Advertisement

ಗುನ್ನಳ್ಳಿಯಲ್ಲಿ ಶಿಲಾಯುಗದ ಗವಿಚಿತ್ರಗಳು ಪತ್ತೆ

09:35 PM Jun 29, 2021 | Team Udayavani |

ವರದಿ: ದತ್ತು ಕಮ್ಮಾರ

Advertisement

ಕೊಪ್ಪಳ: ತಾಲೂಕಿನ ಗುನ್ನಳ್ಳಿ ಗ್ರಾಮದ ಚಿಲಕನಮಟ್ಟಿ ಬೆಟ್ಟದಲ್ಲಿ ಶಿಲಾಯುಗ ಕಾಲದ ಗವಿಚಿತ್ರಗಳು ಮತ್ತು ಚಾರಿತ್ರಿಕ ಕಾಲದ ಬಣ್ಣದಲ್ಲಿ ಬರೆದಿರುವ ಶಾಸನಗಳು ಪತ್ತೆಯಾಗಿವೆ.

ಜಿಲ್ಲೆಯ ಇತಿಹಾಸ ಸಂಶೋಧಕ ಡಾ| ಶರಣಬಸಪ್ಪ ಕೋಲ್ಕಾರ ಈ ಚಿತ್ರಿತ ನೆಲೆ ಪರಿಶೋಧಿ  ಸಿದ್ದು, ಅತ್ಯಂತ ಪ್ರಾಚೀನ ಇತಿಹಾಸ ಸಾರುವ ಈ ಚಿತ್ರ, ಬರಹಗಳ ರಕ್ಷಣೆ ಮಾಡಬೇಕಿದೆ. ಇದರ ಮೇಲೆ ಇನ್ನು ಹೆಚ್ಚಿನ ಅಧ್ಯಯನ ನಡೆದರೆ ಇತಿಹಾಸದ ದೊಡ್ಡ ಹೂರಣವೇ ದೊರೆಯಲಿದೆ ಎನ್ನುವ ಅಭಿಮತ ವ್ಯಕ್ತಪಡಿಸಿದ್ದಾರೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಕೊಪ್ಪಳದಿಂದ ನೈರುತ್ಯಕ್ಕೆ ಸುಮಾರು 10 ಕಿ.ಮೀ.ದೂರದಲ್ಲಿನ ಗುನ್ನಳ್ಳಿದ ಪೂರ್ವಕ್ಕೆ ಒಂದು ಕಿ.ಮೀ. ಅಂತರದಲ್ಲಿ ಚಿಲಕಮಟ್ಟಿ ಬೆಟ್ಟವಿದ್ದು, ಬೆಟ್ಟದಲ್ಲಿ ಉತ್ತಮ ದರ್ಜೆಯ ಕಪ್ಪುಚುಕ್ಕೆ ಮಿಶ್ರಿತ ಬಿಳಿ ಗ್ರಾನೈಟ್‌, ಕಪ್ಪುಚುಕ್ಕೆ ಮಿಶ್ರಿತ ಪಿಂಕ್‌ ಗ್ರಾನೈಟ್‌ ಮತ್ತು ಗಷ್ಟು ಶಿಲೆಯಿಂದ ರಚನೆಯಾದ ಬೆಟ್ಟವಾಗಿದೆ. ಸುಮಾರು 400 ಮೀಟರ್‌ ಎತ್ತರದ ಬಿಡಿ ಬೆಟ್ಟದಲ್ಲಿ ಅಪರೂಪದ ಮಯೂರ ಶಿಖೆ, ಟಿಕ್ಕಿ ಮುಂತಾದ ವನಸ್ಪತಿ ಸಸ್ಯಗಳು ಕಂಡು ಬಂದಿವೆ. ಬೆಟ್ಟದ ಮೇಲ್ಭಾಗದಲ್ಲಿ ಎರಡು ಕಲ್ಲಾಸರೆಗಳಲ್ಲಿ ಪ್ರಾಕ್ಚಾರಿತ್ರಿಕ ಕಾಲದ ವರ್ಣಚಿತ್ರಗಳು, ಬಿಡಿ ಬರಹಗಳು ಕಂಡು ಬಂದಿವೆ. ಅವುಗಳಿಗೆ ಜಿಸಿಪಿಆರ್‌ಎಸ್‌-1 ಮತ್ತು ಜಿಸಿಪಿಆರ್‌ಎಸ್‌-2 ಎಂದು ಹೆಸರಿಸಿದ್ದು, ಮೊದಲ ಕಲ್ಲಾಸರೆ ಬೆಟ್ಟದಲ್ಲಿ 300 ಮೀಟರ್‌ ಎತ್ತರದ ಭಾಗದಲ್ಲಿ ದಕ್ಷಿಣಾಭಿಮುಖೀಯಾಗಿದೆ. 5 ಅಡಿ ಅಗಲ, 7 ಅಡಿ ಉದ್ದದ ಒಳ ವಿಸ್ತಾರ ಹೊಂದಿದೆ.

ದ್ವಿಬದಿ ಇಳಿಜಾರು ಛಾವಣಿಯಿದ್ದು, ಅದರ ವಿನ್ಯಾಸಕ್ಕೆ ಅನುಗುಣವಾಗಿ ಛಾವಣಿಯ ಎರಡೂ ಕಡೆ ಅಲಂಕಾರಿಕ ತೋರಣದ ಕೆಂಪುವರ್ಣದ ಚಿತ್ರ ಗಮನ ಸೆಳೆಯುತ್ತದೆ. ಪರಸ್ಪರ ಕೈ ಕೈ ಹಿಡಿದುಕೊಂಡು ನರ್ತಿಸುತ್ತಿರುವ ಆದಿ ಮಾನವರ ಚಿತ್ರಗಳನ್ನು ಹೋಲುವ ಇದು ಆ ದೃಷ್ಟಿಯಿಂದ ವಿಶೇಷ ರಚನೆ ಎನಿಸುತ್ತದೆ ಎಂದಿದ್ದಾರೆ. ಇನ್ನು 2ನೇ ಕಲ್ಲಾಸರೆಯು ಬೆಟ್ಟದಲ್ಲಿ ಮುಂಬದಿಯ ಗುಂಡೊಂದು ಕಂಬದಂತೆ ವಿಶಾಲ ಛಾವಣಿ ಬಂಡೆಗೆ ಆಧಾರವಾಗಿದೆ. ಇದಕ್ಕೆ ಪಲ್ಲಕ್ಕಿ ಗುಂಡು ಎಂದು ಸ್ಥಳೀಯರು ಕರೆಯುತ್ತಿದ್ದು, ಈಶಾನ್ಯಾಭಿಮುಖೀಯಾಗಿರುವ ಈ ಕಲ್ಲಾಸರೆಯ ಛಾವಣಿ 6 ಫಿಟ್‌ ಎತ್ತರವಿದೆ. ವಿಶಾಲ ಬಂಡೆಯ ಒಳಭಾಗದಲ್ಲಿ ಹಲವಾರು ಚಿತ್ರ, ಬರಹಗಳಿವೆ. ಅವುಗಳಲ್ಲಿ ಪರಸ್ಪರ ಎದರು ಬದುರಾಗಿ ನಿಂತ ಎತ್ತುಗಳು, ಅಲಂಕೃತವಾದ ಎತ್ತು, ಬಲಿಷ್ಠ ಗೂಳಿ, ಶಿಶ° ನಿಮಿರಿತ ಎತ್ತು, ಕವಲುಕೋಡಿನ ಗಂಡು ಜಿಂಕೆ, ಸಮವಿನ್ಯಾಸ ವೃತ್ತಗಳು, ರಂಗೋಲಿ ಚಿತ್ರಗಳಿವೆ.

Advertisement

ಈ ಚಿತ್ರಗಳ ಶೈಲಿ ಮತ್ತು ಕಲ್ಲಾಸರೆಯಲ್ಲಿ ದೊರೆತ ಮಡಕೆ ಚೂರುಗಳ ಆಧಾರದ ಮೇಲೆ ಇವು ಇಂದಿಗೆ 3000 ವರ್ಷಗಳ ಹಿಂದಿನವು ಎಂದು ಗುರುತಿಸಬಹುದು ಎಂದಿದ್ದಾರೆ. ಅಂದರೆ ಕ್ರಿ.ಶ.ಪೂ. 1200ರಿಂದ ಕ್ರಿ.ಶ.ಪೂ 200ರವರೆಗೆ ಈ ಬೆಟ್ಟದಲ್ಲಿ ವಾಸವಾಗಿದ್ದ ಕಬ್ಬಿಣಯುಗ-ಬೃಹತ್‌ ಶಿಲಾಯುಗದ ಪಶುಪಾಲಕ ಸಮುದಾಯದವರು ಈ ಚಿತ್ರಗಳ ರಚನೆಕಾರರು ಎಂದೆನ್ನಲಾಗಿದ್ದು, ತಮ್ಮ ಬದುಕಿನ ಅನುಭವಗಳನ್ನು ಚಿತ್ರ ಸಂಕೇತಗಳ ಮೂಲಕ ಅಭಿವ್ಯಕ್ತಿಪಡಿಸಿದಂತಿದೆ. ಹಾಗಾಗಿ ಅಕ್ಷರ ರೂಪುಗೊಳ್ಳದ ಆ ಕಾಲದ ಮಾನವ ಜೀವನ ಸಂಸ್ಕೃತಿಯನ್ನು ತಿಳಿಯಲು ಈ ಚಿತ್ರಗಳು ಪ್ರಮುಖ ಆಕರಗಳಾಗಿವೆ. ಇನ್ನು ಇದೇ ಕಲ್ಲಾಸರೆಯಲ್ಲಿ ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಬರೆದ ಬರಹಗಳಿವೆ.

ಕೆಂಪುಬಣ್ಣದಲ್ಲಿ ಕ್ರಿ.ಶ. 1ನೇ ಶತಮಾನದ ಶಾತವಾಹನ ಕಾಲದ ಬ್ರಾಹ್ಮಿ ಲಿಪಿಯ ಸನ(ಕ)ಸ ಎಂಬ ಬರಹ ಗಮನಾರ್ಹವಾಗಿದೆ. ಕೆಲ ವರ್ಷಗಳ ಹಿಂದೆ ಪುರಾತತ್ವ ಪಂಡಿತ ಡಾ| ಅ. ಸುಂದರ ಅವರು ಕೊಪ್ಪಳ ಬೆಟ್ಟದಲ್ಲಿ ಬಾದಾಮಿ ಚಾಲುಕ್ಯರ ಕಾಲದ ಕೆಂಪುಬಣ್ಣದ ಬರಹಗಳನ್ನು ಗುರುತಿಸಿದ್ದರು. ಮಧ್ಯಯುಗೀನ ಕಾಲದ ಬಿಳಿ ಬಣ್ಣದಲ್ಲಿ ದಾನವೀರಪ್ಪ ಎಂದು, ಶ್ರೀ ಎಂದು ಬರೆಯಲಾಗಿದೆ. ಅಕ್ಷರಗಳು ಬಹಳಷ್ಟು ಮಾಸಿರುವುದರಿಂದ ಸ್ಪಷ್ಟವಾಗಿಲ್ಲ. ಗುನ್ನಳ್ಳಿಯ ಈ ಚಿತ್ರಗಳಿಂದ ಕೊಪ್ಪಳ ಪರಿಸರದ ಆದಿಮ ಸಂಸ್ಕೃತಿಯನ್ನು ಮತ್ತಷ್ಟು ಅರಿಯಲು ಸಹಾಯಕವಾಗಲಿವೆ ಎಂದು ಅವರು ಈಚೆಗೆ ಬೆಟ್ಟಕ್ಕೆ ತೆರಳಿ ಅಧ್ಯಯನ ಮಾಡಿ ಮಾಹಿತಿ ನೀಡಿದ್ದಾರೆ. ಚಿತ್ರಗಳ ಶೋಧನೆಯಲ್ಲಿ ಡಾ| ಜಾಜಿ ದೇವೇಂದ್ರಪ್ಪ, ಗ್ರಾಮದ ಯುವಕರಾದ ಅಶೋಕ, ಮುತ್ತು, ಗಿರಿಯಪ್ಪ ಮತ್ತು ಪವಾಡೆಪ್ಪ ಅವರು ತೊಡಗಿ ಸಂಶೋಧಕರಿಗೆ ನೆರವಾಗಿ, ಪ್ರಾಚೀನ ಕಾಲದ ಕುರುಹು, ಇತಿಹಾಸವನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.

ಕೊಪ್ಪಳ, ಗುನ್ನಳ್ಳಿ, ಶಿಲಾಯುಗ, ಗವಿಚಿತ್ರ,

 

Advertisement

Udayavani is now on Telegram. Click here to join our channel and stay updated with the latest news.

Next