Advertisement

Women’s T20 World Cup Cricket; ಲಂಕಾ ವಿರುದ್ಧ ಎಚ್ಚರಿಕೆಯ ಆಟ ಅಗತ್ಯ

12:24 AM Oct 08, 2024 | Team Udayavani |

ದುಬಾೖ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಕಿಸ್ಥಾನವನ್ನು ಮಣಿಸಿ ಗೆಲುವಿನ ಖಾತೆ ತೆರೆದಿರುವ ಭಾರತ, ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಬುಧವಾರದ ಈ ಪಂದ್ಯವನ್ನು ಕೌರ್‌ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನೊಂದೆಡೆ ಲಂಕೆಗೂ ಇದು ಮಹತ್ವದ ಪಂದ್ಯವಾಗಿದೆ. ಅದು ಎರಡೂ ಪಂದ್ಯಗಳನ್ನು ಸೋತಿದ್ದು, ಹ್ಯಾಟ್ರಿಕ್‌ ಸೋಲನುಭವಿಸಿದರೆ ಕೂಟದಿಂದ ಹೊರಬೀಳಲಿದೆ.

Advertisement

ಆದರೂ ಶ್ರೀಲಂಕಾವನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಭಾರತದ ಓಪನರ್‌ಗಳಾದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಹೇಳಿದ್ದಾರೆ. “ಒಂದು ಕಾಲದಲ್ಲಿ ಕೇವಲ ನಾಯಕಿ ಚಾಮರಿ ಅತಪಟ್ಟು ಬಹಳಷ್ಟು ರನ್‌ ಗಳಿಸುವ ಜತೆಗೆ, ವಿಕೆಟ್‌ ಕೂಡ ಉರುಳಿಸುತ್ತಿದ್ದರು. ಆದರೆ ಕಳೆದ ಏಷ್ಯಾ ಕಪ್‌ನಲ್ಲಿ ಅವರು ಸಾಂ ಕ ಹೋರಾಟದ ಮೂಲಕ ಚಾಂಪಿಯನ್‌ ಆದರು. ವಿಶ್ವಕಪ್‌ನಲ್ಲಿ ಅವರಿನ್ನೂ ಗೆಲುವಿನ ಖಾತೆ ತೆರೆದಿಲ್ಲ ಅಂದಮಾತ್ರಕ್ಕೆ ಲಘುವಾಗಿ ಪರಿಗಣಿಸಬಾರದು’ ಎಂದು ಶಫಾಲಿ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತಾಡಿದ ಸ್ಮತಿ ಮಂಧನಾ, “ಆಟಗಾರರಾದ ನಮಗೆ ಎಲ್ಲ ಪಂದ್ಯಗಳೂ ಮುಖ್ಯ. ವಿಶ್ವಕಪ್‌ ಆಡಲು ಬಂದಾಗ ನೂರು ಪ್ರತಿಶತ ಸಾಧನೆ ತೋರ್ಪಡಿಸಲೇಬೇಕು. ಶ್ರೀಲಂಕಾ ಅತ್ಯುತ್ತಮ ತಂಡ. ಇವರೆದುರು ಆಡುವಾಗ ಎಚ್ಚರಿಕೆ ಅಗತ್ಯ. ಆದರೆ ಆಸ್ಟ್ರೇಲಿಯ ವಿರುದ್ಧ ಸಾಮರ್ಥ್ಯಕ್ಕೂ ಮಿಗಿಲಾದ ಆಟ ಆಡಬೇಕು. ಸ್ವಲ್ಪವೂ ತಪ್ಪು ಮಾಡುವಂತಿಲ್ಲ’ ಎಂಬುದು ಸ್ಮತಿ ಮಂಧನಾ ಅನಿಸಿಕೆ.

ಚಾಮರಿ ವಿಕೆಟ್‌ ಮುಖ್ಯ
ಓಪನರ್‌ ಚಾಮರಿ ಅತಪಟ್ಟು ವಿಕೆಟ್‌ ನಿರ್ಣಾಯಕವಾಗಲಿದೆ ಎಂದವರು ವೇಗಿ ರೇಣುಕಾ ಸಿಂಗ್‌ ಠಾಕೂರ್‌. “ಚಾಮರಿ ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಲಂಕೆಯ ಏಕೈಕ ಆಟಗಾರ್ತಿ. ನಾನು ಅವರ ವಿಕೆಟನ್ನು ಆದಷ್ಟು ಬೇಗ ಉರುಳಿಸಲು ಪ್ರಯತ್ನಿಸಲಿದ್ದೇನೆ. ಒಮ್ಮೆ ಆಕೆ ಸೆಟ್‌ ಆದರೆಂದರೆ ಕಷ್ಟ’ ಎಂದರು.

ಪಾಕಿಸ್ಥಾನ ವಿರುದ್ಧ ಗೆಲುವು ದಾಖಲಿಸಿದ ಭಾರತವೀಗ “ಎ’ ವಿಭಾಗದ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ರನ್‌ರೇಟ್‌ -1.217 ಆಗಿದೆ. ಕೌರ್‌ ಪಡೆ ಉಳಿದೆರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದುದು ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next