Advertisement

ಹೆಣ್ಣು ವಜ್ರದಂತೆ ಕಠೋರಳೋ? ಕುಸುಮದಂತೆ ಮೃದುವೋ?

12:30 AM Mar 08, 2019 | |

“ಮಹಿಳೆಯರನ್ನು ಆರ್ಥಿಕವಾಗಿ ಸಬಲ ಮಾಡಿದರೆ ಅವರಲ್ಲಿರುವ ಉಳಿತಾಯ ಮಾಡುವ ಪ್ರವೃತ್ತಿಯಿಂದ ಒಟ್ಟಾರೆ ಸಮಾಜ, ದೇಶಕ್ಕೆ ಅನುಕೂಲವಾಗುತ್ತದೆ’ ಎಂದು ಸಿಂಡಿಕೇಟ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಕೆ.ಪೈ ಸಭೆಗಳಲ್ಲಿ ಹೇಳುತ್ತಿದ್ದರು.

Advertisement

“ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ||’ ಎಂಬ ಸಂಸ್ಕೃತ ಉಕ್ತಿ ಬಹು ಜನಪ್ರಿಯ. ಇದರ ಅರ್ಥ ವಜ್ರಕ್ಕಿಂತಲೂ ಕಠೋರ ಕುಸುಮಕ್ಕಿಂತಲೂ ಮೃದು ಎಂದು. ಈ ಸಂಸ್ಕೃತದ ಸುಭಾಷಿತ ಉಕ್ತಿ ಮೂಲದಲ್ಲಿ ಹುಟ್ಟಿದ್ದು ಭವ ಭೂತಿಯ “ಉತ್ತರರಾಮ ಚರಿತೆ’ ನಾಟಕದಲ್ಲಿ. ಇದನ್ನು ಹೇಳಿದ್ದು ಪ್ರಭು ರಾಮಚಂದ್ರನನ್ನು ಉದ್ದೇಶಿಸಿ…

 ರಾಮಚಂದ್ರನನ್ನುದ್ದೆಶಿಸಿ ಭವಭೂತಿ ಹೇಳಿದ್ದರೂ ಇದು ಸ್ತ್ರೀಯರಿಗೂ ಅನ್ವಯಿಸುತ್ತದೋ ಎನ್ನುವುದು ಪ್ರಚಲಿತ ಸಾಮಾಜಿಕ ಸ್ಥಿತಿಯ ವಿಶ್ಲೇಷಣೆ. ಮಹಿಳೆಯರ ಮನಃಸ್ಥಿತಿಯೂ ಹೀಗಿದೆಯೆ? ಎಲ್ಲಿ ಅವರು ವಜ್ರಕ್ಕಿಂತಲೂ ಕಠೋರ, ಎಲ್ಲಿ ಅವರು ಕುಸುಮಕ್ಕಿಂತಲೂ ಮೃದು…?
ಪ್ರಸಕ್ತ ಲೋಕದಲ್ಲಿ ಕಂಡುಬರುತ್ತಿರುವ ಮಹಿಳಾ ಅಧಿಕಾರಿಗಳು ಬಹುತೇಕ ಸ್ಟ್ರಿಕ್ಟ್ ಎಂಬ ಹೆಸರು ಪಡೆದಿರುತ್ತಾರೆ. ಇದು ಹೌದೆ ಎಂದು ಹುಡುಕುತ್ತಾ ಹೋದರೆ ಹೌದಲ್ಲ ಎಂಬ ಭಾವನೆ ಬರುತ್ತದೆ. ಬಹುತೇಕ ಎಲ್ಲ ಮಹಿಳಾಧಿಕಾರಿಗಳು ಕಡಿಮೆ ಮಾತಿನಿಂದ ಕೂಡಿರುತ್ತಾರೆ, ಕಾನೂನನ್ನು ಜಾಗರೂಕತೆಯಿಂದ ಪರಿಪಾಲಿಸುತ್ತಾರೆ, ಭ್ರಷ್ಟಾಚಾರವೂ ಕಡಿಮೆಯಂತೆ. ಇದಕ್ಕೆ ಅಪವಾದಗಳೂ ಇವೆಯೆನ್ನಿ. ಮಹಿಳೆಯರು ಒಂದು ವೇಳೆ ಬಿಗಿತವನ್ನು ಬಿಟ್ಟುಕೊಟ್ಟರೆ ಖದೀಮರು ಅವರನ್ನು ಯಾಮಾರಿಸಲು ಸಿದ್ಧರಿರುತ್ತಾರೆಂಬ ಪೂರ್ವ ಚಿಂತನೆಗಳೇ ಇದಕ್ಕೆ ಕಾರಣವೆನ್ನಬಹುದು. ಭ್ರಷ್ಟಾಚಾರದಲ್ಲಿಯೂ ಹೀಗೆಯೇ. ಇದು ಪುರುಷರಿಗೆ, ಮಹಿಳೆಯರಿಗೆ ಇಬ್ಬರಿಗೂ ಅನ್ವಯ. ಸಮಾಜದಲ್ಲಿ ಒಂದಿಷ್ಟು ಮಂದಿ ಯಾರು ಕಾಲು ಜಾರುತ್ತಾರೆಂದು ಹೊಂಚು ಹಾಕಿ ಕಾಯುತ್ತಲೇ ಇರುತ್ತಾರೆ. ಸಣ್ಣ ರೀತಿಯಲ್ಲಿ ಎಡವಿದರೂ ಈ ಕಾಯುತ್ತಿರುವ ವರ್ಗ ಬಿಡುವುದಿಲ್ಲ. ಆತನನ್ನು / ಆಕೆಯನ್ನು ಸದಾ ಬ್ಲ್ಯಾಕ್‌ ಮೇಲ್‌ ಮಾಡುತ್ತಲೇ ಇರುತ್ತದೆ ಈ ವರ್ಗ. ಪುರುಷ ರನ್ನು ಯಾಮಾರಿಸುವುದಕ್ಕೂ ಮಹಿಳೆಯರನ್ನು ಯಾಮಾರಿಸು ವುದಕ್ಕೂ ವ್ಯತ್ಯಾಸವಿದೆ. ಪುರುಷರನ್ನು ಯಾಮಾರಿಸಿದರೆ ಅವರೂ ಆ ಪ್ರಪಂಚದೊಳಗೆ ಇಳಿದಿರುವ ಸಾಧ್ಯತೆ ಹೆಚ್ಚಿರುವ ಕಾರಣ ಅವರು ಹೇಗೂ ನಿಭಾಯಿಸಬಹುದು. ಮಹಿಳೆಯರಾದರೆ ಆ ಪ್ರಪಂಚದೊಳಗೆ ಇಳಿದು ಬಚಾವಾಗುವುದು ಕಷ್ಟ. 

ಗಂಡನ ಅಪ್ರದರ್ಶನ, ಹೆಂಡತಿಯ ಪ್ರದರ್ಶನ
ಇನ್ನೊಂದು ತಮಾಷೆ ಆದರೂ ಸತ್ಯವೆಂದರೆ ಯಾವುದೇ ಮಹಿಳಾಧಿಕಾರಿ ತನ್ನ ಗಂಡನನ್ನು ಕಚೇರಿಗೆ ತಲೆ ಹಾಕಲು ಬಿಡುವುದಿಲ್ಲವಂತೆ. ಇದು ಸಣ್ಣ ಹುದ್ದೆಯ ಕೆಲಸವಿದ್ದರೂ ಅಷ್ಟೆ, ದೊಡ್ಡ ಹುದ್ದೆಯ ಕೆಲಸವಿದ್ದರೂ ಅಷ್ಟೆ. ಒಂದು ವೇಳೆ ಗಂಡ ತನ್ನ ವಾಹನದಲ್ಲಿ ಹೆಂಡತಿಯನ್ನು ಕಚೇರಿಗೆ ಬಿಡುವುದಿದ್ದರೂ ಆಕೆ ರಸ್ತೆ ಬದಿ ನಿಲ್ಲಿಸಲು ಹೇಳುತ್ತಾಳೆಯೇ ವಿನಾ ಕಚೇರಿ ಆವರಣದಲ್ಲಿ ನಿಲ್ಲಿಸಲು ಬಿಡುವುದಿಲ್ಲ. ಇದು ಟಿಪಿಕಲ್‌ ಮಹಿಳಾ ಬುದ್ಧಿ ಎಂದು ವಿಶ್ಲೇಷಿಸಬಹುದು. ಇದಕ್ಕೆ ಪೂರಕವಾಗಿ ಕಂಡುಬರುವುದು ಮಹಿಳಾಧಿಕಾರಿಯ ಗಂಡ ಯಾರೆಂದು ಲೋಕಕ್ಕೆ ಸಾಮಾನ್ಯವಾಗಿ ಗೊತ್ತಿರುವುದಿಲ್ಲ. ಅದೇ ಪುರುಷಾಧಿಕಾರಿ ಹೆಂಡತಿ ಯಾರೆಂದು ಪುರುಷಾಧಿಕಾರಿ ಸಂಬಂಧಿತ ಲೋಕಕ್ಕೆ ಗೊತ್ತಿರುತ್ತದೆ. ಇದಕ್ಕೆ ಕಾರಣ ಅಧಿಕಾರಸ್ಥ ಪುರುಷರು ಮದುವೆಯಂತಹ ಸಮಾರಂಭ ಗಳಲ್ಲಿ ಹೆಂಡತಿಯನ್ನು ಕರೆದುಕೊಂಡು “ಮೆರೆಯುವುದು’. ಆದರೆ ಅದೇ ಅಧಿಕಾರಸ್ಥ ಮಹಿಳೆ ತಮ್ಮ ಗಂಡನನ್ನು ಸಮಾರಂಭಗಳಲ್ಲಿ ಕರೆ ತಂದು ಪರಿಚಯಿಸುವುದಿಲ್ಲ. ಇದು ಕೇವಲ ಅಧಿಕಾರಿ ವರ್ಗಕ್ಕೆ ಮಾತ್ರ ಸೀಮಿತವಲ್ಲ. ರಾಜಕೀಯ ಅಧಿಕಾರಸ್ಥರಿಗೂ ಅನ್ವಯ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಸುಷ್ಮಾ ಸ್ವರಾಜ್‌, ಮಾಜಿ ಸಚಿವರಾದ ಮೀರಾ ಕುಮಾರ್‌, ಮಾರ್ಗರೆಟ್‌ ಆಳ್ವ ಮೊದಲಾದವರ ಗಂಡಂದಿರು ಯಾರೆಂದು ಸಾರ್ವಜನಿಕವಾಗಿ ಗೊತ್ತಿಲ್ಲ. ಇಂದಿರಾ ಗಾಂಧಿಯವರು ಕೂಡ ಪತಿಯೊಂದಿಗೆ ಕಾಣಿಸಿಕೊಂಡದ್ದು ಬಹಳ ಅಪರೂಪ. ಸಾಮಾನ್ಯವಾಗಿ ಅಧಿಕಾರಸ್ಥ ಪುರುಷರು ಸರಕಾರಿ ಅಧಿಕೃತ ಪ್ರವಾಸ ಹೋಗುವಾಗಲೂ ಪತ್ನಿಯರನ್ನು ಕರೆದೊಯ್ಯುತ್ತಾರೆ. ಆದರೆ ಮಹಿಳಾಧಿಕಾರಸ್ಥರು ಗಂಡನನ್ನು ಕರೆದುಕೊಂಡು ಹೋಗುವುದು ಬಹು ಕಡಿಮೆ. ಉದಾಹರಣೆಗೆ ರಾಷ್ಟ್ರಪತಿಗಳಾಗಿ ರಮಾನಾಥ ಕೋವಿಂದ್‌ ಮತ್ತು ಪ್ರಣವ್‌ ಮುಖರ್ಜಿ ಅವರು ಉಡುಪಿಗೆ ಪತ್ನಿ ಜತೆ ಬಂದಿದ್ದರು. ಪ್ರತಿಭಾ ಪಾಟೀಲ್‌ ರಾಷ್ಟ್ರಪತಿಯಾಗಿರುವಾಗ ಗಂಡನನ್ನು ಕರೆದುಕೊಂಡು ಹೋದದ್ದು ಕಡಿಮೆ. 

ಮನೆಯಲ್ಲೂ, ಆರ್ಥಿಕತೆಯಲ್ಲೂ ಸ್ಟ್ರಿಕ್ಟ್
ಇದೆಲ್ಲ ಅಧಿಕಾರಸ್ಥ ಮಹಿಳೆಯರ ಕಥೆಯಾದರೆ ಸಾರ್ವಜನಿಕ ಅಧಿಕಾರವಿರದ, ಮನೆಯಲ್ಲಿ ಅಧಿಕಾರವಿರುವ ಮಹಿಳೆಯರಲ್ಲೂ ಇಂತಹ ಮನೋಭಾವನೆ ಬೇರೆ ರೀತಿಯಲ್ಲಿ ಕಂಡುಬರುತ್ತದೆ. ಹಣವನ್ನು ಖರ್ಚು ಮಾಡುವಲ್ಲಿ ಪುರುಷರಿಗಿಂತ ಮಹಿಳೆಯರು “ಚೌಕಾಶಿ’ ಎನ್ನುವುದು ಲೋಕಕ್ಕೆಲ್ಲ ಗೊತ್ತಿದ್ದ ವಿಚಾರ. “ಮಹಿಳೆ ಯರನ್ನು ಆರ್ಥಿಕವಾಗಿ ಸಬಲ ಮಾಡಿದರೆ ಅವರಲ್ಲಿರುವ ಉಳಿತಾಯ ಮಾಡುವ ಪ್ರವೃತ್ತಿಯಿಂದ ಒಟ್ಟಾರೆ ಸಮಾಜ, ದೇಶಕ್ಕೆ ಅನುಕೂಲವಾಗುತ್ತದೆ’ ಎಂದು ಸಿಂಡಿಕೇಟ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಕೆ.ಪೈ ಸಭೆಗಳಲ್ಲಿ ಹೇಳುತ್ತಿದ್ದರು. ಪುರುಷರಾದರೆ ಬಂದ ಹಣವನ್ನು ಖಾಲಿ ಮಾಡಿ ಸಾಲ ಮಾಡುವ ಬುದ್ಧಿ ಇರುತ್ತದೆ. ಹೆಂಗಸರ ಇದರ ಇನ್ನೊಂದು ಎಕ್ಸಿ$r$Åàಮ್‌ ಮುಖ ಯಾವುದೇ ಮನೆಯ ಫ್ರಿಡ್ಜ್ ನೋಡಿದರೆ ತಿಳಿಯುತ್ತದೆ. ಅದರೊಳಗೆ ಇರುವುದು ಕೊಳೆತು ಹೋಗುತ್ತಿರುವ ಲಿಂಬೆ ಹಣ್ಣು, 15 ದಿನಗಳ ಹಿಂದೆ ತಂದ ಸಿಹಿ ತಿನಿಸುಗಳು, ಬಾಡುತ್ತಿರುವ ತರಕಾರಿ, ಸೊಪ್ಪು ಇತ್ಯಾದಿ. ಇವೆಲ್ಲ ಹಾಳಾಗುವ ಹಂತದಲ್ಲಿದ್ದರೂ ಅವುಗಳನ್ನು ಕೈ ಎತ್ತಿ ಇನ್ನೊಬ್ಬರಿಗೆ ಕೊಡದಷ್ಟು “ಜಿ(ನಿ)ಪುಣೆ’ ಆಗಿರುತ್ತಾರೆ. ಕಪಾಟಿನಲ್ಲಿ ನೂರಾರು ಸೀರೆಗಳು ಪ್ರದರ್ಶನಗೊಳ್ಳುತ್ತಿದ್ದರೂ, ಅವುಗಳನ್ನು ಅನುಭವಿಸುವ ಸ್ಥಿತಿಯಲ್ಲಿಲ್ಲದಿದ್ದರೂ ಇಲ್ಲದವರಿಗೆ ಕೈ ಎತ್ತಿ ಕೊಡಲು ಮನಸ್ಸು ಬರುವುದಿಲ್ಲ ಮಾತ್ರವಲ್ಲ “ಈ ಕಲರ್‌ನದ್ದು ಮಾತ್ರ ಇಲ್ಲ’ ಎಂಬ ಕೊರಗೂ ಇರುತ್ತದೆ. ಹೆಂಗಸರಿಗೆ ಸಹಜವಾಗಿ ಇಂತಹ ಆಸೆಗಳಿರುತ್ತವೆ. ಇದನ್ನೂ ಒಂದು ತೆರನಾದ ಅಧಿಕಾರಸ್ಥ ಧೋರಣೆ ಎಂದು ವ್ಯಾಖ್ಯಾನಿಸಬಹುದು. ಇದ್ದ ಅಧಿಕಾರವ್ಯಾಪ್ತಿಯಲ್ಲಿ “ಸ್ಟ್ರಿಕ್ಟ್’ ಆಗುವುದು ಹೀಗೆ. 

Advertisement

ಕರುಣಾರಸವೂ ಹೆಣ್ಣು ಹೃದಯವೂ…
ಹಾಗಾದರೆ “ಹೆಣ್ಣು ಹೃದಯ’ ಎಂದು ಬೊಬ್ಬೆ ಹೊಡೆಯು ವುದರಲ್ಲಿ ಏನಾದರೂ ಅರ್ಥವಿಲ್ಲವೆ ಎಂದರೆ ಅದೂ ತಪ್ಪಾಗುತ್ತದೆ. “ಪುಣ್ಯಕೋಟಿ’ಯ ಕಥೆಯಲ್ಲಿ ಹಸುವಿನ ಮಾತೃಹೃದಯ ತೆರೆದುಕೊಳ್ಳುತ್ತದೆ. ಇದು ಕೇವಲ ದನಗಳಿಗೆ ಮಾತ್ರವಲ್ಲ ಮಹಿಳೆಯೂ ಸೇರಿದಂತೆ ಪ್ರಪಂಚದ ಎಲ್ಲ ಹೆಣ್ಣು ಜೀವಿಗಳಿಗೆ ಅನ್ವಯ. ಎಂಥ ಕಠೊರ ಹೃದಯಿಯಾದರೂ ಮಕ್ಕಳ ಮೇಲೆ ಹೆಣ್ಣು ತೋರಿಸುವ ಪ್ರೀತಿ ಬೇರೆಯೇ ತೆರನಾದದ್ದು, ಇದಕ್ಕೆ ಬೆಲೆ ಕಟ್ಟಲಾಗದು. ಇದಕ್ಕಾಗಿಯೋ ಏನೋ ಶಂಕರಾಚಾರ್ಯರು ದೇವಿಯನ್ನು ಸ್ತುತಿಸುವಾಗ “ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇಲ್ಲ’ ಎಂದು ಬಣ್ಣಿಸಿರುವುದು, “ತಾಯಿ ಋಣ ತೀರಿಸಲು ಆಗದು’ ಎಂಬ ಲೋಕವಾಣಿ ಬಂದದ್ದು ಇರಬಹುದು. ಹೆಣ್ಣು ಹೃದಯವನ್ನು ಕರುಣಾರಸಕ್ಕೆ ಹೋಲಿಸಬಹುದು. ರಾಮಾಯಣ ಕಥಾನಕ ಹುಟ್ಟಿದ್ದು ಕರುಣಾರಸದಿಂದ. ಎರಡು ಪಕ್ಷಿಗಳು ಮಿಲನವಾಡುವಾಗ ಬೇಡನೊಬ್ಬನ ಬಾಣಕ್ಕೆ ಒಂದು ಹಕ್ಕಿ ವಿಲಿವಿಲಿ ಒದ್ದಾಡಿ ಸತ್ತಿತು. ಆಗಲೇ ವಾಲ್ಮೀಕಿ ಮನಸ್ಸಿನಲ್ಲಿ ಉಂಟಾದ ಶೋಕ, ಬಾಯಲ್ಲಿ ಶ್ಲೋಕವಾಗಿ ಹೊರಹೊಮ್ಮಿತು, ಇದುವೇ ರಾಮಾಯಣದ ಮೊದಲ ಶ್ಲೋಕ. ಪ್ರಪಂಚದಲ್ಲಿ ಒಬ್ಬನಿಂದ ಉತ್ತಮ ಸೃಷ್ಟಿಯಾದಾಗ, ಇನ್ನೊಬ್ಬನಿಗೆ ಅದು ಅಧಮವಾಗುತ್ತದೆ ಅಥವಾ ಇದು ವೈಸ್‌ವರ್ಸಾ. ಆಗಲೂ ಬಾಣ ಬಿಟ್ಟ ಬೇಡನಿಗೆ ಗುರಿ ಈಡೇರಿಕೆಯಿಂದ ಖುಷಿಯಾಯಿತು. ಮುಂದೆ ವಾಲಿಯಾಗಿ ಇದರ ಬಡ್ಡಿಸಹಿತ ವಸೂಲಿಯಾಗುವುದು ಕಥೆಯಾದರೂ, ಕೆಲವರಿಗೆ ಇದು “ಅಪಥ್ಯ’ವಾದರೂ ಲೋಕಪಾಠಕ್ಕೆ ಅಗತ್ಯವೆನ್ನಬಹುದು. ಆದರೆ ಒಂದು ಸಂದರ್ಭ ಖುಷಿಯಾಗುವಾಗ ಭವಿಷ್ಯದಲ್ಲಿ ಬರುವ ದುಃಖದ ಪರಿಜ್ಞಾನ ಇರುವುದಿಲ್ಲ. ಹೀಗೆ ಆಗುವುದಾದರೆ ಈ ಪ್ರಪಂಚ ಸ್ವರ್ಗ, ವೈಕುಂಠ, ಕೈಲಾಸ ಆಗುತ್ತಿತ್ತೋ ಏನೋ? 

ಶಾಕುಂತಲೆಯನ್ನು ಗಂಡನ ಮನೆಗೆ ಬೀಳ್ಕೊಡುವಾಗ ತಂದೆ ಕಣ್ವನಿಗೆ ಹೃದಯ ಉಕ್ಕಿ ಬಂದದ್ದು ನಿತ್ಯಸತ್ಯ. ವಾಲ್ಮೀಕಿ, ಕಣ್ವರಿಗೆ ಮನದಲ್ಲಿ ಕರುಣಾರಸ ಉಕ್ಕಿದರೂ ಈ ರಸ ಸಾಮಾನ್ಯ ಲೋಕ ನಿಯಮಾನುಸಾರ ಉಕ್ಕುವುದು ಮಹಿಳೆಯರಲ್ಲಿ ಹೆಚ್ಚು. ಥಟ್ಟನೆ ಅಳು ಬರುವುದು ಮಹಿಳೆಯರಿಗೇ. ಅಳು ಕಣ್ಣಲ್ಲಿ ಇರಬಹುದು, ಮನಸ್ಸಿನಲ್ಲಿರಬಹುದು ಇದು ಯಾರಲ್ಲಿ ಬರುತ್ತದೋ ಅವರಿಗೆ ಹೆಣ್ಣು ಹೃದಯವಿದೆ ಎನ್ನಬಹುದು. ಇದೆಲ್ಲವನ್ನು ಕಂಡಾಗ ಲೋಕದ ವ್ಯವಹಾರ ದೃಷ್ಟಿಯಲ್ಲಿ “ವಜ್ರಾದಪಿ ಕಠೊರಾನಿ ಮೃದೂನಿ ಕುಸುಮಾದಪಿ||’ ಉಕ್ತಿ ಮಹಿಳೆಯರಿಗೇ ಹೆಚ್ಚು ಸೂಕ್ತವೆನಿಸುತ್ತದೆ, ಸಂದರ್ಭ ಬೇರೆ ಬೇರೆ ಅಷ್ಟೆ…

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next