Advertisement

World Tiger Day: ಕಂಡನಾ ಹುಲಿರಾಯನು…ಹುಲಿಯೊಂದಿಗೆ ಮುಖಾಮುಖಿ

12:15 PM Jul 28, 2024 | Team Udayavani |

ದೇಶದಲ್ಲೇ ಮೊದಲ ಬಾರಿಗೆ ಹುಲಿಗೆ ರೇಡಿಯೋ ಕಾಲರ್‌ ತೊಡಿಸಿದವರು, ಆ ಮೂಲಕ ಹುಲಿಯ ಚಲನವಲನವನ್ನು ತುಂಬಾ ಹತ್ತಿರದಿಂದ ಕಂಡವರು ಕೆ. ಉಲ್ಲಾಸ ಕಾರಂತ. ಹುಲಿಯ ಕುರಿತಾಗಿ ಸಾಕಷ್ಟು ಸಂಶೋಧನೆ ಮಾಡಿರುವ ಅವರು, ಆ ಕಾರಣದಿಂದಲೇ ದೇಶ ವಿದೇಶಗಳಲ್ಲೂ ಪ್ರಖ್ಯಾತರು.  ಹುಲಿರಾಯನ ಗುಣ, ಸ್ವಭಾವ, ಬದುಕಿನ ರೀತಿ ನೀತಿ ಕುರಿತು ಖಚಿತವಾಗಿ ಹೇಳಬಲ್ಲ ಅವರು, ಹುಲಿಯೊಂದಿಗಿನ ತಮ್ಮ ಮುಖಾಮುಖಿ, ಒಡನಾಟ, ರೋಚಕ ಅನುಭವ ಮುಂತಾದ ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.   “ವಿಶ್ವ ಹುಲಿ ದಿನ’ದ ಸಂದರ್ಭಕ್ಕೆ  ಈ ವಿಶೇಷ ಲೇಖನ…

Advertisement

ಹುಲಿಯೊಂದಿಗೆ ನನ್ನ ಮೊದಲ ಮುಖಾಮುಖಿ 1955ರಲ್ಲಿ. ಪುತ್ತೂರಿನಲ್ಲಿ ಆಗ ದೇವಲ್‌ ಸರ್ಕಸ್‌ ಬಂದಿತ್ತು. ಪಂಜರದಲ್ಲಿಟ್ಟಿದ್ದ ಹುಲಿಯನ್ನು ನೋಡಿ, ಮಾರು ಹೋಗಿದ್ದೆ. ಹುಲಿಯನ್ನು ಅರಸುತ್ತ 1964ರಲ್ಲಿ ಕುದುರೆಮುಖ, 1967ರಲ್ಲಿ ನಾಗರಹೊಳೆ, ಮುಂದೆ ಭದ್ರಾ ಕಾಡಿನಲ್ಲೆಲ್ಲ ಅಲೆದಾಡಿದ್ದೆ. ಆಗ ಕಾಡಿನಲ್ಲಿ ವಿಪರೀತ ಬೇಟೆ ಆಗುತ್ತಿತ್ತು. ಅರಣ್ಯ ಇಲಾಖೆಯಿಂದ ಸರಿಯಾಗಿ ಗಸ್ತು ನಡೆಯುತ್ತಿರಲಿಲ್ಲ. ದನಕರುಗಳನ್ನು ಬೇಟೆ ಆಡುತ್ತದೆ ಎಂದು ಹುಲಿಯನ್ನು ಜನರು ಶಿಕಾರಿ ಮಾಡುತ್ತಿದ್ದರು. 1965ರಲ್ಲಿ ಕುದುರೆಮುಖದ ಫಾಸಲೆಯಲ್ಲಿ ನಾಲ್ಕು ಹುಲಿಗಳನ್ನು ವಿಷ ಹಾಕಿ ಸಾಯಿಸಿದ್ದರಂತೆ. 1972ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರು. ನಂತರ 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಬಂತು. ಈ ಕಾನೂನುಗಳು ಬಂದಮೇಲೆ ಅರಣ್ಯಾಧಿಕಾರಿಗಳು ವನ್ಯಜೀವಿಗಳ ರಕ್ಷಣೆಗೆ ಮಹತ್ವ ನೀಡಿದರು. ಆಗ ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ (ಐಎಫ್ಎಸ್‌) ಹುದ್ದೆ ಇರಲಿಲ್ಲ. ರಾಜ್ಯದ ಅಧಿಕಾರಿಗಳೇ ಕಾಡು ನೋಡಿಕೊಳ್ಳುತ್ತಿದ್ದರು. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಹೀಗೆ ಎಲ್ಲೆಲ್ಲಿ ರಾಜ್ಯ ಅರಣ್ಯ ಇಲಾಖೆ ಗಟ್ಟಿಯಿತ್ತೋ ಅಲ್ಲೆಲ್ಲ ಹುಲಿಗಳ ಸಂಖ್ಯೆ ಹೆಚ್ಚಾಯಿತು. ಕಾಡಿನಲ್ಲಿ ನಾನು ಮೊದಲು ಹುಲಿ ನೋಡಿದ್ದು 1981ರಲ್ಲಿ, ಉತ್ತರಾಖಂಡದ ಕಾರ್ಬೆಟ್‌ ಅಭಯಾರಣ್ಯಕ್ಕೆ ಭೇಟಿ ನೀಡಿದಾಗ. 1982ರ ನಂತರ ನಾಗರಹೊಳೆ, ಬಂಡೀಪುರ, ಭದ್ರಾ ಅಭಯಾರಣ್ಯಗಳಲ್ಲಿ ಸಾಕಷ್ಟು ಬಾರಿ ಹುಲಿಗಳನ್ನು ನೋಡಿದ್ದೇನೆ.

ರೇಡಿಯೋ ಕಾಲರ್‌  ತೊಡಿಸಿದ ಕ್ಷಣ!

ಹುಲಿಯೊಂದಿಗಿನ ಅತ್ಯಂತ ರೋಚಕ ಅನುಭವವೆಂದರೆ ಅವುಗಳಿಗೆ ನಾನು ರೇಡಿಯೋ ಕಾಲರ್‌ ಹಾಕುವಾಗ… ಭಾರತದಲ್ಲಿ ಮೊಟ್ಟಮೊದಲು ಈ ರೀತಿಯ ಪ್ರಯತ್ನವನ್ನು 1990ರಲ್ಲೇ ಮಾಡಿದ್ದು ನಾನೇ. ಮುಕ್ತವಾಗಿ ಅಲೆದಾಡುವ ಹುಲಿಗಳನ್ನು ಅರಿವಳಿಕೆ ನೀಡಿ ಹಿಡಿಯಲು ಹೊಸ ಮಾರ್ಗ ಯೋಜಿಸಿದ್ದೆ. ಅಂದು ಹುಲಿ ಬರಲೆಂದು ಒಂದು ಎಮ್ಮೆ-ಕರುಗಳನ್ನು ಕಾಡಲ್ಲಿ ಕಟ್ಟಲಾಗಿತ್ತು. ಆ ಕರುಗಳಿಗೆ ರೇಡಿಯೋ ಕಾಲರ್‌ ಹಾಕಿದ್ದೆ. ಹುಲಿ ಕರುವನ್ನು ಕೊಂದು ತುಸು ದೂರದಲ್ಲಿ ತಿನ್ನುತ್ತಿತ್ತು. ರೇಡಿಯೋ ಸಿಗ್ನಲ್‌ ಮೂಲಕ ಅದರ ಜಾಗ ಪತ್ತೆ ಹಚ್ಚಿ, ಅದರ ಸುತ್ತ 300 ಮೀ. ಉದ್ದದ ಬಿಳಿಬಟ್ಟೆಯ ಟಾಕೆಗಳಿಂದ ಸುತ್ತುವರೆದು ಕಟ್ಟಿ, ಹೊರಬರಲು ಒಂದು ದಾರಿ ಮಾತ್ರ ತೆರೆದಿಡಲಾಗಿತ್ತು. ಈ ಬಿಳಿಬಟ್ಟೆಯ ಬೇಲಿಯನ್ನು ಹಾರಿಹೋಗುವ ಸಾಮರ್ಥ್ಯ ಹುಲಿಗೆ ಇರುತ್ತದೆ. ಆದರೆ, ಹುಲಿ ಬಲು ಎಚ್ಚರದಿಂದ ಈ ಬೇಲಿಯನ್ನು ಹಾರದೆ ತಪ್ಪಿಸಿಕೊಂಡು ಹೊರಹೋಗುತ್ತದೆ. ಎರಡು ಸಾಕಾನೆ ಮತ್ತು ನನ್ನ ಸಿಬ್ಬಂದಿ ಹೋಗಿ, ಬಿಳಿಬಟ್ಟೆಯಿಂದ ತಪ್ಪಿಸಿಕೊಂಡು, ತೆರೆದಿರುವ ದಾರಿಯಲ್ಲಿ ಹುಲಿಯನ್ನು ಓಡಿಸಿದರು. ನಾನು ಅರಿವಳಿಕೆ ಬಂದೂಕು ಹಿಡಿದು ಮರದ ಕವಲಿನಲ್ಲಿ ಕಾದು ನಿಂತಿದ್ದೆ. ಹುಲಿ ಬಂದ ತಕ್ಷಣವೇ, ಡಾರ್ಟ್‌ ಗನ್‌ನಿಂದ ಗುರಿಯಿಟ್ಟು ಸಿರಿಂಜ್‌ ಹೊಡೆದೆೆ. ಸುಮಾರು 100 ಮೀಟರ್‌ ಮುಂದೆ ಹೋಗಿ ಪ್ರಜ್ಞೆ ತಪ್ಪಿ ಬಿತ್ತು. ಕೂಡಲೇ ಅದಕ್ಕೆ ರೇಡಿಯೋ ಕಾಲರ್‌ ತೊಡಿಸಿದೆ. ಫ್ಲಾರಿಡಾ ಯುನಿವರ್ಸಿಟಿಯಲ್ಲಿ ನನ್ನ ಗುರುಗಳಾಗಿದ್ದ ಡಾ. ಮೆಲ್ವಿನ್‌ ಸನ್‌ಕ್ವಿಸ್ಟ್‌ರಿಂದ ಈ ವಿಧಾನ ಕಲಿತಿದ್ದೆ.

Advertisement

ಆಗ ನಮ್ಮ ತಂಡದಲ್ಲಿ ರೇಂಜರ್‌ ಚಿನ್ನಪ್ಪನವರ ಜೊತೆಗೆ ನುರಿತ ಹತ್ತು ಜನ ಜಾಡುಗಾರರೂ ಇದ್ದರು. ಇಡೀ ತಂಡದ ಕಾರ್ಯದಿಂದ ಹುಲಿಗೆ ರೇಡಿಯೋ ಕಾಲರ್‌ ಹಾಕಿ, ನಂತರ ಅದರ ಚಲನವಲನ ಪತ್ತೆ ಮಾಡಿ ಸಂಶೋಧನೆ ಕೈಗೊಂಡಿದ್ದೆ. ಈಗೆಲ್ಲ ಸ್ಯಾಟಲೈಟ್‌ ನೆಟ್‌ವರ್ಕ್‌ನಿಂದ ನೇರ ಕಂಪ್ಯೂಟರ್‌ಗೆ ಚಲನವಲನದ ಮಾಹಿತಿ ಬರುತ್ತದೆ. ಆಗಿನ ಕಾಲಕ್ಕೆ ಈ ಹುಲಿ ಹಿಡಿದ ಸಾಹಸ ಮಾಡಿದ್ದು ಇನ್ನೂ ಅಚ್ಚಳಿಯದ ಘಟನೆ.

ಮನುಷ್ಯರನ್ನು ಕಂಡರೆ ಹೆದರುತ್ತೆ!

ಸರ್ಕಸ್‌ನಲ್ಲಿ ಮೊದಲ ಬಾರಿ ಹುಲಿ ನೋಡಿದಾಗಿನಿಂದಲೂ ನನಗೆ ಅದರ ಬಗ್ಗೆ ವಿಶೇಷ ಕುತೂಹಲ. ಹುಲಿ ನೋಡಿದಾಗೆಲ್ಲ ನನಗೆ ಭಯ ಆಗುತ್ತಿರಲಿಲ್ಲ. ಕೇವಲ ಹುಲಿಯಷ್ಟೇ ಅಲ್ಲ, ಎಲ್ಲ ವನ್ಯಜೀವಿಗಳ ಬಗ್ಗೆ ನನಗೆ ಅಪಾರ ಆಸಕ್ತಿ ಇತ್ತು. 8ನೇ ವಯಸ್ಸಿನಲ್ಲೇ ಪಕ್ಷಿಗಳ ವೀಕ್ಷಣೆ ಆರಂಭಿಸಿದ್ದೆ. ಒಂದು ಅಚ್ಚರಿಯ ಸಂಗತಿ ಎಂದರೆ, ಮನುಷ್ಯರನ್ನು ಕಂಡರೆ ಹುಲಿ ಹೆದರಿಕೊಳ್ಳುತ್ತದೆ. ಹೆಚ್ಚಿನ ಹುಲಿಗಳು ಮನುಷ್ಯರನ್ನು ನೋಡಿದರೆ ಓಡಿಹೋಗು­ತ್ತವೆ. ನಾನು ಸಂಶೋಧನೆ ಮಾಡುವಾಗ ಇದು ಗಮನಕ್ಕೆ ಬಂದಿದ್ದು. ಮೊದಲು ಕಾಡಿನಲ್ಲಿ ನನ್ನ ಜೀಪ್‌ ನೋಡಿದ ತಕ್ಷಣ, ಕಾಲರ್‌ ತೊಟ್ಟ ಹುಲಿಗಳು ಓಡಿಹೋಗುತ್ತಿದ್ದವು. ಕಾಲ ಕ್ರಮೇಣ ಅವಕ್ಕೂ ನನ್ನ ಜೀಪ್‌ನ ಚಹರೆ ರೂಢಿಯಾಗಿತ್ತು. ನಾನು ಪಕ್ಕದಲ್ಲೇ ಜೀಪ್‌ ನಿಲ್ಲಿಸಿ, ಹುಲಿಗಳನ್ನು ಗಂಟೆಗಟ್ಟಲೇ ವೀಕ್ಷಿಸುತ್ತಿದ್ದೆ.

ಹುಲಿಗಳು ಉಳಿಯ ಬೇಕೆಂದರೆ…

ಹುಲಿಗಳು ಉಳಿಯ­ಬೇಕಾದರೆ ಮೊದಲು ಕಾಡು ಇರಬೇಕು. ಅದಕ್ಕೆ ಆಹಾರವಾಗುವ ಬಲಿ ಪ್ರಾಣಿಗಳೂ ತುಂಬಾ ಇರಬೇಕು. ಬಲಿ ಪ್ರಾಣಿ ಗಳನ್ನು ಮನುಷ್ಯರು ಬೇಟೆ ಮಾಡಿದರೆ, ಹುಲಿಯೂ ಸಹ ಅವನತಿ ಹೊಂದು­ತ್ತದೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಈಗ ಬಲಿ ಪ್ರಾಣಿಗಳು ಸಾಕಷ್ಟು ಕಂಡುಬರುತ್ತವೆ. ಆದರೆ, ಅರಣ್ಯ ಪ್ರದೇಶವೇ ಹೆಚ್ಚಾಗಿರುವ ಜಾರ್ಖಂಡ್‌, ಛತ್ತೀಸ್‌ಗಢ್‌, ಅರುಣಾಚಲ ಪ್ರದೇಶಗಳಲ್ಲಿ ಕೇವಲ ಖಾಲಿ ಅರಣ್ಯಗಳಿವೆ. ಇದಕ್ಕೆ ಮೂಲ ಕಾರಣವಾದ ಬಲಿ ಪ್ರಾಣಿಗಳ ಬೇಟೆ ಮೊದಲು ನಿಲ್ಲಬೇಕು. ಹುಲಿಗಳ ರಕ್ಷಣೆಗೆ, ಕಾಡಿನಲ್ಲಿ ವಾಸಿಸುವ ಜನರ ಪುನರ್ವಸತಿಗೆ ಆರ್ಥಿಕ ಅನುದಾನವೂ ಅವಶ್ಯ. ಕುದುರೆಮುಖ, ನಾಗರಹೊಳೆ ಕಾಡುಗಳಲ್ಲಿ ವಾಸಿಸುವ ನೂರಾರು ಕುಟುಂಬಗಳು ಈಗ ಪುನರ್ವಸತಿ ಬಯಸುತ್ತಿ­ ದ್ದಾರೆ. ಇಚ್ಛಾ ಶಕ್ತಿಯಿಂದ ಸರ್ಕಾರ ಅವರಿಗೆ ಪುನರ್ವಸತಿ ಕಲ್ಪಿಸಿದರೆ, ಹೆಚ್ಚಿನ ವನ್ಯ ರಕ್ಷಣೆ ಯೊಂದಿಗೆ, ಕರ್ನಾಟಕದಲ್ಲೇ 1500 ಹುಲಿ ಗಳನ್ನು ಉಳಿಸಬಹುದಾದ ಸಾಧ್ಯತೆ ಇದೆ.

ಶೋಕಿಯಾಗಿದ್ದ ಹುಲಿ ಬೇಟೆ…

ಎಲ್ಲರೂ ತಿಳಿದಿರುವಂತೆ ಹುಲಿ ಕ್ರೂರ ಪ್ರಾಣಿ ಅಲ್ಲ. ಅದು ಕೇವಲ ಮಾಂಸಾಹಾರಿ ಪ್ರಾಣಿ ಅಷ್ಟೇ. ಹುಲಿ ಮನುಷ್ಯರನ್ನು ಕಂಡಕೂಡಲೇ ಆಕ್ರಮಣ ಮಾಡುತ್ತದೆ ಎಂಬ ತಪ್ಪು ಕಲ್ಪನೆಯೂ ಜನಸಾಮಾನ್ಯರಲ್ಲಿದೆ. ಆರಂಭದ ದಿನಗಳಲ್ಲಿ ಹುಲಿ ಬೇಟೆ ಅಷ್ಟೇನೂ ಸುಲಭದ್ದಾಗಿರಲಿಲ್ಲ. ಆಗ ಈಟಿಯಿಂದ ತಿವಿದು ಶಿಕಾರಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಮನುಷ್ಯರಿಗೂ ಗಾಯಗಳಾಗುತ್ತಿತ್ತು. ಆದರೆ, ಮೊಘಲರ ಆಳ್ವಿಕೆಯ ಅಂತ್ಯಕ್ಕೆ ಅಂದರೆ, 500 ವರ್ಷಗಳ ಹಿಂದೆ ಗನ್‌ ಪೌಡರ್‌, ಗನ್‌ ಬಳಕೆಗೆ ಬಂತು. ಜೊತೆಗೆ ಸ್ಟೀಲ್‌ ಬಂತು, ಅದರಿಂದ ಬಲೆಗಳನ್ನು ಹೆಣೆದರು. ಆಗ ಹುಲಿ ಬೇಟೆ ಸುಲಭವಾಯಿತು. ಮಹಾರಾಜರು, ಜಮೀನಾªರರು, ಬ್ರಿಟಿಷ್‌ ಅಧಿಕಾರಿಗಳಿಗೆ ಹುಲಿ ಬೇಟೆ ಪ್ರತಿಷ್ಠೆ, ಶೋಕಿಯಾಗಿತ್ತು. ಜನಸಾಮಾನ್ಯರು ಹುಲಿಯನ್ನು ಬೇಟೆಯಾಡಿ, ಅದರ ಬಾಲವನ್ನು ಜಿಲ್ಲಾಧಿಕಾರಿಗೆ ತಂದು ತೋರಿಸಿದರೆ, ಸುಮಾರು 100 ರೂ. ಬಹುಮಾನ ಸಿಗುತ್ತಿತ್ತು.

ಹುಲಿ ಚರಿತೆ…

ಹುಲಿ ಎಂದಿಗೂ ಗುಂಪಿನಲ್ಲಿರುವುದಿಲ್ಲ. ಪ್ರತಿ ಹೆಣ್ಣು ಹುಲಿ ತನ್ನದೇ ಸೀಮೆ ಮಾಡಿಕೊಂಡು, ಅದರಲ್ಲೇ ತಿರುಗಾಡುತ್ತದೆ. ಗಂಡು ಹುಲಿಗಳು 3-4 ಸೀಮೆಗಳಲ್ಲಿ ಓಡಾಡಿ, ಮಿಲನಕ್ಕಾಗಿ ಅಲ್ಲಿರುವ ಹೆಣ್ಣು ಹುಲಿಯೊಂದಿಗೆ ಸೇರುತ್ತವೆ. ಸೀಮೆಗಾಗಿ ಹುಲಿಗಳ ನಡುವೆ ಸ್ಪರ್ಧೆ, ಜಗಳ ನಡೆಯುವುದೂ ಉಂಟು! ಹೆಣ್ಣು ಹುಲಿ ಮರಿ ಹಾಕಿದ ನಂತರ ಸುಮಾರು ಒಂದೂವರೆ ವರ್ಷ ಮರಿಗಳನ್ನು ತನ್ನೊಟ್ಟಿಗೆ ಇಟ್ಟುಕೊಳ್ಳುತ್ತದೆ. ಆಗ ಮಾತ್ರ ಹುಲಿಗಳನ್ನು ಗುಂಪಿನಲ್ಲಿ ನೋಡಬಹುದು. ಆದರೆ ಝೂ, ಸಫಾರಿಗಳಲ್ಲಿ ಒಂದೇ ಕಡೆ ಹುಲಿಗಳನ್ನು ಇಡುವುದು ವಿಪರ್ಯಾಸ. ಅದು ಸ್ವಾಭಾವಿಕವಾಗಿ ಒಬ್ಬಂಟಿ ಜೀವಿ. ಸಾಮಾನ್ಯವಾಗಿ ಜಿಂಕೆ, ಕಡವೆ, ದನ, ಕಾಡು ಹಂದಿಗಳನ್ನು ಬೇಟೆಯಾಡುವ ಹುಲಿ, ಅದನ್ನು 2-3 ದಿನಗಳ ಕಾಲ ಇಟ್ಟುಕೊಂಡು ತಿನ್ನುತ್ತದೆ. ಈ ಸಮಯದಲ್ಲಿ ಅಲ್ಲಿಗೆ ಬೇರೆ ಹುಲಿ ಬರದಿರುವಂತೆಯೂ ನೋಡಿಕೊಳ್ಳುತ್ತದೆ. ಹುಲಿಗಳ ನಡುವಿನ ಸಂವಹನ ಒಂದು ವಿಸ್ಮಯವೆನ್ನಬಹುದು. ಹುಲಿ ತನ್ನ ಮೂತ್ರ ದೊಂದಿಗೆ ದ್ರವ್ಯವನ್ನು ಹೊರಹಾಕುತ್ತದೆ. ಇದೊಂದು ಕೆಮಿಕಲ್‌ ಸಿಗ್ನಲ್‌ ಇದ್ದಂತೆ. ಇನ್ನೊಂದು ಹುಲಿಗೆ ಆ ವಾಸನೆ ಬಂದರೆ, ಇಲ್ಲಿ ಬೇರೆ ಹುಲಿ ಇದೆ ಎಂದು ಅರಿತು ಮುಂದೆ ಸಾಗುತ್ತದೆ. ದಿನಕ್ಕೆ 15-16 ಗಂಟೆ ನಿದ್ದೆಯಲ್ಲಿ ಕಳೆಯುವ ಹುಲಿಗಳು ತಮ್ಮ ಶಕ್ತಿಯನ್ನು ವ್ಯರ್ಥವಾಗಲು ಬಿಡುವುದಿಲ್ಲ. ಬೇಟೆಯಾಡು­ವುದಕ್ಕೆ ತನ್ನ ದೇಹದ ಸಂಪೂರ್ಣ ಶಕ್ತಿ ಬಳಸುತ್ತವೆ. 1-4 ವರ್ಷದೊಳಗಿನ ಹುಲಿಗಳಿಗೆ ಯಾವುದೇ ಸೀಮೆ ಇರುವುದಿಲ್ಲ. ಬಹಳ ದೂರ ಸಂಚಾರ ಮಾಡುತ್ತವೆ. ಒಮ್ಮೆ ಒಂದು ಹುಲಿ ಬಂಡೀಪುರದಿಂದ ಶಿಕಾರಿಪುರಕ್ಕೆ ಹೋಗಿತ್ತು!

-ಡಾ. ಕೆ. ಉಲ್ಲಾಸ ಕಾರಂತ,ಖ್ಯಾತ ವನ್ಯಜೀವಿ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next