Advertisement

World Tourism Day 2023: ಪ್ರಕೃತಿ ಸೌಂದರ್ಯದ “ಕುಕ್ಕೆ ಸುಬ್ರಹ್ಮಣ್ಯ”

10:46 AM Sep 26, 2023 | Team Udayavani |

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಧಾರ್ಮಿಕ ಪ್ರಾಮುಖ್ಯತೆಯಿಂದ ಪ್ರಮುಖವಾದ ಸ್ಥಾನಮಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ನಾಗನಿಗೆ ಸಂಬಂಧಿಸಿದಂತಹ ದೋಷಗಳನ್ನು ನಿವಾರಿಸುವ ಗರಿಮೆಯನ್ನು ಎತ್ತಿ ತೋರಿಸುತ್ತಿದೆ. ಸುಂದರವಾದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ  ದೇವಾಲಯವಾಗಿದ್ದು ಪ್ರಕೃತಿ ಪ್ರಿಯರಿಗೆ ಮನಸೆಳೆಯುವಂತಿದೆ. ಐದು ಸಾವಿರ ವರ್ಷಗಳ ಇತಿಹಾಸವಿರುವ  ದೇವಾಲಯಗಳಲ್ಲಿ ಇದೊಂದಾಗಿದೆ . ದೇವಾಲಯದ ಸಮೀಪ ಇರುವ ಕುಮಾರಪರ್ವತವು ಚಾರಣಿಗರ ಜನಪ್ರಿಯ ಟ್ರಕ್ಕಿಂಗ್ ಸ್ಥಳವಾಗಿದೆ.  ಸುತ್ತಲೂ ಹಚ್ಚ ಹಸಿರು ಕಾಡುಗಳಿಂದ ಆವೃತ್ತವಾಗಿ ಹಿಂದೆ ಕುಕ್ಕೆ ಸುಬ್ರಹ್ಮಣ್ಯನನ್ನು ಕುಕ್ಕೆ ಪಟ್ಟಣವೆಂದು ಕರೆಯಲಾಗುತ್ತಿತ್ತು.ಆದಿ ಗುರು ಶಂಕರಾಚಾರ್ಯರು ತಮ್ಮ ದಂಡಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಉಳಿದುಕೊಂಡಿದ್ದರುವ ಎನ್ನುವ ಮಾತಿದೆ.

Advertisement

ಸರ್ಪದೋಷ ಎಂದಾಗ ಪ್ರತಿಯೊಬ್ಬರಲ್ಲೂ ಕುಕ್ಕೆ ಸುಬ್ರಹ್ಮಣ್ಯ ನೆನಪಾಗುತ್ತದೆ.ಇಲ್ಲಿ ಇರುವ ನಿಗೂಢವಾದ ಬಿಲದ್ವಾರವು ಎಲ್ಲರ ಕಣ್ಣು ಸೆಳೆಯುವಂತಿದೆ.ಕಷ್ಯಪ ಮಹಾ ಮುನಿ ಎನ್ನುವವರಿಗೆ ವಿನತ ಹಾಗೂ ಕದ್ರು ಸೇರಿ ಇಬ್ಬರೂ ಹೆಂಡತಿಯರು.ವಿನತನ  ಮಗು ಗರುಡ, ಕದ್ರುವಿನ ಮಕ್ಕಳು ಸರ್ಪಗಳು. ಒಂದು ದಿನ ಇದ್ದಕ್ಕಿದ್ದಂತೆ ಗರುಡ ಹಾಗೂ ಸರ್ಪಗಳಿಗೆ ಕದನ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಗರುಡ ಸಹಸ್ರಾರು ಹಾವುಗಳನ್ನು ತಿನ್ನಲು ಪ್ರಾರಂಭಿಸುತ್ತಾನೆ.

ಸರ್ಪಗಳು  ತಪ್ಪಿಸಿಕೊಳ್ಳಲು ಹಲವಾರು ಕಡೆಗಳಲ್ಲಿ ಅಡಗಿಕೊಳ್ಳುತ್ತಾರೆ. ಸರ್ಪಗಳ ರಾಜನಾದ ವಾಸುಕಿಯು ಸಹ್ಯಾದ್ರಿ ಮಡಿಲಿನ ಧಾರಾ ನದಿಯ ಪಕ್ಕದಲ್ಲಿರುವ ಗುಹೆಯೊಂದರಲ್ಲಿ ಅಡಗಿಕೊಳ್ಳುತ್ತಾನೆ ಆ ಗುಹೆ ಬಿಲದ್ವಾರ ಗುಹೆಯಾಗಿದೆ .ಈ ವಿಷಯ ತಿಳಿದ ಗರುಡನು ವಾಸುಕಿಯನ್ನು ಕೊಲ್ಲಲು ಬಿಲದ್ವಾರದ ಬಳಿ ಬರುತ್ತಾನೆ.ಆಗ ತಂದೆಯಾದ ಕಷ್ಯಪ್ಪ ಮಹಾ ಮುನಿ ಮಧ್ಯ ಪ್ರವೇಶಿಸುತ್ತಾರೆ. ವಾಸುಕಿಯು ಶಿವಭಕ್ತನಾಗಿರುವುದರಿಂದ ಆತನಿಂದ ಅನೇಕ ಲೋಕ ಕಲ್ಯಾಣ ಕೆಲಸ ಆಗಬೇಕಾಗಿದೆ ಆದ್ದರಿಂದ ಇವನನ್ನು ಕೊಲ್ಲಬೇಡ ಎಂದು ಗರುಡನಿಗೆ ಹೇಳಿದರು. ಹೀಗೆ ತಪ್ಪಿಸಿಕೊಂಡ ವಾಸುಕಿಯು ಸರ್ಪಕುಲವನ್ನು ಗರುಡನಿಂದ ರಕ್ಷಿಸಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿರುವ ಜಾಗದಲ್ಲಿ ಶಿವನ ಕುರಿತು ತಪಸ್ಸನ್ನು ಆಚರಿಸುತ್ತಾನೆ.ಈತನ ತಪಸ್ಸಿಗೆ ಮೆಚ್ಚಿದ ಶಿವ ಪಾರ್ವತಿಯರು ತನ್ನ ಮಗ ಸುಬ್ರಹ್ಮಣ್ಯನು ಸರ್ಪಗಳ ರಕ್ಷಣೆಗೆ ನಿಲ್ಲುತ್ತಾನೆಂದು ಅಭಯ ನೀಡುತ್ತಾನೆ. ಇದರಂತೆಯೇ ನೆಲೆನಿಂತಿರುವುದರಿಂದ ನಾಗಸ್ವರೂಪಿಯಾಗಿ ಈತನನ್ನು ಪೂಜಿಸುವ ಕ್ರಮವಿದೆ.ಇಂದಿಗೂ ಸಹ ಜಾತ್ರಾ ಸಮಯದಲ್ಲಿ ರಥವನ್ನು ಎಳೆಯಲು ಸುಬ್ರಹ್ಮಣ್ಯನ ನೆಲೆಗೆ ಕಾರಣವಾದ ಗರುಡ ಬಂದು ಸ್ಪರ್ಶಿಸಿದ ನಂತರವೇ ರಥವು ಎದ್ದೇಳುವುದು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.

ಅದೇ ರೀತಿ ಬಿಲದ್ವಾರ ಗುಹೆಯ ವಿಷಯ ಹೇಳುವುದಾದರೆ ಗುಹೆಯು ಬಹಳ ಕತ್ತಲಿನಿಂದ ಕೂಡಿದ್ದು ಎರಡು ದಾರಿಯನ್ನು ಹೊಂದಿದೆ. ಒಂದು ಉತ್ತರಕಾದರೇ ಇನ್ನೊಂದು ದಕ್ಷಿಣಕ್ಕೆ. ಉತ್ತರಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ ಕಾಶಿಗೆ ಹೋಗುತ್ತದೆ ಎಂಬುದು ಸ್ಥಳ ಪುರಾಣವಾಗಿದೆ. ನೂರಾರು ವರ್ಷಗಳ ಹಿಂದೆ ಜನರು ಇಲ್ಲಿಂದಾಗಿಯೇ ಕಾಶಿಗೆ ತೆರಳುತ್ತಿದ್ದರಂತೆ. ಹೀಗೇನೆ ದಕ್ಷಿಣದ ದಾರಿಯಲ್ಲಿ ಸುಮಾರು ನೂರು ಮೀಟರ್ ನಷ್ಟು ದೂರ ಸಾಗಬಹುದು. ಗುಹೆಯ ಹಿಂಭಾಗದಲ್ಲಿ ವಾಸುಕಿ ಪುಷ್ಪೋದ್ಯಾನ ಎಂಬ ಉದ್ಯಾನವನವು ಇದೆ. ಇಲ್ಲಿ ವಾಸುಕಿ ಮತ್ತು ಗರುಡ ಕಾದಾಡುವ ಸಂದರ್ಭದ ಕೆತ್ತನೆಯನ್ನು ಕಾಣಬಹುದು. ಬಿಲದ್ವಾರ ಗುಹೆಯು ನೈಸರ್ಗಿಕವಾಗಿ ನಿರ್ಮಾಣವಾಗಿದ್ದು ಪ್ರವೇಶದ್ವಾರ ಹಾಗೂ ನಿರ್ಗಮದ ದ್ವಾರವನ್ನು ಹೊಂದಿದೆ.

Advertisement

ಸುಬ್ರಹ್ಮಣ್ಯನು  ತಾರಾಕಾಸುರನನ್ನು ಕೊಂದು ರಕ್ತವಾದ ಆಯುಧವನ್ನು ಧಾರಾ   ನದಿಯಲ್ಲಿ ತೊಳೆಯುತ್ತಾರೆ ಅಂದಿನಿಂದ ಕುಮಾರಧಾರ ನದಿ ಎಂದು ಹೆಸರು ಪಡೆದುಕೊಳ್ಳುತ್ತದೆ. ನಂತರ ಸುಬ್ರಹ್ಮಣ್ಯ ಕುಮಾರ ಪರ್ವತಕ್ಕೆ ಬಂದಾಗ, ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಬಂದು ವಿವಾಹವಾಗುವಂತೆ ಹೇಳುತ್ತಾನೆ .ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವರುಗಳ ಮುಂದೆ ಕುಮಾರಧಾರ ನದಿಯ ತಪ್ಪಲಿನಲ್ಲಿ ಸುಬ್ರಹ್ಮಣ್ಯ ಮತ್ತು ದೇವಸೇನೆಯ ಮದುವೆ ನಡೆಯುತ್ತದೆ. ವಾಸುಕಿಯ ಇಚ್ಚೆಯಂತೆ ಪತ್ನಿಯೊಂದಿಗೆ ಇರಲು ಸುಬ್ರಹ್ಮಣ್ಯ ಇಚ್ಚಿಸಿದಾಗ  ವಿಶ್ವಕರ್ಮರು  ಮೂರ್ತಿಯನ್ನು ಮಾಡಿ ಕೊಡುತ್ತಾರೆ ಅದನ್ನು ಬ್ರಹ್ಮ ಎಲ್ಲರ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಇದೊಂದು ಸುಬ್ರಹ್ಮಣ್ಯನು ನೆಲೆಸಿರುವ ಕಥೆಯಾಗಿದೆ ಹಾಗೂ ಬಿಲದ್ವಾರ ಗುಹೆಯ ರಹಸ್ಯವಾಗಿದೆ.

ಕುಮಾರಧಾರ ನದಿಯಿಂದ  ದೇವಾಲಯದತ್ತ ಸಾಗುವಾಗ ಬಿಲದ್ವಾರ ಎನ್ನುವಲ್ಲಿ ಈ ಗುಹೆಯು ಬಲ ಬದಿಯಲ್ಲಿ ಕಾಣಸಿಗುತ್ತದೆ. ಸುಮಾರು ಒಂದೂವರೆ ಕಿಲೋ ಮೀಟರ್ ಇದೆ. ಹಾಗೇಯೇ ಮಂಗಳೂರಿನಿಂದ 105 ಕಿಲೋಮೀಟರ್, ಪುತ್ತೂರಿನಿಂದ 52 ಕಿಲೋಮೀಟರ್, ಉಪ್ಪಿನಂಗಡಿಯಿಂದ 52 ಕಿಲೋಮೀಟರ್, ಸುಳ್ಯದಿಂದ 40ಕಿಲೋಮೀಟರ್, ಮಡಿಕೇರಿಯಿಂದ 90 ಕಿಲೋಮೀಟರ್ ದೂರದಲ್ಲಿದೆ.

ಈ ಕ್ಷೇತ್ರದಲ್ಲಿ ಆಶ್ಲೇಷಾ ಪೂಜೆ, ಸರ್ಪಸಂಸ್ಕಾರ ನಡೆಸುವುದು ಶ್ರೇಷ್ಠ ಕಾರ್ಯವಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಸುಬ್ರಹ್ಮಣ್ಯನನ್ನು ಬಹಳ ಭಕ್ತಿಯಿಂದ ನಂಬಿ ಹರಕೆ ಹೊತ್ತು ಪೂಜಿಸುತ್ತಾರೆ. ಸಂತಾನ ಭಾಗ್ಯದ ಸಮಸ್ಯೆ ಇರುವವರು  ಸಹ ಸುಬ್ರಹ್ಮಣ್ಯನಿಗೆ ಹರಕೆ ಹೊರುತ್ತಾರೆ.

ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಮೂಲ ಮೃತ್ತಿಕೆ ಪ್ರಸಾದವನ್ನು ನೀಡುವ ಪದ್ಧತಿ ಇದೆ. ಇದನ್ನು ವರ್ಷದಲ್ಲಿ ಒಂದು ಬಾರಿ ಮಾತ್ರ ತೆಗೆಯುತ್ತಾರೆ ಅದು ಯಾವಾಗ ಎಂದರೆ  ಜಾತ್ರೆಗಿಂತ ಮೊದಲು ಕೊಪ್ಪರಿಗೆ ಏರುವ ದಿವಸದಂದು ಎಲ್ಲಾ ಭಕ್ತಾದಿಗಳು ಶುದ್ಧ ಪ್ರಸಾದವೇ ದೊರಕಲಿ ಎನ್ನುವ ಉದ್ದೇಶದಿಂದ ದೇವಾಲಯಕ್ಕೆ ಹೋಗುತ್ತಾರೆ.

ಅನನ್ಯ ಎಚ್ ಸುಬ್ರಹ್ಮಣ್ಯ ✍️

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು ಪತ್ರಿಕೋದ್ಯಮ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next