ್ವಾಲ್‌, ಮಲ್ಲಪ್ಪ ಅರಿಕೇರಾ, ಲಕ್ಷ್ಮಣ ಚವ್ಹಾಣ್‌, ಅಯ್ಯಪ್ಪ ಮುಂಡರಗಿ ಮುಂತಾದವರನ್ನು ಸನ್ಮಾನಿಸಲಾಯಿತು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ, ನಗರ ಠಾಣೆ ಪಿ.ಎಸ್‌.ಐ. ಕೃಷ್ಣ ಸುಬೇದಾರ್‌, ಮಹಿಳಾ ಠಾಣೆ ಪಿ.ಎಸ್‌.ಐ. ನಾಗಮ್ಮ ಕಲ್ಬುರ್ಗಿ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಅಧ್ಯಕ್ಷೆ ರೇಣುಕಾ ಸರಡಗಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಲಕ್ಷ್ಮಣ ಚವ್ಹಾಣ್‌, ಸುರಪುರದ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಾಘವೇಂದ್ರ, ಸುರಪುರ ತಾಲೂಕಿನ ಡಾ| ವಿಷ್ಣು ಸೇನಾ ಸಮಿತಿ ಮತ್ತು ಕನ್ನಡ ಸೇನಾ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಷ್ಣುಸೇನಾ ತಾಲೂಕು ಅಧ್ಯಕ್ಷ ಮಲ್ಲು, ನಗರ ಘಟಕ ಅಧ್ಯಕ್ಷ ರಾಮಕೃಷ್ಣ ನಾಯಕ್‌, ಕನ್ನಡ ಸೇನೆ ಅಧ್ಯಕ್ಷರು ಮಲ್ಲು ಕೊಡಿಮಠ, ಸದಸ್ಯ ದೇವರಾಜ್‌ ನಾಯಕ್‌ ಇದ್ದರು. ಇದೇ ಸಂದರ್ಭದಲ್ಲಿ ಗಂಗಾವತಿಯಿಂದ ಆಗಮಿಸಿದ್ದ ಅಂಧ ಕಲಾವಿದರಾದ ಚಂಪಕಮಾಲ ಸೇರಿದಂತೆ ಇತರರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next