Advertisement

ಕೃಷ್ಣೆ ಅಚ್ಚಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ; ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ ನೀರು

06:23 PM Jul 30, 2021 | Nagendra Trasi |

ಆಲಮಟ್ಟಿ: ಮಹಾರಾಷ್ಟ್ರದ ಕೊಯ್ನಾ, ನವಜಾ, ಮಹಾಬಲೇಶ್ವರ, ವಾರಣಾ, ತರಾಳಿ, ರಾಧಾನಗರಿ, ದೂಧಗಂಗಾ, ವೇದಗಂಗಾ ಹಾಗೂ ರಾಜ್ಯದ ಕೃಷ್ಣೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ವ್ಯಾಪಕವಾಗಿ ಮಳೆಯಾಗಿರುವುದರಿಂದ ಆಲಮಟ್ಟಿ ಜಲಾಶಯದಿಂದ ಕೆಲ ದಿನಗಳಿಂದ 4ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

Advertisement

ಇದಕ್ಕೂ ಮೊದಲು ಆಗಸ್ಟ್‌ 2005 ರಂದು ಒಳಹರಿವು 4.41ಲಕ್ಷದಷ್ಟಿದ್ದು ಹೊರಹರಿವು 4.45ಲಕ್ಷ ಕ್ಯೂಸೆಕ್‌ ಆಗಿತ್ತು. 2008 ಆಗಸ್ಟ್‌ 17ರಲ್ಲಿ ಒಳಹರಿವು 2.75ಲಕ್ಷವಿದ್ದಾಗ ಜಲಾಶಯದಿಂದ 1.90ಲಕ್ಷ ಕ್ಯೂಸೆಕ್‌ ಬಿಡಲಾಗಿದ್ದರೆ 2010ಜುಲೈ 31ರಂದು 2 ಲಕ್ಷ ಒಳಹರಿವಿದ್ದಾಗ 2.59ಲಕ್ಷ ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಬಿಡಲಾಗಿತ್ತು.

ಇನ್ನು ಆಲಮಟ್ಟಿ ಲಾಲ್‌ ಬಹಾದ್ದೂರ ಶಾಸ್ತ್ರೀ ಜಲಾಶಯದಲ್ಲಿ 2002 ರಿಂದ ನೀರಿನ ಸಂಗ್ರಹ ಆರಂಭಗೊಂಡಿದ್ದು, 2005ರ ದಾಖಲೆ ಮೀರಿ ಅಪಾರ ಪ್ರಮಾಣದಲ್ಲಿ ಜಲಾಶಯಕ್ಕೆ ಒಳಹರಿವು ಇರಲಿಲ್ಲ. 2019 ಆ.10ರಂದು 6.30ಲಕ್ಷ ಕ್ಯೂಸೆಕ್‌ ಹಾಗೂ 2021ರ ಜು.27ರ ಸಂಜೆ 4,62,222ಕ್ಯೂಸೆಕ್‌ ನೀರು ದಾಖಲೆ ಪ್ರಮಾಣದಲ್ಲಿ ನೀರು ಬಂದಿದೆ.

ಮತ್ತೆ ಬೆಳೆಯಲ್ಲಿ ನೀರು:
ಆಲಮಟ್ಟಿ ಜಲಾಶಯದಿಂದ 4ಲಕ್ಷ 85ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಟ್ಟಾಗ ಮುಂಭಾಗದಲ್ಲಿರುವ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಯಲ್ಲಮ್ಮನಬೂದಿಹಾಳ, ಮಸೂತಿ, ಬಳಬಟ್ಟಿ, ಮುದೂರ, ಕಾಳಗಿ, ತಂಗಡಗಿ, ಗಂಗೂರ, ಕುಂಚನೂರ ಸೇರಿದಂತೆ ವಿಜಯಪುರ ಜಿಲ್ಲೆಯ ಸುಮಾರು 30ಗ್ರಾಮಗಳ ರೈತರ ಸುಮಾರು 4ಸಾವಿರ ಹೆಕ್ಟೇರ್‌ ಭೂಮಿ ಜಲಾವೃತವಾಗುತ್ತದೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ಧನ್ನೂರ, ಕಟಗೂರ, ಗಂಜಿಹಾಳ, ಮನಹಳ್ಳಿ, ಮಂಕಣಿ, ನಾಯನೇಗಲಿ, ಮ್ಯಾಗೇರಿ, ಇದ್ದಲಗಿ, ಹೊಸೂರ, ನಾಗಸಂಪಗಿ, ನಾಗರಾಳ ಸೇರಿದಂತೆ ಸುಮಾರು 45 ಗ್ರಾಮಗಳ ರೈತರ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗುತ್ತವೆ. ಕಳೆದ ದಶಕದ ಅವಧಿಯಲ್ಲಿಯೇ 2019ರ ಆ.12ರ ಸಂಜೆಯಿಂದ 5,70,991 ಕ್ಯೂಸೆಕ್‌ ನೀರನ್ನು ಜಲಾಶಯದ ಗೇಟುಗಳ ಮೂಲಕ ನೀರು ಹೊರಬಿಟ್ಟಿರುವದು ದಾಖಲೆಯಾಗಿದೆ.

Advertisement

ಆಲಮಟ್ಟಿ ಜಲಾಶಯದಿಂದ ವ್ಯಾಪಕವಾಗಿ ನೀರು ಬಿಡುತ್ತಿರುವದರಿಂದ ಬಸವಸಾಗರದ ಹಿನ್ನೀರಿನಿಂದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಬಸವಸಾಗರ ಜಲಾಶಯದ ಹಿನ್ನೀರಿಗಾಗಿ ರೈತರಿಂದ ಯುಕೆಪಿ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಮತ್ತು ಸ್ವಾ ಧೀನಪಡಿಸಿಕೊಳ್ಳದೇ ಇರುವ ಜಮೀನಿನಲ್ಲಿಯೂ ನೀರು ನುಗ್ಗಿದ್ದರ ಪರಿಣಾಮವಾಗಿ ಬೆಳೆಯಲ್ಲಿ ಮೊಸಳೆಗಳು ಸೇರಿ ವಿಷಜಂತುಗಳ ಆಕ್ರಮಣವಾಗಿದೆ.

ಇನ್ನು ವಿಜಯಪುರ ಜಿಲ್ಲೆಯ ಮುದೂರ, ಕಾಳಗಿ, ಬಳಬಟ್ಟಿ, ಮಸೂತಿ, ಯಲ್ಲಮ್ಮನಬೂದಿಹಾಳ, ವಡವಡಗಿ, ಕಾಶಿನಕುಂಟಿ, ಯಲಗೂರ ಹಾಗೂ ಅರಳದಿನ್ನಿಯ ಸುರೇಶ ಕೊಳ್ಳಾರ ಅವರಿಗೆ ಸೇರಿದ ಕಬ್ಬು ಸಂಪೂರ್ಣ ಜಲಾವೃತ ಗೊಂಡಿದೆಯಲ್ಲದೇ ಯಲಗೂರದಪ್ಪ ಟುಬಾಕಿ, ಶೇಖಪ್ಪ ಟುಬಾಕಿ, ಯಲಗೂರದಪ್ಪ ಕೊಳ್ಳಾರ, ಅಯ್ಯಪ್ಪ ಚನಗೊಂಡ, ಸಣ್ಣಪ್ಪ ಸೀತಿಮನಿ ಸೇರಿದಂತೆ ಹಲವಾರು ರೈತರ ಜಮೀನು ಜಲಾವೃತಗೊಂಡಿದೆ.

ಇದರಿಂದ ಅವಳಿ ಜಿಲ್ಲೆಯ ಸಾವಿರಾರು ಎಕರೆ ಜಮೀನುಗಳಲ್ಲಿ ಬಸವಸಾಗರದ ಹಿನ್ನೀರು ನುಗ್ಗುವುದರಿಂದ ರೈತರು ಬಿತ್ತನೆ ಮಾಡಿದ ತೊಗರಿ, ಮೆಕ್ಕೆಜೋಳ, ಸಜ್ಜೆ, ಕಬ್ಬು ಬೆಳೆಗಳಲ್ಲಿ ನೀರು ನಿಂತು ಹಿಂದೆ ಸರಿದರೂ ಕೂಡ ಅದರ ತೇವಾಂಶ ಆರಲು ಕನಿಷ್ಠ 15-20 ದಿನಗಳಾದರೂ ಬೇಕು. ಇದರಿಂದ ತೊಗರಿ, ಸಜ್ಜೆ, ಮೆಕ್ಕೆಜೋಳ ಬೆಳೆಗಳು ಕೊಳೆತು ರೈತರಿಗೆ ಬೆಳೆಹಾನಿಯಾಗುವುದು ಪ್ರತಿವರ್ಷವೂ ನಡೆದುಕೊಂಡೇ ಬಂದಿದೆ.

ಪ್ರತಿ ವರ್ಷದ ಗೋಳು: ಕೃಷ್ಣಾ ತೀರದ ಈ ಎಲ್ಲ ಗ್ರಾಮಗಳ ನೂರಾರು ಎಕರೆ ಜಮೀನು ಕೃಷ್ಣಾ ನದಿಗೆ ಹತ್ತಿಕೊಂಡೆ ಇವೆ. ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್‌ ನೀರು ಬಿಟ್ಟಾಗ ಈ ಎಲ್ಲ ಜಮೀನಿಗೂ ನೀರು ನುಗ್ಗುತ್ತದೆ. ನಾಲ್ಕೈದು ಇಲ್ಲವೇ ಒಂದು ವಾರದವರೆಗೆ ನೀರು ನಿಂತು ನಂತರ ಪ್ರವಾಹ ಕಡಿಮೆಯಾಗುತ್ತದೆ.

ಆಲಮಟ್ಟಿಯ ಲಾಲ್‌ ಬಹಾದ್ದೂರಶಾಸ್ತ್ರೀ ಜಲಾಶಯದಿಂದ ನೀರು ಬಿಡುವ ಮೊದಲೇ ಅದಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯದಿಂದ ನೀರನ್ನು ಹೊರಬಿಟ್ಟಾಗ ಈ ಸಮಸ್ಯೆ ಹೆಚ್ಚಾಗಿ ಉದ್ಭವಿಸುವುದಿಲ್ಲ, ಮಹಾಪೂರ ಬಂದಾಗ ಈ ರೀತಿ ಒಂದೆರೆಡು ದಿನಗಳ ಮಟ್ಟಿಗೆ ಇರುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು. 519.60ಮೀ.ಎತ್ತರವಾಗಿ 123.081 ಟಿಎಂಸಿಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 517.09ಮೀ. ಎತ್ತರದಲ್ಲಿ 85.570ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 4,35,556 ಕ್ಯೂಸೆಕ್‌ ನೀರು ಒಳಹರಿವಿದೆ. ಜಲಾಶಯದಿಂದ 4ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಶಾಶ್ವತ ಪರಿಹಾರಕ್ಕೆ ಆಗ್ರಹ
ಕೃಷ್ಣೆಯ ದಡದಲ್ಲಿರುವ ಈ ಜಮೀನುಗಳಿಗೆ ಪ್ರತಿ ವರ್ಷವೂ ಮಹಾಪೂರ ಬಂದಾಗ ಭೂಮಿ ಜಲಾವೃತಗೊಳ್ಳುವ ಈ ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ಈ ಜಮೀನುಗಳನ್ನು ಭೂಸ್ವಾ ಧೀನ ಪಡಿಸಿಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು.
ಮಹಾಂತೇಶ ಬೆಳಗಲ್ಲ, ಸುರೇಶ ಗುಮತಿಮಠ, ಗ್ರಾಮಸ್ಥರು.

ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next