Advertisement

ಕುಕ್ಕುಂದೂರು: ಮನೆಗೆ ನುಗ್ಗಿ ಮಹಿಳೆಯ ಕೊಲೆ

09:05 AM Jul 09, 2018 | Team Udayavani |

 ಕಾರ್ಕಳ: ಕಾರ್ಕಳ ಕುಕ್ಕುಂದೂರು ಸಮೀಪದ ಅಯ್ಯಪ್ಪ ನಗರದ ಮನೆಯೊಂದರಲ್ಲಿ ಮಹಿಳೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ.

Advertisement

ಪ್ಲೋರಿನ್‌ ಮಚಾದೋ (54)  ಕೊಲೆಯಾದ ಮಹಿಳೆ. ರವಿವಾರ ಮಧ್ಯಾಹ್ನದ ವೇಳೆಗೆ  ಕೊಲೆ ಕೃತ್ಯ ಬಹಿರಂಗವಾಗಿದೆ. ಮೃತದೇಹ ಬೆಡ್‌ಶೀಟ್‌ ಮುಚ್ಚಿದ ಸ್ಥಿತಿಯಲ್ಲಿತ್ತು. ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕತ್ತಿಯಿಂದ ಕಡಿದು ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ.

ಗಂಡಹೆಂಡತಿ ಪ್ರತ್ಯೇಕ ವಾಗಿದ್ದರು
ಮೃತ ಮಹಿಳೆಯು ಗಂಡನೊಂದಿಗೆ ವೈಮನಸ್ಸು ಹೊಂದಿದ್ದು, ಐದಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗಂಡ ಮಾಳ ಸಮೀಪದ ಹುಕ್ರಟ್ಟೆಯಲ್ಲಿ ಮತ್ತು ಫ್ಲೋರಿನ್‌ ಕುಕ್ಕುಂದೂರಿನಲ್ಲಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕಿರಿಯ ಮಗ ತಂದೆಯ ಜತೆಗೆ ಹಾಗೂ ಹಿರಿಯ ಮಗ ತಾಯಿಯ ಬಳಿ ಇದ್ದರು. ಶನಿವಾರ ರಜೆಯ ಹಿನ್ನೆಲೆಯಲ್ಲಿ ಹಿರಿಯ ಮಗನೂ ತಂದೆಯ ಮನೆಗೆ ತೆರಳಿದ್ದ. ಅಂದು ರಾತ್ರಿ ಮನೆಯಲ್ಲಿ ಫ್ಲೋರಿನ್‌ ಒಬ್ಬರೇ ಇದ್ದರು.  

ರವಿವಾರ ಫ್ಲೋರಿನ್‌ ಪ್ರಾರ್ಥನೆಗಾಗಿ ಚರ್ಚ್‌ಗೆ ಬಂದಿರಲಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆಗೆ ಇವರ ಸಂಬಂಧಿ ಮಹಿಳೆಯೊಬ್ಬರು ಮನೆಗೆ  ಬಂದಿದ್ದು,  ಆಗ ಕೊಲೆ  ಘಟನೆ ಬೆಳಕಿಗೆ ಬಂದಿದೆ.

ಬಡ್ಡಿ ವ್ಯವಹಾರ ಮುಳುವಾಯಿತೇ?
 ಫ್ಲೋರಿನ್‌ ಅವರು ಬಡ್ಡಿಗೆ ಹಣ ನೀಡುವ ವ್ಯವಹಾರ ನಡೆಸುತ್ತಿದ್ದರೆಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ  ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಹೊರಗಡೆ ನೀಡಿದ್ದ ಹಣವೂ ಸರಿಯಾಗಿ ವಾಪಸ್‌ ಬರುತ್ತಿರಲಿಲ್ಲ.
ಈ ವ್ಯವಹಾರದಿಂದಲೇ ಕೊಲೆ ನಡೆಯಿತೇ ಎನ್ನುವ ಬಲವಾದ ಶಂಕೆ ಮೂಡಿದೆ.

Advertisement

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಕಾರ್ಕಳ ನಗರ ಠಾಣಾ ಪಿಎಸ್‌ಐ ನಂಜ ನಾಯ್ಕ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರ ಸಂಪರ್ಕ
ಕೆಲವು ವರ್ಷಗಳಿಂದ ಫ್ಲೋರಿನ್‌ಗೆ ಪೊಲೀಸರ ಜತೆಗೆ  ಸಂಪರ್ಕವಿತ್ತು ಎಂದು ಹೇಳಲಾಗುತ್ತಿದೆ. ಬಡ್ಡಿಯ ಹಣದ ವಸೂಲಿಗಾಗಿ ಪೊಲೀಸರ ಸಂಪರ್ಕವಿತ್ತೇ ಅಥವಾ ಬೇರೇನಾದರೂ ಬೆದರಿಕೆ ಇದ್ದಿರಬಹುದೇ? ಅಥವಾ ಅದೆಲ್ಲವನ್ನೂ ಮೀರಿದ ಖಾಸಗಿ ಕಾರಣಗಳಿರಬಹುದೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.

ಬೊಬ್ಬೆ ಕೇಳಿಸಲಿಲ್ಲ
ಶನಿವಾರ ಅವರ ಮನೆಯಲ್ಲಿ ಒಬ್ಬರೇ ಇದ್ದರು. ಆದರೆ ಈ ಘಟನೆಗೆ ಸಂಬಂಧಿಸಿ ರಾತ್ರಿ ಯಾವುದೇ ಸುಳಿವು ಸಿಕ್ಕಿಲ್ಲ. ಮನೆಯಿಂದ ಬೊಬ್ಬೆಯೂ ಕೇಳಿಸಲಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next