Advertisement

ಮಳೆ ಬಿದ್ದ ಮೇಲ್ಯಾಕೆ ಮೇವು ಬ್ಯಾಂಕ್‌!

09:55 AM Jul 19, 2019 | Team Udayavani |

ಹಾವೇರಿ: ಬರಗಾಲದಾಗ ಸುಮ್ಮನಿದ್ದು, ಈಗ ಮಳೆ ಬಿದ್ದ ಮೇಲೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಎಚ್ಚೆತ್ತಿಕೊಂಡಂತಿದೆ.ಬೇಸಿಗೆಯಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿ ರೈತರ ನೆರವಿಗೆ ಬರಬೇಕಿದ್ದ ಇಲಾಖೆ ಈಗ ಮಳೆ ಬಂದ ಮೇಲೆ ಜಿಲ್ಲೆಯಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆದು ಆಶ್ಚರ್ಯ ಮೂಡಿಸಿದೆ.

Advertisement

ಕಳೆದ ವರ್ಷ ಮುಂಗಾರು-ಹಿಂಗಾರು ಎರಡೂ ಮಳೆಗಳು ಕೈ ಕೊಟ್ಟು ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿತ್ತು. ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿತ್ತು. ಕಳೆದ ಬೇಸಿಗೆ ಮಾರ್ಚ್‌ನಿಂದ ಮೇವರೆಗೆ ಈ ಬಾರಿ ಒಂದು ಹನಿ ಮಳೆ ಬಾರದೆ ಜಾನುವಾರುಗಳು ನೀರು, ಮೇವಿನ ತೀವ್ರ ಸಮಸ್ಯೆ ಎದುರಿಸಿದವು. ಜೂನ್‌ ತಿಂಗಳು ಕಳೆದರೂ ಮಳೆಯಾಗಲಿಲ್ಲ. ಆಗಲೂ ರೈತರ ನೆರವಿಗೆ ಬಾರದ ಪಶು ಇಲಾಖೆ ಈಗ ಮಳೆ ಬಿದ್ದು ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿರುವ ಸಂದರ್ಭದಲ್ಲಿ ಪಶು ಇಲಾಖೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಮೇವು ಬ್ಯಾಂಕ್‌ ಆರಂಭಿಸಿ ನಗೆಪಾಟಲಿಗೀಡಾಗಿದೆ.

ಮೇವಿನ ಕೊರತೆ ಕಾರಣದಿಂದ ಜಿಲ್ಲೆಯಲ್ಲಿ ನೂರಾರು ರೈತರು ತಮ್ಮ ಜಾನುವಾರುಗಳನ್ನು ಸಿಕ್ಕಷ್ಟು ದುಡ್ಡಿಗೆ ಮಾರಿದರು. ಆಗಲೂ ಕರುಣೆ ತೋರದ ಇಲಾಖೆ ಈಗ ಯಾವ ಪುರುಷಾರ್ಥಕ್ಕಾಗಿ ಮೇವು ಬ್ಯಾಂಕ್‌ ತೆರೆದಿದೆ ಎಂಬ ಆಕ್ರೋಶದ ಪ್ರಶ್ನೆ ರೈತರದ್ದಾಗಿದೆ. ಮೇವು ಬ್ಯಾಂಕ್‌ ತೆರೆದು ಮೂರ್‍ನಾಲ್ಕು ದಿನ ಕಳೆದರೂ ರೈತರು ಮೇವು ಖರೀದಿಸದೆ ಇರುವುದು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಈಗ ಮೇವಿನ ಕೊರತೆ ಇಲ್ಲ ಎಂಬುದನ್ನು ತೋರ್ಪಡಿಸುತ್ತಿದೆ.

ಮರೆ ಮಾಚಿದ ವಾಸ್ತವ: ಬೇಸಿಗೆ ದಿನಗಳಲ್ಲಿ ಮೇವಿನ ಕೊರತೆಯುಂಟಾಗಿದ್ದಾಗ ಬರ ನಿರ್ವಹಣೆ ವೇಳೆ ಪಶು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಸಾಕಷ್ಟು ಮೇವಿನ ಸಂಗ್ರಹವಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ ಎಂದು ಹೇಳುತ್ತಲೇ ಬಂದರೆ ವಿನಃ ಮೇವು ಬ್ಯಾಂಕ್‌ ತೆರೆಯುವ ಪ್ರಯತ್ನ ಮಾಡಲಿಲ್ಲ. ಕೆಲ ರೈತರು ಪಕ್ಕದ ಜಿಲ್ಲೆಗಳಿಂದ ದುಬಾರಿ ದರಕ್ಕೆ ಮೇವು ಖರೀದಿಸಿ ತಮ್ಮ ಜಾನುವಾರುಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದರೆ, ಇಲಾಖೆ ಅಧಿಕಾರಿಗಳು ಮಾತ್ರ ವಾಸ್ತವ ಅರಿಯದೆ ಮೇವು ದಾಸ್ತಾನು ಇದೆ ಎನ್ನುತ್ತಲೇ ಬಂದಿದ್ದು ವಿಪರ್ಯಾಸ.

ಜಾನುವಾರು ಎಷ್ಟಿದೆ?: ಜಿಲ್ಲೆಯಲ್ಲಿ 3,44,428 ಜಾನುವಾರುಗಳಿವೆ. ಹಾವೇರಿ ತಾಲೂಕಿನಲ್ಲಿ 47,767, ಹಿರೇಕೆರೂರು ತಾಲೂಕಿನಲ್ಲಿ 58,857, ಹಾನಗಲ್ಲ ತಾಲೂಕಿನಲ್ಲಿ 70,753, ರಾಣಿಬೆನ್ನೂರು ತಾಲೂಕಿನಲ್ಲಿ 61,253, ಶಿಗ್ಗಾವಿ ತಾಲೂಕಿನಲ್ಲಿ 40,869, ಬ್ಯಾಡಗಿ ತಾಲೂಕಿನಲ್ಲಿ 34,222, ಸವಣೂರು ತಾಲೂಕಿನಲ್ಲಿ 30,707 ಜಾನುವಾರುಗಳಿವೆ. ಜೂನ್‌ 29ವರೆಗೂ ಅಧಿಕಾರಿಗಳು ಜಿಲ್ಲೆಯಲ್ಲಿ 202432 ಮೆಟ್ರಿಕ್‌ ಟನ್‌ ಮೇವು ದಾಸ್ತಾನು ಇದೆ ಎಂದು ವರದಿ ನೀಡುತ್ತಲೇ ಬಂದು ಈಗ ಏಕಾಏಕಿ ಮೇವು ಬ್ಯಾಂಕ್‌ ತೆರೆದಿದ್ದಾರೆ. ಅಧಿಕಾರಿಗಳ ನಡೆ ಬಗ್ಗೆ ಸಂಶಯ ಮೂಡಿಸಿದೆ.

Advertisement

ಪಶು ಇಲಾಖೆ ಮಳೆಗಾಲದಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿದ್ದು,ಅದು ಯಾರಿಗೆ ಉಪಯೋಗವಾಗುತ್ತದೆ ಎಂಬುದೇ ಯಕ್ಷಪ್ರಶ್ನೆ. ಯಾರೂ ಮೇವು ಖರೀದಿಸದಿದ್ದರೆ ಸರ್ಕಾರದ ಹಣ ಅಕ್ಷರಶಃ ಪೋಲಾಗುವುದಂತೂ ಸತ್ಯ.

ಈಗೇಕೆ ಮೇವು ಬ್ಯಾಂಕ್‌: ಅಧಿಕಾರಿಗಳು ಮಳೆ ಬಿದ್ದ ಬಳಿಕ ಈಗ ಮೇವು ಬ್ಯಾಂಕ್‌ ತೆರೆಯಲು ಕಾರಣ ನ್ಯಾಯಾಲಯದ ಆಜ್ಞೆ ಎನ್ನಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ ಮೇವಿನ ಕೊರತೆ ಇದ್ದರೂ ಅಧಿಕಾರಿಗಳು ಜಾನುವಾರುಗಳಿಗಾಗಿ ಮೇವು ಬ್ಯಾಂಕ್‌ ತೆರೆದಿಲ್ಲ. ಹೀಗಾಗಿ ಜಾನುವಾರುಗಳು ಸಮರ್ಪಕ ಮೇವಿಲ್ಲದೇ ಸಾಯುತ್ತಿವೆ ಎಂದು ನಾಗರಿಕರೋರ್ವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆಗ ಅಧಿಕಾರಿಗಳು ‘ಮೇವಿನ ಕೊರತೆ ಇಲ್ಲ. ಹಾಗಾಗಿ ಮೇವು ಬ್ಯಾಂಕ್‌ ಸ್ಥಾಪಿಸಿಲ್ಲ? ಎಂದು ವರದಿ ಸಲ್ಲಿಸಿದ್ದರು. ಈ ವರದಿಯ ವಿಶ್ವಾಸಾರ್ಹತೆಯನ್ನು ನ್ಯಾಯಾಲಯ ಮರು ಪ್ರಶ್ನಿಸಿದಾಗ, ಪಶು ಇಲಾಖೆ ಆಯುಕ್ತರು ಎಲ್ಲ ಬರಪೀಡಿತ ತಾಲೂಕುಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲು ಸೂಚಿಸಿದರು. ಈ ಸೂಚನೆಯಂತೆ ಈಗ ಅಧಿಕಾರಿಗಳು ಮಳೆಗಾಲದಲ್ಲಿ ಮೇವು ಬ್ಯಾಂಕ್‌ ಆರಂಭಿಸಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳ ವಲಯದಿಂದಲೇ ಗೊತ್ತಾಗಿದೆ.
ಹಾವೇರಿ ಜಿಲ್ಲೆ ಬರಪೀಡಿತವಾಗಿದ್ದರೂ ಜಿಲ್ಲೆಯಲ್ಲಿ ಮೇವು ಕೊರತೆ ಕಂಡು ಬಂದಿಲ್ಲ. ಹೀಗಾಗಿ ಮೇವು ಬ್ಯಾಂಕ್‌ ತೆರೆದಿರಲಿಲ್ಲ. ಇಲಾಖೆ ಆಯುಕ್ತರು, ಬರಪೀಡಿತ ಎಲ್ಲ ತಾಲೂಕುಗಳಲ್ಲಿ ಈಗ ಕಡ್ಡಾಯವಾಗಿ ಮೇವು ಬ್ಯಾಂಕ್‌ ತೆರೆಯಲು ಸೂಚಿಸಿದ್ದರಿಂದ ಈಗ ಮೇವು ಬ್ಯಾಂಕ್‌ ತೆರೆದಿದ್ದು ಅಗತ್ಯವಿದ್ದವರು ಇದರ ಪ್ರಯೋಜನ ಪಡೆಯಬಹುದು.•ಡಾ|ಪಾಲೇಕರ, ಪಶು ಇಲಾಖೆ ಅಧಿಕಾರಿ.

ಮೇವು ಬ್ಯಾಂಕ್‌ನಲ್ಲಿ ದಿನವೊಂದಕ್ಕೆ ಒಂದು ಜಾನುವಾರುವಿಗೆ 5 ಕೆ.ಜಿ ಯಂತೆ ಒಂದು ವಾರಗಳ ಕಾಲ ಮೇವು ನೀಡಲಾಗುವುದು. ಖಾಲಿಯಾದ ನಂತರ ಮತ್ತೆ ಪಡೆಯಬಹುದು. ಒಂದು ಕೆ.ಜಿ ಮೇವಿಗೆ 2ರೂ. ದರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೇವು ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತದೆ. ರೈತ ಬಾಂಧವರು ಸದರಿ ಮೇವಿನ ಲಭ್ಯತೆಯನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕು.•ಪಿ.ಎನ್‌. ಹುಬ್ಬಳ್ಳಿ, ಸಹಾಯಕ ನಿರ್ದೇಶಕರು, ಪಶು ಇಲಾಖೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next