ಕೊಣಾಜೆ : ಬಹು ಭಾಷಾ ಕವಿಗೋಷ್ಠಿ ಹಾಗೂ ಇನ್ನಿತರ ಕಾರ್ಯಕ್ರಮಗಳು ಪ್ರತಿ ವರ್ಷ ನಿಯತವಾಗಿ ನಡೆಯುವ ಕಾರ್ಯಕ್ರಮ ಗಳಾದರೂ ವಿಶಿಷ್ಟವಾದ ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಬರವಣಿಗೆಯ
ಭೂಮಿಕೆಯನ್ನು ಸಿದ್ಧಪಡಿಸಲು ಉತ್ತಮ ವೇದಿಕೆಗಳನ್ನು ನೀಡುತ್ತವೆ ಎಂದು ಡಾ| ನರಸಿಂಹಮೂರ್ತಿ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿ ಮತ್ತು ಭಿತ್ತಿ ಪತ್ರಿಕೆಯ ವಾರ್ಷಿಕ ಸಂಚಿಕೆಯ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕವನ ರಚನೆ ಅನ್ನುವುದು ಸ್ವಪರಿ ಶ್ರಮದಿಂದ, ಸಾಧನೆಯಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಮುಂದುವರಿದಾಗ ಮಾತ್ರ ಸಾಧ್ಯ. ಆರಂಭದಲ್ಲಿ ಅದು ತೊದಲು ನುಡಿಯಾಗಿರಲೀ ಸರಳ ನುಡಿಯಾಗಲೀ ಬರೆಯಲು ಪ್ರಕಟಿಸಲು ಪ್ರಯತ್ನಿಸಿ. ಸಂಕೀರ್ಣತೆ, ಸಂಕ್ಷಿಪ್ತತೆ ಕವನ ರಚನೆಯ ಸಂದರ್ಭ ಗಮನಿಸಬೇಕಾದುದು ಅವಶ್ಯ. ವಿದ್ಯಾರ್ಥಿದೆಸೆಯಲ್ಲಿ ಈ ತರಹದ ಕಾರ್ಯಕ್ರಮಗಳು ಜೀವನದಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದುವರಿಯಲು ಸಹಕಾರಿ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ| ಧನಂಜಯ ಕುಂಬ್ಳೆ ಮಾತನಾಡಿ, 1991ರಲ್ಲಿ ಭಿತ್ತಿ ಪತ್ರಿಕೆ ಆರಂಭವಾಗಿ ಸುಮಾರು 27 ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿದ್ದು, ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಾವು ಭಿತ್ತಿ ಬೆಳೆಸಬೇಕು ಎಂಬುದಕ್ಕೆ ರೂಪಕವಾಗಿ ಇಟ್ಟಂತಹ ಅರ್ಥಪೂರ್ಣವಾದ ಹೆಸರು ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ| ಬಿ. ಶಿವರಾಮ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ| ನಾಗಪ್ಪ ಗೌಡ ಆರ್., ಡಾ| ರಾಜ ಶ್ರೀ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭಿತ್ತಿ ಪತ್ರಿಕೆಯ ಸಂಪಾದಕ ಹನಮಂತಪ್ಪ ಬನ್ನಿ ಸ್ವಾಗತಿಸಿದರು. ರಾಕೇಶ್ ಕುಡಿಗನೂರ ಅವರು ಕಾರ್ಯಕ್ರಮ ನಿರೂಪಿಸಿದರು
ಬಹುಭಾಷಾ ಕವಿಗೋಷ್ಠಿ
ಬಹುಭಾಷಾ ಕವಿಗೋಷ್ಠಿಯಲ್ಲಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ಯುವ ಕವಿಗಳಾದ ಹರ್ಷ ಗಣೇಶ್, ಅಮಿತ್ ಮಾ. ಕುಡಚೆ, ಶ್ರೀ ವಾಣಿ, ಮೈತ್ರಿ ಭಟ್, ವಿನಾಯಕ ಸಂಕದ, ಗುರುಕಿರಣ್, ಉಮಾಶಂಕರ ಕೇಳತ್ತಾಯ, ಆರ್ಷಿಯ, ಅತೀಕ್, ಲತಾ ಶೆಣೈ, ರಮೇಶ ಆರ್. ಮತ್ತು ರಾಕೇಶ್ ಕುಡಿಗನೂರ ಅವರು ತಮ್ಮ ಕವನಗಳನ್ನು ವಾಚಿಸಿದರು.