Advertisement

ಜಿಪಂ-ತಾಪಂ ಚುನಾವಣೆ ನಡೆಸಲು ಭಯ ಏಕೆ?: ಪ್ರಿಯಾಂಕ್‌ ಖರ್ಗೆ 

12:41 PM Dec 08, 2021 | Team Udayavani |

ಕಲಬುರಗಿ: ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಮತದಾನ ಹಕ್ಕು ಜಾರಿಗೆ ತಂದಿದ್ದೇ ಕಾಂಗ್ರೆಸ್‌ ಪಕ್ಷವಾಗಿದೆ ಯಲ್ಲದೇ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಆರ್ಥಿಕ ಸಬಲತೆ ಕಲ್ಪಿಸಿದ್ದೇ ಕಾಂಗ್ರೆಸ್‌ವಾಗಿದ್ದು, ಆದರೆ ಬಿಜೆಪಿ ಸರ್ಕಾರ ಅ ಧಿಕಾರಕ್ಕೆ ಬಂದ ಮೇಲೆ ಪಂಚಾಯತ ರಾಜ್‌ ವ್ಯವಸ್ಥೆಯನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್‌ ವಾಗ್ಧಾಳಿ ನಡೆಸಿದೆ. ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸದೆ ಮುಂದೂಡುವ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸರ್ಕಾರವೇ ಖುದ್ದು ತೊಡರುಗಾಲು ಹಾಕುತ್ತಿದೆ ಎಂದು ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾಗಿರುವ ಪ್ರಿಯಾಂಕ್‌ ಖರ್ಗೆ ಮಂಗಳವಾರ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಕಾಂಗ್ರೆಸ್‌ ಅಧಿ ಕಾರದಲ್ಲಿ ಇದ್ದಾಗ ರಾಜ್ಯ ವಾಣಿಜ್ಯ ಆಯೋಗದ ಶಿಫಾರಸ್ಸು ಸೇರಿಸಿ ಶೇ. 25 ಅನ್‌ಟೈಡ್‌ ಫಂಡ್‌ ನ್ನು ನಿಗದಿ ಪಡಿಸಲಾಗಿತ್ತು. ಇನ್ನೂ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟತೆ ತಲೆ ಎತ್ತಬಾರದು ಹಾಗೂ ಉತ್ತಮ ಆಡಳಿತ ಒದಗಿಸುವ ಉದ್ದೇಶದಿಂದ ಗ್ರಾಮಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವ ಧಿಯನ್ನು ಮೂವತ್ತು ತಿಂಗಳಿಗೆ ನಿಗದಿ ಮಾಡಲಾಗಿತ್ತು. ಜೊತೆಗೆ ಸದಸ್ಯರ ಭ್ರಷ್ಟಾಚಾರದಲ್ಲಿ ತೊಡಗಿದ್ದು ದಾಖಲೆ ಸಮೇತ ಸಾಬೀತಾದರೆ ಅವರ ಸದಸ್ಯತ್ವ ರದ್ದು ಮಾಡಲು ಅವಕಾಶ ಇತ್ತು. ಆದರೆ ಬಿಜೆಪಿ ಸರ್ಕಾರ ಪಂಚಾಯತ ರಾಜ್‌ ವಿಧೇಯಕ ಪಾಸ್‌ ಮಾಡುವ ಮೂಲಕ ಈ ಹಿಂದಿನ ಕಾಯಿದೆ ಜಾರಿಗೊಳಿಸಲು ಬಿಲ್‌ ಪಾಸ್‌ ಮಾಡಿದೆ ಎಂದು ವಿವರಿಸಿದರು.

ಜಿಪಂ ಚುನಾವಣೆಗೆ ಹಿಂದೇಟು

ಸಂವಿಧಾನದಲ್ಲಿ ಹೇಳಿದಂತೆ ಆರ್ಟಿಕಲ್‌ 243 (ಇ) ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು ಆದರೆ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಜೊತೆಗೆ ಮೀಸಲಾತಿ ಪ್ರಕಟವಾದ ಮೇಲೆ ಕ್ಷೇತ್ರಗಳಿಗ ಪುನರ್‌ ವಿಗಡಣೆಗಾಗಿ ಆಯೋಗವನ್ನು ಸ್ಥಾಪಿಸಲಾಗಿದೆ. ಚುನಾವಣೆ ಸರ್ಕಾರ ನಡೆಸಲು ಹಿಂದೇಟು ಹಾಕುತ್ತಿದೆ. ಕೊರೋನಾ ಸಂದರ್ಭಲ್ಲಿ ಪ.ಬಂಗಾಳ, ಮಧ್ಯ ಪ್ರದೇಶದಲ್ಲಿ ಚುನಾವಣೆ ನಡೆಸಲಾಗಿದೆಯಲ್ಲದೇ ಈಗಲೂ ಇಲ್ಲಿಯೂ ಚುನಾವಣೆ ನಡೆಯುತ್ತಿದೆ ಆದರೆ ತಾಪಂ, ಜಿಪಂ ಚುನಾವಣೆ ನಡೆಸಲು ಭಯ ಯಾಕೆ? ಎಂದು ಪ್ರಶ್ನಿಸಿದ ಶಾಸಕ ಪ್ರಿಯಾಂಕ್‌, ಈ ಹಿಂದೆ ಚುನಾವಣೆ ನಡೆದಾಗೆಲ್ಲ ಬಿಜೆಪಿಗೆ ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲುವು ಸಿಕಿಲ್ಲ. ಈಗಲೂ ಅದೇ ಸ್ಥಿತಿ ಇರುವುದರಿಂದ ಚುನಾವಣೆ ನಡೆಸುತ್ತಿಲ್ಲ ಎಂದು ಟೀಕಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಕ್ರಿಯಾ ಯೋಜನೆ ಮಾಡಲು ಅನುದಾನವಿಲ್ಲ. 15ನೇ ಹಣಕಾಸು ಆಯೋಗದ ಲಾಭ ಮೋದಿಯವರಿಗೆ ಹೋಗುತ್ತಿದೆ. ಕೇಂದ್ರದ ಯೋಜನೆಗಳಿಗೆ ಗ್ರಾಮಪಂಚಾಯಿತಿ ಹಣ ಬಳಸಲಾಗುತ್ತಿದೆ. ಜಲ ಜೀವನ ಮಿಷನ್‌ ಸೇರಿದಂತೆ (ಶೇ. 25) ಬಹುತೇಕ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಗ್ರಾಮಪಂಚಾಯತ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಗ್ರಾಪಂಗಳಿಗೆ ಅನುದಾನವೇ ನೀಡುತ್ತಿಲ್ಲ. ಹೀಗಾಗಿ ನೌಕರರ ಸಂಬಳಕ್ಕೆ ಸಂಚಕಾರ ಬಿದ್ದಿದೆ. ಈ ಹಿಂದೆ ಪ್ರತಿ ಗ್ರಾಮಪಂಚಾಯಿತಿಗಳಿಗೆ 2 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಇದೂವರೆಗೆ ಆ ಅನುದಾನ ಬಿಡುಗಡೆ ಮಾಡಿಲ್ಲ. ಇಷೆಲ್ಲ ಮಾಡಿದ ಮೇಲೆ ಸ್ವರಾಜ್‌ ಹೆಸರಲ್ಲಿ ಬಿಜೆಪಿ ಕಾರ್ಯಕ್ರಮ ನಡೆಸಿದೆ ಎಂದು ವ್ಯಂಗ್ಯವಾಡಿದರು. 1.11ಲಕ್ಷ ಕೋಟಿ ರೂ. ಅನುದಾನವನ್ನು ನರೇಗಾ ಯೋಜನೆ ಗಳಿಗೆ ಮೀಸಲಿಡಲಾಗಿತ್ತು. ಆದರೆ ಈ ಸಲ ಕೇವಲ 73 ಸಾವಿರ ಕೋಟಿ ರೂ. ಗೆ ಮಾತ್ರ ಮೀಸಲಿಡಲಾಗಿದೆ. ವಸತಿ ಯೋಜನೆಗಳಿಗೆ ಹೊಸ ಮನೆಗಳು ಮಂಜೂರಾಗಿಲ್ಲ. ಈ ಹಿಂದೆ ನಾವು ಅಧಿ ಕಾರದಲ್ಲಿರುವಾಗ ಮಂಜೂರು ಮಾಡಿದ ಯೋಜನೆಗಳಿಗೆ ಈ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement

ಬಿಜೆಪಿಯವರಿಗೆ ಚುನಾವಣೆ ಇದ್ದಾಗ ಮಾತ್ರ ಇಂತವೆಲ್ಲ ನೆನಪಿಗೆ ಬರ್ತಿವೆ. ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡದ ಸರ್ಕಾರ ಈ ಭಾಗದ ಅಭಿವೃದ್ಧಿ ಹೇಗೆ ತಾನೆ ಮಾಡುತ್ತದೆ. ಝೆಂಡಾ ಹಾರಿಸಲು ಮಾತ್ರ ಮಂತ್ರಿ ಎನ್ನುವಂತಾಗಿದೆ. ಈ ಭಾಗಕ್ಕೆ ಮಂತ್ರಿ ಇಲ್ಲದಿರುವುದರ ಜತೆಗೆ ಉಸ್ತುವಾರಿ ಸಚಿವರೂ ಇಲ್ಲದೇ ಇರುವುದರಿಂದ ಅಭಿವೃದ್ಧಿ ಬಗೆಗಿನ ಕಾಳಜಿ ನಿರೂಪಿಸುತ್ತದೆ ಎಂದರು. ಬಿಟ್‌ ಕಾಯಿನ್‌ ಪ್ರಮುಖ ಸ್ಕಾÂಮ್‌ನ ಪ್ರಮುಖ ಆರೋಪಿ ಶ್ರೀಕಿ ಎಲ್ಲಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ಈಚೆಗೆ ಗೃಹ ಸಚಿವರೇ ಪೊಲೀಸ್‌ ವ್ಯವಸ್ಥೆ ಬಗ್ಗೆ ನಿಜವಾಗಿ ಹೇಳಿದ್ದಾರೆ. ಒಟ್ಟಾರೆ ಬಿಟ್‌ ಕ್ವಾಯಿನ್‌ ಸಂಬಂಧವಾಗಿ ಹತ್ತನೆ ತಾರೀಖೀನ ನಂತರ ಮಾಧ್ಯಮದ ಮುಂದೆ ಬರುತ್ತೇನೆ ಅದು ಭಾಗ ಮೂರು ಆಗಲಿದೆ ಎಂದು ಪ್ರಕಟಿಸಿದರು. ಕೊರೊನಾ ಮುಂದಿನ ಅಲೆಗೆ ಸಿದ್ದತೆಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಚಿವರಾದ ಸುಧಾಕರ್‌ ಅವರಿಗೆ ಪತ್ರ ಬರೆದು ಜೀನೋಂ ಸಿಕ್ವೆನ್ಸಿಂಗ್‌ ಲ್ಯಾಬ್‌ ಸ್ಥಾಪನೆಗೆ ಒತ್ತಾಯಿಸಿದ್ದೇನೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಕ್ಸಿಜನ್‌ ಸಮರ್ಪಕವಾಗಿ ಸರಬರಾಜು ಮಾಡಿಲ್ಲ. ಯಾವುದೇ ಸಮರ್ಪಕ ತಯಾರಿ ಮಾಡಲು ವಿಫಲವಾಗಿರುವ ಸರ್ಕಾರ ಯುದ್ಧಕಾಲೇ ಶಸ್ತ್ರಭ್ಯಾಸ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂಟು ಶಾಸಕರು ಟೀಕಿಸಿದರು.

ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಸಂಸದ ಡಾ| ಉಮೇಶ ಜಾಧವ ಅವರೊಬ್ಬ ಸಮಯ ಸಾಧಕ. ಟಿಕೇಟ್‌ ನೀಡಿ ಪ್ರಚಾರ ಮಾಡಿ ಗೆಲ್ಲಿಸಿದ ನಾಯಕರಾದ ಖರ್ಗೆ ಹಾಗೂ ಧರ್ಮಸಿಂಗ್‌ ಸಾಹೇಬರ ಬೆನ್ನಿಗೆ ಚೂರಿ ಹಾಕಿರುವ ಅವರಿಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯ ಅಭ್ಯರ್ಥಿ ಶಿವಾನಂದ ಪಾಟೀಲ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ ನೇಲೋಗಿ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ನೀಲಕಂಠರಾವ್‌ ಮೂಲಗೆ, ಮಾಜಿ ಮೇಯರ್‌ ಶರಣು ಮೋದಿ, ಈರಣ್ಣ ಝಳಕಿ, ಶಿವಾನಂದ ಹೊನಗುಂಟಿ ಮುಂತಾದವರಿದ್ದರು.

ಸ್ಥಳೀಯ ಶಾಸಕರ ಮೇಲೆ ವಿಶ್ವಾಸವಿಲ್ಲ

ಬಿ.ಜಿ ಪಾಟೀಲ ಅವರಿಗೆ ಸ್ಥಳೀಯ ಶಾಸಕರ ಸಹಕಾರವಿಲ್ಲ, ಜತೆಗೆ ವಿಶ್ವಾಸವಿಲ್ಲ. ಹೀಗಾಗಿ ಹುಬ್ಬಳ್ಳಿ ಮೂಲದ ಖಾಸಗಿ ಸಾರಿಗೆ ಸಂಸ್ಥೆಯ ನೌಕರರನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಕುರಿತು ಜಿಲ್ಲಾ ಧಿಕಾರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ತಿಳಿಸಿದರು. ನೋಟ್‌ ದೋ ಓಟ್‌ ಲೋ ಎನ್ನವ ಉಕ್ತಿಯನ್ನು ಪಾಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಅವರು ತಮ್ಮ ಅನುದಾನವನ್ನು ಹೇಗೆ ಎಲ್ಲಿ ಬಳಸಿಕೊಂಡಿದ್ದಾರೆ? ಎಷ್ಟು ಗ್ರಾಮಪಂಚಾಯತಿಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ತಿಳಿಸಲಿ. ಸ್ಥಳೀಯ ಸಂಸ್ಥೆಯ ಬಲವರ್ಧನೆಗೆ ಶಿವಾನಂದ ಪಾಟೀಲ ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಪ್ರಿಯಾಂಕ್‌ ಖರ್ಗೆ ಅವರು ಬಿ.ಜಿ ಪಾಟೀಲ ಅವರನ್ನು ಬಿಜಿನೆಸ್‌ ಬಿಜಿನೆಸ್‌ ಮ್ಯಾನ್‌ ಎಂದಿದ್ದೇವೆ ಹೊರತು ಅವರು ಭ್ರಷ್ಟರು ಎಂಬುದಾಗಿ ಹೇಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next