Advertisement

ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಏಕೆ?

11:33 PM Mar 10, 2021 | Team Udayavani |

ಮಹಿಳೆ, ಹೆಣ್ಣು, ಸ್ತ್ರೀ.. ಈ ಪದಗಳ ಅರ್ಥ ಬಹಳ ವಿಶಾಲವಾದದ್ದು ಮಾತ್ರವಲ್ಲದೆ ಅಷ್ಟೇ ಅಪ್ಯಾಯ ಮಾನವಾದದ್ದು. ಹೆಣ್ಣು ಒಂದು ಪೂರ್ಣ ವೃತ್ತವಿದ್ದಂತೆ. ಆ ಪೂರ್ಣ ವೃತ್ತದೊಳಗೆ ಏನೆಲ್ಲ ಇರಬೇಕು ಅವೆಲ್ಲ ಅಂತರ್ಗತವಾಗಿರುತ್ತದೆ. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಈ ಮಾತಿನಲ್ಲಿ ಹೆಣ್ಣು ಎಂಬ ಪದಕ್ಕೆ ವಿಶಾಲವಾದ ವ್ಯಾಖ್ಯಾನ ಸಿಗುತ್ತದೆ. ಹೆಣ್ಣು ಎಲ್ಲವನ್ನು ಸಮದೂಗಿಸುವ ಜಾಣೆ, ತ್ಯಾಗಮಯಿ.

Advertisement

ಅಪ್ಪ ಅಂದರೆ ಆಕಾಶ ಏನೋ ನಿಜ, ಆದರೆ ಅಮ್ಮ ಅಂದರೆ ಈ ಭೂಮಿ. ಇವಳಲ್ಲಿ ಸ್ವೀಕಾರವೂ ಇದೆ, ಸವಾಲೂ ಇದೆ. ಇಷ್ಟೆಲ್ಲ ಇದ್ದರೂ ಹೆಣ್ಣು ಅಸಹಾಯಕಿ, ಅಶಕ್ತೆ ಎಂದು ಬಿಂಬಿಸುವ ಎಷ್ಟೋ ಘಟನೆಗಳು ಇಂದಿಗೂ ನಡೆಯುತ್ತಿವೆ. ಎಷ್ಟೇ ಕ್ರಿಯಾಶೀಲೆಯಾಗಿರೂ ಎಲ್ಲ ಕ್ಷೇತ್ರಗಳಲ್ಲೂ ತನ್ನ ಬಾಹುಗಳನ್ನು ಚಾಚಿದ್ದರೂ ಸಶಕ್ತೀಕರಣ ಅನ್ನುವುದು ಮಹಿಳೆಯರ ಮಟ್ಟಿಗೆ ಆಧುನಿಕ ಜಗತ್ತಿನ ಅತೀ ಆವಶ್ಯಕತೆಗಳಲ್ಲಿ ಒಂದು. ಒಂದಲ್ಲ ಒಂದು ಕಾರಣ ಗಳಿಂದ ಒಳಗೊಳಗೆ ಬೆಂದು ಬಸವಳಿಯುವ ಕಣ್ಣು ಈ ಹೆಣ್ಣು ಎಂದರೆ ತಪ್ಪಾಗಲಾರದು. ಯಂಡಮೂರಿ ವೀರೇಂದ್ರನಾಥ್‌ ಹೇಳಿದಂತೆ ಬದುಕಿನಲ್ಲಿ ಎದುರಾಗುವ ಹೊಸ ಅನುಭವಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಟುಸತ್ಯವನ್ನು ಜೀರ್ಣಿಸಿಕೊಳ್ಳುತ್ತ ಮುಂದೆ ಸಾಗುವ ವ್ಯಕ್ತಿತ್ವವೇ ಮಾನಸಿಕ ಬೆಳವಣಿಗೆ ಅಥವಾ ಮನೋವಿಕಾಸ. ಪ್ರತೀ ಮಹಿಳೆಯಲ್ಲೂ ಈ ರೀತಿಯ ಮಾನಸಿಕ ಬೆಳವಣಿಗೆಯಾದಲ್ಲಿ ಮಹಿಳೆಯ ಸಶಕ್ತೀಕರಣ ಸಾಧ್ಯ. ಮಹಿಳೆ ತನ್ನನ್ನು ತಾನು ಶಕ್ತಿ ಎಂದು ಒಪ್ಪಿಕೊಳ್ಳುವುದು, ತನ್ನ ಸಂಪನ್ಮೂಲಗಳ ಮೇಲೆ ನಿಯಂತ್ರಣ, ಆತ್ಮವಿಶ್ವಾಸ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ದಿಟ್ಟತನದಿಂದ ಬಂದು ದೆಲ್ಲವನ್ನು ಎದುರಿಸುವುದು.. ಇವೆಲ್ಲವೂ ಮಹಿಳಾ ಸಶಕ್ತೀಕರಣದ ಪ್ರಮುಖ ಅಂಶಗಳು.

ಮಹಿಳೆ ಮನೆಗಷ್ಟೇ ಸೀಮಿತವಲ್ಲ, ಮನೆಯಿಂದಾಚೆ ಸಪ್ತಸಾಗರದಾಚೆಗೆ ದಾಟಿ, ಬಾಹ್ಯಾಕಾಶದಲ್ಲಿ ಕೂಡ ಪಯಣಿಸಿ, ಇಂದಿನ ಆಧುನಿಕ ಯುಗದ ಮಹಿಳೆ ಯರ ಸ್ಥಾನಮಾನಗಳನ್ನು ಹೆಚ್ಚಿಸಿದ್ದಾರೆ. ಗುರುತರ ಜವಾಬ್ದಾರಿ ನಿಭಾಯಿಸಿ, ಪುರುಷ ಸಮಾನವಾದ ಕರ್ತವ್ಯ ಬದ್ಧತೆ ಮೆರೆದಿದ್ದಾರೆ.

ಭಾರತೀಯ ಸಂವಿಧಾನವು ಅನುಚ್ಛೇದ 14 ಮತ್ತು 39ರ ಅಡಿಯಲ್ಲಿ ಮಹಿಳೆಯರಿಗೆ ಲಿಂಗ ತಾರತಮ್ಯ ರಹಿತ ಸಮಾನ ಅವಕಾಶ ಕಲ್ಪಿಸಿದೆ. ನಗರ ಪ್ರದೇಶಗಳಿಂದ ಹಿಡಿದು ಹಳ್ಳಿಹಳ್ಳಿಗಳಲ್ಲೂ ಹುಟ್ಟಿಕೊಂಡ ಸ್ತ್ರೀಶಕ್ತಿ ಸಂಘಗಳು ಮಹಿಳೆಯರು ಹೊರ ಪ್ರಪಂಚದ ಜ್ಞಾನವನ್ನು ಪಡೆದು ಸ್ವಾವಲಂಬಿಗಳಾಗಲು ನೆರವಾಗಿದೆ. ಸ್ವಯಂ ವಿಶ್ವಾಸ, ಧೈರ್ಯ, ಸ್ವಾವ ಲಂಬನೆಯ ಬದುಕಿಗೆ ಹೆಣ್ಣನ್ನು ತೆರೆದಿಟ್ಟಿದೆ. ಆಧುನಿಕ ಜಗದಲ್ಲಿ ಪ್ರತೀ ಮನೆಯ ಹೆಣ್ಣು ಸಂಸಾರದ ನೊಗ ಹೊತ್ತು ಮನೆಯ ಒಳಗೂ ಹೊರಗೂ ದುಡಿದು ಸಶಕ್ತೆ ಅನ್ನಿಸಿಕೊಂಡಿದ್ದಾಳೆ. ಸಂಸಾರದಲ್ಲಿ ಇದ್ದುಕೊಂಡು ಔದ್ಯೋಗಿಕ ಕ್ಷೇತ್ರದಲ್ಲಿ ಸಫ‌ಲತೆ ಪಡೆಯಲು ಸುಲಭ ಸಾಧ್ಯವಿಲ್ಲ. ಆದರೆ ಹೆಣ್ಣು ಈ ದಿಕ್ಕಿನಲ್ಲೂ ಮುಂದುವರಿದು ಸರ್ವಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಸಮಾನತೆ ಮೆರೆದಿದ್ದಾಳೆ. ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಕಾಡುವುದಾದರೂ ಏಕೆ?. ಯಾವಾಗ ಹೆಣ್ಣು ಸ್ವತಃ ತನ್ನಲ್ಲಿ ತಾನು ವಿಶ್ವಾಸವನ್ನು ಇರಿಸಿ, ಧೈರ್ಯದಿಂದ ಹೆಜ್ಜೆ ಮುಂದಿಡುವ ಸಂಕಲ್ಪ ಮಾಡುವಳ್ಳೋ, ಆವಾಗ ಹೆಣ್ಣಿನ ಸಶಕ್ತೀಕರಣ ಸಾಧ್ಯ. ಆತ್ಮವಿಶ್ವಾಸ, ಎಲ್ಲವನ್ನೂ ಸಾಧಿಸಬಲ್ಲೆ ಎನ್ನುವ ಭರವಸೆಯ ತುಡಿತ, ಹಿಡಿದ ಛಲ ಬಿಡದೆ ಮುನ್ನುಗ್ಗುವಿಕೆ, ಪೊಳ್ಳು ಅಪವಾದಗಳಿಗೆ ತಲೆಬಾಗದೆ ಸ್ವಂತಿಕೆ ಬೆರೆತ ಜೀವನೋತ್ಸಾಹ, ಅಪರಿಮಿತ ಧೈರ್ಯ ಜತೆಗೂಡಿದಾಗ ಹೆಣ್ಣು ಸಶಕ್ತೆಯಾಗಬಲ್ಲಳು.
- ಮಂಜುಳಾ ಪ್ರಸಾದ್‌, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next