Advertisement

ಚಳಿಗಾಲದ ಖಾದ್ಯಗಳು

07:07 PM Jan 09, 2020 | mahesh |

ಚಳಿಗಾಲದಲ್ಲಿ ಶೀತ, ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹುರುಳಿ ಕಾಳು, ಅವರೆಕಾಳಿನಂತಹ ಕಾಳುಗಳಿಂದ ಖಾದ್ಯ ತಯಾರಿಸಿದರೆ ಆರೋಗ್ಯಕರ ಹಾಗೂ ಚಳಿಯಿಂದ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು.

Advertisement

ಹುರುಳಿ ಸಾರು
ಬೇಕಾಗುವ ಸಾಮಗ್ರಿ: ಹುರುಳಿ- 1/2 ಕೆಜಿ, ಈರುಳ್ಳಿ-2, ಹಸಿಮೆಣಸು- 2, ಹುಣಸೆಹುಳಿ- ಲಿಂಬೆಗಾತ್ರ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆ: ಎಣ್ಣೆ, ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಕರಿಬೇವು.

ತಯಾರಿಸುವ ವಿಧಾನ: ಹುರುಳಿಯನ್ನು ರಾತ್ರಿಯಿಡೀ ನೆನೆಸಿ ಕುಕ್ಕರ್‌ನಲ್ಲಿ ನೀರು ಮತ್ತು ಉಪ್ಪು ಸೇರಿಸಿ ನಾಲ್ಕೈದು ಸೀಟಿಯಲ್ಲಿ ಬೇಯಿಸಿ. ನಂತರ ಸಾರನ್ನು ಸೋಸಿಕೊಳ್ಳಿ. ಸೋಸಿದ ಸಾರನ್ನು ನೀರುಳ್ಳಿ ಚೂರು, ಹಸಿಮೆಣಸು ಸೇರಿಸಿ ಬೇಯಿಸಿ. ಬೇಯಿಸಿದ ಹುರುಳಿ ಕಾಳುಗಳನ್ನು ಹುಳಿ ಮತ್ತು ಸ್ವಲ್ಪ ನೀರು ಸೇರಿಸಿ ಅರೆಯಿರಿ. ಇದನ್ನು ಸಾರಿಗೆ ಸೇರಿಸಿ ಚೆನ್ನಾಗಿ ಕುದಿಸಿರಿ. ನಂತರ ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ರುಚಿಕರ ಸ್ವಾದಿಷ್ಟ ಹುರುಳಿ ಸಾರು ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಅವರೆ ಕಾಳಿನ ಉಸ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್‌, ತೆಂಗಿನತುರಿ- 1/2 ಕಪ್‌, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು- 2 ಚಮಚ, ಜೀರಿಗೆಪುಡಿ- 1/2 ಚಮಚ, ಕಾಳುಮೆಣಸಿನ ಪುಡಿ- 1/4 ಚಮಚ, ರುಚಿಗೆ ಬೇಕಷ್ಟು ಉಪ್ಪು , ಚಿಟಿಕೆ ಅರಸಿನ, ಒಗ್ಗರಣೆಗೆ: ಉದ್ದಿನಬೇಳೆ, ಸಾಸಿವೆ, ಕರಿಬೇವು, ಇಂಗು.

ತಯಾರಿಸುವ ವಿಧಾನ: ಅವರೆಕಾಳನ್ನು ಸ್ವಲ್ಪ ಎಣ್ಣೆ ಹಾಕಿ ಬಾಡಿಸಿಕೊಳ್ಳಿ. ನಂತರ ನೀರು ಹಾಕಿ ಚೆನ್ನಾಗಿ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಕರಿಬೇವು, ಹಸಿಮೆಣಸು, ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಇದಕ್ಕೆ ಅರಸಿನ ಉಪ್ಪು ಹಾಕಿ. ನಂತರ ಬೇಯಿಸಿಟ್ಟ ಅವರೆಕಾಳು ಹಾಕಿ ಕಾಳುಮೆಣಸು, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪು, ಕಾಯಿತುರಿ ಉದುರಿಸಿದರೆ ರುಚಿಕರ ಅವರೆಕಾಳಿನ ಉಸ್ಲಿ ತಯಾರು.

Advertisement

ಕರಿಮೆಣಸು-ಜೀರಿಗೆ ರಸಂ
ಬೇಕಾಗುವ ಸಾಮಗ್ರಿ: ತೊಗರಿಬೇಳೆ- 1 ಕಪ್‌, ಕರಿಮೆಣಸು- 1 ಚಮಚ, ಜೀರಿಗೆ- 1 ಚಮಚ, ಹುಣಸೆ- 1/2 ಲಿಂಬೆಗಾತ್ರದಷ್ಟು , ಬೆಳ್ಳುಳ್ಳಿ- 1 ಸಣ್ಣ ಗೆಡ್ಡೆ , ಬೆಲ್ಲ ರುಚಿಗೆ, ಅರಸಿನ ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು , ಒಗ್ಗರಣೆಗೆ: ಸಾಸಿವೆ, ಒಣಮೆಣಸು, ಕರಿಬೇವು, ಎಣ್ಣೆ.

ತಯಾರಿಸುವ ವಿಧಾನ: ಬೇಳೆಯನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಕರಿಬೇವು, ಬೆಳ್ಳುಳ್ಳಿ, ಜೀರಿಗೆ ಮತ್ತು ಕರಿಮೆಣಸು ಹಾಕಿಕೊಂಡು ತರಿ ತರಿಯಾಗಿ ಪುಡಿ ಮಾಡಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ಪುಡಿಮಾಡಿಕೊಂಡ ಮಸಾಲೆ ಪುಡಿಯನ್ನು ಸೇರಿಸಿ ಇಂಗು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಬೇಯಿಸಿದ ಬೇಳೆಯನ್ನು ಸೇರಿಸಿ ಬೇಕಷ್ಟು ನೀರು ಸೇರಿಸಿ ಅರಸಿನ, ಬೆಲ್ಲ, ಹುಳಿನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ಗರಂ ಗರಂ ರಸಂ ತಯಾರು. ಜ್ವರ, ನೆಗಡಿ, ಕೆಮ್ಮು ಇದ್ದಾಗ ಊಟಕ್ಕೆ ರುಚಿಕರವಾಗಿರುತ್ತದೆ.

ಹಪ್ಪಳ ಸಲಾಡ್‌
ಬೇಕಾಗುವ ಸಾಮಗ್ರಿ: ಹಪ್ಪಳ- 4, ನೀರುಳ್ಳಿ- 1 ಕಪ್‌, ಟೊಮೆಟೊ ಚೂರುಗಳು- 1/2 ಕಪ್‌, ಸೌತೆಕಾಯಿ- 1/2 ಕಪ್‌, ಕೊತ್ತಂಬರಿ ಸೊಪ್ಪು- 2 ಚಮಚ, ಹಸಿಮೆಣಸು- 1, ಲಿಂಬೆರಸ- 1/2 ಚಮಚ, ಕಾಳುಮೆಣಸಿನ ಪುಡಿ- 1/4 ಚಮಚ, ಜೀರಿಗೆಪುಡಿ- 1/4 ಚಮಚ, ಮೆಣಸಿನ ಹುಡಿ- 1/4 ಚಮಚ. ರುಚಿಗೆ ಉಪ್ಪು , ಎಣ್ಣೆ.

ತಯಾರಿಸುವ ವಿಧಾನ: ಹಪ್ಪಳವನ್ನು ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹೆಚ್ಚಿಕೊಂಡು ಒಂದು ಬೌಲ್‌ಗೆ ಹಾಕಿ ಮಿಶ್ರ ಮಾಡಿರಿ. ಎಣ್ಣೆಯಲ್ಲಿ ಒಂದು ಹಪ್ಪಳವನ್ನು ಹುರಿದು ಪುಡಿಮಾಡಿ ಈ ಮಿಶ್ರಣಕ್ಕೆ ಸೇರಿಸಿ. ನಂತರ ಉಳಿದ ಹಪ್ಪಳವನ್ನು ಕೆಂಪಗೆ ಹುರಿದು ಮಾಡಿಟ್ಟ ಮಿಶ್ರಣವನ್ನು ಹಪ್ಪಳ ಮೇಲೆ ಉದುರಿಸಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರ ಹಪ್ಪಳ ಸಲಾಡ್‌ ತಯಾರು.

ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next