ನವದೆಹಲಿ: ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಪಂಜಾಬ್ ಅಧಿಕಾರಿಗಳನ್ನು ದೆಹಲಿಗೆ ಕರೆಯಿಸಿಕೊಂಡು ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಕ್ಕೆ ತಿರುಗೇಟು ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ತರಬೇತಿ ಉದ್ದೇಶಕ್ಕಾಗಿ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಲು ನಾನು ತೆಗೆದುಕೊಂಡ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಜಾಪ್ರಭುತ್ವ ಬಲಪಡಿಸುವ ಹೆಮ್ಮೆಯ ಸಂಪ್ರದಾಯ ಭಾರತಕ್ಕಿದೆ: ಪ್ರಧಾನಿ ಮೋದಿ
ಒಂದು ವೇಳೆ ತರಬೇತಿಗಾಗಿ ಅಗತ್ಯವಿದ್ದರೆ, ನಾನು ನನ್ನ ಅಧಿಕಾರಿಗಳನ್ನು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಇಸ್ರೇಲ್ ಗೆ ಬೇಕಾದರೂ ಕಳುಹಿಸುತ್ತೇನೆ. ಅದನ್ನು ಯಾರಾದರು ಯಾಕೆ ವಿರೋಧಿಸಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನಿಸಿದ್ದಾರೆ.
ಅವರು (ದೆಹಲಿ ಸರ್ಕಾರ) ಶಿಕ್ಷಣ, ವಿದ್ಯುತ್, ಆರೋಗ್ಯ ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ. ಹೀಗಾಗಿ ನಾನ್ಯಾಕೆ ಅಧಿಕಾರಿಗಳನ್ನು ಕಳುಹಿಸಬಾರದು? ಕಳೆದ ವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪಂಜಾಬ್ ಅಧಿಕಾರಿಗಳು ಭೇಟಿಯಾಗಿದ್ದರು. ಈ ಸಭೆಯಲ್ಲಿ ಭಗವಂತ್ ಮಾನ್ ಹಾಜರಿರಲಿಲ್ಲವಾಗಿತ್ತು. ಇದರಿಂದಾಗಿ ಆಮ್ ಆದ್ಮಿ ಪಕ್ಷದ ವರಿಷ್ಠ ಪಂಜಾಬ್ ರಿಮೋಟ್ ಕಂಟ್ರೋಲ್ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಸೋಮವಾರ ಕೇಜ್ರಿವಾಲ್ ಪಂಜಾಬ್ ರಾಜ್ಯದ ವಿದ್ಯುತ್ ನಿಗಮ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಂಜಾಬ್ ಮುಖ್ಯ ಕಾರ್ಯದರ್ಶಿ ಮತ್ತು ವಿದ್ಯುತ್ ಇಲಾಖೆಯ ಕಾರ್ಯದರ್ಶಿಯೂ ಹಾಜರಿದ್ದರು. ಇದೊಂದು ಸಭೆಯ ಬಗ್ಗೆ ವಿರೋಧಪಕ್ಷಗಳಾದ ಕಾಂಗ್ರೆಸ್, ಅಕಾಲಿದಳ ಮತ್ತು ಅಮರೀಂದರ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಟೀಕಿಸಿದ್ದರು.