Advertisement

ಕಟೀಲ್ ರ ಗುರು ಮೋದಿ ಕೇಳಿದರೆ ಉತ್ತರಿಸುವೆ !: ಖರ್ಗೆ ತಿರುಗೇಟು

12:52 PM Nov 21, 2021 | Team Udayavani |

ಕಲಬುರಗಿ: ‘ಲೂಟಿ ಗ್ಯಾಂಗ್’ ಖರ್ಗೆ ಅಂಗಡಿ ಬಂದ್ ಆಗಿದೆ, ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ‌ಖರ್ಗೆ, ದೆಹಲಿಯಲ್ಲಿ ಕುಳಿತಿರುವ ಅವರ ಗುರುಗಳು (ಪ್ರಧಾನಿ ನರೇಂದ್ರ ಮೋದಿ) ಕೇಳಿದರೆ ಸೂಕ್ತ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಟೀಲ್ ಹೇಳಿಕೆ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಏನಾದರೂ ಪ್ರಶ್ನಿಸಿದರೆ‌ ಟಿಂಗಲ್ ಉಡಾಯಿಸುವುದನ್ನು ಕಲಿತಿದ್ದಾರೆ. ಅವರಿಗೆ ನಮ್ಮ ಪಕ್ಷದ ರಾಜ್ಯ ನಾಯಕರು ಸೂಕ್ತ ಉತ್ತರ ನೀಡುತ್ತಾರೆ’ ಎಂದರು.

‘ಮೂರು ಕೃಷಿ ಕಾಯ್ದೆಗಳನ್ನು ಮೋದಿ ರೈತರ ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದಿಲ್ಲ. ಈಗ ಏಕಾಏಕಿ ಬಂದಿರುವ ರೈತರ ಬಗೆಗಿನ ಕಾಳಜಿ 700 ರೈತರು ತೀರಿಕೊಳ್ಳುವಾಗ ಎಲ್ಲಿ ಹೋಗಿತ್ತು. ಚುನಾವಣೆ ಬಂದಿದೆ ಎಂದು ಈಗ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ಈ ಕಾಯ್ದೆ ಜಾರಿಗೊಳಿಸುವ ಮುನ್ನ ಸಂಸತ್ತಿನಲ್ಲಿ ಚರ್ಚಿಸಿದ್ದರೆ ನಾವೂ ಸಲಹೆ ನೀಡುತ್ತಿದ್ದೆವು. ಈಗ ಚುನಾವಣೆ ಬಂದಿದ್ದರಿಂದ ಕಾಯ್ದೆ ವಾಪಸ್ ಪಡೆಯುವ ಘೋಷಣೆ ಮಾಡಿದ್ದಾರೆ. ಇದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಮೋದಿ ಅವರಿಗೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಗೌರವವೇ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಒತ್ತಡಕ್ಕೆ ಮಣಿದು ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿಯವರು 11 ತಿಂಗಳ ಹಿಂದೆಯೇ ಹೇಳಿದ್ದರು. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಡಿಸುವ ಕಾಯ್ದೆ ತರುವುದು, ಪೆಗಾಸಸ್ ಹಗರಣ, ಚೀನಾದವರು ನಮ್ಮ ಗಡಿಯಲ್ಲಿ ಗ್ರಾಮ ನಿರ್ಮಿಸಿರುವುದು ಸೇರಿದಂತೆ ಸುಮಾರು 15 ವಿಷಯಗಳ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದೇ ನ.25ರಂದು ಸಭೆ ಕರೆದಿದ್ದಾರೆ’ ‌ಎಂದು ಖರ್ಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next