Advertisement

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

11:20 PM Mar 26, 2024 | Team Udayavani |

ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ದಿನೇದಿನೆ ಹೆಚ್ಚುತ್ತಲೇ ಸಾಗಿದ್ದು, ಅರಣ್ಯ ತಪ್ಪಲಿನ ಪ್ರದೇಶದ ಜನರನ್ನು ಹೈರಾಣಾಗಿಸಿದೆ. ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿ ಈಗ ಸಾಮಾನ್ಯವಾಗಿದ್ದು, ಸ್ಥಳೀಯ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಅಲೆದಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದೆ. ಈ ಜಿಲ್ಲೆಗಳ ಕಾಡಂಚಿನಲ್ಲಿರುವ ಜಮೀನುಗಳಲ್ಲಿ ಕೃಷಿ ಇನ್ನಿತರ ಕುಲಕಸುಬುಗಳಲ್ಲಿ ನಿರತವಾಗಿರುವ ಸ್ಥಳೀಯ ನಿವಾಸಿಗಳ ಜೀವನವನ್ನೇ ಈ ಕಾಡಾನೆಗಳು ತೀರಾ ದುಸ್ತರವನ್ನಾಗಿಸಿವೆ.

Advertisement

ಕಾಡಾನೆ, ಚಿರತೆ, ಕಾಡುಕೋಣ, ಮುಳ್ಳುಹಂದಿ ಸಹಿತ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಕೃಷಿ ಬೆಳೆಗಳನ್ನು ನಾಶ ಮಾಡುವುದು, ಸ್ಥಳೀಯರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ದಶಕದಿಂದೀಚೆಗೆ ಹೆಚ್ಚು ತ್ತಲೇ ಇದ್ದು, ಇತ್ತೀಚಿನ ದಿನಗಳಲ್ಲಂತೂ ಇದು ಸರ್ವೇಸಾಮಾನ್ಯವಾಗಿದೆ. ಕಾಡಾನೆಗಳ ಹಿಂಡೇ ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಯ ಮೇಲೆ ಲಗ್ಗೆ ಇಡಲಾರಂಭಿಸಿವೆ.

ಕಾಡಾನೆ ದಾಳಿಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸರಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಸರಕಾರ ಆನೆ ಕಾರಿಡಾರ್‌, ಆನೆ ಕಂದಕ, ವಿದ್ಯುತ್‌ ತಂತಿಗಳ ಬೇಲಿ, ರೈಲು ಹಳಿಗಳ ತಡೆಬೇಲಿ… ಹೀಗೆ ಹಲವು ವಿಧಾನಗಳನ್ನು ಅನುಸರಿಸುತ್ತಾ ಬಂದಿದೆ. ಈ ಕಾಮಗಾರಿಗಳಿಗಾಗಿ ಕೋಟ್ಯಂತರ ರೂ. ವ್ಯಯಿಸುತ್ತಿದೆಯಾದರೂ ಸಮಸ್ಯೆಯಿಂದ ಜನರಿಗೆ ಶಾಶ್ವತ ಮುಕ್ತಿ ಇನ್ನೂ ಲಭಿಸಿಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ಸರಕಾರ ಅರಣ್ಯ ಪ್ರದೇಶದ ವಿಸ್ತರಣೆ, ಅರಣ್ಯದಂಚಿನಲ್ಲಿರುವ ಗ್ರಾಮಗಳಲ್ಲಿ ರೈಲು ಹಳಿಗಳನ್ನು ಬಳಸಿ ತಡೆಬೇಲಿ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಿದೆ. ಈ ಮೂಲಕ ಕಾಡಾನೆ ಸಹಿತ ವನ್ಯಜೀವಿಗಳು ಅರಣ್ಯ ಪ್ರದೇಶಗಳಿಂದ ಹೊರಬಾರದಂತೆ ಮತ್ತು ಒಂದು ವೇಳೆ ಬಂದರೂ ಅವು ಗ್ರಾಮವನ್ನು ಪ್ರವೇಶಿಸದಂತೆ ತಡೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಕೆಲವೆಡೆ ಸರಕಾರದ ಈ ಪ್ರಯತ್ನ ಭಾಗಶಃ ಯಶ ಕಂಡರೂ ಕಾಡಾನೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಅರಣ್ಯ ನಾಶ, ಅರಣ್ಯ ಪ್ರದೇಶದಲ್ಲಿ ಮಿತಿಮೀರಿದ ಮಾನವ ಹಸ್ತಕ್ಷೇಪ, ಗಣಿಗಾರಿಕೆ ಮತ್ತಿತರ ಕಾರಣಗಳಿಂದಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ ಎಂದು ಈ ಹಿಂದಿನಿಂದಲೂ ಹೇಳಿಕೊಳ್ಳುತ್ತಲೇ ಬರಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ತಜ್ಞರು ಪದೇ ಪದೆ ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ ಅರಣ್ಯದಲ್ಲಿನ ಮಾನವ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಇಂದಿಗೂ ಸರಕಾರಕ್ಕೆ ಸಾಧ್ಯವಾಗಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ, ಅರಣ್ಯದಂಚಿನಲ್ಲಿರುವ ಬುಡಕಟ್ಟು ಸಮುದಾಯ ದವರನ್ನು ಒಕ್ಕಲೆಬ್ಬಿಸಲು ಮುಂದಾಗುವ ಇಲಾಖೆ, ಅರಣ್ಯ ಪ್ರದೇಶಗಳ ನೈಜ ಅತಿಕ್ರಮಣದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತದೆ. ಇದು ಸಮಸ್ಯೆಯನ್ನು ಮತ್ತಷ್ಟು ಜಟಿಲವನ್ನಾಗಿಸುತ್ತಿದೆ.

ವನ್ಯಜೀವಿಗಳ ಸಂರಕ್ಷಣೆಯ ಜತೆಗೆ ಅರಣ್ಯದಂಚಿನಲ್ಲಿರುವ ಜನರು ಹಾಗೂ ಬೆಳೆಗಳ ರಕ್ಷಣೆಯೂ ಪ್ರಮುಖವಾಗಿದೆ. ಈ ಎರಡು ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳುವ ಮಹತ್ತರ ಸವಾಲು ಸರಕಾರ ಮತ್ತು ಜನಸಮುದಾಯದ ಮೇಲಿದೆ. ಇಂತಹ ಸೂಕ್ಷ್ಮ ವಿಷಯದ ನಿಭಾವಣೆಗೆ ಸರಕಾರ, ತಜ್ಞರು ಮತ್ತು ಕಾಡಂಚಿನಲ್ಲಿರುವ ಜನರ ಅನುಭವ, ಅನಿಸಿಕೆಗಳನ್ನು ಆಲಿಸಿ, ಮಾನವ-ವನ್ಯಜೀವಿ ಸಂಘರ್ಷಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪರಿಸ್ಥಿತಿಯ ಗಂಭೀರತೆ, ವಾಸ್ತವತೆಯನ್ನು ಅವಲೋಕಿಸದೆ ಕೋಟ್ಯಂತರ ರೂ. ವ್ಯಯಿಸಿ ಪರಿಹಾರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬದಲಾಗಿ, ಸ್ಥಳೀಯ ಪರಿಸ್ಥಿತಿಗನು ಗುಣವಾಗಿ, ಸ್ಥಳೀಯ ಸಹಕಾರದೊಂದಿಗೆ ಕಾರ್ಯಸಾಧುವಾದ ವೈಜ್ಞಾನಿಕ ಪರಿಹಾರ ಯೋಜನೆಯನ್ನು ಸರಕಾರ ಜಾರಿಗೆ ತರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next