ಶಿವಮೊಗ್ಗ: ಅತ್ಯಾಚಾರಿಗಳ ವಿರುದ್ದ ಸರಿಯಾದ ಕ್ರಮ ತೆಗೆದುಕೊಳ್ಳಲಾಗುವುದು. ಅತ್ಯಾಚಾರಿಗಳು, ದುಷ್ಕೃತ್ಯ ಮಾಡುವವರಿಗೆ ಸರ್ಕಾರ ಹಾಗೂ ಪೊಲೀಸ್ ಭಯವಿಲ್ಲ. ಭಯ ಹುಟ್ಟುವ ಕಾನೂನು ತರುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ, ಜಾರಿಗೆ ತರುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರು ವರ್ಷದ ಕಂದಮ್ಮನ ಮೇಲೂ ಅತ್ಯಾಚಾರ ಮಾಡಿದ್ದ ಘಟನೆ ನಡೆದಿತ್ತು. ನಾನು ವಿಧಾನ ಪರಿಷತ್ ಸದಸ್ಯನಾಗಿದ್ದ ಅವಧಿಯಲ್ಲಿ ಕಾನೂನು ತಿದ್ದುಪಡಿಯ ಬಗ್ಗೆ ಚರ್ಚೆಯಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಜಾರ್ಜ್ ಅವರು ಕಾನೂನು ತಿದ್ದುಪಡಿ ಮಾಡುತ್ತೇನೆ ಎಂದಿದ್ದರು. ಆದರೆ ತಿದ್ದುಪಡಿ ಆಗಲಿಲ್ಲ. ಇವತ್ತಿನವರೆಗೂ ಅದೇ ಕಾನೂನು ಮುಂದುವರೆದಿದೆ ಎಂದರು.
ಈ ರೀತಿಯ ಅತ್ಯಾಚಾರ ಮಾಡುವ ನೀಚರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿಯಾಗಬೇಕು. ಕಾನೂನು ತಿದ್ದುಪಡಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಮೈಸೂರಿನಲ್ಲೇ ತನಿಖೆ ಮಾಡ್ತಿದ್ದ ಪೊಲೀಸರಿಗೆ ತ.ನಾಡು ದಾರಿ ತೋರಿಸಿದ್ದು ಆ ಒಂದು ಬಸ್ ಟಿಕೆಟ್!
ಈ ಪ್ರಕರಣದಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಶ್ರಮವಹಿಸಿ, ಕೆಲಸ ಮಾಡುತ್ತಿದ್ದಾರೆ. ಘಟನೆ ಅದ ನಂತರದಲ್ಲಿ ಸಭೆ ನಡೆಸಿದ್ದು, ಮೈಸೂರಿನಲ್ಲೆ ಇದ್ದು ಮಾಹಿತಿ ಪಡೆಯುತ್ತಿದ್ದಾರೆ. ಜ್ಞಾನೇಂದ್ರ ಅವರ ಕೆಲವು ಮಾತುಗಳು ಯಾರಿಗೂ ನೋವುಂಟು ಮಾಡಲು ಹೇಳಿದ್ದಲ್ಲ. ಮನಸ್ಸಿನ ಭಾವನೆಯಲ್ಲಿ ಯಾರಿಗೂ ಅಪಮಾನ ಮಾಡುವ ಉದ್ದೇಶ ಹೊಂದಿರಲಿಲ್ಲ. ಅದರ ಬಗ್ಗೆ ಯಾವ ದೃಷ್ಟಿಯಲ್ಲಿ ಯೋಚನೆ ಮಾಡುತ್ತೇವೆಯೋ ಹಾಗೇ ಆಗುತ್ತದೆ. ಅದನ್ನು ಮುಂದುವರೆಸುವುದು ಬೇಡ ಎಂದು ಸಚಿವ ಈಶ್ವರಪ್ಪ ಹೇಳಿದರು.