Advertisement

ಇರುವುದೊಂದೇ ಹೃದಯ; ಜತನದಿಂದ ರಕ್ಷಿಸುವುದು ನಮ್ಮ ಹೊಣೆ

03:36 PM Sep 29, 2021 | Team Udayavani |

ಪ್ರತಿಯೊಂದೂ ಜೀವಿಗೂ ಹೃದಯ ಬಲುಮುಖ್ಯ ಅಂಗ. ಹೃದಯ ಬಡಿತ ಸರಿಯಾಗಿದ್ದರೆ ಮಾತ್ರ ನಾವು ಚಟುವಟಿಕೆಯಿಂದಿರಲು ಸಾಧ್ಯ. ಹೃದಯದ ಆರೋಗ್ಯವನ್ನು ಜತನದಿಂದ ಕಾಯ್ದುಕೊಳ್ಳುವುದು ಪ್ರತಿಯೊಬ್ಬನ ಹೊಣೆಗಾರಿಕೆ. ಆದರೆ ಮನುಷ್ಯ ವಿದ್ಯಾವಂತನಾದಂತೆ ಆತನ ಜೀವನಶೈಲಿ ಆಧುನಿಕತೆಗೆ ಒಗ್ಗಿಕೊಳ್ಳುತ್ತಿದೆ. ಆದರೆ ಹೃದಯ ಮಾತ್ರ  ಈ ಆಧುನಿಕ ಜೀವನಶೈಲಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಇದರಿಂದಾಗಿಯೇ ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

Advertisement

18.6 ಮಿಲಿಯನ್‌ ಜನರ ಸಾವು
ಹೃದಯ ರಕ್ತನಾಳದ ಕಾಯಿಲೆ (ಸಿವಿಡಿ)ಅಥವಾ ಹೃದ್ರೋಗಕ್ಕೆ ಪ್ರಪಂಚದಲ್ಲೇ ಅತ್ಯಧಿಕ ಮಂದಿ ಅಂದರೆ ವರ್ಷಕ್ಕೆ ಸುಮಾರು 18.6 ಮಿಲಿಯನ್‌ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತೀ ವರ್ಷ ವಿಶ್ವಾದ್ಯಂತ ಸಾವನ್ನಪ್ಪುತ್ತಿರುವವರ ಪೈಕಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪು ತ್ತಿರುವವರ ಪ್ರಮಾಣ ಶೇ. 31ರಷ್ಟಾಗಿದೆ. ಹೃದ್ರೋಗ, ಹೃದಯಾಘಾತಗಳಿಗೆ ಮುಖ್ಯ ಕಾರಣಗಳೆಂದರೆ ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ವಾಯುಮಾಲಿನ್ಯ ಇತ್ಯಾದಿ.

ಹದಿಹರಯದವರೇ ಅಧಿಕ
ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯರಿಗೆ 50ರ ಹರಯದ ಬಳಿಕ ಕಾಣಿಸಿಕೊಳ್ಳುತ್ತದೆ ಮತ್ತು ತೀವ್ರತೆರನಾದ ಪರಿಣಾಮ ಬೀರುತ್ತದೆ ಎಂಬುದು ಈವರೆಗೆ ಬಹುತೇಕರ ಅಭಿಪ್ರಾಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದ್ದು ಜನರಲ್ಲಿ ಈ ಬಗ್ಗೆ ಒಂದು ತೆರನಾದ ಭೀತಿ ಆವರಿಸುವಂತೆ ಮಾಡಿದೆ. ಇದಕ್ಕೆ ಜನರ ಬದಲಾದ ಜೀವನಶೈಲಿ ಮತ್ತು ಮಾಲಿನ್ಯ ಮುಖ್ಯ ಕಾರಣವಾಗಿದೆ.

 ವಿಶ್ವ ಹೃದಯ ದಿನದ ಉದ್ದೇಶ
ಹೃದಯ ಮತ್ತು ರಕ್ತನಾಳದಲ್ಲಿ ಉಂಟಾಗುವ ಅಸ್ವಸ್ಥತೆ ಹೃದಯಘಾತಕ್ಕೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೃದಯ ಮತ್ತು ರಕ್ತನಾಳದಲ್ಲಿ ಉಂಟಾಗುವ ಅನಾರೋಗ್ಯದಿಂದ ಸಂಭವಿಸುವ ಪ್ರತೀ ಐದು ಸಾವುಗಳಲ್ಲಿ ನಾಲ್ಕು ಹೃದಯಾಘಾತ ಮತ್ತು  ಪಾರ್ಶ್ವವಾಯುವಿನಿಂದಾಗಿರುತ್ತದೆ. ಈ ಸಾವಿನಲ್ಲಿ ಮೂರನೇ ಒಂದು ಭಾಗ 70 ವರ್ಷಕ್ಕಿಂತ ಕೆಳಗಿನವರಲ್ಲಿ ಅಕಾಲಿಕವಾಗಿ ಸಂಭವಿಸುತ್ತದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 1999ರಲ್ಲಿ  ವಿಶ್ವ ಹೃದಯ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜತೆ ಸೇರಿ ಪ್ರತೀ ವರ್ಷ ಸೆಪ್ಟಂಬರ್‌ ತಿಂಗಳ ಕೊನೆಯ ರವಿವಾರದಂದು ವಿಶ್ವ ಹೃದಯ ದಿನದ ಆಚರಣೆಯನ್ನು ಆರಂಭಿಸಿದವು. 2025ರ ವೇಳೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುವವರ ಪ್ರಮಾಣವನ್ನು ಶೇ. 25ಕ್ಕೆ ಇಳಿಸುವ ಗುರಿಯೊಂದಿಗೆ 2012ರಲ್ಲಿ ವಿಶ್ವ ಹೃದಯ ದಿನವನ್ನು ಪ್ರತೀ ವರ್ಷ ಸೆ. 29ರಂದು ಆಚರಿಸಲು ನಿರ್ಧರಿಸಲಾಯಿತು. ಆ ಬಳಿಕ ನಿರಂತರವಾಗಿ ಹೃದಯ ದಿನವನ್ನು ಆಚರಿಸುತ್ತ ಬರಲಾಗಿದ್ದು ಹೃದಯದ ಆರೋಗ್ಯ, ಹೃದಯಾಘಾತದ ಬಗೆಗಿನ ತಪ್ಪುಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತಾ ಬರಲಾಗಿದೆ.

ಸಾವಿನ ಪ್ರಮಾಣದಲ್ಲಿ ಹೆಚ್ಚಳ
ಭಾರತ ಸೇರಿದಂತೆ ಕಡಿಮೆ ಆದಾಯವಿರುವ ದೇಶಗಳಲ್ಲಿ  ಹೃದಯ ಮತ್ತು ರಕ್ತನಾಳ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಮಧ್ಯಮ ಮತ್ತು ಅಧಿಕ ಆದಾಯವಿರುವ ದೇಶಗಳಿಗಿಂತ ಹೆಚ್ಚಾಗಿದೆ. ಭಾರತದಲ್ಲಿ ಸಂಭವಿಸುವ ಒಟ್ಟಾರೆ ಸಾವಿನಲ್ಲಿ  ಶೇ. 24.8ರಷ್ಟು  ಸಾವಿಗೆ ಮುಖ್ಯ ಕಾರಣ ಹೃದಯ ಸಂಬಂಧಿ ಕಾಯಿಲೆಗಳಾಗಿವೆ ಎನ್ನುತ್ತವೆ ದಾಖಲೆಗಳು.

Advertisement

ಜಾಗತಿಕವಾಗಿ ಹೃದ್ರೋಗದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಹೃದ್ರೋಗದ ತಡೆ ಮತ್ತು ಚಿಕಿತ್ಸೆಯಲ್ಲಿ ಡಿಜಿಟಲ್‌ ತಂತ್ರಜ್ಞಾನದ ಬಳಕೆಯ ಗುರಿಯೊಂದಿಗೆ ಈ ಬಾರಿಯ  ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿದೆ.

 ಅತ್ಯಧಿಕ ಸಾವು
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ತುರ್ಕೆಮೆನಿಸ್ಥಾನದಲ್ಲಿ ಅತ್ಯಧಿಕ ಹೃದಯ ಸಂಬಂಧಿ ಸಾವು ದಾಖಲಾಗುತ್ತಿದೆ. ಇಲ್ಲಿ 1,00,000 ಜನರಲ್ಲಿ 712ಮಂದಿ  ಹೃದ್ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಕಜಕಿಸ್ಥಾನದಲ್ಲಿ  ಪ್ರತೀ 1,00,000 ಜನರಲ್ಲಿ 635 ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.

ಭಾರತದಲ್ಲೂ ಹೆಚ್ಚಳ
2014ರ ಅನಂತರ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಭಾರತದಲ್ಲೂ ಅದರಲ್ಲೂ ಮುಖ್ಯವಾಗಿ 14ರಿಂದ 18 ವರ್ಷದವರಲ್ಲಿ ಅಧಿಕವಾಗುತ್ತಿದೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ವರದಿ ಮಾಡಿದೆ. ಈ ಅಂಕಿಅಂಶಗಳ ಪ್ರಕಾರ ಆರು ವರ್ಷಗಳ ಅವಧಿಯಲ್ಲಿ ಹೃದಯಾ ಘಾತದಿಂದ ಸಾವನ್ನಪ್ಪುತ್ತಿರುವ ಹದಿಹರ ಯದವರ ಸಂಖ್ಯೆ 10,000ದಷ್ಟು ಅಧಿಕವಾಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಸಾವುಗಳಿಗೆ ಜನರ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಎದೆನೋವು ಸಹಿತ ಆರೋಗ್ಯದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಾಗ ಸ್ವತಃ ವೈದ್ಯರಾಗದೇ ತತ್‌ಕ್ಷಣ ಪರೀಕ್ಷೆಗೊಳ ಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡದ್ದೇ ಆದಲ್ಲಿ ಈ ಸಾವುಗಳನ್ನು ತಪ್ಪಿಸಬ ಹುದಾಗಿದೆ ಎನ್ನುತ್ತಾರೆ ವೈದ್ಯರು.  ಇನ್ನು ಉಳಿದ ವಯಸ್ಸಿನವರಲ್ಲೂ ಹೃದಯಾಘಾತದಿಂದಾಗಿ ಸಾವನ್ನಪ್ಪು ತ್ತಿರುವವರ ಸಂಖ್ಯೆಯಲ್ಲಿ  ಹೆಚ್ಚಳವಾಗಿದೆ. 18ರಿಂದ 30 ವರ್ಷದವರಲ್ಲಿ 2016ರಲ್ಲಿ ಮೃತಪಟ್ಟವರ ಸಂಖ್ಯೆ 1,940 ಇದ್ದದ್ದು 2019ರಲ್ಲಿ 2,381ಕ್ಕೆ ಏರಿಕೆಯಾಗಿದೆ.  30- 45 ವರ್ಷದವರಲ್ಲಿ 2016ರಲ್ಲಿ 6,646 ಆಗಿದ್ದರೆ 2019ರ ವೇಳೆಗೆ 7,752ಕ್ಕೆ ಹೆಚ್ಚಳವಾಗಿದೆ. 45-60 ವರ್ಷದವರಲ್ಲಿ 2016ರಲ್ಲಿ 8,862 ಆಗಿದ್ದರೆ 2019ರಲ್ಲಿ  11,042 ಹಾಗೂ 60 ವರ್ಷಕ್ಕೂ ಮೇಲ್ಪಟ್ಟವರಲ್ಲಿ 2016ರಲ್ಲಿ 4,275 ಇದ್ದದ್ದು 2019ರಲ್ಲಿ  6,612ಕ್ಕೆ  ಹೆಚ್ಚಳವಾಗಿದೆ.

ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?

-1,15,000 ಒಂದು ದಿನದಲ್ಲಿ ನಮ್ಮ ಹೃದಯ ಬಡಿತಗಳ ಸಂಖ್ಯೆ
-2,000 ಗ್ಯಾಲನ್‌ ಪ್ರತೀ ದಿನ ಹೃದಯದಿಂದ ಪಂಪ್‌ ಆಗುವ ರಕ್ತ. ನಿಮಿಷಕ್ಕೆ 1.5 ಗ್ಯಾಲನ್‌
-1 ಪೌಂಡ್‌ಮಾನವ ಹೃದಯದ ತೂಕ
-60 ಸಾವಿರ ಮೈಲು ರಕ್ತನಾಳ ವ್ಯವಸ್ಥೆಯ ವಿಸ್ತಾರ

Advertisement

Udayavani is now on Telegram. Click here to join our channel and stay updated with the latest news.

Next