Advertisement

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

12:49 AM Sep 19, 2020 | mahesh |

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಕೃಷಿ ಸಂಬಂಧಿ ಮೂರು ವಿಧೇಯಕಗಳ ವಿರುದ್ಧ ಹಲವು ರಾಜ್ಯಗಳಲ್ಲಿ ರೈತರು ಸಿಡಿದೆದ್ದಿರುವ ಬೆನ್ನಲ್ಲೇ, ವಿವಾದಿತ ಮಸೂದೆಗಳ ವಿಚಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ನಡುವೆಯೇ ಒಡಕು ಮೂಡಿವೆ.

Advertisement

ಈ ವಿಧೇಯಕಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿ ಕೇಂದ್ರ ಸಂಪುಟಕ್ಕೆ ಎನ್‌ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಾಯಕಿ ಹರ್‌ಸಿಮ್ರತ್‌ ಕೌರ್‌ ಬಾದಲ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಹರ್ಯಾಣದಲ್ಲಿನ ಬಿಜೆಪಿ ಸರಕಾರವೂ ಅಲುಗಾಡತೊಡಗಿದೆ. ಇಲ್ಲಿ ಬಿಜೆಪಿ ಜತೆ ಅಧಿಕಾರ ಹಂಚಿಕೊಂಡಿರುವ ಜನನಾಯಕ ಜನತಾ ಪಾರ್ಟಿ(ಜೆಜೆಪಿ) ನಾಯಕ ದುಶ್ಯಂತ್‌ ಸಿಂಗ್‌ ಚೌಟಾಲ ಕೂಡ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ರನ್ನು ಭೇಟಿಯಾಗಿರುವ ಚೌಟಾಲ, ಹಲವು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಕೌರ್‌ ರಾಜೀನಾಮೆ ಬೆನ್ನಲ್ಲೇ ಚೌಟಾಲರನ್ನು ಕುಟುಕಿದ್ದ ಕಾಂಗ್ರೆಸ್‌, “ಚೌಟಾಲ ಅವರೇ, ನೀವು ಕನಿಷ್ಠಪಕ್ಷ ನಿಮ್ಮ ಡಿಸಿಎಂ ಹುದ್ದೆ ಗಾದರೂ ರಾಜೀನಾಮೆ ನೀಡಬಹುದಿತ್ತು. ಆದರೆ, ನಿಮಗೆ ರೈತರಿ ಗಿಂತಲೂ ಕುರ್ಚಿಯೇ ಮುಖ್ಯವಲ್ಲವೇ’ ಎಂದಿತ್ತು. ಪಂಜಾಬ್‌ನಲ್ಲಿ ಅಕಾಲಿ ದಳವು ಗ್ರಾಮೀಣ ಭಾಗದಲ್ಲಿ ಎಷ್ಟು ಪ್ರಬಲವಾಗಿದೆಯೋ, ಹರ್ಯಾಣದಲ್ಲಿ ಜೆಜೆಪಿ ಕೂಡ ಅಷ್ಟೇ ಪ್ರಬಲವಾಗಿದೆ. ಅಲ್ಲದೆ, ಹರ್ಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೇರುವಲ್ಲಿ ಪಂಜಾಬ್‌ನ ಬಾದಲ್‌ ಕುಟುಂಬದ ಪಾತ್ರವೂ ಇತ್ತು. ಪಂಜಾಬ್‌ ಮತ್ತು ಹರ್ಯಾಣದಲ್ಲಿ ವಿಧೇಯಕಗಳ ವಿರುದ್ಧ ರೈತರು ಹೊರಹಾಕುತ್ತಿರುವ ಆಕ್ರೋಶವು ಬಾದಲ್‌ ಮತ್ತು ಚೌಟಾಲರನ್ನು ಅಡಕತ್ತರಿಗೆ ಸಿಲುಕಿಸಿದೆ.

ಕಾಂಗ್ರೆಸ್‌ ಕಿಡಿ: “ರೈತರನ್ನು ಕೊಲ್ಲಿ, ಪಂಜಾಬನ್ನೂ ನಾಶಮಾಡಿ’ ಎಂಬ ಸಂಚಿನ ಭಾಗವಾಗಿ ಕೇಂದ್ರ ಸರಕಾರವು ಕೃಷಿ ಸಂಬಂಧಿ ವಿಧೇಯಕ ಗಳನ್ನು ದೇಶದ ಮೇಲೆ ಹೊರಿಸುತ್ತಿದೆ. ಆಹಾರ ವಸ್ತುಗಳ ವಿಚಾರದಲ್ಲಿ ಭಾರತ ವನ್ನು ಸ್ವಾವಲಂಬಿಯಾಗಿಸಲು 65 ವರ್ಷಗಳಿಂದಲೂ ಪಂಜಾಬ್‌ನ ರೈತರು ಕೊಡುಗೆ ನೀಡುತ್ತಿದ್ದಾರೆ. ಇದನ್ನು ಕೇಂದ್ರ ಸರಕಾರ ಮನ ಗಾಣ ಬೇಕು ಎಂದು ಪಂಜಾಬ್‌ ಸಿಎಂ ಕ್ಯಾ.ಅಮರೀಂದರ್‌ ಸಿಂಗ್‌ ಆಗ್ರಹಿ ಸಿ ದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ, ರಾಜ್ಯಸಭೆ ಯಲ್ಲಿ ವಿಧೇಯಕ ಅಂಗೀಕಾರವಾಗುವ ವಿಶ್ವಾಸವಿದೆ ಎಂದು ಬಿಜೆಪಿ ಹೇಳಿದೆ.

ಪ್ರತಿದಿನ ಆ್ಯಂಟಿಜೆನ್‌ ಪರೀಕ್ಷೆ ಕಡ್ಡಾಯ: ಸಂಸತ್‌ ಅಧಿವೇಶನ ಆರಂಭವಾದಾಗಿನಿಂದಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಂಸತ್‌ ಭವನ ಪ್ರವೇಶಿಸುವ ಸಂಸದರು, ವರದಿಗಾರರು ಮತ್ತು ಸಿಬ್ಬಂದಿ ಪ್ರತಿದಿನ ಕಡ್ಡಾಯವಾಗಿ ಆ್ಯಂಟಿಜೆನ್‌ ಪರೀಕ್ಷೆ ಮಾಡಿಸಿಕೊಳ್ಳ ಬೇಕು ಎಂಬ ಹೊಸ ಆದೇಶ ಹೊರಡಿಸಲಾಗಿದೆ. ಇದೇ ವೇಳೆ, ಸದನಗಳಲ್ಲಿ ತುರ್ತು ವಿಚಾರಗಳಿದ್ದಾಗ ಸದಸ್ಯರು ಚೀಟಿಗಳನ್ನು ರವಾನಿಸಿದರೆ ಸಾಕು. ಒಬ್ಬರ ಆಸನದತ್ತ ಇನ್ನೊಬ್ಬರು ತೆರಳುವುದು ಬೇಡ ಎಂದು ಸದಸ್ಯರಿಗೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಸೂಚಿಸಿದ್ದಾರೆ.

Advertisement

ಪಂಜಾಬ್‌ನಲ್ಲೇಕೆ ವಿರೋಧ?
ಪಂಜಾಬ್‌ವೊಂದರಲ್ಲೇ 12 ಲಕ್ಷದಷ್ಟು ರೈತ ಕುಟುಂಬಗಳಿವೆ, 28 ಸಾವಿರದಷ್ಟು ಕಮಿಷನ್‌ ಏಜೆಂಟ್‌ಗಳಿದ್ದಾರೆ. ಹೊಸ ವಿಧೇಯಕ ಜಾರಿಗೆ ಬಂದರೆ ತಮ್ಮ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಸಿಗುವುದಿಲ್ಲ ಎನ್ನುವುದು ರೈತರ ಆತಂಕವಾದರೆ, ಕಮಿಷನ್‌ನಿಂದ ವಂಚಿತರಾಗುತ್ತೇವೆ ಎನ್ನುವುದು ಏಜೆಂಟ್‌ಗಳ ಕಳವಳವಾಗಿದೆ. ಬೆಂಬಲ ಬೆಲೆ ಸಿಕ್ಕೇ ಸಿಗುತ್ತದೆ ಎಂದು ಕೇಂದ್ರ ಸರಕಾರ ಭರವಸೆ ನೀಡಿದೆಯಾದರೂ, ಅದನ್ನು ಒಪ್ಪಲು ಯಾರೂ ತಯಾರಿಲ್ಲ. ಇದೇ ವೇಳೆ, ಪಂಜಾಬ್‌ನ ಆರ್ಥಿಕತೆಯ ಬಹುಭಾಗವು ಭಾರತೀಯ ಆಹಾರ ನಿಗಮದಂತಹ ಕೇಂದ್ರ ಖರೀದಿ ಸಂಸ್ಥೆಗಳ ನಿಧಿಯನ್ನು ಆಧರಿಸಿದೆ. ಪಂಜಾಬ್‌ನಲ್ಲಿ ಬೆಳೆಯುವ ಅಕ್ಕಿ ಮತ್ತು ಗೋದಿಯಲ್ಲಿ ಸಿಂಹಪಾಲನ್ನು ಆಹಾರ ನಿಗಮವೇ ಖರೀದಿಸುತ್ತದೆ. ಹೊಸ ವಿಧೇಯಕ ಜಾರಿಗೆ ಬಂದರೆ, ಭಾರತೀಯ ಆಹಾರ ನಿಗಮವು ರಾಜ್ಯ ಮಂಡಿಯಿಂದ ಕೃಷಿಯುತ್ಪನ್ನಗಳ ಖರೀದಿಯನ್ನು ನಿಲ್ಲಿಸುತ್ತದೆ. ಇದರಿಂದ ಮಧ್ಯವರ್ತಿಗಳು ಕಮಿಷನ್‌ನಿಂದ ವಂಚಿತರಾಗುವುದು ಮಾತ್ರವಲ್ಲದೇ, ಖರೀದಿ ಏಜೆನ್ಸಿಯಿಂದ ರಾಜ್ಯ ಸರಕಾರವು ಪಡೆಯುತ್ತಿದ್ದ ಶೇ.6 ಕಮಿಷನ್‌ ಕೂಡ ಸಿಗದಂತಾಗುತ್ತದೆ ಎನ್ನುವುದು ವಿಧೇಯಕ ವಿರೋಧಿಸುತ್ತಿರುವವರ ವಾದ.

24ರಿಂದ 3 ದಿನ ರೈಲ್‌ ರೋಕೋ
ಕೃಷಿ ಸಂಬಂಧಿ ವಿಧೇಯಕಗಳನ್ನು ಖಂಡಿಸಿ ಸೆ.24ರಿಂದ 3 ದಿನಗಳ ಕಾಲ ರೈಲ್‌ ರೋಕೋ ನಡೆಸುವುದಾಗಿ ಪಂಜಾಬ್‌ನ ರೈತ ಸಂಘಟನೆಗಳು ಘೋಷಿಸಿವೆ. ಇನ್ನೂ ಕೆಲವು ರೈತ ಸಂಘಟನೆಗಳು ಸೆ.25ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿವೆ.

ವಿಧೇಯಕ ಅಂಗೀಕಾರ
ಸಂಸದರ ಒಂದು ವರ್ಷದ ವೇತನದಲ್ಲಿ ಶೇ.30 ಕಡಿತಗೊಳಿಸುವ ವಿಧೇಯಕ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಜತೆಗೆ, ಹೋಮಿಯೋಪಥಿ ಕೇಂದ್ರ ಮಂಡಳಿ(ತಿದ್ದುಪಡಿ) ವಿಧೇಯಕ ಮತ್ತು ಇಂಡಿಯನ್‌ ಮೆಡಿಸಿನ್‌ ಸೆಂಟ್ರಲ್‌ ಕೌನ್ಸಿಲ್‌ ವಿಧೇಯಕಗಳಿಗೂ ರಾಜ್ಯಸಭೆ ಯಲ್ಲಿ ಒಪ್ಪಿಗೆಯ ಮುದ್ರೆ ಸಿಕ್ಕಿದೆ. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ಗಾಂಧಿ ಕುಟುಂಬದ ವಿರುದ್ಧ ಅಸಾಂವಿಧಾನಿಕ ಪದ ಬಳಸಿದ್ದು ಲೋಕಸಭೆಯಲ್ಲಿ ಶುಕ್ರವಾರ ಭಾರೀ ಗದ್ದಲಕ್ಕೆ ಕಾರಣವಾಯಿತು. 4 ಬಾರಿ ಕಲಾಪವನ್ನು ಮುಂದೂಡಬೇಕಾಯಿತು.

ರೈತರ ಸಬಲೀಕರಣಕ್ಕಾಗಿ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ, ಈಗ ಕೃಷಿ ಕ್ಷೇತ್ರ ಸುಧಾರಣೆ ಗಾಗಿ ಈ ಐತಿಹಾಸಿಕ ವಿಧೇಯಕ ಗಳನ್ನು ಅಂಗೀಕರಿಸಿದೆ. ಇದು ರೈತರನ್ನು ಮಧ್ಯವರ್ತಿಗಳ ಕಾಟದಿಂದ ರಕ್ಷಿಸಿ, ಅವರ ಎಲ್ಲ ಕಷ್ಟ ಕಾರ್ಪಣ್ಯಗಳನ್ನೂ ದೂರ ಮಾಡಲಿದೆ.
ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ 3 ಕೃಷಿ ಸಂಬಂಧಿ ವಿಧೇಯಕಗಳು ಲೋಪದಿಂದ ಕೂಡಿವೆ. ಇವು ಜಾರಿಯಾದರೆ, ಮಂಡಿ ವ್ಯವಸ್ಥೆ ಪತನಗೊಂಡು, ಕಾಳಸಂತೆಯ ಪರ್ವ ಆರಂಭವಾಗಲಿದೆ. ಇದು ಕೇವಲ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಮಸೂದೆ.
ಗೋವಿಂದ ಸಿಂಗ್‌ ದೊತಾಸ್ರಾ, ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ

ಕೃಷಿ ಸುಧಾರಣೆಯ ಉದ್ದೇಶ ಹೊಂದಿರುವ ಈ ವಿಧೇಯಕಗಳು ರೈತರನ್ನು ಮಧ್ಯವರ್ತಿಗಳಿಂದ ರಕ್ಷಿಸುತ್ತವೆ ಮತ್ತು ಅವರಿಗೆ ನೇರವಾಗಿ ಮಾರುಕಟ್ಟೆಯೊಂದಿಗೆ ಸಂಪರ್ಕ ಹೊಂದಲು ನೆರವಾಗುತ್ತದೆ.
ತ್ರಿವೇಂದ್ರ ಸಿಂಗ್‌ ರಾವತ್‌, ಉತ್ತರಾಖಂಡ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next