Advertisement

ನಿಲ್ಲದ ಮಾರಣಹೋಮ

06:04 AM Jun 05, 2020 | Suhan S |

ಹುಬ್ಬಳ್ಳಿ: ನಗರೀಕರಣ,ಔದ್ಯಮೀಕರಣ, ಜನಸಂಖ್ಯೆ ಹೆಚ್ಚಳದಿಂದಾಗಿ ಅರಣ್ಯ ಕ್ಷೀಣಿಸುತ್ತ ಸಾಗಿದೆ. ಪರಿಸರ ಕಾಳಜಿ ಎಂಬುದು ವಿಶ್ವ ಪರಿಸರ ದಿನಕ್ಕೆ ಮಾತ್ರ ಸೀಮಿತವಾದಂತೆ ಗೋಚರಿಸುತ್ತಿದೆ. ಗಿಡ-ಮರಗಳಿಂದ ನಮಗೆ ಏನೆಲ್ಲ ಪ್ರಯೋಜನಗಳಿವೆ ಎಂಬುದು ಗೊತ್ತಿದ್ದರೂ ಅನಗತ್ಯವಾಗಿ ಗಿಡ-ಮರಗಳನ್ನು ನೆಲಕ್ಕುರುಳಿಸುವ ಕಾರ್ಯ ಎಗ್ಗಿಲ್ಲದೇ ನಡೆದಿದೆ.

Advertisement

ಒಂದೆಡೆ ಪರಿಸರ ಕಾಳಜಿ ತೋರಿಸಲು ಹಾಗೂ ಪ್ರಚಾರಕ್ಕಾಗಿ ಸಸಿಗಳನ್ನು ನೆಡಲಾಗುತ್ತದೆ. ಆದರೆ ಇನ್ನೊಂದೆಡೆ ಗಿಡಗಳ ಮಾರಣಹೋಮ ನಿರಂತರ ನಡೆಯುತ್ತಿದೆ. ನಗರಗಳಲ್ಲಿ ಬಡಾವಣೆಗಳನ್ನು ರೂಪಿಸುವಾಗ ರಸ್ತೆ ಬದಿ ಗಿಡಗಳನ್ನು ಬೆಳೆಸಲಾಗುತ್ತದೆ. ವಸತಿ ಬಡಾವಣೆ ಅಭಿವೃದ್ಧಿಯಾಗುತ್ತಿದ್ದಂತೆಯೇ ಅನಗತ್ಯವಾಗಿ ಗಿಡ-ಮರಗಳನ್ನು ಕಡಿಯಲಾಗುತ್ತದೆ. ವಿದ್ಯುತ್‌ ಲೈನ್‌ಗೆ ತೊಂದರೆಯಾದರೆ ಗಿಡ ಮರಗಳ ರೆಂಬೆ-ಕೊಂಬೆಗಳನ್ನು ಕಡಿಯಲು ಹೆಸ್ಕಾಂನವರಿಗೆ ಅವಕಾಶ ನೀಡಲಾಗಿದೆ. ಆದರೆ ಹೆಸ್ಕಾಂನವರಿಗಿಂತ ನಿವಾಸಿಗಳೇ ಹೆಚ್ಚು ಮರ-ಗಿಡ ಕಡಿಯುತ್ತಿದ್ದಾರೆ. ಹೆಚ್ಚಿನವರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಗಮನಕ್ಕೂ ತಾರದೇ ಕಟ್ಟಿಗೆಯನ್ನು ಮಾರಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗಿಡ-ಮರಗಳನ್ನು ಕಡಿಯುವ ಪ್ರಮಾಣ ಹೆಚ್ಚಾಗುತ್ತದೆ.

ಮರಗಳಿಂದ ಪ್ರಾಣವಾಯು ದೊರೆಯುತ್ತದೆ ಎಂಬ ಸಂಗತಿ ತಿಳಿದಿದ್ದರೂ ಉದುರಿದ ಎಲೆಗಳಿಂದ ಮನೆಯ ಪ್ರಾಂಗಣ ಹೊಲಸಾಗಿ ಕಾಣುತ್ತದೆ, ಮನೆಯ ಅಂದಕ್ಕೆ ಮರಗಳು ಅಡ್ಡಿಯಾಗುತ್ತವೆ, ಮರಗಳಿಂದ ಕಟ್ಟಡಗಳು ಅಭದ್ರಗೊಳ್ಳುತ್ತವೆ ಎಂಬ ತಪ್ಪು ತಿಳಿವಳಿಕೆಯಿಂದಾಗಿ ಅನಗತ್ಯವಾಗಿ ಗಿಡ-ಮರಗಳನ್ನು ಕಡಿದು ಹಾಕಲಾಗುತ್ತದೆ. ಅಪಾಯದ ಹಂತದಲ್ಲಿರುವ ಮರಗಳನ್ನು ಮಾತ್ರ ಕಡಿಯಬಹುದೆಂದು ಅರಣ್ಯ ಇಲಾಖೆ ಸೂಚಿಸಿದ್ದರೂ ಗಟ್ಟಿಮುಟ್ಟಾಗಿರುವ ಗಿಡ-ಮರಗಳಿಗೂ ಕೊಡಲಿ ಏಟು ನೀಡುವ ಪ್ರವೃತ್ತಿ ಹೆಚ್ಚಾಗಿದೆ.

ಒಂದೆಡೆ ಪರಿಸರ ಪ್ರೇಮಿಗಳು ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯ ಬೀಜದ ಉಂಡೆಗಳನ್ನು (ಮಣ್ಣಿನಲ್ಲಿ ಬೀಜಗಳನ್ನು ಹಾಕಿ ಮಾಡಿದ ಉಂಡೆ) ಮಾಡಿ ನಗರಗಳ ಹೊರವಲಯ, ಬೆಟ್ಟಗಳು, ಬಯಲು ಪ್ರದೇಶಗಳು, ಗೋಮಾಳಗಳಲ್ಲಿ ಹಾಕಿ ವಾತಾವರಣವನ್ನು ಹಸಿರುಗೊಳಿಸಲು ಪ್ರಯತ್ನ ಮಾಡುತ್ತಾರೆ. “ಏಪ್ರಿಲ್‌ ಕೂಲ್‌’ ಅಭಿಯಾನದ ಮೂಲಕ ಬೇಸಿಗೆಯಲ್ಲಿ ಗಿಡಗಳಿಗೆ ನೀರು ಉಣಿಸುವ ಸತ್ಕಾರ್ಯ ಮಾಡುತ್ತಾರೆ. “ವೃಕ್ಷಕ್ರಾಂತಿ’ ಮಾಡುತ್ತಾರೆ. ಈ ಕಾರ್ಯಕ್ಕೆ ಹಲವು ಮಠಾಧೀಶರ ಸಹಕಾರವೂ ಇರುತ್ತದೆ. ಆದರೆ ಇನ್ನೊಂದೆಡೆ ಮಾರಣಹೋಮ ನಡೆಯುತ್ತಿರುವುದು ವಿಪರ್ಯಾಸ.

ಪರ್ಯಾಯದತ್ತ ಇರಲಿ ಗಮನ :  ಗಿಡಗಳನ್ನು ನೆಲಕ್ಕುರುಳಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿರುವುದು ಕೂಡ ಮರಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ವಿದ್ಯುತ್‌ ತಂತಿಗೆ ತೊಂದರೆಯಾಗದಂತೆ ಸಣ್ಣ ಪ್ರಮಾಣದಲ್ಲಿ ಬೆಳೆಯುವ ಸಾಕಷ್ಟು ಜಾತಿಗಳ ಗಿಡಗಳಿವೆ. ಅವುಗಳನ್ನು ರಸ್ತೆ ಬದಿ, ಬಡಾವಣೆಗಳಲ್ಲಿ ಬೆಳೆಸಲು ಮುಂದಾಗಬೇಕು. ಆಗ ವಿದ್ಯುತ್‌ ಲೈನ್‌ ಕಾರಣದಿಂದ ಮರಗಳ ಮಾರಣಹೋಮ ಕಡಿಮೆಯಾಗಲು ಸಾಧ್ಯವಾಗುತ್ತದೆ.

Advertisement

ಗ್ರಾಮೀಣದಲ್ಲೂ ಗಿಡ ಮಾಯ :  ಕೇವಲ ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗಗಳಲ್ಲಿ ಕೂಡ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಲಗಳ ಬದುಗಳಲ್ಲಿನ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನೆರೆ-ಹೊರೆ ಹೊಲದವರ ಜಗಳ ಹಾಗೂ ಕಟ್ಟಿಗೆ, ಹಣದಾಸೆಗಾಗಿ ಗಿಡಗಳನ್ನು ಕಡಿಯಲಾಗುತ್ತದೆ. ಆದರೆ ಈ ಕಾರ್ಯವು ಹೊಲದ ಬದುಗಳನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ರೈತರು ಕಡೆಗಣಿಸಿದ್ದಾರೆ. ಬದಲಾದ ಕೃಷಿ ಪದ್ಧತಿ, ಅತಿಯಾದ ವಾಣಿಜ್ಯ ಬೆಳೆಗಳ ಮೋಹ, ಮಿತಿಯಾದ ಬೆಳೆಗಳ ವೈವಿಧ್ಯತೆ ಇವು ಕೂಡ ಹೊಲ-ಗದ್ದೆಗಳಲ್ಲಿ ಗಿಡ-ಮರಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿವೆ.

ನಗರಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಔದ್ಯಮೀಕರಣ ಸೇರಿದಂತೆ ವಿವಿಧ ಯೋಜನೆಗಳಿಗೆ ಮರಗಳು ಸಹಜವಾಗಿ ತುತ್ತಾಗುತ್ತವೆ. ಮರಗಳನ್ನು ಕಡಿದವರು ಮತ್ತೆ ಸಸಿಗಳನ್ನು ನೆಡಲು ಮುಂದಾಗುವುದಿಲ್ಲ. ಕಾಟಾಚಾರಕ್ಕೆಂಬಂತೆ ಕೆಲ ಸಸಿ ನೆಡುವುದೇ ಹೆಚ್ಚು. ಅವುಗಳ ನಿರ್ವಹಣೆಯನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ದಾಖಲೆಗಳಲ್ಲಿ ಮಾತ್ರ ಗಿಡಗಳ ಸಂಖ್ಯೆ ನಮೂದಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. -ಲಿಂಗರಾಜ ನಿಡವಣಿ, ಪರಿಸರ ಕಾರ್ಯಕರ್ತ

 

­-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next