Advertisement

ವಿಶ್ವ ಕ್ಷೀರ ಭೂಪಟದಲ್ಲಿ ಭಾರತದ ಮೇರು ಸಾಧನೆ

12:23 AM Jun 01, 2022 | Team Udayavani |

ವಿಶ್ವ ಸಂಸ್ಥೆಯ ಕೃಷಿ ಮತ್ತು ಆಹಾರ ಸಂಸ್ಥೆಯು 2001ರಲ್ಲಿ ಅಧಿಕೃತವಾಗಿ ಜೂನ್‌ 1 ಅನ್ನು ವಿಶ್ವ ಹಾಲು ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವದ ಬಗೆಗೆ ಜನರಿಗೆ ಅರಿವು ಮೂಡಿಸುವುದರ ಜತೆಯಲ್ಲಿ ಡೇರಿ ಉದ್ಯಮವು ಎದುರಿಸುತ್ತಿರುವ ಸವಾಲುಗಳ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ಪ್ರತೀ ವರ್ಷ ಜೂನ್‌ 1ರಂದು ಹಾಲು ದಿನವನ್ನು ಆಚರಿಸುತ್ತಾ ಬರಲಾಗಿದೆ. ಹವಾಮಾನ ಬದಲಾವಣೆಯ ಬಿಕ್ಕಟ್ಟಿನತ್ತ ಗಮನಹರಿಸುವ ಜತೆಯಲ್ಲಿ ಡೇರಿ ಕ್ಷೇತ್ರದಿಂದ ಭೂಮಿಯ ಮೇಲಾಗುತ್ತಿರುವ ಪರಿಣಾಮಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದು ಈ ಬಾರಿಯ ವಿಶ್ವ ಹಾಲು ದಿನದ ಧ್ಯೇಯವಾಗಿದೆ.

Advertisement

ಜೂನ್‌ 1 “ವಿಶ್ವ ಕ್ಷೀರ ದಿನ’ ನಿಶ್ಚಯವಾಗಿಯೂ ಇದು ಭಾರತದ ಪಾಲಿಗೆ ಅವಿಸ್ಮರಣೀಯ ದಿನ. ಅದೊಂದು ಕಾಲವಿತ್ತು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಭಾರತ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿ 16 ನೇ ಸ್ಥಾನದಲ್ಲಿತ್ತು. ವಿಶ್ವದ ಹೈನು ರಾಸುಗಳಲ್ಲಿ ಶೇ.16 ರಷ್ಟು ಪಾಲು ಹೊಂದಿದ್ದ ಎಮ್ಮೆಗಳಲ್ಲಿ, ವಿಶ್ವದಲ್ಲಿ ಅತೀ ಹೆಚ್ಚು ಸಂಖ್ಯೆ ಹೊಂದಿದ್ದ ನಮ್ಮ ದೇಶ ಕ್ಷೀರೋತ್ಪಾದನೆಯಲ್ಲಿ 6 ಪ್ರತಿಶತ ಮಾತ್ರ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು. ಹಾಲಿನ ಸೇವನೆಯಲ್ಲಿ ಸರಾಸರಿ 90 ಗ್ರಾಂ (ತಲಾವಾರು) ಮಾತ್ರ ನಮ್ಮದಾಗಿದ್ದರೆ ವಿಶ್ವದ ಹಿರಿಯಣ್ಣ ಅಮೆರಿಕದ ತಲಾವಾರು 432 ಗ್ರಾಂಗಳಷ್ಟಾಗಿತ್ತು.

ವಿಶ್ವ ಕ್ಷೀರ ದಿನದ ಪ್ರಮುಖ ಉದ್ದೇಶ ಜಗತಿಕ ಮಟ್ಟದಲ್ಲಿ ಕ್ಷೀರಜಾಲ (Internation Milk grid)ದ ಕುರಿತು ತಿಳಿದು ಆ ಪ್ರಕಾರ ಮಾರುಕಟ್ಟೆ ಯೋಜನೆಗಳನ್ನು ರೂಪಿಸಿ ವಿಸ್ತರಿಸುವುದು. ಹಾಲಿ ಉತ್ಪಾದನೆಗೆ ಅನುಗುಣವಾಗಿ ಮಾರುಕಟ್ಟೆ ಸಿದ್ಧತೆಗಳಿಗೆ ಅನುವು ಆಗುವುದು. ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಹಾಲಿನ ತಲಾವಾರು ಸೇವನೆ ಹೆಚ್ಚಿಸಿ ತನ್ಮೂಲಕ ಸಾರ್ವಜನಿಕ ಸ್ವಾಸ್ಥ್ಯಉತ್ತಮ ಪಡಿಸುವುದಾಗಿದೆ.

1946ರಲ್ಲಿ ಗುಜರಾತ್‌ ರಾಜ್ಯದ ಖೇಡಾ ಜಿಲ್ಲೆಯ ಆನಂದ ಎಂಬ ಪುಟ್ಟ ಹಳ್ಳಿಯಲ್ಲಿ ಆರಂಭಗೊಂಡ ಸಹಕಾರಿ ಕ್ಷೀರಾಂದೋಲನ “ಅಮೂಲ್‌’ ರೂಪ ತಳೆದು ಮುಂದೆ ದೇಶದಾದ್ಯಂತ ವಿಸ್ತರಿಸಿದ್ದು ಈಗ ದಂತಕತೆ. ಕ್ಷೀರ ಪಿತಾಮಹ ಡಾ| ವರ್ಗೀಸ್‌ ಕುರಿಯನ್‌ ಅವರ ದೂರಾಲೋಚನೆ, ಮುತ್ಸದ್ಧಿತನ, ದೇಶಾಭಿಮಾನದ ಪ್ರತೀಕವಾಗಿ ಭಾರತದಲ್ಲಿ ಕ್ಷೀರಕ್ರಾಂತಿಯಾಯಿತು. ಇಂದು ದೇಶಾದ್ಯಂತ “ಅಮೂಲ್‌’ ಮಾದರಿಯ 27 ರಾಜ್ಯ ಹೈನು ಮಹಾಮಂಡಳಿ(State Milk Federation)ಗಳು, 218 ಜಿಲ್ಲಾ ಹಾಲು ಜಿಲ್ಲಾ ಉತ್ಪಾದಕರ ಒಕ್ಕೂಟ (Dist. Milk Federation)ಗಳು, 1,77,000 ಗ್ರಾಮೀಣ ಹಾಲು ಉತ್ಪಾದಕ ಸಂಘಗಳು ಮತ್ತು 1,70,00,000 ಹಾಲು ಉತ್ಪಾದಕರು (Dairy Forms Members) ಕ್ಷೀರಕ್ರಾಂತಿಯ ಹರಿಕಾರರಾಗಿದ್ದಾರೆ. ದೇಶ ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿ ಮೂಡಿಬಂದಿದ್ದು “ವಿಶ್ವ ಕ್ಷೀರ ದಿನ’ದ ಅಧ್ವರ್ಯುವಾಗಿದೆ ಎಂಬುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಿದೆ.

2015-16ರಿಂದ 2020-21ರ ವರೆಗಿನ 5ವರ್ಷಗಳಲ್ಲಿ “ಕೊರೊನಾ’ ಪೀಡೆಯ ಹೊರತಾಗಿಯೂ ವಾರ್ಷಿಕ 155 ಮಿಲಿಯನ್‌ ಟನ್‌ನಿಂದ 200 ಮಿಲಿಯನ್‌ ಟನ್‌ ಹಾಲು ಉತ್ಪಾದನೆಯೊಂದಿಗೆ ಶೇ.35 ಪ್ರಗತಿ ಸಾಧಿಸಿದೆ. ಇದೇ ವೇಳೆಗೆ ವಿಶ್ವದ ಹಾಲು ಉತ್ಪಾದನ ಏರಿಕೆ ಇದಕ್ಕಿಂತಲೂ ಕಡಿಮೆಯಾಗಿರುವುದು ಉಲ್ಲೇಖನಾರ್ಹ. ಈ ಸಾಧನೆಯ ಹಿಂದೆ ಭಾರತದ ಲಕ್ಷ ಲಕ್ಷ ಹಳ್ಳಿಗಳಲ್ಲಿ ವಾಸಿಸುತ್ತಿರುವ, ಅಹರ್ನಿಶಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ 2 ಕೋಟಿಗೂ ಅಧಿಕ ಹಾಲು ಉತ್ಪಾದಕ ರೈತರ ನಿಸ್ವಾರ್ಥ ಕಾಯಕದ ಪರಿಶ್ರಮವಿದೆ. ಭಾರತ ಇಂದು ಹಾಲನ್ನು ಅಮದು ಮಾಡಿಕೊಳ್ಳುವ ಸ್ಥಿತಿಯಿಂದ ಹಾಲನ್ನು ನಿರ್ಯಾತ ಮಾಡುವ ಸ್ಥಿತಿಯತ್ತ ಸಾಗಿ ಬಂದಿರುವ ಹಿಂದೆ ರೋಚಕ ಕಥೆಗಳಿವೆ, ಸಂಘರ್ಷದ ಕ್ಷಣಗಳಿವೆ. “ಅಮೂಲ್‌’ ಇಂದು ಜಗತ್ತಿನ ಮೂಲೆಮೂಲೆಗಳಲ್ಲಿ ತನ್ನ ಮಾರುಕಟ್ಟೆಯ ಜಾಲವನ್ನು ವಿಸ್ತರಿಸಿದೆ.

Advertisement

ನಮ್ಮ ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಹಾಲ ಮಹಾಮಂಡಳಿ(1984) ಈ ಮೊದಲು ಹೈನು ನಿಗಮವಾಗಿ(ಕೆ.ಡಿ.ಸಿ.ಸಿ) ಸ್ಥಾಪನೆಗೊಂಡು ಕ್ಷೀರಧಾರಾ ಯೋಜನೆಯ ಸಹಾಯದಿಂದ ರಾಜ್ಯವ್ಯಾಪಿ ತನ್ನ ಜಾಲವನ್ನು ವಿಸ್ತರಿಸಿದೆ. 1975-76ರಲ್ಲಿ ಕೇವಲ 103 ಸಂಘಗಳಿಂದ ಆರಂಭವಾದ ಸಹಕಾರಿ ಮೇರುಸಂಸ್ಥೆ ಇದೀಗ ವ್ಯಾಪಕವಾಗಿ ಬೆಳೆದು 15 ಹಾಲು ಒಕ್ಕೂಟಗಳಿಂದ 25ಲಕ್ಷಕೂÒ ಅಧಿಕ ಹಾಲು ಉತ್ಪಾದಕರನ್ನೊಳಗೊಂಡು ಪ್ರತೀದಿನ ಸರಾಸರಿ 90 ಲಕ್ಷ ಕಿಲೋ ಹಾಲನ್ನು ಸಂಗ್ರಹಿಸುತ್ತಿದೆ. ಈ ವರ್ಷದ ಮೇ 24ರಂದು ಪ್ರಥಮ ಬಾರಿಗೆ ದಿನವೊಂದರ 91.07 ಲಕ್ಷ ಕಿಲೋ ಹಾಲು ಸಂಗ್ರಹಣೆಯೊಂದಿಗೆ ಹೊಸ ದಾಖಲೆ ಬರೆದಿದೆ. ಪ್ರಸ್ತುತ ಸಾಲಿನಲ್ಲಿ ರಾಜ್ಯ ಹೈನು ಮಹಾಮಂಡಳ ದಿನವೊಂದರ ಶತಲಕ್ಷ ಲೀಟರ್‌ ಅಂದರೆ 1 ಕೋಟಿ ಕಿಲೋ ಹಾಲು ಸಂಗ್ರಹಣೆಯ ನಿರೀಕ್ಷೆಯಲ್ಲಿದೆ. ನೆರೆ ರಾಜ್ಯಗಳ ಪ್ರಮುಖ ನಗರಗಳಾದ ಚೆನ್ನೈ, ಗೋವಾ, ಮುಂಬಯಿ, ಹೈದರಾಬಾದ್‌, ಪುಣೆಗಳಿಗೆ ಪ್ರತೀದಿನ 10 ಲಕ್ಷ ಲೀಟರ್‌ ಹಾಲು ರವಾನಿಸುತ್ತಿದೆ. ಹೊರ ರಾಷ್ಟ್ರಗಳಾದ ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ, ಅಫ್ಘಾನಿಸ್ಥಾನ, ಭೂತಾನ್‌, ಬಹ್ರೈನ್‌ ಮುಂತಾದ ದೇಶಗಳಿಗೆ 20 ಕೋ.ರೂ.ಗಳಿಗೂ ಅಧಿಕ ಮೌಲ್ಯದ ನಂದಿನಿ ಉತ್ಪನ್ನಗಳನ್ನು ರವಾನಿಸಿವೆ. ಮಂಡಳಿಯು 1919-20ರಲ್ಲಿ ಒಟ್ಟು ವಹಿವಾಟು 16,440 ಕೋ.ರೂ.ಗಳಿಂದ 19,735 ಕೋ.ರೂ.ಗಳಿಗೇರಿದ್ದು 2023ರಲ್ಲಿ ರಾಜ್ಯ ಹೈನು ಮಹಾಮಂಡಳಿಯ ವಹಿವಾಟು 25,000 ಕೋ. ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ.

ಇನ್ನು ಈ ಕ್ಷೀರ ಕ್ರಾಂತಿಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡಗಳನ್ನೊಳಗೊಂಡ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಾಧನೆಯೂ ಉಲ್ಲೇಖನೀಯವಾಗಿದೆ. 1974ರಲ್ಲಿ ಮಣಿಪಾಲದಲ್ಲಿ “ಕೆನರಾ ಮಿಲ್ಕ್ ಯೂನಿಯನ್‌ (ಕೆಮೂಲ್‌)’ ಆರಂಭವಾಯಿತು. ಮುಂದೆ 1986ರಲ್ಲಿ ಸ್ಥಾಪನೆಯಾದ ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ವಿಲೀನವಾಗಿ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಜೂನ್‌ ಒಂದರಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ, ಒಂದು ದಿನದ ಗರಿಷ್ಠ ಸಂಗ್ರಹಣೆಯಾದ 5.68 ಲಕ್ಷ ಕಿಲೋ ತಲುಪಿದ್ದು ಈವರೆಗಿನ ದಾಖಲೆಯಾಗಿದೆ. ಅದೇ ರೀತಿ ಕಳೆದ ವರ್ಷದ ಎಪ್ರಿಲ್‌ 27ರಂದು ದಿನವೊಂದರಲ್ಲಿ 4.22 ಲಕ್ಷ ಲೀಟರ್‌ ಹಾಲು ಮಾರಾಟ ಮಾಡಿರುವುದು ದಾಖಲೆಯ ಸಾಧನೆಯಾಗಿದೆ.

ಒಕ್ಕೂಟವು ರಾಜ್ಯದಲ್ಲಿಯೇ ರೈತರು ನೀಡುವ ಹಾಲಿಗೆ ಅತೀ ಹೆಚ್ಚಿನ ಬೆಲೆ ನೀಡುತ್ತಿದ್ದು ಸಕಾಲದಲ್ಲಿ ಹಾಲಿನ ಬಟವಾಡೆ ಒಕ್ಕೂಟದ ಪ್ರಗತಿಗೆ ಪೂರಕವಾಗಿದೆ. ಹಲವಾರು ಸವಾಲುಗಳ ಮಧ್ಯೆಯೂ ಕರಾವಳಿ ಹೈನುಗಾರರು ಹೈನೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ದೇಶದ ಸಾಮಾನ್ಯ ನಾಗರಿಕನಿಗೂ ದೊರೆಯುವಂತೆ ಮಾಡುವುದೇ ವಿಶ್ವ ಹಾಲು ದಿನದ ಉದ್ದೇಶವಾಗಿದ್ದು ಇದನ್ನು ಸಾಕಾರ ಗೊಳಿಸ ಬೇಕಿದೆ. ಶೇ.84.5 ಸರಾಸರಿ ಜೈವಿಕ ಮೌಲ್ಯ ಹೊಂದಿದ ಹಾಲು ಸೃಷ್ಟಿಯ “ಪ್ರೊಟೀನ್‌ ಕಣಜ’. ಮಾನವನ ದೇಹಕ್ಕೆ ಅವಶ್ಯವಿರುವ ಎಲ್ಲ ಪೋಷಕಾಂಶಗಳನ್ನೂ ಹೊಂದಿರುವ ಹಾಲು ಸೃಷ್ಟಿಯ ಪರಿಪೂರ್ಣಕ್ಕೆ ಹತ್ತಿರದ ನೈಸರ್ಗಿಕ ಆಹಾರ ವೆಂದು ಪರಿಗಣಿತವಾಗಿದೆ. ಶುದ್ಧ ಮತ್ತು ಗುಣ ಮಟ್ಟದ ಹಾಲು ಉತ್ಪಾದನೆ ಮತ್ತು ಪೂರೈಕೆಗೆ ಆದ್ಯತೆ ನೀಡಬೇಕಿದೆ.

(ಲೇಖಕರು: ನಿವೃತ್ತ ಜಂಟಿ ನಿರ್ದೇಶಕರು, ಕೆ.ಎಂ.ಎಫ್.)

– ಡಿ.ಎಸ್‌.ಹೆಗಡೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next