Advertisement

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕಾರ್ಯಕರ್ತೆಯರ ಖಂಡನೆ

11:18 AM May 14, 2019 | Team Udayavani |

ಕೋಲಾರ: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಪರಿಹಾರಕ್ಕೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾಡಳಿತದ ಧೋರಣೆ ಖಂಡಿಸಿ ಸಿಐಟಿಯು ನೇತೃತ್ವದ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿತು.

Advertisement

ಜಿಪಂ ಕಚೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಮುನಿರಾಜಮ್ಮ, ಸಂಘಟನೆ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಜತೆ ಚರ್ಚಿಸಿದ ಸಂದರ್ಭದಲ್ಲಿ ತುರ್ತಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಮೂರು ತಿಂಗಳಾದರೂ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.

ಶ್ರೀನಿವಾಸಪುರದಲ್ಲಿ ಒಂದು ವರ್ಷದಿಂದ ಬಾಕಿ ಇರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಬಿಡುಗಡೆ ಮಾಡಬೇಕು, ಅಂಗನವಾಡಿ ಕೇಂದ್ರಗಳ ಹುದ್ದೆ ಖಾಲಿಯಾದಾಗ ಕಾರ್ಯಕರ್ತರ ಗಮನಕ್ಕೆ ತಾರದೆ ನಡೆಸುತ್ತಿರುವ ಆಯ್ಕೆ ಪ್ರಕ್ರಿಯೆ ಕೈಬಿಡಬೇಕು, ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬಡ್ತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು, ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ವೇತನ ಇತರೆ ಬಿಲ್ಗಳನ್ನು ಮಾಡಲು ಸತಾಯಿಸುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಕೋಲಾರ ತಾಲೂಕಿನಲ್ಲಿ 7 ತಿಂಗಳಿನಿಂದ ಬಾಕಿ ಇರುವ ಮೊಟ್ಟೆ, ತರಕಾರಿ ಖರೀದಿ ಹಣ ಬಿಡುಗಡೆ ಮಾಡಬೇಕು, ನಿವೃತ್ತಿಯಾದವರಿಗೆ ಎನ್‌ಪಿಎಸ್‌ ಕಾರ್ಡ್‌ಗಳಿಲ್ಲದ ಕಾರಣ ಪರಿಹಾರಕ್ಕೆ ಅಲೆದಾಡುವುದನ್ನು ತಪ್ಪಿಸಬೇಕು, 2016ರಿಂದ ಬಾಕಿ ಇರುವ ಭಾಗ್ಯಲಕ್ಷ್ಮ್ಮಿ ಬಾಂಡ್‌ಗಳನ್ನು ಬಿಡುಗಡೆ ಮಾಡಬೇಕು ಮಾತೃಶ್ರೀ, ಮಾತೃವಂದನಾ ಅರ್ಜಿಗಳಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಜಿ.ಈಶ್ವರಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಎನ್‌.ನಾಗರತ್ನ, ಪದಾಧಿಕಾರಿಗಳಾದ ಕಲ್ಪನಾ, ಮಂಜುಳ, ಆಂಜಿನಮ್ಮ, ನೇತ್ರಾವತಿ, ಎಂ.ಲಕ್ಷ್ಮ್ಮಮ್ಮ, ಸುಜಾತ, ರತ್ನಮ್ಮ ಅಮುದ, ಇಂದ್ರಮ್ಮ, ಸುಶೀಲಾ, ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ವಿಜಯಕೃಷ್ಣ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next