Advertisement

Udupi World Bunts Conference: ಮಂಗಳೂರು-ಬೆಂಗಳೂರು ಕಾರಿಡಾರ್‌ ರಚನೆಗೆ ಚಿಂತನೆ

11:45 PM Oct 29, 2023 | Team Udayavani |

ಉಡುಪಿ: ಮಂಗಳೂರಿನಲ್ಲಿ ಗೋಲ್ಡ್ ಆ್ಯಂಡ್‌ ಡೈಮಂಡ್‌ ಸೋಕ್‌ ಘಟಕ ಆರಂಭಿಸಲು ಹೂಡಿಕೆ ಮಾಡಲು ಮುಂದೆ ಬರುವವರಿಗೆ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಗೋಲ್ಡ್ ಸೋಕ್‌ ಘಟಕದ ಮೂಲಕ ಮಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಹೇಳಿದರು.

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿಶ್ವ ಬಂಟರ ಸಮ್ಮೇಳನದ ಸಾಂಸ್ಕೃತಿಕ ವೈಭವದ ಸಮಾರೋಪದಲ್ಲಿ ಅವರು ಮಾತನಾಡಿದರು.

ಬೆಂಗಳೂರು-ಮಂಗಳೂರು ಕಾರಿಡಾರ್‌ ಮಾಡಿದಾಗ ಮಂಗಳೂರು ಇನ್ನಷ್ಟು ಬೆಳೆಯುತ್ತದೆ. ಈ ಕಾರಿಡಾರ್‌ ಆಗಲೇಬೇಕು ಮತ್ತು ಮುಂದೊಂದು ದಿನ ಆಗಲಿದೆ. ಆಗ ಮಂಗಳೂರಿನಿಂದ ಬೆಂಗಳೂರಿಗೆ ಮೂರು ಗಂಟೆಯಲ್ಲಿ ಸಂಚಾರ ಮಾಡಬಹುದು ಎಂದರು.

ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ
ಭಾರತದ ಜತೆಗೆ ಅವಿಭಜಿತ ದ.ಕ. ಜಿಲ್ಲೆಯು ವೇಗವಾಗಿ ಬೆಳೆಯುತ್ತಿದೆ. ಮಂಗಳೂರು ಬಂದರು ಸೇರಿ ಕೈಗಾರಿಕೆಗಳು, ಉದ್ಯಮ ನಡೆಯುತ್ತಿದೆ. ಇನ್ನಷ್ಟು ನಡೆಯಬೇಕು. ಭಾರತವನ್ನು ಜಾಗತಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ. ಅದನ್ನು ನಾವೆಲ್ಲರೂ ಉಪಯೋಗಿಸಿಕೊಂಡು ಸ್ಥಳೀಯವಾಗಿ ಬೆಳೆಯಬೇಕು. ಮಕ್ಕಳನ್ನು ಉದ್ಯಮದ ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೂ ಕಳುಹಿಸಬೇಕು. ರಾಜ್ಯವನ್ನು ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದೇವೆ ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಬಂಟರು
ಕೈಗಾರಿಕೆ, ಕಲೆ, ಬ್ಯಾಂಕಿಂಗ್‌, ಸಿನೆಮಾ, ರಾಜಕೀಯ, ಕೃಷಿ ಸಹಿತ ಎಲ್ಲ ಕ್ಷೇತ್ರದಲ್ಲೂ ಬಂಟರು ಇದ್ದಾರೆ. ಬಂಟರು ಸಹನಶೀಲರು, ಅಗಾಧ ತಾಳ್ಮೆ ಉಳ್ಳವರು, ಧೈರ್ಯವಂತರು. ಏನೇ ಆದರೂ ಧೈರ್ಯದಿಂದ ಮುಂದೆ ಸಾಗುತ್ತಾರೆ. ಭಾರತದಲ್ಲಿ 200ಕ್ಕೂ ಅಧಿಕ ಸಂಘ ಕಟ್ಟಿರುವುದು ಬಂಟರು ಮಾತ್ರ. ಅರಬ್‌ ರಾಷ್ಟ್ರಗಳಲ್ಲಿ ಬಂಟರು ಹೆಚ್ಚಿದ್ದಾರೆ. ಸಾಧನೆಯ ಮೂಲಕ ದೇಶ, ರಾಜ್ಯ, ಜಿಲ್ಲೆಗೆ ಹೆಸರು, ಕೀರ್ತಿ ತಂದಿದ್ದಾರೆ. ಖಾಸಗಿ ಬ್ಯಾಂಕಿಂಗ್‌ ವ್ಯವಸ್ಥೆ ಕಟ್ಟಿದ್ದು ಬಂಟರು. ಆರ್ಥಿಕ ವ್ಯವಸ್ಥಗೆ ದುಡಿದು ಕಾಣಿಕೆ ನೀಡಿದ್ದಾರೆ ಎಂದರು.

Advertisement

ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಪ್ರಮುಖರಾದ ಮುನಿಯಾಲು ಉದಯ ಶೆಟ್ಟಿ, ಮಿಥುನ್‌ ರೈ, ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್‌, ಒಕ್ಕೂಟದ ಪ್ರಮುಖರಾದ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಪ್ರವೀಣ್‌ ಭೋಜ ಶೆಟ್ಟಿ, ರಾಜೇಶ್‌ ಎನ್‌. ಶೆಟ್ಟಿ, ಪ್ರವೀಣ್‌ ಶೆಟ್ಟಿ ವಕ್ವಾಡಿ, ಪಟ್ಲ ಸತೀಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಎ. ಸದಾನಂದ ಶೆಟ್ಟಿ, ಪುರುಷೋತ್ತಮ ಪಿ. ಶೆಟ್ಟಿ, ಅವಿನಾಶ್‌ ಶೆಟ್ಟಿ, ದಿವಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ತಾರಾ ಮೆರುಗು
ವಿಶ್ವ ಬಂಟರ ಸಮ್ಮೇಳನ ಸಾಂಸ್ಕೃತಿಕ ವೈಭವದಲ್ಲಿ ವಿವಿಧ ಪ್ರಕಾರಗಳ ಕಲಾವಿದರಾದ ನಿರೀಕ್ಷಾ ಶೆಟ್ಟಿ ಪುತ್ತೂರು, ದೀಪಕ್‌ ರೈ ಪಾಣಾಜೆ, ವಿಜಯ ಕುಮಾರ್‌ ಕೋಡಿಯಲ್‌ಬೈಲು, ಭರತ್‌ ಭಂಡಾರಿ, ಗುರು ಹೆಗ್ಡೆ, ಶಿವಧ್ವಜ್‌ ಶೆಟ್ಟಿ, ಕಿಶೋರ್‌ ಶೆಟ್ಟಿ, ಗುರು ಹೆಗ್ಡೆ, ಸೂರಜ್‌ ಶೆಟ್ಟಿ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ರವಿ ರೈ, ಸುಂದರ್‌ ರೈ, ರೊಹಾನಿ ಶೆಟ್ಟಿ, ಅದ್ವಿಕಾ ಶೆಟ್ಟಿ, ವಿನು ಬಳಂಜ, ಗಿರೀಶ್‌ ಶೆಟ್ಟಿ, ಮಾನಸಿ ಸುಧೀರ್‌, ಅವಿನಾಶ್‌ ಶೆಟ್ಟಿ, ಯಶ್‌ ಶೆಟ್ಟಿ, ಮಂಜು ರೈ, ತ್ರಿಶಾ ಶೆಟ್ಟಿ, ಸ್ವಾತಿ ಪ್ರಕಾಶ್‌ ಶೆಟ್ಟಿ, ನಿಧಿ ಶೆಟ್ಟಿ, ಸುರತ್ಕಲ್‌ ನವೀನ್‌ ಶೆಟ್ಟಿ, ಪ್ರಥಮಾ ಪ್ರಸಾದ್‌, ಸಂದೇಶ್‌ ಶೆಟ್ಟಿ ಆಜ್ರಿ, ಅಡ್ಯಾರು ಮಾಧವ ನಾಯಕ್‌ ಭಾಗವಹಿಸಿದರು.

ಸಮ್ಮಾನ
ನಟ, ನಿರ್ದೇಶಕ ರಿಷಬ್‌, ಉದ್ಯಮಿ ಡಾ| ಎ. ಸದಾನಂದ ಶೆಟ್ಟಿ, ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ.ಪ್ರಕಾಶ್‌ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ದುಬಾೖ ಉದ್ಯಮಿ ಪ್ರವೀಣ್‌ ಶೆಟ್ಟಿ ವಕ್ವಾಡಿ, ಭಾಗವತರಾದ ಸತೀಶ್‌ ಶೆಟ್ಟಿ ಪಟ್ಲ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಗೃಹ ಸಚಿವರಿಗೆ ಮನವಿ
ಒಕ್ಕೂಟದಿಂದ ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿ, ಬಂಟ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವಾಗ ಬಂಟ ಯಾನೆ ನಾಡವ ಎಂದು ಸೇರಿಸಬೇಕು. ಹಾಗೆಯೇ 3ಬಿ ವರ್ಗದಲ್ಲಿರುವ ಬಂಟ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂಬ ಮನವಿ ಸಲ್ಲಿಸಲಾಯಿತು. ಈ ವೇಳೆ ಬಂಟ ಸಮುದಾಯದವರು ಎದ್ದುನಿಂತು ಮನವಿಗೆ ಜತೆಯಾದರು.

ಸಾಂಸ್ಕೃತಿಕ ಕ್ಷೇತ್ರಕ್ಕೆ ಬಂಟರ ಕೊಡುಗೆ ಅಪಾರ
ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಡಾ| ಮೋಹನ ಆಳ್ವ
ಉಡುಪಿ: ಸಾಂಸ್ಕೃತಿಕ ಕ್ಷೇತ್ರಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ ಮತ್ತು ಅನನ್ಯವಾಗಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.

ವಿಶ್ವ ಬಂಟರ ಸಮ್ಮೇಳನದ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಅವರು ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಬಂಟರ ಕೊಡುಗೆ ಅಪಾರವಾಗಿದೆ. ಕೃಷಿ, ಜೀವನಮೌಲ್ಯ ಸೇರಿದಂತೆ ಕರಾವಳಿಯ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬಂಟರ ಪಾತ್ರ ಪ್ರಮುಖವಾಗಿದೆ ಎಂದರು.

ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯನ್ನು ಉದ್ಘಾಟಿಸಿದರು. ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶಿರ್ವಚನ ನೀಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಗುರುರಾಜ್‌ ಶೆಟ್ಟಿ ಗಂಟಿಹೊಳೆ, ಗುರ್ಮೆ ಸುರೇಶ್‌ ಶೆಟ್ಟಿ, ಯಶಪಾಲ್‌ ಸುವರ್ಣ, ಕಿರಣ್‌ ಕೂಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್‌ ಹೆಗ್ಡೆ, ಮೆರಿಟ್‌ ಹಾಸ್ಪಿಟಾಲಿಟಿನ ಸಿಎಂಡಿ ಬೆಲ್ಲಾಡಿ ಅಶೋಕ್‌ ಶೆಟ್ಟಿ, ಪಂಜುರ್ಲಿ ಗ್ರೂಪ್‌ ಆಫ್‌ ಹೊಟೇಲ್‌ ಸಿಎಂಡಿ, ದ. ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ, ಗಣ್ಯರಾದ ಚಂದ್ರಿಕಾ ಹರೀಶ್‌ ಶೆಟ್ಟಿ, ವೀಣಾ ಶೆಟ್ಟಿ, ಒಕ್ಕೂಟದ ಪ್ರಮುಖರಾದ ಕರ್ನಿರೆ ವಿಶ್ವನಾಥ್‌ ಶೆಟ್ಟಿ, ಚಂದ್ರಹಾಸ ಡಿ. ಶೆಟ್ಟಿ, ಕರ್ನೂರ್‌ ಮೋಹನ್‌ ರೈ ಉಪಸ್ಥಿತರಿದ್ದರು.ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್‌ ದಾಸ್‌ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿ, ಅಶೋಕ್‌ ಪಕ್ಕಳ ವಂದಿಸಿದರು.

ಬಂಟರು ಧರ್ಮ ಸಂರಕ್ಷಣೆಯ ರಕ್ಷಕರು
ಬಂಟ ಸಮಾಜವು ಜಾತಿ, ಭೇದ ಬಿಟ್ಟು ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯನ್ನು ಬಯಸುತ್ತದೆ ಎಂದು ಒಡಿಯೂರು ಶ್ರೀಗಳು ಹೇಳಿದರು. ಎಲ್ಲ ಸಮಾಜದ ಮೇಲೆ ಪ್ರೀತಿ ಹೊಂದಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸೌಹಾರ್ದ ಮನಸ್ಥಿತಿ ಬಂಟರದು. ಬಂಟರು ಧರ್ಮ ರಕ್ಷಣೆಯ ರಕ್ಷಕರೂ ಆಗಿದ್ದಾರೆ. ಬಂಟರು ಸಂಘಟಿತರಾದರೇ ದೇಶವನ್ನೇ ಆಳಬಹುದು. ಬಂಟ ಸಮುದಾಯ ಒಟ್ಟು ಸಮಾಜದ ಆಸ್ತಿಯಾಗಿದೆ ಎಂದವರು ಆಶಿರ್ವಚನದಲ್ಲಿ ಹೇಳಿದರು.

ಅಭಿವೃದ್ಧಿಗೆ ಕೊಡುಗೆ: ಸಚಿವೆ ಶೋಭಾ
ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಂಟರ ಸಾಧನೆ ಅಪಾರವಾಗಿದೆ. ದೇಶದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿದ ಕೀರ್ತಿಯೂ ಬಂಟರದು. ಸುಸಂಸ್ಕೃತ, ಸುಶಿಕ್ಷಿತ ಬಂಟ ಸಮುದಾಯವು ದೇಶದ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬಂಟರ ಸಮ್ಮೇಳನ: ಡಾ| ಎಂಎನ್‌ಆರ್‌ರಿಗೆ ಸಮ್ಮಾನ
ಮಂಗಳೂರು: ಸಹಕಾರ ಕ್ಷೇತ್ರದ ಮೂಲಕ ಜನ ಸಾಮಾನ್ಯರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಸಹಕಾರಿನಾಯಕರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ವಿಶ್ವ ಬಂಟರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.

ರಾಜೇಂದ್ರ ಕುಮಾರ್‌ ಅವರು ಬಂಟರ ಸಮಾಜದೊಂದಿಗೆ ಉತ್ತಮ ನಂಟು ಹೊಂದಿದ್ದಾರೆ. ಮಾತ್ರವಲ್ಲ ಎಲ್ಲ ಜಾತಿ, ವರ್ಗ, ಧರ್ಮದ ಜನರ ಜತೆಗೆ ಪರಸ್ಪರ ಸೌಹಾರ್ದ, ಪ್ರೀತಿ, ವಿಶ್ವಾಸದಿಂದ ನಡೆದುಕೊಂಡು ಸಹಕಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆಗೈದಿದ್ದಾರೆ. ಈ ಸಂದರ್ಭ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಶಾಸಕ ಅಶೋಕ್‌ ಕುಮಾರ್‌ ರೈ, ಕನ್ಯಾನ ಸದಾಶಿವ ಶೆಟ್ಟಿ, ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next