Advertisement

ಚಿತ್ರನಾಯಕನಹಳ್ಳಿ ದೇವರ ಎತ್ತುಗಳ ರಕ್ಷಣೆಗೇಕೆ ನಿರ್ಲಕ್ಷ್ಯ?

01:35 PM Apr 29, 2019 | Naveen |

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮವೂ ಆಂಧ್ರ ಪ್ರದೇಶದ ಗಡಿಭಾಗಕ್ಕೆ ಕೇವಲ 10 ಕಿ.ಮೀ ದೂರದಲ್ಲಿದ್ದು, ಕಳೆದ ಕೆಲವು ವರ್ಷಗಳಿಂದ ಮಳೆ ಇಲ್ಲದೆ ಇಲ್ಲಿನ ರೈತ ಸಮುದಾಯ ಬರಕ್ಕೆ ತುತ್ತಾಗಿದ್ದರಿಂದ ದೇವರ ಎತ್ತುಗಳಿಗೆ ಮೇವು ಇಲ್ಲದೆ ಬಳಲುತ್ತಿವೆ.

Advertisement

ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಹೆಸರಿನಲ್ಲಿ ಬಿಟ್ಟಿರುವ 40 ಎತ್ತುಗಳಿಗೆ ಈಗ ನೀರು ಹಾಗೂ ಮೇವಿನ ಅಭಾವ ಉಂಟಾಗಿದೆ. ದೇವರ ಎಲ್ಲಾ ಎತ್ತುಗಳು ಎರಡು ಹೊತ್ತು ಮೇವು ಸಿಗದೆ ನಿತ್ರಾಣಗೊಂಡಿದ್ದು, ಸಾಯುವ ಸ್ಥಿತಿ ತಲುಪಿವೆ.

ದೇವರ ಎತ್ತುಗಳಿಗೆ ಮೇವು, ನೀರು ಕೊರತೆ ಕುರಿತು ಮಾತನಾಡಿದ ಈ ಭಾಗದ ರೈತ, ಕೃಷಿ ಸಲಹೆಗಾರ ಪಾಂಡುರಂಗಪ್ಪ, ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ದೇವರ ಎತ್ತುಗಳನ್ನು ಸಂರಕ್ಷಿಸಲು ಆಗುತ್ತಿಲ್ಲ. ಕಾರಣ ಈ ಎತ್ತುಗಳಿಗೆ ಮೇವು ಪೂರೈಸುವಂತೆ ಗ್ರಾಮದ ಹಲವಾರು ರೈತರು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಜಿಲ್ಲಾಡಳಿತ ಈ ಮೂಕ ಪ್ರಾಣಿಗಳ ಸಂರಕ್ಷಣೆಗೆ ಧಾವಿಸುತ್ತದೆಯೇ ಎಂಬ ಕಾತುರದಿಂದ ಎಲ್ಲ ರೈತರು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮದ ಕಾಡುಗೊಲ್ಲ ಸಮುದಾಯದವರು ತಮ್ಮ ಪದ್ಧತಿಯಂತೆ ಗ್ರಾಮದ ಕಾಡುಗೊಲ್ಲ ಸಮುದಾಯದ ದೇವರಾದ ಜುಂಜಪ್ಪ ದೇವರ ಹೆಸರಿನಲ್ಲಿ 40 ಜಾನುವಾರುಗಳು ಅಲ್ಲಿಯೇ ಇರುವ ರೊಪ್ಪದಲ್ಲಿ ವಾಸಿಸುತ್ತಿದ್ದು, ಪ್ರತಿನಿತ್ಯ ಇವುಗಳಿಗೆ ಮೇವು ಪೂರೈಸುವುದೇ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.

ದೇವಸ್ಥಾನದ ಪೂಜಾರಿ ಈರಣ್ಣ ಈ ಬಗ್ಗೆ ಮಾಹಿತಿ ನೀಡಿ, ಕಾಡುಗೊಲ್ಲ ಸಮುದಾಯದ ಮುಖಂಡರೊಬ್ಬರು ದೇವರಿಗೆ ಹರಿಕೆಯ ರೀತಿಯಲ್ಲಿ ಕಳೆದ 15 ವರ್ಷಗಳ ಹಿಂದೆ ಎರಡು ಹಸುಗಳನ್ನು ನೀಡಿದ್ದು, ಅವುಗಳು ವಂಶಾಭಿವೃದ್ಧಿಯಾಗಿ ಈಗ 40ಕ್ಕೆ ತಲುಪಿವೆ. ಸುತ್ತಮುತ್ತಲ ಯಾವ ಗ್ರಾಮದಲ್ಲೂ ಸಹ ಈ ದೇವರ ಎತ್ತುಗಳಿಗೆ ಮೇವು ಸಿಗುತ್ತಿಲ್ಲ. ದಾನ ನೀಡಿದವರೂ ಸಹ ಮೇವು ಪೂರೈಸಲು ಅವರಿಗೂ ಸಹ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

Advertisement

40 ಜಾನುವಾರುಗಳನ್ನು ರಕ್ಷಿಸಲು ಕಾಡುಗೊಲ್ಲ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೇವು ಒದಗಿಸುವಂತೆ ಮನವಿ ಮಾಡಿದ್ದೇವು. ಆದರೆ, ಇದುವರೆಗೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ದೇವರ ಎತ್ತುಗಳ ಸಂರಕ್ಷಿಸುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ.

ಈಚೆಗೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬೋಸೇದೇವರಹಟ್ಟಿ, ಕುರುಡಿಹಳ್ಳಿ ಲಂಬಾಣಿಹಟ್ಟಿಯಲ್ಲಿನ ದೇವರ ಎತ್ತುಗಳಿಗೆ ಬೆಂಗಳೂರಿನ ಇನ್ಫೋಸಿಸ್‌ ಫೌಂಡೇಷನ್‌, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಮೂಲಕ ಮೇವು ಪೂರೈಸಿದ್ದು, ನಮ್ಮ ದೇವರ ಎತ್ತುಗಳಿಗೂ ಸಹ ಸ್ವಾಮೀಜಿ ಇನ್ಫೋಸಿಸ್‌ ಫೌಂಡೇಷನ್‌ ಮೂಲಕ ಉಚಿತವಾಗಿ ಮೇವು ಸರಬರಾಜು ಮಾಡಿ ಜಾನುವಾರುಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

ಈ ಭಾಗದಲ್ಲಿ ಉತ್ತಮ ಮಳೆಯಾಗದ ಕಾರಣ ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರವೇ ನಮಗೆ ಉಚಿತವಾಗಿ ಮೇವು ವಿತರಿಸಬೇಕು. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಾಮರ್ಶಿಸಿ ಉಚಿತ ಮೇವನ್ನು ಸರಬರಾಜು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭೌಗೋಳಿಕವಾಗಿ ಚಳ್ಳಕೆರೆ ತಾಲೂಕು ಹೆಚ್ಚು ವಿಸ್ತರಣೆ ಹೊಂದಿದ್ದು, ವಿಶಾಲವಾದ ಅರಣ್ಯ ಪ್ರದೇಶವಿದ್ದರೂ ಸಹ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಮಳೆ ವೈಫಲ್ಯದ ಜೊತೆಗೆ ಸಾವಿರಾರು ಎಕರೆ ಭೂಮಿಯನ್ನು ಸಹ ಸರ್ಕಾರ ಪ್ರತಿಷ್ಠಿತ ಸಂಸ್ಥೆಗಳಿಗೆ ದೇಶದ ಹಿತರಕ್ಷಣೆ ದೃಷ್ಠಿಯಿಂದ ನೀಡಿದ್ದು, ಎಲ್ಲಿಯೂ ಮೇವು ಸಿಗುತ್ತಿಲ್ಲ. ಈ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯ ನಂಬಿಕೆ ಮತ್ತು ವಿಶ್ವಾಸದಿಂದ ಈ ದೇವರ ಎತ್ತುಗಳ ಮೇಲೆ ಅಪಾರವಾದ ಭಕ್ತಿ-ಶ್ರದ್ಧೆಯಿಂದ ಅವುಗಳನ್ನು ಕಾಯುತ್ತಿದ್ದಾರೆ. ನಿತ್ಯವೂ ಅವುಗಳಿಗೆ ಮೇವು, ನೀರು ಒದಗಿಸುವುದು ಸವಾಲಿನ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ತುರ್ತು ಗಮನ ಹರಿಸಬೇಕು.
ಸಿ.ಪಿ. ಮಹೇಶ್‌ಕುಮಾರ್‌,
ಗೋ ಸಂರಕ್ಷಣಾ ಸಮಿತಿ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next