Advertisement

ಪರೀಕ್ಷೇ ಕಾಲೆ ವಿಪರೀತ ಟೆನ್ಷನ್‌ ಏಕೆ?

11:13 AM Feb 19, 2020 | mahesh |

ನಾಳೆಯೇ ಪರೀಕ್ಷೆ. ಹೀಗಂತ ನೆನಪು ಬಂದಾಕ್ಷಣ ಮನಸ್ಸು ಬೆಚ್ಚಿ ಬೀಳುತ್ತದೆ. ಉಸಿರು ಸ್ವಲ್ಪ ಬಿಸಿಯಾಗುತ್ತದೆ. ಕೆಲವರಿಗೆ ಇದೇ ಭಯವಾಗಿ, ಓದಿದ್ದೆಲ್ಲ ಮರೆತು ಹೋಗುತ್ತದೆ. ನಿಜ ಹೇಳಬೇಕೆಂದರೆ, ಪರೀಕ್ಷೆಗೂ ಮುಂಚಿನ 24 ಗಂಟೆಯ ಅವಧಿಯಲ್ಲಿ ನಾವು ಹೇಗೆ ಇರುತ್ತೇವೆ ಎನ್ನುವುದೂಕೂಡ ಪರೀಕ್ಷೆಯ ಫ‌ಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

Advertisement

ಇದು ಪರೀಕ್ಷಾ ಕಾಲ. ತಿಂಗಳಾನುಗಟ್ಟಲೆ ಪ್ಲಾನ್‌ ಮಾಡಿ ಓದುವುದು ಸುಲಭ. ಆದರೆ, ನಾಳೆ ಪರೀಕ್ಷೆ ಇದೆ ಅಂದಾಗ ಆ 24 ಗಂಟೆ ಏನು ಮಾಡಬೇಕು? ಈ ವಿಚಾರವಾಗಿ ತಯಾರಿ, ಸಿದ್ಧತೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ. ಉತ್ತಮ ಫ‌ಲಿತಾಂಶ, ಪರೀಕ್ಷೆಗೂ ಮುಂಚಿನ 24 ಗಂಟೆಗಳಲ್ಲಿ ವಿದ್ಯಾರ್ಥಿಗಳು ಏನು ಮಾಡುತ್ತಾರೆ, ಯಾವ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಅವಲಂಭಿಸಿದೆ. ಹೆಚ್ಚಿನ ವಿದ್ಯಾರ್ಥಿಗಳು, ಹಿಂದಿನ ದಿನ ಇಡೀ ರಾತ್ರಿ ನಿದ್ದೆಗೆಟ್ಟು ಓದುವ ಹವ್ಯಾಸವನ್ನು ಹೊಂದಿರುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಇದು ಫ‌ಲವನ್ನು ನೀಡಬಹುದು. ಆದರೆ, ಹೆಚ್ಚಿನವರಿಗೆ ಇದು ಉಪಯುಕ್ತವಾಗಲಾರದು. ಪರೀಕ್ಷೆಯ ಹಿಂದಿನ ರಾತ್ರಿ ಬಹು ಹೊತ್ತಿನವರೆಗೆ ಎದ್ದಿದ್ದರೆ ದೈಹಿಕ, ಮಾನಸಿಕ ಆಯಾಸಗಳುಂಟಾಗುತ್ತವೆ. ನಮ್ಮ ಮೆದುಳಿಗೆ ನಿರಂತರವಾಗಿ ಕೆಲಸ ಮಾಡುವ ಶಕ್ತಿ, ಸಾಮರ್ಥ್ಯಗಳಿದ್ದಾಗ್ಯೂ, ಪರೀಕ್ಷಾ ಒತ್ತಡ, ಆತಂಕ ಇದ್ದೇ ಇರುತ್ತದೆ. ಈ ಸಮಯದಲ್ಲಿ ಮನಸ್ಸಿಗೆ ವಿಶ್ರಾಂತಿ ನೀಡದಿದ್ದಲ್ಲಿ ದೇಹ ಸಹಜವಾಗಿ ಬಳಲುತ್ತದೆ.

ಈ ಹೊತ್ತಲ್ಲಿ ಹೊಸ ವಿಷಯಗಳನ್ನು ಕಲಿಯಲು, ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದು ಪರಿಣಾಮಕಾರಿಯಾಗದು. ಸಾಮಾನ್ಯವಾಗಿ ವರ್ಷ ಪೂರ್ತಿ ಅಧ್ಯಯನ ಮಾಡಿ, ನೆನಪಿನ ಕೋಶದಲ್ಲಿ ಶೇಖರಿಸಿಟ್ಟುಕೊಂಡ ವಿಷಯಗಳನ್ನು ಪರೀಕ್ಷೆಯ ಹಿಂದಿನ ದಿನ ಮೆಲುಕು ಹಾಕುವುದೇ ಒಳಿತು.ಕೊನೆಯ ಕ್ಷಣದಲ್ಲಿ ಜಿದ್ದಿಗೆ ಬಿದ್ದು ಹೊಸ ವಿಷಯಗಳನ್ನು ಕಲಿತು, ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದಕ್ಕಿಂತ, ಕಲಿತ ವಿಷಯಗಳ ಪುನರಾವರ್ತನೆ ಒಳಿತು.

ನಿದ್ರಾ ಸಮಯ ಬದಲು ಬೇಡ
ಪರೀಕ್ಷೆಯ ಹಿಂದಿನ ದಿನ ಕೆಲವರು ರಾತ್ರಿ 8 ಗಂಟೆಗೆ ಮಲಗಿ, ಮಧ್ಯ ರಾತ್ರಿ 2 ಗಂಟೆಗೆ ಎದ್ದು, ಬೆಳಗ್ಗೆಯವರೆಗೆ ಓದಿ, ಮತ್ತೆ ಬೆಳಗ್ಗೆ ಮಲಗಿ, ನಂತರ ಎದ್ದು, ಪರೀಕ್ಷೆಗೆ ಹಾಜರಾಗುತ್ತಾರೆ. ಈ ರೀತಿ ನಿದ್ದೆಯ ಕ್ರಮವನ್ನು ಬದಲಾಯಿಸುವುದು ಒಳಿತಲ್ಲ. ನಿದ್ದೆಯ ಕ್ರಮವನ್ನು ತಪ್ಪಿಸುವುದರಿಂದ, ಪರೀಕ್ಷಾ ದಿನ ಫ್ರೆಷ್‌ ಆಗಿ ಇರಲಾಗದು. ಈ ಕಾರಣ, ವಿದ್ಯಾರ್ಥಿಗಳು ತಮ್ಮ ದೈನಂದಿನ ನಿದ್ದೆಯ ಕ್ರಮದಂತೆಯೇ ನಿಗದಿತ ಸಮಯಕ್ಕೆ ಮಲಗುವುದು ಒಳ್ಳೆಯದು. ಮುಂಜಾನೆ ಬೇಗ ಎದ್ದು ಮತ್ತೂಮ್ಮೆ ವಿಷಯಗಳನ್ನು ಪುನರಾವರ್ತನೆ ಮಾಡಬಹುದು. ಕನಿಷ್ಠ 6 ರಿಂದ 7 ಗಂಟೆಗಳ ನಿದ್ದೆಯು ದೇಹ ಮನಸ್ಸುಗಳು ತಾಜಾ ಆಗಿರಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ತೋರಲು ಸಹಾಯಕ. ರಾತ್ರಿ ಬಹು ಹೊತ್ತಿನವರೆಗೆ ಓದಿ, ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಏಳಲು ಸಾಧ್ಯವಾಗದಿದ್ದಲ್ಲಿ ಪರೀಕ್ಷೆಗೆ ತ್ವರಿತವಾಗಿ ಸಿದ್ಧಗೊಳ್ಳುವ ಆತಂಕವುಂಟಾಗುತ್ತದೆ.

ಕಿರು ಟಿಪ್ಪಣಿ ಮಾಡಿ
ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷೆಯ ದಿನದಂದು ಮುಂಜಾನೆ ಕಲಿತ ವಿಷಯಗಳ ಪುನರಾವರ್ತನೆಗೆ ಮುಂಚಿನಿಂದಲೇ ಅಧ್ಯಾಯವಾರು ಕಿರು ಟಿಪ್ಪಣಿ, ಮುಖ್ಯಾಂಶಗಳನ್ನು ಒಂದೆಡೆ ಬರೆದಿಟ್ಟುಕೊಂಡು, ಆಗಾಗ್ಗೆ ಅದರ ಮೂಲಕ ಇಡೀ ಅಧ್ಯಾಯವನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದರ ಜೊತೆಗೆ ಗಣಿತದ ಸೂತ್ರಗಳು, ನಕ್ಷೆಗಳು, ಪ್ರಯೋಗದ ಚಿತ್ರಗಳು, ಕಾನ್ಸೆಪ್ಟ್ ಮ್ಯಾಪ್‌/ಮೈಂಡ್‌ ಮ್ಯಾಪ್‌ ಇತ್ಯಾದಿಗಳನ್ನೂ ಸಹ ಒಂದೆಡೆ ಬರೆದಿಟ್ಟುಕೊಂಡು ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷಾ ದಿನ ಮೆಲುಕು ಹಾಕಬಹುದು.

Advertisement

ಪರೀಕ್ಷೆಯ ಹಿಂದಿನ ದಿನ ಸಹಜವಾಗಿ ಆತಂಕ, ಒತ್ತಡಗಳು ಎಲ್ಲಾ ವಿದ್ಯಾರ್ಥಿಗಳಿಗಿರುತ್ತವೆ. ಒಂದಷ್ಟು ಮಟ್ಟಿನ ಒತ್ತಡವು ನಮ್ಮನ್ನು ಚುರುಕು ಮಾಡುವ ಮೂಲಕ ಹೆಚ್ಚಿನ ಸಾಧನೆಗೆ ಕಾರಣವಾಗುತ್ತದೆ. ಆದರೆ, ಅತಿಯಾದ ಆತಂಕ, ಒತ್ತಡ, ಭಯಗಳು ನಮ್ಮ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಆಳವಾದ ಉಸಿರಾಟ, ಒಂದು ಚಿಕ್ಕ ವ್ಯಾಯಾಮ ಮಾಡುವುದು, ಇತರರನ್ನು ನೋಡಿ ಮುಗುಳ್ನಗುವುದು ಒತ್ತಡವನ್ನು ಕಡಿಮೆಗೊಳಿಸಿ, ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡುತ್ತವೆ. ಒಂದೆರೆಡು ನಿಮಿಷ ಕನ್ನಡಿಯಲ್ಲಿ ನಮ್ಮದೇ ಪ್ರತಿಬಿಂಬವನ್ನು ನೋಡುತ್ತಾ, ಮುಗುಳ್ನಗು ಬೀರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಬಲ್ಲದು.

ಊಟ ಹೀಗಿರಲಿ
ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷೆಯ ದಿನ ಲಘು ಆಹಾರ ಸೇವನೆ ಒಳ್ಳೆಯದು. ಎಣ್ಣೆಯಿಂದ ಕರಿದ, ಹೆಚ್ಚು ಖಾರ ಮತ್ತು ಸಾಂಬಾರಯುಕ್ತ ತಿನಿಸುಗಳ ಸೇವನೆಯನ್ನು ತಪ್ಪಿಸಬೇಕು. ಪರೀಕ್ಷೆಗಾಗಿ ಓದಲು ಕೆಲವರು ಅತಿ ಹೆಚ್ಚು ಚಹಾ ಸೇವನೆಗೆ ಮೊರೆ ಹೋಗುತ್ತಾರೆ. ಇದು ಆರೋಗ್ಯಕ್ಕೆ ಒಳಿತಲ್ಲ. ಆಗಾಗ್ಗೆ ನೀರನ್ನು ಕುಡಿಯುವುದು ಒಳ್ಳೆಯದು. ಪರೀಕ್ಷೆಯ ಕೊಠಡಿಗೆ ಹೋಗುವ ಮುಂಚೆ ನೀರು ಕುಡಿಯುವುದನ್ನು ಕಡಿಮೆ ಮಾಡಿದಲ್ಲಿ ಮಧ್ಯೆ, ಮಧ್ಯೆ ಜಲಭಾದೆಗೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.

ಪರೀಕ್ಷೆಯ ಹಿಂದಿನ ದಿನವೇ ಪರೀಕ್ಷಾ ಪ್ರವೇಶ ಪತ್ರ, ಪೆನ್‌ಗಳು, ಪೆನ್ಸಿಲ್‌ಗ‌ಳು, ಜ್ಯಾಮಿತಿ ಬಾಕ್ಸ್‌ ಇತ್ಯಾದಿ ಎಲ್ಲವನ್ನೂ ಒಂದೆಡೆ ಇಟ್ಟುಕೊಂಡು, ಮರೆಯದೇ ಕೊಂಡೊಯ್ಯಬೇಕು. ಪರೀಕ್ಷೆಗೆ ಮೊಬೈಲ್‌ ಅನ್ನು ಬಿಟ್ಟು ಹೋಗುವುದು ಒಳ್ಳೆಯದು. ಪರೀಕ್ಷೆಯ ದಿನ ಮುಂಜಾನೆ ಬೇಗ ಸಿದ್ದಗೊಂಡು, ಪರೀಕ್ಷೆ ಇರುವ ಸ್ಥಳಕ್ಕೆ ಹೋಗಬೇಕು. ಪರೀಕ್ಷಾ ಕೇಂದ್ರದಲ್ಲಿ ಹಂಚಿಕೆಯಾಗಿರುವ ಕೊಠಡಿಯನ್ನು ಗುರುತಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದನ್ನೂ ಸಹ ಪರಿಗಣಿಸಿ, ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪಬೇಕು.

ಪರೀಕ್ಷಾ ಹಾಲ್‌ನಲ್ಲಿ
ಪರೀಕ್ಷೆ ಬರೆಯಲು ಕುಳಿತ ಸಂದರ್ಭದಲ್ಲಿ ಮೈ ಮನಸ್ಸುಗಳನ್ನು ಸಡಿಲಿಸಿ, ಲಯಬದ್ದ, ಆಳ ಉಸಿರಾಟಗಳಿಂದ ಮೈಮನಸ್ಸುಗಳನ್ನು ಹಗುರಾಗಿಸಬೇಕು. ಉಸಿರನ್ನು ಮೂಗಿನಲ್ಲಿ ನಿಧಾನವಾಗಿ ತೆಗೆದುಕೊಂಡು ಬಾಯಿಯ ಮೂಲಕ ಬಿಡುತ್ತಾ ಹೊಟ್ಟೆಯ ಭಾಗ ಹಿಂದಕ್ಕೆ ಸರಿಯುವುದನ್ನು ಗಮನಿಸಬೇಕು. ಹೀಗೆ ಸ್ವಲ್ಪ ಕಾಲ ಮಾಡುವುದರಿಂದ ಆತಂಕ ಕಡಿಮೆಯಾಗಿ, ಆರಾಮವೆನಿಸುತ್ತದೆ. ಇ ಇಡೀ ಪ್ರಶ್ನೆಪತ್ರಿಕೆಯನ್ನು ಸಾವಧಾನವಾಗಿ ಓದಿ, ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸುತ್ತಾ ಹೋಗಬೇಕು. ಗೊತ್ತಿಲ್ಲದ ಪ್ರಶ್ನೆಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡುವ ಬದಲು ಗೊತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಆಮೇಲೆ ಆಲೋಚಿಸಲು ಸಮಯ ನೀಡಬಹುದು. ಕೆಲವೊಮ್ಮೆ ಗಾಬರಿಯಿಂದಾಗಿ ಯಾವ ಪ್ರಶ್ನೆಗೂ ಉತ್ತರವೇ ಗೊತ್ತಿಲ್ಲವೆಂಬಂತೆ ಗಲಿಬಿಲಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ದೃತಿಗೆಡದೆ ನಿಧಾನವಾಗಿ ಸಾವರಿಸಿಕೊಂಡು, ಒಂದೆರೆಡು ಪ್ರಶ್ನೆಗಳಿಗೆ ಆತಂಕವಿಲ್ಲದೆ ಉತ್ತರ ಬರೆಯಲು ತೊಡಗಿದರೆ, ಬರವಣೆಗೆ ಸರಾಗವಾಗಿ ಆಗುತ್ತದೆ ಹಾಗೂ ಹೆಚ್ಚಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ. ಒಂದು ವಿಚಾರ. ನಿಮ್ಮೆಲ್ಲ ತಯಾರಿ, ಸಿದ್ಧತೆಗಳನ್ನು ಮಾಡಿಯೂ ಪರೀಕ್ಷೆಯಲ್ಲಿ ಉತ್ತಮವಾದ ನಿರ್ವಹಣೆ ತೋರಲು ಸಾಧ್ಯವಾಗದಿದ್ದಲ್ಲಿ ಪ್ರಪಂಚವೇನೂ ಮುಳುಗದು. ಪರೀಕ್ಷೆ ಬರೆಯುತ್ತಿರುವವರಲ್ಲಿ ನೀವು ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಲಕ್ಷಾಂತರ, ಕೋಟ್ಯಂತರ ವಿದ್ಯಾರ್ಥಿಗಳು ಇಂತಹ ಸಾವಿರಾರು ಪರೀಕ್ಷೆಗಳನ್ನು ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆಲೋಚಿಸುತ್ತಾ ಮನಸ್ಥಿತಿಯನ್ನು ಲಘುವಾಗಿಸಿಕೊಂಡು, ಮನದಲ್ಲಿ ಉತ್ತಮ ಸಾಧನೆ ಮಾಡುವ ಆತ್ಮವಿಶ್ವಾಸ, ದೃಢಸಂಕಲ್ಪಗಳಿಂದ ಪರೀಕ್ಷೆ ಬರೆಯಲು ಸಿದ್ಧಗೊಂಡಲ್ಲಿ ಯಶಸ್ಸು ಶತಸಿದ್ಧ.

ಡಾ.ಎಚ್‌.ಬಿ.ಚಂದ್ರಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next