Advertisement

ಪುರೋಗತಿಯಲ್ಲಿ ಕಾಮಗಾರಿ; ಪೆರ್ಲ ಪೇಟೆ ಮುಖ್ಯ ರಸ್ತೆ ಸಂಪೂರ್ಣ ವಿಸ್ತರಣೆ

02:21 AM Mar 17, 2020 | Sriram |

ಪೆರ್ಲ: ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿ ನವೀಕರಣ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಪೆರ್ಲ ಪೇಟೆಯ ಇಕ್ಕೆಲಗಳ ರಸ್ತೆಯನ್ನು ನಾಲ್ಕು ಪಥಗಳಾಗಿ ಸುಮಾರು ಹತ್ತು ಮೀಟರ್‌ ವಿಸ್ತಾರದಲ್ಲಿ ಅಗಲಗೊಳಿಸಲಾಗುತ್ತಿದೆ.

Advertisement

ಈಗಾಗಲೆ ಪೇಟೆಯ ಉದ್ದಗಲಕ್ಕೂ ರಸ್ತೆ ಸಮತಟ್ಟುಗೊಳಿಸಲಾಗುತ್ತಿದ್ದು ,ಕೆಲವು ಕಡೆ ಹಾಸು ಪಾರೆಗಳನ್ನು ಜೆಸಿಬಿ ಬಳಸಿ ಅಗೆದು ತೆಗೆಯಲಾಗುತ್ತಿದೆ.ಉಕ್ಕಿನಡ್ಕದಿಂದ ಸಾರಡ್ಕ ತನಕದ ರಸ್ತೆ ಬದಿಯ ಬಹುತೇಕ ಮರಗಳನ್ನು ಮಾರ್ಗ ಅಗಲಗೊಳಿಸಲು ಕಡಿದುರುಳಿಸಲಾಗಿದೆ.ಪೇಟೆ ಆಸುಪಾಸಿನ ಮರಗಳನ್ನು ತೆರವು ಗೊಳಿಸಿದ್ದು ರಸ್ತೆ ವಿಸ್ತರಣೆ ಕಾಮಗಾರಿ ಪೂರ್ತಿಯಾದಾಗ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.ಪೇಟೆ ಚಿತ್ರಣ ಬದಲಾಗಿ ಪ್ರಯಾಣಿಕರಿಗೆ,ವಾಹನ ಚಾಲಕರಿಗೆ ಸಂಚರಿಸಲು ಅನುಕೂಲವಾಗಲಿದೆ.

ಪೇಟೆಯ ಆರಂಭ ಭಾಗ ಪೆರ್ಲ ಅಂಚೆ ಕಚೇರಿ ಮುಂಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ನೆರಳು ನೀಡುತ್ತಿದ್ದ ಬƒಹತ್‌ ಮಾವಿನ ಮರ ಹಾಗೂ ಪಡಿತರ ವಿತರಣಾ ಕೇಂದ್ರದ ಮುಂಭಾಗದ ದೇವದಾರು ಮರವನ್ನು ರಸ್ತೆ ಅಗಲೀಕರಣದ ಪ್ರಯುಕ್ತ ತೆರವು ಗೊಳಿಸಲಾಗಿದೆ.ಈ ಭಾಗದಲ್ಲಿ ಸುಮಾರು 10 ಮೀಟರ್‌ ಹೆಚ್ಚು ವಿಸ್ತಾರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.

ಅನುದಾನಗಳು,ಕಾಮಗಾರಿ ವಿವರ
ಕೇರಳ ಇನ್‌ಸ್ಟ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಫಿನಾನ್ಸ್‌ ಬೋರ್ಡ್‌ (ಕಿಫ್ಬಿ) ವತಿಯಿಂದ ಚೆರ್ಕಳದಿಂದ ಸಾರಡ್ಕ ತನಕದ 29 ಕಿ.ಮೀ. ರಸ್ತೆಯ ನವೀಕರಣಕ್ಕಾಗಿ ಒಟ್ಟು ಮೊತ್ತ 67.15 ಕೋಟಿ ರೂ. ಅನುದಾನವಿದ್ದು ,ಚೆರ್ಕಳದಿಂದ ಉಕ್ಕಿನಡ್ಕದ ವರೆಗಿನ19 ಕಿ.ಮೀ.ಕಾಮಗಾರಿಗೆ 39.76ಕೋಟಿ ಹಾಗೂ ಉಕ್ಕಿನಡ್ಕದಿಂದ ಅಡ್ಕಸ್ಥಳ ಸಾರಡ್ಕ ಗಡಿಯವರೆಗಿನ 10 ಕಿ.ಮೀ.ಕಾಮಗಾರಿಗೆ 27.39ಕೋಟಿ ಅನುದಾನದಲ್ಲಿ ಎರಡು ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ.ಕುದ್ರೋಳಿ ಸಂಸ್ಥೆಯು ಗುತ್ತಿಗೆ ವಹಿಸಿಕೊಂಡಿದ್ದು ,ಚೆರ್ಕಲ ಪಳ್ಳತ್ತಡ್ಕ ವರೆಗೆ ಬೇರ್ಕ ಸಂಸ್ಥೆಗೆ ಕಾಮಗಾರಿ ನೀಡಲಾಗಿದೆ.
ಚೆರ್ಕಳದಿಂದ ಉಕ್ಕಿನಡ್ಕ ತನಕದ ಕಾಮಗಾರಿಯಲ್ಲಿ ಅಡ್ಕಸ್ಥಳ,ಪೆರ್ಲದ ಕೆಲ ಪ್ರದೇಶಗಳಲ್ಲಿ ಹಾಗೂ ಉಕ್ಕಿನಡ್ಕದಿಂದ ಪಳ್ಳತ್ತಡ್ಕ ತನಕ ಒಂದನೇ ಹಂತದ ಡಾಮರೀಕರಣ ಈ ಮೊದಲೇ ನಡೆದಿದೆ.ಪಳ್ಳತ್ತಡ್ಕದಿಂದ ಕೆಡೆಂಜಿ ವರೆಗೆ ಡಾಮರುಕಾಮಗಾರಿ ಇತ್ತೀಚೆಗೆ ಆಗಿದೆ.ಬದಿಯಡ್ಕ ಪೇಟೆ ಹಾಗೂ ಬೀಜಂತಡ್ಕ, ಪೊಯೆÂಕಂಡದವರೆಗೆ ಬಿರುಸಿನ ಕಾಮಗಾರಿ ನಡೆಯುತ್ತಿದೆ.ಬದಿಯಡ್ಕ ವೃತ್ತ ಹಾಗೂ ಪೇಟೆ ಭಾಗದ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಸಾರಡ್ಕ ವರೆಗಿನ ರಸ್ತೆ ಅಗಲೀಕರಣ,ಕಿರು ಸೇತುವೆ ನಿರ್ಮಾಣ,ರಸ್ತೆ ಬದಿಗಳ ದುರಸ್ತಿ ಕಾರ್ಯಗಳು ನಡೆದಿವೆ. ಸಾರಡ್ಕ ಗಡಿಯಿಂದ ಅಡ್ಕಸ್ಥಳ ತನಕ ಎರಡನೇ ಹಂತದ ಡಾಮರೀಕರಣ ಪೂರ್ತಿಯಾಗಿದೆ.

Advertisement

ಪೆರ್ಲ ನಲ್ಕ ನಡುವಿನ ಗೋಳಿತ್ತಡ್ಕದಲ್ಲಿ ಎರಡು ವರ್ಷ ಹಿಂದೆ ಇಂಟರ್‌ ಲಾಕ್‌ ಅಳವಡಿಸಲಾಗಿದ್ದು ,ಇಲ್ಲಿ ಅಗಲ ಕಿರಿದಾಗಿದ್ದು 250 ಮೀ.ರಸ್ತೆ ಕಾಮಗಾರಿ ನಡೆಯದೆ ಈ ಹಿಂದಿನಂತೆ ಉಳಿದಿದೆ.ಸ್ಥಳ ಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಈ ಭಾಗದ ಕಾಮಗಾರಿಗೆ ಹಿನ್ನಡೆಯಾಗಿದೆ.ಇಲ್ಲಿ ಮೆಕ್ಕಡಾಂ ರೀತಿಯ ಡಾಮರೀಕರಣ ನಡೆದಲ್ಲಿ ಇಂಟರ್‌ ಲಾಕ್‌ ತೆರವು ಗೊಳಿಸಬೇಕಾದೀತು ಅಥವಾ ಇನ್ನಷ್ಟು ಅಗಲಕ್ಕೆ ಇಂಟರ್‌ ಲಾಕ್‌ ಅಳವಡಿಸಬೇಕಾಗಿದೆ.

ಪಳ್ಳತ್ತಡ್ಕ ಸೇತುವೆ ದುರಸ್ತಿ ಅಗತ್ಯ
ಅಂತಾರಾಜ್ಯ ಹೆದ್ದಾರಿ ಹಾದು ಹೋಗುವ ಪಳ್ಳತ್ತಡ್ಕದಲ್ಲಿ ಪ್ರಧಾನ ಸೇತುವೆ ಇದೆ.ಇದು ಬಿರುಕು ಬಿಟ್ಟಿದ್ದು ,ಸೇತುವೆಯ ಅಡಿಭಾಗದ ಸಿಮೆಂಟ್‌ ಕಳಚಿ ಕಬ್ಬಿಣ ತುಕ್ಕು ಹಿಡಿದು ಕಾಣುತ್ತಿವೆ.ಸೇತುವೆ ಮೇಲೆ ಹೊಂಡಗಳೆದ್ದಿವೆ.ರಸ್ತೆ ದುರಸ್ತಿ ಸಂದರ್ಭ ಸೇತುವೆ ಮೇಲಿನ ಒಂದು ಭಾಗದ ಹೊಂಡಗಳಿಗೆ ಸಿಮೆಂಟ್‌ನಿಂದ ತೇಪೆ ಹಾಕಲಾಗಿದೆ.ಇನ್ನೊಂದು ಭಾಗ ಹಾಗೆ ಇದ್ದು ಹೊಂಡಗಳಿಂದ ಕೂಡಿದೆ.ಸೇತುವೆ ಮೇಲೆ ಘನವಾಹನಗಳು ಸಂಚರಿಸುವುದು ಅಪಾಯ ಎಂದು ಲೋಕೋಪಯೋಗಿ ಇಲಾಖೆಯಿಂದ ಸೂಚನಾ ಫಲಕ ಹಾಕಿದ್ದರು.ರಸ್ತೆ ಡಾಮರು ಕಾಮಗಾರಿ ಜತೆ ಸೇತುವೆ ದುರಸ್ತಿ ಆಗಬೇಕಾದುದು ಅಗತ್ಯ.

ರಾಜ್ಯ ಹೆದ್ದಾರಿಯ ಅಗಲೀಕರಣ,ಪೂರ್ತಿ ಮೆಕ್ಕಡಾಂ ಡಾಮರೀಕರಣ,ಸೂಚನಾ ಫಲಕ ಇತ್ಯಾದಿ ಕೆಲಸಗಳು ಮಳೆಗಾಲ ಆರಂಭವಾಗುವ ಮೊದಲು ಆಗಬೇಕಾಗಿದೆ. ಎಪ್ರಿಲ್‌, ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣವಾಗ ಬಹುದೆಂದು ನಿರೀಕ್ಷಿಸಲಾಗಿದೆ.ಸುವ್ಯವಸ್ಥಿತ ಹೆದ್ದಾರಿ ನಿರ್ಮಿಸಿದ ನಂತರ ಪ್ರತೀ ವರ್ಷ ಚರಂಡಿ ಸ್ವತ್ಛತೆ ,ಮಾರ್ಗ ಬದಿಯ ಕಾಡು ಪೊದೆಗಳ ತೆರವು,ರಸ್ತೆ ಬದಿಗಳಿಗೆ ತಡೆಗೋಡೆ ನಿರ್ಮಾಣನಿರ್ವಹಣೆ ಮಾಡುತ್ತಾ ಇದ್ದರೆ ರಸ್ತೆ ದೀರ್ಘ‌ ಕಾಲ ಬಾಳಿಕೆ ಬರಬಹುದು.

ಕರಿಂಬಿಲದಲ್ಲಿ ಗುಡ್ಡ ಕುಸಿತದ ಭೀತಿ
ಕಳೆದ ಮಳೆಗಾಲದಲ್ಲಿ ಕರಿಂಬಿಲ ಸಮೀಪ ಪ್ರದೇಶದಲ್ಲಿ ಗುಡ್ಡ ಕುಸಿದು ಸುಮಾರು ಎರಡು ತಿಂಗಳು ಸಂಚಾರ ವ್ಯವಸ್ಥೆ ಸ್ಥಗಿತ ಗೊಳಿಸಲಾಗಿತ್ತು.

ಮಳೆ ಕಡಿಮೆಯಾದ ಬಳಿಕ ರಸ್ತೆಯಲ್ಲಿದ್ದ ಮಣ್ಣು ತೆರವುಗೊಳಿಸಿ ಸಂಚಾರ ಪುನಃ ಆರಂಭಿಸಿದ್ದರೂ ಪೂರ್ತಿ ಮಣ್ಣು ತೆರವುಗೊಳಿಸಿಲ್ಲ .ಈಗ ರಸ್ತೆ ಅಗಲಗೊಂಡಿದ್ದು ,ಗುಡ್ಡ ಜರಿದ ಮಣ್ಣು ಸ್ವಲ್ಪ ತೆರವುಗೊಳಿಸಿದ್ದಾರೆ.ಆದರೆ ಪೂರ್ತಿ ಮಣ್ಣು ತೆಗೆಯಲು ಹಾಗೂ ಕುಸಿತ ತಡೆಯಲು ತಡೆಗೋಡೆ ನಿರ್ಮಾಣಕ್ಕೆ ಬೃಹತ್‌ ಯೋಜನೆ,ಅನುದಾನ ಬೇಕಾಗಿದೆ.ಮಳೆಗಾಲದಲ್ಲಿ ಮಣ್ಣು ಕುಸಿದು ಬೀಳುವ ಸಾಧ್ಯತೆ ಇದೆ.ಸಮರ್ಪಕ ಚರಂಡಿ ವ್ಯವಸ್ಥೆಯು ಆಗಬೇಕಾಗಿದೆ.ಎರಡನೇ ಹಂತದ ಡಾಮರೀಕರಣ ಪೂರ್ತಿಗೊಂಡಾಗ ರಸ್ತೆ ಬದಿಗಳ ಚರಂಡಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸ್ಥಳೀಯರು,ಬದಿಯಡ್ಕ ಪಂ.ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ತಿಳಿಸಿದ್ದಾರೆ.ಪ್ರಸ್ತುತ ಅಂತಾರಾಜ್ಯ ರಸ್ತೆಯು ದಶಕಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟು ,ನವೀಕರಣ ಆಗ್ರಹಿಸಿ ವ್ಯಾಪಾರಿ ಏಕೋಪನಾ ಸಮಿತಿ, ವಿವಿಧ ಪಕ್ಷಗಳ ನೇತƒತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟ,ರಸ್ತೆ ತಡೆ,ಲೋಕೋಪಯೋಗಿ ಇಲಾಖೆ ಮುತ್ತಿಗೆ,ಮುಷ್ಕರ ಧರಣಿ ನಡೆಸಿದ್ದರು.

ನಡೆಯಬೇಕಾದ ಪೂರಕ ಕಾಮಗಾರಿ
ರಸ್ತೆಯ ಬದಿಗಳಲ್ಲಿ ಹಾಕಲಾಗಿದ್ದ ವಿದ್ಯುತ್‌ ಕಂಬಗಳನ್ನು ಇಲಾಖೆ ಸ್ಥಳಂತರಿಸದೆ ಇದ್ದ ಕಾರಣ ರಸ್ತೆ ಅಗಲೀಕರಣಕ್ಕೆ ತೊಡಕಾಗಿದೆ.ಮಾರ್ಗ ಅಗಲಗೊಳಿಸಿದ ಕೆಲವು ಕಡೆ ಕಂಬವು ರಸ್ತೆಯಲ್ಲಿದ್ದು ,ಕಂಬ ಇರುವ ಜಾಗ ಬಿಟ್ಟು ಡಾಮಾರೀಕರಣ ಮಾಡಿದ್ದಾರೆ.ಬದಿಯಡ್ಕ ಪಂಚಾಯತಿನ ತಲಂಬಾಡಿ ಬೃಹತ್‌ ಕುಡಿ ಯುವ ನೀರು ವಿತರಣೆಗಾಗಿ ಹಾಕಿದ ಪೈಪ್‌ಗ್ಳನ್ನು ತೆಗೆದು ಹೊಸ ಪೈಪ್‌ಗ್ಳನ್ನು ಅಳವಡಿಸಲು ಅನುದಾನ ಲಭಿಸಿದ್ದು ಕಾಮಗಾರಿಯು ಆರಂಭವಾಗಿದೆ. ಹೆದ್ದಾರಿ ದುರಸ್ಥಿಗೊಳಿಸಿದ ಕಡೆ ನೂತನ ಪೈಪ್‌ಗ್ಳನ್ನು ಹಾಕಲು ಕಾಮಗಾರಿ ನಡೆಸಿದರೆ ರಸ್ತೆಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next