Advertisement
ಸುಳ್ಯ ತಾಲೂಕಿನಲ್ಲಿ ಬುಧವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಮಳೆ, ಗಾಳಿಯಿಂದ ನಗರದಲ್ಲಿ ಹಲವು ಮನೆಗಳ ಛಾವಣಿಗೆ ಹಾನಿ ಉಂಟಾಗಿದೆ. ಬೆಟ್ಟಂಪಾಡಿ ನಿವಾಸಿ ಬಾಲಕೃಷ್ಣ ಅವರ ಮನೆ ಸಂಪೂರ್ಣ ಹಾನಿಗೀಡಾಗಿದೆ. ಜಯನಗರದಲ್ಲಿ ಅಬ್ದುಲ್ ಹಾಜಿ ಅವರ ಕೊಟ್ಟಿಗೆ ಮೇಲೆ ಮರ ಬಿದ್ದಿದೆ.
Related Articles
Advertisement
ಕಡಬ ಹೊಸಮಠ ಬಳಿ ವಿದ್ಯುತ್ ಲೈನ್ಗೆಮರ ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಸುಬ್ರಹ್ಮಣ್ಯ ಕ್ಷೇತ್ರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರಲಿಲ್ಲ. ಸುಬ್ರಹ್ಮಣ್ಯದಲ್ಲಿ ಗುಡುಗು ಕಾಣಿಸಿಕೊಂಡರೆ, ಕಡಬದಲ್ಲಿ ಮಳೆಯಾಗಿದೆ. ಪುತ್ತೂರಿನಲ್ಲಿ ಹನಿ ಮಳೆಯಾಗಿದೆ. ಮಂಗಳೂರಲ್ಲಿ ಮೋಡ ಕವಿದ ವಾತಾವರಣವಿತ್ತು. ಕುಶಾಲನಗರ: ಶಾಲೆಗೆ ಹಾನಿ
ಮಡಿಕೇರಿ: ಗಾಳಿ ಮಳೆಗೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಸರಕಾರಿ ಶಾಲೆಯ ಮೇಲ್ಛಾವಣಿ ಹಾರಿಹೋಗಿದ್ದು ಕೊಠಡಿಗಳು ನೀರಿನಿಂದ ಅವೃತಗೊಂಡು ಪೀಠೊಪಕರಣಗಳಿಗೆ ಹಾನಿಯಾಗಿದೆ. ಮೇಲ್ಛಾವಣಿಯ ಸಿಮೆಂಟ್ ಶೀಟ್ಗಳು ಹಾರಿ ಹೋಗಿ ತರಗತಿಯ ಕೊಠಡಿಗಳು ಮತ್ತು ಕಚೇರಿಯಲ್ಲಿದ್ದ ವಸ್ತುಗಳು ನಾಶಗೊಂಡಿವೆ. ಗುಮ್ಮನಕೊಲ್ಲಿಯ ಸಿ.ಎನ್. ಸೋಮಪ್ಪ ಅವರ ಮನೆಯ ಶೀಟ್ಹಾರಿಹೋಗಿದ್ದು ಮನೆಗೆ ಹಾನಿಯುಂಟಾಗಿದೆ. ಎ. 30ರಿಂದ ಮೂರು ದಿನ ಮಳೆ ಸಾಧ್ಯತೆ
ಬೆಂಗಳೂರು: ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಲಿರುವ ಚಂಡಮಾರುತ ರಾಜ್ಯದ ಮೇಲೆ ಪರಿಣಾಮ ಬೀರಲಿದ್ದು, ಎ.30ರಿಂದ 3 ದಿನ ಹಲವೆಡೆ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದೆರಡು ದಿನಗಳಿಂದ ವಾಯು ಭಾರ ಕುಸಿತ ಉಂಟಾಗುತ್ತಿದ್ದು, ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹೆಚ್ಚಾಗಿರುತ್ತದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ ಬುಧವಾರ ಅದು ದಿಕ್ಕು ಬದಲಿಸಿದ್ದರಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಇರುವುದಿಲ್ಲ. ಆದರೂ ಎ. 30 ರಿಂದ ಮೂರು ದಿನ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಹಲವೆಡೆ ಮಳೆಯಾಗಲಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಉಂಟಾಗಿದ್ದ ನಿಮ್ನ ಒತ್ತಡ ಹಾಗೂ ಮೇಲ್ಮೆ„ ಸುಳಿಗಾಳಿಯ ತೀವ್ರತೆ ಕಡಿಮೆಯಾಗಿದ್ದು, ಬುಧವಾರ ಮಲೆನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಇನ್ನೂ 2 ದಿನ ದಕ್ಷಿಣ ಒಳ ನಾಡಿನ ಕೆಲವಡೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದಿದ್ದಾರೆ.