Advertisement

Reservation: ಮಹಿಳಾ ಮೀಸಲಾತಿ, ಚುನಾವಣೆ ಮೇಲೆ ಪ್ರಭಾವ?

12:08 AM Sep 25, 2023 | Team Udayavani |

ಆಗ 1996, ಕರ್ನಾಟಕದಿಂದ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೇರಿದ್ದ ಎಚ್‌.ಡಿ.ದೇವೇಗೌಡರ ಸರಕಾರದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂಬ ಸದುದ್ದೇಶದಿಂದ ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ಆಗ ಅವರದ್ದು ಅಲ್ಪಮತದ ಸರಕಾರವಾಗಿದ್ದರಿಂದ ಈ ಮಸೂದೆ ಮುಂದಕ್ಕೆ ಹೋಗಲೇ ಇಲ್ಲ.

Advertisement

ಈಗ 27 ವರ್ಷಗಳ ಬಳಿಕ, ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಮಹಿಳಾ ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಲೋಕಸಭೆಯಲ್ಲಿ ಇಬ್ಬರು ಸಂಸದರಷ್ಟೇ ವಿರೋಧಿಸಿ ಮತ ಹಾಕಿದರಾದರೂ, ಇವರು ಮಸೂದೆಯಲ್ಲಿನ ಕೆಲವು ಅಂಶಗಳ ಕಾರಣದಿಂದ ವಿರೋಧಿಸಿದ್ದೆವು. ಆದರೆ ಇಡೀ ಮಸೂದೆಗೆ ನಮ್ಮ ವಿರೋಧವಿಲ್ಲ ಎಂದು ಹೇಳುವ ಮೂಲಕ ಅವರೂ ಬೆಂಬಲಿಸಿದ್ದಾರೆ. ಅತ್ತ ರಾಜ್ಯಸಭೆಯಲ್ಲಿ  ಸದನದಲ್ಲಿ ಹಾಜರಿದ್ದ 215 ಮಂದಿಯೂ ಮತ ಹಾಕಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಉಭಯ ಸದನಗಳಲ್ಲಿಯೂ ಅಂಗೀಕಾರವಾಗಿರುವ ಈ ಮಸೂದೆ ರಾಷ್ಟ್ರಪತಿಯವರಲ್ಲಿಗೆ ಹೋಗುತ್ತದೆ. ಅಲ್ಲಿ ಸಹಿ ಹಾಕಿದ ಬಳಿಕ ಜಾರಿಗೆ ಬರುತ್ತದೆ. ಆದರೂ ಇದು ಸಂಪೂರ್ಣ ಜಾರಿಯಾಗಲು ಬಹಳಷ್ಟು ವರ್ಷಗಳ ವರೆಗೆ ಕಾಯಬೇಕಾದ ಅನಿವಾರ್ಯತೆಯೂ ಇದೆ.

ಮಹಿಳಾ ಮಸೂದೆ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷವೂ ಇಂದು ವಿರೋಧಿಸುವ ಸ್ಥಿತಿಯಲ್ಲಿ ಇರಲೇ ಇಲ್ಲ. ಇದಕ್ಕೆ ಕಾರಣ, 2024ರ ಲೋಕಸಭೆ ಚುನಾವಣೆ ಮತ್ತು ಈ ವರ್ಷಾಂತ್ಯದಲ್ಲಿ ಬರಲಿರುವ ಪಂಚ ವಿಧಾನಸಭೆಗಳ ಚುನಾವಣೆಗಳು. ಒಂದು ವೇಳೆ ಈ ಮಸೂದೆಗೆ ವಿರೋಧ ಮಾಡಿದ್ದೇ ಆದರೆ ಸಾರಾಸಗಟಾಗಿ ಮಹಿಳೆಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತಿತ್ತು ಎಂಬ ಆತಂಕ ಎಲ್ಲ ಪಕ್ಷಗಳಲ್ಲಿಯೂ ಇತ್ತು. ಅದೂ ಅಲ್ಲದೇ ಕೇಂದ್ರ ಸರಕಾರ, ಐದು ದಿನಗಳ ವಿಶೇಷ ಅಧಿವೇಶನ ಕರೆದಾಗ, ವಿರೋಧ ಪಕ್ಷಗಳ ಸಾಲಿನಲ್ಲಿ ದೊಡ್ಡ ಆತಂಕವೂ ಇತ್ತು. ದಿಢೀರನೇ ಏನಾದರೂ ಘೋಷಣೆ ಮಾಡಿಬಿಟ್ಟರೆ ಹೇಗೆ? ಚಡಪಡಿಕೆಯೂ ಇತ್ತು. ಹೀಗಾಗಿಯೇ ಅಧಿವೇಶನದ ಅಜೆಂಡಾ ಬಗ್ಗೆ ಆಗಾಗ ಆಗ್ರಹಿಸುತ್ತಲೇ ಇದ್ದವು. ಕಡೆಗೂ ಕೇಂದ್ರ ಸರಕಾರ ನೆಪಮಾತ್ರಕ್ಕೆ ಅಧಿವೇಶನದ ಅಜೆಂಡಾ ಬಿಟ್ಟಿತಾದರೂ, ಅಜೆಂಡಾದಲ್ಲಿದ್ದ ಯಾವ ಅಂಶಗಳೂ 5 ದಿನದ ಅಧಿವೇಶನದಲ್ಲಿ ಬರಲೇ ಇಲ್ಲ. ಕಡೆಗೆ ಕೇಂದ್ರ ಸರಕಾರ ದಿಢೀರನೇ ಮಹಿಳಾ ಮೀಸಲಾತಿ ಮಸೂದೆ ತೆಗೆದುಕೊಂಡು ವಿಪಕ್ಷಗಳಿಗೆ ದಿಢೀರ್‌ ಶಾಕ್‌ ನೀಡಿತು. ಈ ಬಗ್ಗೆ ಯಾವ ರೀತಿಯಲ್ಲೂ ತಯಾರಿರದ ವಿಪಕ್ಷಗಳು, ಇದನ್ನು ಸಮರ್ಥಿಸಿಕೊಳ್ಳುವ ಅಥವಾ ವಿರೋಧಿಸುವ ತಂತ್ರಗಾರಿಕೆಗಳೇನು ಎಂಬ ಬಗ್ಗೆ ಯೋಚನೆಗೆ ಬಿದ್ದವು.

ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ನಾಲ್ಕು ಬಾರಿ ಪ್ರಯತ್ನಗಳಾಗಿದ್ದವು. ಆಗಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ, ಈ ಮಸೂದೆ ಜಾರಿಗೆ ಅವಕಾಶ ಸಿಗಲೇ ಇಲ್ಲ. ವಾಜಪೇಯಿ ಸರಕಾರದ ಅನಂತರ ಬಂದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದಲ್ಲೂ ಎರಡು ಬಾರಿ ಮಸೂದೆ ಜಾರಿಗೆ ಪ್ರಯತ್ನ ನಡೆಯಿತು. 2010ರಲ್ಲಂತೂ ಇನ್ನೇನು ಜಾರಿಯಾಗೇ ಬಿಡುತ್ತದೆ ಎಂಬ ವಾತಾವರಣ ಸೃಷ್ಟಿಯಾಗಿತ್ತು. ರಾಜ್ಯಸಭೆಯಲ್ಲಿ ಈ ಮಸೂದೆಗೆ ಅಂಗೀಕಾರವೂ ಸಿಕ್ಕಿತ್ತು. ಆಗ ಎಸ್‌ಪಿ, ಆರ್‌ಜೆಡಿ ಸದಸ್ಯರ ವಿರೋಧದಿಂದಾಗಿ ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಲೇ ಇಲ್ಲ.

ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ ಮೇಲೆ ಇದೇ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಜಾರಿಗೆ ಮುಂದಾಯಿತು. ವಿಶೇಷವೆಂದರೆ ಈ ಮಸೂದೆಗೆ ಅನುಮೋದನೆ ಪಡೆದುಕೊಳ್ಳುವಲ್ಲಿಯೂ ಸಫ‌ಲವಾಯಿತು. ಈಗ ಮಸೂದಗೇನೋ ಒಪ್ಪಿಗೆ ಸಿಕ್ಕಿದೆ. ಆದರೆ ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಲಾಭ ಸಿಗಬಹುದು ಎಂಬ ಲೆಕ್ಕಾಚಾರಗಳೂ ನಡೆಯುತ್ತಿವೆ.

Advertisement

ಈ ಹಿಂದೆ 2019ರಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ವಾಪಸ್‌ ಗೆಲ್ಲಲು ಮಹಿಳೆಯರ ಪಾತ್ರ ದೊಡ್ಡದು. ಆಗ ತ್ರಿವಳಿ ತಲಾಖ್‌ ನಿಷೇಧ, ಉಚಿತ ಸಿಲಿಂಡರ್‌ ಮತ್ತು ಗ್ಯಾಸ್‌ಸ್ಟೌ ನೀಡುವ ಪ್ರಧಾನಮಂತ್ರಿ ಉಜ್ವಲ ಯೋಜನೆಗಳು ಮೋದಿ ಕೈಹಿಡಿದ್ದವು. 2014ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲು ಈ ಅಂಶಗಳು ನೆರವಾಗಿದ್ದವು ಎಂಬುದು ವಿಶ್ಲೇಷಕರ ಮಾತಾಗಿತ್ತು. ಜತೆಗೆ ಮನೆ ಮನೆಗೂ ಶೌಚಾಲಯ ಕಟ್ಟಿಸಬೇಕು ಎಂಬ ಸ್ವತ್ಛಭಾರತ ಅಭಿಯಾನವೂ ಕೆಲಸ ಮಾಡಿತ್ತು.

ಆದರೆ ಈಗ ಮಹಿಳೆಯ ಮನಗೆಲ್ಲಲು ಬೇಕಾದಂಥ ಯೋಜನೆಗಳು ಕೇಂದ್ರ ಸರಕಾರದ ಬುಟ್ಟಿಯಲ್ಲಿಲ್ಲ. ಅನಿವಾರ್ಯವಾಗಿ ಒಂದು ದೊಡ್ಡ ನಿರ್ಧಾರವನ್ನೇ ತೆಗೆದುಕೊಳ್ಳಬೇಕಾಗಿತ್ತು. ಆಗ ಸಿಕ್ಕಿದ್ದೇ ಈ ಮಹಿಳಾ ಮೀಸಲಾತಿ ಮಸೂದೆ ಎಂಬುದು ವಿಶ್ಲೇಷಕರು ಹೇಳುತ್ತಾರೆ. ಅಂದರೆ ಕಳೆದ 27 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಒಂದು ಮಸೂದೆಯನ್ನು ಜಾರಿ ಮಾಡುವ ರಾಜಕೀಯ ಗಟ್ಟಿತನವನ್ನು ನಾವು ತೋರಿದ್ದೇವೆ ಎಂಬುದನ್ನು ಕೇಂದ್ರ ಸರಕಾರ ಆರಾಮಾಗಿ ಹೇಳಿಕೊಳ್ಳಬಹುದು. ಅಲ್ಲಿಗೆ ಈ ವಿಚಾರದಲ್ಲಿ ಕೇಂದ್ರ ಸರಕಾರ ಗೆಲುವು ಸಾಧಿಸಿದೆ.

ಈ ಹಿಂದೆ ನಮ್ಮ ಸರಕಾರದಲ್ಲೇ ಮಹಿಳಾ ಮಸೂದೆ ಜಾರಿಗಾಗಿ ಹೆಚ್ಚು ಪ್ರಯತ್ನ ಪಟ್ಟಿದ್ದೆವು. ಇದು ರಾಜೀವ್‌ ಗಾಂಧಿಯವರ ಕನಸಿನ ಕೂಸು ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ಹೇಳುತ್ತಲೇ ಇದ್ದಾರೆ. ಹಾಗೆಯೇ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು ಎಂಬ ಆಗ್ರಹವನ್ನೂ ಇಟ್ಟಿದ್ದಾರೆ. ಈ ಮೂಲಕ ಮಹಿಳೆಯರಲ್ಲೇ ಒಬಿಸಿ ಸಮುದಾಯದ ಮಹಿಳೆಯರ ಪರ ನಾವಿದ್ದೇವೆ ಎಂಬುದನ್ನು ಬಿಂಬಿಸುವ ಯತ್ನವೂ ಕಾಂಗ್ರೆಸ್‌ ಕಡೆಯಿಂದ ಸಾಗಿದೆ. ಆದರೆ 2010ರ ಕಾಂಗ್ರೆಸ್‌ ಸರಕಾರದಲ್ಲಿ ಮಂಡನೆ ಮಾಡಿದ್ದ ಮಹಿಳಾ ಮಸೂದೆ ಬಿದ್ದು ಹೋಗಿದ್ದೇ ಈ ಒಬಿಸಿ ಸಮುದಾಯದವರಿಗೆ ಒಳಮೀಸಲಾತಿ ನೀಡಬೇಕು ಎಂಬ ವಿಚಾರದಿಂದ. ಆಗ ಒಳಮೀಸಲಾತಿ ನೀಡಲು ಅವಕಾಶವಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಈ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಹೀಗಾಗಿಯೇ ಎಸ್‌ಪಿ, ಆರ್‌ಜೆಡಿ, ಜೆಡಿಯುನಂಥ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ನಿಂತಿದ್ದವು.

ಒಂದು ರೀತಿಯಲ್ಲಿ ಈಗ ಕ್ರೆಡಿಟ್‌ ವಾರ್‌ ಶುರುವಾಗಿದೆ. ನಮ್ಮ ಕಡೆಯಿಂದ ವಿರೋಧ ಇರಲೇ ಇಲ್ಲ. ಆದರೆ ಆಗ ಪರಿಸ್ಥಿತಿ ಕೂಡಿ ಬಂದಿರಲಿಲ್ಲ. ಈಗ ಪರಿಸ್ಥಿತಿ ಕೂಡಿ ಬಂದಿದ್ದು ವಿರೋಧವಿಲ್ಲದೇ ಮತ ಹಾಕಿದ್ದೇವೆ. ಮಹಿಳಾ ಮಸೂದೆ ಜಾರಿಗೆ ನಾವೂ ಕಾರಣಕರ್ತರು ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಒಬಿಸಿ ಒಳಮೀಸಲಾತಿ ಮತ್ತು ನಮ್ಮ ಬೆಂಬಲದಿಂದಲೇ ಈ ಮಸೂದೆ ಜಾರಿ ಎಂಬ ವಿಚಾರಗಳು ಉದ್ದೇಶಪೂರ್ವಕವಾಗಿಯೇ ಪ್ರಸ್ತಾವಿಸುತ್ತಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮೊದಲೇ ಹೇಳಿದ ಹಾಗೆ ವಿಪಕ್ಷ ನಾಯಕರ ಈ ಆತಂಕಕ್ಕೆ ಕಾರಣವೂ ಇದೆ. ಏಕೆಂದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಬಿಜೆಪಿ ಈ ವಿಚಾರವನ್ನು ಪ್ರಸ್ತಾವಿಸಿಯೇ ಮತ ಕೇಳುತ್ತದೆ. 27 ವರ್ಷಗಳಿಂದಲೂ ಮಹಿಳೆಯರಿಗೆ ಅನ್ಯಾಯ ಮಾಡಿಕೊಂಡು ಬರಲಾಗಿತ್ತು. ಆದರೆ ನಾವು ಈಗ ಇದಕ್ಕೆ ಒಂದು ಅಂತ್ಯ ಕೊಟ್ಟಿದ್ದೇವೆ. ನಾವು ಮಹಿಳೆಯರ ಪರ ಇದ್ದೇವೆ ಎಂದು ಬಿಂಬಿಸಿಕೊಳ್ಳುತ್ತದೆ.

ಈ ಅಂಶವನ್ನು ಮನಗಂಡಿರುವ ವಿಪಕ್ಷಗಳು ಒಬಿಸಿ ವಿಚಾರ ಮುಂದಿಟ್ಟಿವೆ. ಮಹಿಳಾ ಮೀಸಲಾತಿಯಲ್ಲೂ ಒಬಿಸಿಗೆ ಮೀಸಲಾತಿ ನೀಡಬೇಕಾಗಿತ್ತು. ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇರುವ ಒಬಿಸಿಯವರಿಗೆ ಮೀಸಲಾತಿ ನೀಡದೇ ಹೋದರೆ ದೊಡ್ಡ ಮೋಸವಾಗುತ್ತದೆ ಎಂದು ಹೇಳುವ ಮೂಲಕ ಒಬಿಸಿ ವರ್ಗದವರ ಮನವೊಲಿಕೆಗೆ ಕಾಂಗ್ರೆಸ್‌ ಸೇರಿ ಇತರ ಪಕ್ಷಗಳು ಮುಂದಾಗಿವೆ. ಒಟ್ಟಾರೆಯಾಗಿ ಈ ಮಹಿಳಾ ಮೀಸಲಾತಿ ಮಸೂದೆ ಚುನಾವಣೆ ಪೂರ್ವದಲ್ಲಿ ಕಿಚ್ಚು ಹಚ್ಚಿರುವುದಂತೂ ಸುಳ್ಳಲ್ಲ. ಆದರೆ ಇದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ.

 ಸೋಮಶೇಖರ ಸಿ.ಜೆ.

 

Advertisement

Udayavani is now on Telegram. Click here to join our channel and stay updated with the latest news.

Next