Advertisement

ವಿಶ್ವ ಪಾರಂಪರಿಕ ತಾಣ.. ಸೌಲಭ್ಯ ಗೌಣ!

11:57 AM Sep 27, 2019 | Team Udayavani |

ಬಾಗಲಕೋಟೆ: ಒಂದು ಕಾಲದಲ್ಲಿ ಬಾದಾಮಿ ಚಾಲುಕ್ಯರು, ಸಾಮ್ರಾಜ್ಯ ಅರಸರಾಗಿ ಅಧಿಕಾರ ಸ್ವೀಕರಿಸುವ ಕೇಂದ್ರ ಸ್ಥಾನ (ಪಟ್ಟಾಧಿಕಾರ)ವಾಗಿದ್ದ ವಿಶ್ವ ದರ್ಜೆಯ ಪ್ರವಾಸಿ ತಾಣ ಪಟ್ಟದಕಲ್ಲ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ಸೊರಗಿದೆ. ಒಂದೆಡೆ ಸೌಲಭ್ಯಗಳಿಲ್ಲದೇ ನಲುಗಿದರೆ, ಇನ್ನೊಂದೆಡೆ ಮಲಪ್ರಭಾ ನದಿ ಪ್ರವಾಹ ಬಂದಾಗೊಮ್ಮೆ ಇಲ್ಲಿನ ಸ್ಮಾರಕಗಳು ನೀರಲ್ಲಿ ನಿಂತು ನಲುಗುತ್ತಿವೆ.

Advertisement

ವಿಶ್ವದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಎರಡು ತಾಣಗಳು ಸ್ಥಾನ ಪಡೆದಿವೆ. ಹಂಪಿ ಹೊರತುಪಡಿಸಿದರೆ ಆ ಸ್ಥಾನ ಸಿಕ್ಕಿರುವುದು, ಪಟ್ಟದಕಲ್ಲಗೆ ಮಾತ್ರ. ಬಾದಾಮಿ ಚಾಲುಕ್ಯರ 7 ಮತ್ತು 8ನೇ ಶತಮಾನದಲ್ಲಿ ನಿರ್ಮಿಸಿದ 8 ಅದ್ಭುತ ದೇವಾಲಯಗಳು, ರಾಷ್ಟ್ರಕೂಟರ ಆಡಳಿತದ 9ನೇ ಶತಮಾನದಲ್ಲಿ ನಿರ್ಮಿಸಿದ ಎರಡು ದೇವಾಲಯ ಸೇರಿ ಒಟ್ಟು 11 ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ದೇವಾಲಯಗಳು ಇಲ್ಲಿವೆ.

ಇಲ್ಲಿನ ದೇವಾಲಯಗಳನ್ನು ಭಾರತೀಯ ಪುರಾತತ್ವ ಇಲಾಖೆ, 1983ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿ 36 ವರ್ಷ ಕಳೆದರೂ, ಪಟ್ಟದಕಲ್ಲ ಚಿತ್ರಣ ಬದಲಾಗಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಈವರೆಗಿನ ಸರ್ಕಾರಗಳು ವಿಫಲವಾಗಿವೆ ಎಂದರೆ ನಂಬಲೇಬೇಕು.

ಪ್ರವಾಹಕ್ಕೂ ನಲುಗುತ್ತಿದೆ ತಾಣ: ಕನಿಷ್ಠ ಮೂಲಸೌಲಭ್ಯಗಳಿಲ್ಲದೇ ಪ್ರವಾಸಿ ತಾಣ ನಲುಗಿದರೆ, ಇನ್ನೊಂದೆಡೆ ಮಲಪ್ರಭಾ ನದಿ ತುಂಬಿ ಹರಿದಾಗ, ಇಲ್ಲಿನ ಪಾರಂಪರಿಕ ತಾಣಗಳಿಗೂ ನೀರು ನುಗ್ಗುತ್ತಿದೆ. 2007, 2009 ಹಾಗೂ ಕಳೆದ ಆಗಸ್ಟ್‌ನಲ್ಲಿ ಬಂದ ಪ್ರವಾಹ ವೇಳೆ ತಾಣಗಳು, ಇಲ್ಲಿನ ಗ್ರಾಮಸ್ಥರು ಪ್ರವಾಹಕ್ಕೆ ನಲುಗಿದ್ದಾರೆ. ಪ್ರವಾಹದಿಂದ ಬಾಧಿತಗೊಂಡ ಜಿಲ್ಲೆಯ ಇಡೀ 195 ಗ್ರಾಮಗಳ ಪೈಕಿ, ಅತ್ಯಂತ ಹೆಚ್ಚು ಜನ ಹಾಗೂ ಅಪಾಯದಲ್ಲಿ 275 ಜನ ಸಿಲುಕಿದ್ದು ಇದೇ ಗ್ರಾಮದಲ್ಲಿ. 2007 ಮತ್ತು 2009ರಲ್ಲಿ ಬಂದ ಪ್ರವಾಹದಿಂದ ಭಾಗಶಃ ಗ್ರಾಮ ಮುಳುಗಡೆಯಾಗಿತ್ತು. ಆಗ ನೀರು ಬಂದಿದ್ದ ಮನೆಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು.

ಆದರೆ, ಇಡೀ ಗ್ರಾಮ ಸ್ಥಳಾಂತರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದ ಪರಿಣಾಮ, ಆಸರೆಯಡಿ ಭಾಗಶ ಗ್ರಾಮ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಇಡೀ ಗ್ರಾಮಕ್ಕೆ ನೀರು ನುಗ್ಗಿ ದೊಡ್ಡಮಟ್ಟದ ಸಂಕಷ್ಟ ಎದುರಾಗಿದ್ದು, ಈಗಲಾದರೂ ಗ್ರಾಮ ಸ್ಥಳಾಂತರಗೊಳ್ಳಲಿ. ಇದರಿಂದ ಪಾರಂಪರಿಕ ತಾಣಗಳ ಸುತ್ತ ವಾಸಿಸುವ ಮನೆಗಳ ಮಾಲೀಕರು ಎದುರಿಸುವ ಸಮಸ್ಯೆ (ಮನೆ ದುರಸ್ತಿ, ಶೌಚಾಲಯ ನಿರ್ಮಾಣಕ್ಕೆ ಅನುಮತಿ ಇಲ್ಲ) ದೂರಾಗಲಿದೆ ಎಂಬುದು ಗ್ರಾಮಸ್ಥರ ಒತ್ತಾಯ.

Advertisement

ಬರಲಿಲ್ಲ ಪ್ಲಾಜಾ: ವಿಶ್ವ ದರ್ಜೆಯ ಪ್ರವಾಸಿ ತಾಣವಾದ ಪಟ್ಟದಕಲ್ಲಗೆ ವಾರ್ಷಿಕ ಸುಮಾರು 6 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಹೀಗಾಗಿ 2015ರ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಪಟ್ಟದಕಲ್ಲಗೆ ಪ್ರವಾಸಿ ಪ್ಲಾಜಾ ನಿರ್ಮಾಣದ ಘೋಷಣೆಯಾಗಿತ್ತು. ಅದು ಈವರೆಗೂ ಘೋಷಣೆಯಾಗದೇ ಉಳಿದಿದೆ. ಉತ್ತಮ ಹೊಟೇಲ್‌ ಕೂಡ ಇಲ್ಲದ ಪಟ್ಟದಕಲ್ಲಗೆ ಬರುವ ಪ್ರವಾಸಿಗರು, ಬೇಗ ಇಲ್ಲಿಂದ ತೆರಳುವ ಅನಿವಾರ್ಯತೆ ಪ್ರವಾಸಿಗರಿಗಿದೆ.

ಸ್ಥಳಾಂತರಕ್ಕೆ ತಯಾರಿ: 2009ರಿಂದ ಕೇಳಿ ಬರುತ್ತಿರುವ ಪಟ್ಟದಕಲ್ಲ ಸ್ಥಳಾಂತರ ಬೇಡಿಕೆಗೆ ಈಗ ಒಂದಷ್ಟು ವೇಗ ಸಿಕ್ಕಿದೆ. ಕಳೆದ ತಿಂಗಳು ಬಂದ ಭೀಕರ ಪ್ರವಾಹ ಈ ವೇಗಕ್ಕೆ ಕಾರಣವೂ ಆಗಿದೆ. ಜಿಲ್ಲಾಡಳಿತ, ಬಾದಾಮಿ ತಾಲೂಕು ಬಾಚನಗುಡ್ಡ ಬಳಿ ಇರುವ 21 ಎಕರೆ ಸರ್ಕಾರಿ ಭೂಮಿ ಹಾಗೂ ಇತರೆ 60 ಎಕರೆ ಭೂಮಿಯನ್ನು ಪಟ್ಟದಕಲ್ಲ ಗ್ರಾಮ ಸ್ಥಳಾಂತರಿಸಲು ಗುರುತಿಸಿದೆ. ಆದರೆ, ಭೂಸ್ವಾಧೀನ, ಪಟ್ಟದಕಲ್ಲನಲ್ಲಿ ಸದ್ಯ ಇರುವ ಮನೆಗಳಿಗೆ ಪರಿಹಾರ, ಪುನರ್ವಸತಿ ಹೀಗೆ ಹಲವು ಕಾರ್ಯ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಗೊಳ್ಳಬೇಕಿದೆ. ಇದೆಲ್ಲ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕಾಗಬಹುದೆಂದು ಗ್ರಾಮಸ್ಥರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ. ಸ್ಥಳೀಯ ಮಟ್ಟದಲ್ಲಿ ಮೂಲ ಸೌಲಭ್ಯ ಕಲ್ಪಿಸಿದರೆ, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಖುಷಿಯಿಂದ ಮರಳಬಹುದು. ಇಲ್ಲವಾದರೆ ಇಲ್ಲಿನ ಸೌಲಭ್ಯಗಳ ದುಸ್ಥಿತಿಗೆ ಮರಗುತ್ತಲೇ ಹೋಗಬೇಕಾಗುತ್ತದೆ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next