ಐಜಾಲ್ : ಭಾರತಕ್ಕೆ ಮ್ಯಾನ್ಮಾರ್ ದಂಗೆಯಿಂದ ಜನರು ಬರುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವಾಲಯ, ಮಿಜೋರಾಂ ಸೇರಿದಂತೆ ನಾಲ್ಕು ಈಶಾನ್ಯ ರಾಜ್ಯಗಳನ್ನು ಕೇಳಿದ ಕೆಲ ದಿನಗಳ ನಂತರ, ಮಿಜೋರಾಂ ಮುಖ್ಯಮಂತ್ರಿ ಝೊರಾಮ್ ತಂಗ ಅವರು ಮ್ಯಾನ್ಮಾರ್ ನ ಭಾರತದ ವಿದೇಶಾಂಗ ನೀತಿಯನ್ನು ಬದಲಾಯಿಸುವಂತೆ ಮತ್ತು ನಿರಾಶ್ರಿತರನ್ನು ವಾಪಸ್ ಕಳುಹಿಸದಂತೆ ಕೇಂದ್ರ ಸರ್ಕಾರವನ್ನು ವಿನಂತಿಸಿ ದೆಹಲಿಗೆ ನಿಯೋಗವನ್ನು ಕಳುಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಓದಿ : ತಮಿಳುನಾಡು ಚುನಾವಣಾ ಅಖಾಡ: ಡಿಎಂಕೆ ವರಿಷ್ಠ ಸ್ಟಾಲಿನ್ ಅಳಿಯನ ನಿವಾಸದ ಮೇಲೆ ಐಟಿ ದಾಳಿ
ಸುದ್ಧಿ ಸಂಸ್ಥೆ ಎಎನ್ಐ ಗೆ ಪ್ರತಿಕ್ರಿಯಿಸಿದ ಝೊರಾಮ್ ತಂಗ, ಭಾರತ ಸರ್ಕಾರವು ಮ್ಯಾನ್ಮಾರ್ ಜನರಿಗೆ ಮುಕ್ತವಾಗಿ ಅವಕಾಶವನ್ನು ನೀಡಬೇಕು. ಮಿಲಿಟರಿ ಆಡಳಿತದ ದೇಶದಿಂದ ನಿರಾಶ್ರಿತರು ಮಿಜೋರಾಂಗೆ ಬಂದರೆ, ಅವರಿಗೆ ಮಾನವೀಯ ಆಧಾರದ ಮೇಲೆ ಆಹಾರ ಮತ್ತು ಆಶ್ರಯವನ್ನು ಒದಗಿಸಬೇಕು. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಪ್ರಸ್ತಾಪಿಸಿದ್ದೇನೆ. ಈ ಕುರಿತಾಗಿ ಚರ್ಚೆ ಆಗಬೇಕು ಎಂಬ ಕಾರಣದಿಂದ ದೆಹಲಿಗೆ ನಿಯೋಗವನ್ನು ಕಳುಹಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಭಾರತದ ವಿದೇಶಾಂಗ ನೀತಿಯನ್ನು ಬದಲಾಯಿಸಿಕೊಳ್ಳಬೇಕೆಂದು ನಾನು ವಿನಂತಿಸಿಕೊಳ್ಳುತ್ತೇವೆ. ನಿರಾಶ್ರಿತರನ್ನು ವಾಪಸ್ ಕಳುಹಿಸದಂತೆ, ಅವರಿಗೆ ಆಹಾರ ಹಾಗೂ ಆಶ್ರಯವನ್ನು ಒದಗಿಸುವಂತೆ ಕೇಳಿಕೊಳ್ಳುತ್ತೇನೆ. ನಿರಾಶ್ರಿತರ ವಲಸೆ ಹೆಚ್ಚುತ್ತಿದೆ. ನನಗೆ ನಿಖರ ಸಂಖ್ಯೆ ತಿಳಿದಿಲ್ಲ. ಆದರೆ ಅವರು ನಮ್ಮ ಸಹೋದರ, ಸಹೋದರಿಯರ ಸ್ಥಾನದಲ್ಲಿರುವವರು. ನಾವು ಅವರ ಬಗ್ಗೆ ಸಹಾನುಭೂತಿ ಹೊಂದಿರಬೇಕು.
ಈ ಬಗ್ಗೆ ನನ್ನ ಯೋಚನೆಗಳನ್ನು ಗೃಹ ಸಚಿವ ಅಮಿತ್ ಶಾ ಅವರಲ್ಲಿಯೂ ಕೂಡ ಪ್ರಸ್ತಾಪಿಸಿದ್ದೇನೆ. ಮ್ಯಾನ್ಮಾರ್ ಪ್ರಜಾಪ್ರಭುತ್ವ ರಾಷ್ಟ್ರವಾಗಬೇಕೆ ಹೊರತು, ಮಿಲಿಟರಿ ರಾಷ್ಟ್ರವಾಗಬಾರದು ಎಂದು ನಾವು ಬಯಸುತ್ತೇವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ವಲಸೆ ಬಂದ ನಿರಾಶ್ರಿತ ಕುಟುಂಬದ ಮ್ಯಾನ್ಮಾರ್ ಮೂಲದ ಲಾಲ್ತ್ಲಾಮುವಾನಿ, ನಾವು ಮಿಲಿಟರಿ ಆಡಳಿತದಲ್ಲಿದ್ದ ಕಾರಣ ನಾವು ಇಲ್ಲಿಗೆ ಬಂದಿದ್ದೇವೆ. ಮಿಲಿಟರಿ ಪಡೆಗಳು ನಮ್ಮ ಕುಟುಂಬದ ಮೇಲೆ ದೌರ್ಜನ್ಯ ಎಸಗಿದೆ. ಅವರೆದುರಿಗೆ ಪ್ರತಿಯಾಗಿ ನಿಲ್ಲಲು ನಾವು ಅಶಕ್ತರು. ನಾವು ಶಾಂತಿಯಿಂದ ಇರಲು ಬಯಸುತ್ತೇವೆ. ನಮಗೆ ಆಶ್ರಯ ನೀಡುವಂತೆ ಭಾರತ ಸರ್ಕಾರವನ್ನು ನಾನು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಓದಿ : ಸಾರ್ವಕಾಲಿಕ ಐಪಿಎಲ್ ತಂಡ ಹೆಸರಿಸಿದ ಡಿವಿಲಿಯರ್ಸ್: ರೈನಾ, ರಸೆಲ್ ಗಿಲ್ಲ ಜಾಗ!