Advertisement

Malati pattanashetti: ಭರಪೂರ ತುಂಬಿಕೊಂಡ ವೇದನೆಗಳಿಂದಾಗಿ ಕಾವ್ಯ ಹುಟ್ಟಿತು

04:51 PM Dec 31, 2023 | Team Udayavani |

ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ  ಸಾಹಿತ್ಯ ರಚನೆ ಮತ್ತು ಪ್ರಸಾರಗಳೆರಡರಲ್ಲಿಯೂ ತೊಡಗಿಸಿಕೊಂಡವರು. ಅವರಿಗೀಗ 83ರ ಸಂಭ್ರಮ. ಅವರ ಸಾಹಿತ್ಯಕ ಮತ್ತು ಮಾನವೀಯ ಸಂಬಂಧಗಳನ್ನು ಗೌರವಿಸುವ ಸಲುವಾಗಿ ಅವರ ಕುಟುಂಬ ಮತ್ತು ಗೆಳೆಯರ ಬಳಗ ಇತ್ತೀಚೆಗೆ ಧಾರವಾಡದಲ್ಲಿ ಆತ್ಮೀಯ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ನೆಪದಲ್ಲಿ ಅವರ ಜತೆಗಿನ ಮಾತುಕತೆ ಇಲ್ಲಿದೆ.

Advertisement

1.ಧಾರವಾಡದ ಪರಿಸರ ನಿಮ್ಮ ಸಾಹಿತ್ಯಕ ಬೆಳವಣಿಗೆಗೆ ಹೇಗೆ ಅನುಕೂಲವಾಯ್ತು?

ನನ್ನ ಸಾಹಿತ್ಯ ರಚನೆಗೆ ನನ್ನ ಮನೆಯಲ್ಲಿಯ ಶೈಕ್ಷಣಿಕ ವಾತಾವರಣವು ಹೆಚ್ಚು ಅನುಕೂಲಕರವಾಗಿತ್ತು. ನನ್ನ ತಂದೆ, ನನ್ನ ಅಜ್ಜ, ಅಕ್ಕ ಮತ್ತು ನನ್ನ ಗುರುಗಳು ಇವರೆಲ್ಲರ ಪ್ರೋತ್ಸಾಹವಿತ್ತು. ಮುಖ್ಯವಾಗಿ ಬರೆಯಬೇಕೆಂಬ ಒಳಗಿನ ಪ್ರೇರಣೆ ಮತ್ತು ತುಡಿತವಿತ್ತು.

2. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ನೀವು ಮಾಡಿದ ಯಾವ ಯೋಜನೆಗಳು ನಿಮಗೆ ತೃಪ್ತಿ ತಂದವು?

ನಾನು ಕನಸು ಕಂಡಂತೆ ಎಲ್ಲ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೂ ನನಗೆ ಅಕಾಡೆಮಿಯಲ್ಲಿ ಮಾಡಿದ ಕೆಲಸಗಳು ತೃಪ್ತಿ ತಂದಿವೆ. ಉದಾಹರಣೆಗೆ, ರಾಜ್ಯಮಟ್ಟದ ಯುವಜನರಿಗಾಗಿ, ಮಹಿಳೆಯರಿಗಾಗಿ ಮತ್ತು ದಲಿತರಿಗಾಗಿ ಆಯೋಜಿತವಾದ ಸಮ್ಮೇಳನಗಳು. ಸಾಹಿತ್ಯ ಪ್ರಕಾರಗಳ ರಚನೆಗಾಗಿ ಆಯೋಜಿತವಾದ ಕಮ್ಮಟಗಳು, ವಿದ್ಯಾರ್ಥಿಗಳಿಂದ ಸಂಶೋಧನಾತ್ಮಕ ಬರಹ ಬರೆಸುವ ಫೆಲೋಷಿಪ್‌ ಯೋಜನೆ ಹೆಚ್ಚು ತೃಪ್ತಿ ಕೊಟ್ಟಿವೆ.

Advertisement

3. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕಾವ್ಯವೇ ನಿಮ್ಮ ಅಭಿವ್ಯಕ್ತಿಯ ಮಾಧ್ಯಮವಾದದ್ದು ಏಕೆ? ಮಹಿಳಾ ಚಳವಳಿ ಈಗ ತಾತ್ವಿಕ, ಸಾಹಿತ್ಯಕ ಸಾಮಗ್ರಿ ಕಡಿಮೆಯಾಗಿ ಚಳುವಳಿ ಸೊರಗಿದೆ ಎನ್ನಿಸುವುದಿಲ್ಲವೆ?

ಕಾವ್ಯ ನನ್ನ ಅಭಿವ್ಯಕ್ತಿಯ ಮಾಧ್ಯಮವಾದದ್ದು ಏಕೆಂದರೆ ನನ್ನಲ್ಲಿ  ಭರಪೂರವಾಗಿ ತುಂಬಿಕೊಂಡ ವೇದನೆಗಳು. ಇವುಗಳ ತೀವ್ರತೆಗೆ ಸಾಹಿತ್ಯದ ಬೇರೆ ಪ್ರಕಾರಗಳು ಯೋಗ್ಯವಾಗಲಾರವು. ಇಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಚಳುವಳಿಗಳು ಆಗುತ್ತಿಲ್ಲ, ವೈಯಕ್ತಿಕ ನೆಲೆಯಲ್ಲಿ ಒಬ್ಬಿಬ್ಬರಿದ್ದಾರೆ ಚಳವಳಿಗಾರರು, ಆದರೆ ಸಂಘಟಿತರಾಗುತ್ತಿಲ್ಲ. ವೈಯಕ್ತಿಕ ಪ್ರಗತಿಯಲ್ಲಿ ಅನೇಕರು ತೊಡಗಿಕೊಂಡಿದ್ದಾರೆ.

4.ಮಕ್ಕಳ ಸಾಹಿತ್ಯವನ್ನು ರಚಿಸಿರುವ ನಿಮಗೆ ಅದರ ವಿಮರ್ಶೆ ಅನಾದರದಿಂದ ಸೊರಗಿದೆ ಎಂದು ಅನಿಸುತ್ತಿದೆಯಾ? ಮಕ್ಕಳ ಸಾಹಿತ್ಯದ ಬಗೆಗೆ ಮುಕ್ತತೆ ಯಾಕಿಲ್ಲ?

ಮಕ್ಕಳ ಸಾಹಿತ್ಯವೂ ಸೊರಗಿದೆ, ಮಕ್ಕಳ ಸಾಹಿತಿಗಳ ಮನಸ್ಸು ಸಹ. ಇದಕ್ಕೆ ಕಾರಣ ಸಾಹಿತಿಗಳ ಮತ್ತು ವಿಮರ್ಶಕರ ಅನಾದರ, ನಿರಾಸಕ್ತಿ. ಇವುಗಳಿಂದ ಮುಕ್ತರಾಗಿ ಮಕ್ಕಳ ಸಾಹಿತಿಗಳು  ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು. ಹಿಂದೆ ಸರ್ಕಾರ ಕನ್ನಡ ಸಾಹಿತ್ಯ  ಪರಿಷತ್ತಿನಂಥ ಸಂಸ್ಥೆಗಳು ಮಕ್ಕಳಿಗಾಗಿಯೇ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು. ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳು ಇನ್ನಷ್ಟು  ವ್ಯಾಪಕವಾಗಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಬೇಕು. ಪ್ರತಿ ಶಾಲೆಗೆ ಹೋಗಿ ಮಕ್ಕಳಲ್ಲಿ ಸಾಹಿತ್ಯದ ಓದಿನ ಅಭಿರುಚಿಯನ್ನು ಹೆಚ್ಚಿಸಬೇಕು

5.ಇಂದಿನ ಸಾಹಿತ್ಯ ವಲಯ ವಾದ-ಸಿದ್ಧಾಂತಗಳ ಭಾರಕ್ಕೆ ಮೂಲ ಪ್ರವೃತ್ತಿಯಿಂದ ಹಿಂದೆ ಸರಿದಿದೆ ಎನ್ನಿಸುತ್ತಿದೆಯೇ?

ನನಗೆ ಹಾಗೆನ್ನಿಸುವುದಿಲ್ಲ. ಇಂದಿನ ಯುವ ಸಾಹಿತಿಗಳು ತಮ್ಮದೇ ಸಿದ್ಧಾಂತಗಳನ್ನು ರೂಪಿಸಿಕೊಂಡು ಬರೆಯುತ್ತಿದ್ದಾರೆ. ಪುರುಷರಿಗಾಗಲಿ, ಮಹಿಳೆಯರಿಗಾಗಲಿ ಸಿದ್ಧಾಂತಗಳನ್ನು ಬಳಸಿ, ಬರೆಯುವುದು ಸುಲಭ ಸಾಧ್ಯವಲ್ಲ. ಸಮಾಜದ ಸ್ಥಿತಿ-ಗತಿಗಳನ್ನು ಗಮನದಲ್ಲಿಟ್ಟು ಕೊಂಡು ಜವಾಬ್ದಾರಿಯಿಂದ ಬರೆಯಬೇಕು. ಹಿರಿಯರು ಕಿರಿಯರ ಬರಹಗಳನ್ನು ಓದಬೇಕು. ಕಿರಿಯರು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಬೇಕು.

ಸಂದರ್ಶನ:

ಆನಂದ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next