Advertisement

ಇಂದು ಯಾಕೆ ಮನೆಯಲ್ಲೇ ಇರಬೇಕು?

09:55 AM Mar 28, 2020 | mahesh |

ಕೋವಿಡ್- 19  ಜಗತ್ತಿನಾದ್ಯಂತ ತನ್ನ ವ್ಯಾಘ್ರ ನರ್ತನವನ್ನು ಹೆಚ್ಚಿಸಿದೆ. ಜನತೆಯ ಆತಂಕ ದೂರವಾಗಿಸಲು ಪ್ರಧಾನಿ ಮೋದಿ ಅವರು ಒಂದು ದಿನದ ಜನತಾ ಕರ್ಫ್ಯೂ ಹಾಗೂ ಒಂದು ವಾರದ ಸೋಷಿಯಲ್‌ ಕರ್ಫ್ಯೂ ಆಚರಣೆಗೆ ಕರೆ ನೀಡಿದ್ದಾರೆ. ಇಂದು ದೇಶದಲ್ಲಿ ಜನತಾ ಕರ್ಫ್ಯೂ ಆಚರಣೆಯಲ್ಲಿದೆ. ಇದು ಕೇವಲ ಒಂದು ಅಚರಣೆಯಾಗಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಜಗತ್ತಿನ ವಿವಿಧ ರಾಷ್ಟ್ರಗಳಿಂದ ಕಲಿತ ಪಾಠ ಇದರಲ್ಲಿದೆ.

Advertisement

ಕೋವಿಡ್- 19 ಸೋಂಕು ಇಟಲಿಯವರನ್ನು ತೀವ್ರವಾಗಿ ಕಾಡಿದೆ. ಯಾವತ್ತೂ ನಿರಂತರವಾಗಿ ಕೆಲಸ ಮಾಡದೇ ಇದ್ದ ಚಿತಾಗಾರಗಳಲ್ಲಿ ದಿನದ 24 ಗಂಟೆ ಕಾಲವೂ ಶವ ಸಂಸ್ಕಾರದ ಕೆಲಸಗಳು ನಡೆಯುತ್ತಿವೆ. ಪ್ರಮುಖ ಆಸ್ಪತ್ರೆಗಳ ಶವಾಗಾರದಲ್ಲೆಲ್ಲಾ ಶವಪೆಟ್ಟಿಗೆಗಳು ತುಂಬಿಕೊಂಡಿವೆ. ಸಿಮೆಟ್ರಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಕ್ಯೂಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ನಿಧನ ವಾರ್ತೆಗಳ ಪ್ರಮಾಣ 2-3 ಪುಟ ಇದ್ದದ್ದು 10 ಪುಟಗಳಿಗೆ ವಿಸ್ತರಿಸಿಕೊಂಡಿದೆ ಎನ್ನುತ್ತವೆ ಅಂತಾರಾಷ್ಟ್ರೀಯ ಮಾಧ್ಯಮಗಳು.

ಐಸೋಲೇಷನ್‌ ವಾರ್ಡ್‌ಗಳ ಬಳಿ ಯಾರನ್ನೂ ಸುಳಿಯಲು ಬಿಡುತ್ತಿಲ್ಲ. ಸಂಬಂಧಿಕರು, ಗೊಂದಲ ಆತಂಕದಲ್ಲಿರುವ ದೃಶ್ಯವೂ ಸಾಮಾನ್ಯವಾಗಿದೆ. ಇನ್ನು ಮೃತಪಟ್ಟವರ ಅಂತ್ಯ ಸಂಸ್ಕಾರ ಸ್ಥಳದಲ್ಲಿ ಸಂಬಂಧ ಪಟ್ಟ ಸಿಮೆಟ್ರಿಯ ಕೆಲಸಗಾರ ಮಾತ್ರವೇ ಇರಬೇಕೆಂಬ ಆದೇಶವೂ ಇದೆ. ಇದು ಯುದ್ಧಕ್ಕಿಂತಲೂ ಭೀಕರವಾದ ಸನ್ನಿವೇಶವಾಗಿದೆ ಎಂದು ಚಿತ್ರಿಸಲಾಗುತ್ತಿದೆ. ಇಂದು ಇಟಲಿಯಲ್ಲಿ ಭೀಕರ ಪರಿಸ್ಥಿತಿ ತಲೆದೋರಲು ಅಲ್ಲಿನ ಆರಂಭಿಕ ವೈಫ‌ಲ್ಯಗಳೇ ಕಾರಣ ಎಂದು ಹೇಳಲಾಗುತ್ತದೆ. ಚೀನದಲ್ಲಿ ಸೋಂಕು ವ್ಯಾಪಿಸುತ್ತಿರುವಾಗ ಇಟಲಿ ಮಾತ್ರ ಗಂಭೀರವಾಗಿ ಯೋಚಿಸಲೇ ಇಲ್ಲ. ಜತೆಗೆ ಅಂತಾರಾಷ್ಟ್ರೀಯ ವಿಮಾನಸೇವೆಗಳೂ ಮುಂದುವರಿದಿತ್ತು. ಜಗತ್ತಿನ ವಿವಿಧ ಭಾಗಗಳಲ್ಲಿ ವಾಸಿಸುವ ಇಟಲಿಯನ್ನರು ಸ್ವದೇಶಕ್ಕೆ ಹಿಂದಿರುಗ ತೊಡಗಿದರು. ಇದರಿಂದ ಸೋಂಕು ಸುಲಭವಾಗಿ ಆ ರಾಷ್ಟ್ರಕ್ಕೆ ವ್ಯಾಪಿಸಿತು. ಕಡೆಗೆ ಪರಿಸ್ಥಿತಿ ಕೈಮೀರಿತು.

ಇಂತಹ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಸಲುವಾಗಿ ಭಾರತದಲ್ಲಿ ಜನತಾ ಕರ್ಫ್ಯೂ ಅನ್ನು ಜಾರಿಗೆ ತರಲಾಗಿದೆ. ಹಾಗಾದರೆ ಇದು ದೇಶದಲ್ಲಿನ ಕೋವಿಡ್- 19 ಸೋಂಕಿತರ ಸಂಖ್ಯೆಯನ್ನು ನೇರವಾಗಿ ಶೂನ್ಯಕ್ಕೆ ತರಲು ನೆರವಾಗಬಲ್ಲುದೇ. ಖಂಡಿತ ಇಲ್ಲ. ಬದಲಾಗಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆಯನ್ನು ಇಳಿಸಲು ಮತ್ತು ಶಂಕಿತ ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಇದು ನೆರವಾಗುತ್ತದೆ. ನಾವು ಮನೆಯಲ್ಲೇ ಉಳಿಯುವುದರಿಂದ ನಮ್ಮ ಸುರಕ್ಷೆ ಮತ್ತು ಇತರರ ಸುರಕ್ಷೆಗೆ ಆದ್ಯತೆ ನೀಡಿದಂತಾಗುತ್ತದೆ.

ಈ ಹಿಂದೆ ಚೀನಾದ ವುಹಾನ್‌ ಪ್ರಾಂತ್ಯವನ್ನು ಕೋವಿಡ್- 19 ವೈರಸ್‌ ಕೇಂದ್ರ ಬಿಂದು ಘೋಷಣೆ ಮಾಡಲಾಗಿತ್ತು. ಇದೀಗ 3,000ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದ ಮಾರಕ ವೈರಾಣುವನ್ನು ಹೋಗಲಾಡಿಸುವಲ್ಲಿ ಇದೀಗ ಚೀನ ಯಶಸ್ವಿಯಾಗಿದೆ. ಚೀನ ತೆಗೆದುಕೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಗ್ಗಟ್ಟಿನಿಂದ ಮಾತ್ರ ಇಂತಹ ಬೆಳವಣಿಗೆ ಸಾಧ್ಯ ಎಂದೂ ಬಣ್ಣಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನದ ಕ್ರಮವನ್ನು ಮೆಚ್ಚಿಕೊಂಡಿದ್ದು, ವುಹಾನ್‌ ಇದೀಗ ವೈರಸ್‌ ಮುಕ್ತ ಎಂಬ ಚೀನ ಘೋಷಣೆಯನ್ನು ಸ್ವಾಗತಿಸಿದೆ.

Advertisement

ಮನೆಯಲ್ಲೇ ಇದ್ದುಬಿಡಿ ಅನ್ನೋದು ಯಾಕೆ?
ಕೋವಿಡ್- 19 ವಿವಿಧ ಸ್ಟೇಜ್‌ಗಳಲ್ಲಿ ತನ್ನ ಪ್ರಭಾವವನ್ನು ಹಿಮ್ಮಡಿಗೊಳಿಸುತ್ತಾ ಹೋಗುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡುವ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಒಂದಷ್ಟು ಸಮಯ ನಾವು ಮನೆಯಲ್ಲೇ ಇರುವುದು ಅವಶ್ಯ. ಇದು ಒಂದು ದಿನದ ಕಾರ್ಯವಾಗಿಲ್ಲವಾದರೂ ತಕ್ಕಮಟ್ಟಿಗೆ ನೆರವಾಗುತ್ತದೆ. ಭಾರತ ಈಗ 2ನೇ ಸ್ಟೇಜ್‌ನಲ್ಲಿದ್ದು ಹೆಚ್ಚು ಜನ ಸೇರುವ ವಾರಾಂತ್ಯಗಳ ಬಿಡುವಿನ ಸಂದರ್ಭ ಇದು ಹರಡುವ ಸಾಧ್ಯತೆ ಹೆಚ್ಚು. ಈ ಕಾರಣಗಳಿಗೆ ಒಂದು ದಿನ ಜನತಾ ಕರ್ಫ್ಯೂ ಮತ್ತು ಮಾರ್ಚ್‌ 31ರ ವರೆಗೆ ಸ್ತಬ್ಧವನ್ನು ಹೇರಿಕೊಳ್ಳಲಾಗಿದೆ.

ವೈರಸ್‌ ಯಾವುದೇ ವ್ಯಕ್ತಿಯೊಂದಿಗೆ ಇಪ್ಪತ್ತ ನಾಲ್ಕು ಗಂಟೆಗಳಿಗಿಂತ ಹೆಚ್ಚಿನ ಕಾಲ ಬದುಕಿರುವುದಿಲ್ಲ. ಕಬ್ಬಿಣ ಮುಂತಾದ ತಣ್ಣನೆಯ ಲೋಹದ ಮೇಲೆ ನಲುವತ್ತೆಂಟು ಗಂಟೆ, ಆದರೆ ಲೋಹವಲ್ಲದ, ಇತರ ಮೇಲ್ಮೆ„ಗಳ ಮೇಲೆ ಅದು ಒಂದು ದಿನಕ್ಕಿಂತ ಹೆಚ್ಚು ಕಾಲ ಬದುಕಿ ಉಳಿಯೋದಿಲ್ಲ ಎನ್ನುತ್ತವೆ ವರದಿಗಳು. ಈ ಒಂದು ದಿನ ಕಾಲ, ಕೊರೊನಾ ವೈರಸ್ಸಿನ ಹರಡುವಿಕೆಯನ್ನು ತಡೆದರೆ ಅಷ್ಟರ ಮಟ್ಟಿಗೆ ನಾವು ಸುರಕ್ಷೆಗೆ.ವೈರಸ್‌ ಹರಡದೇ ಇರದಂತೆ ನೋಡಿಕೊಳ್ಳ ಬೇಕಾದರೆ ಜನರ ಓಡಾಟವನ್ನು ಎಲ್ಲಾ ಕಡೆ ನಿಷೇಧಿಸಬೇಕು. ಕೇವಲ ಅವಶ್ಯಕ ಸೇವೆಗಳಿಗಷ್ಟೇ ಅನುಮತಿ ನೀಡಿ ಜನರ ಓಡಾಟವನ್ನು ಕಡಿಮೆ ಮಾಡಬೇಕು. ಹೀಗಾದರೆ ಮಾತ್ರ ವೈರಸ್‌ ಹರಡುವಿಕೆ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ. ಇವೆಲ್ಲದಕ್ಕೆ ಈ ಕ್ರಮದ ಮೊರೆ ಹೋಗಲಾಗಿದೆ.

ಅಷ್ಟಕ್ಕೂ ಚೀನ ಕೈಗೊಂಡ ಕ್ರಮಗಳೇನು?
ಸೋಂಕು ತಗುಲಿದ ರೋಗಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಚಿಕಿತ್ಸೆ ನೀಡುವ ಜತೆಗೆ ಸೋಂಕು ಹರಡಿದ ಪ್ರದೇಶದಿಂದ ಮತ್ತೂಂದು ಭಾಗಕ್ಕೆ ಸೋಂಕು ಹರಡದಂತೆ ಚೀನ ಎಚ್ಚರಿಕೆ ವಹಿಸಿತ್ತು. ವುಹಾನ್‌ ಪ್ರಾಂತ್ಯದಲ್ಲಿ ಸೋಂಕಿತರನ್ನು ಒಂದೆಡೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಸೋಂಕು ತಗುಲುವ ಭೀತಿ ಉಳ್ಳ ಜನರಿಗೆ ಕಡ್ಡಾಯ ಗೃಹ ಬಂಧನ, ಪ್ರತ್ಯೇಕ ಸ್ಥಳಗಳಲ್ಲಿ ದಿಗ್ಬಂಧನ ವಿಧಿಸಲಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸುವವರನ್ನು ತಡೆಯಲು ಅಪಾರ ಪ್ರಮಾಣದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿತ್ತು. ಸೋಂಕಿತರನ್ನು ಪತ್ತೆ ಹಚ್ಚಲು ದೊಡ್ಡ ದೊಡ್ಡ ತಂಡಗಳನ್ನು ರಚನೆ ಮಾಡಿ ದೇಶಾದ್ಯಂತ ಕಾರ್ಯಾಚರಿಸಲಾಗಿತ್ತು.

ವಿಜ್ಞಾನಿಗಳ ತಂಡ ಚೀನಾದ್ಯಂತ ಸಮೀಕ್ಷೆ ನಡೆಸಿತು. ಈ ವೇಳೆ. ಹೊಸ ಕೊರೊನಾ ವೈರಸ್‌ ಪತ್ತೆ ಪ್ರಕರಣಗಳು ಕ್ಷೀಣಿಸಿದ್ದವು. ಲಕ್ಷಾಂತರ ಮಂದಿಯಿರುವ ಸ್ಥಳವನ್ನೇ ದಿಗ್ಬಂಧನಕ್ಕೆ ತಳ್ಳಿತ್ತು. ಹುಬೈ ಪ್ರಾಂತ್ಯವೊಂದರಲ್ಲೇ ಅಂದಾಜು 4-5 ಕೋಟಿ ಜನರನ್ನು ದಿಗ್ಬಂಧನದಲ್ಲಿ ವಿಧಿಸಲಾಗಿದ್ದು, ಯಾರಾದರೂ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಅವರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಪ್ರವಾಸಿಗರಿಗೆ, ಸ್ವದೇಶದ ಪ್ರಜೆಗಳಿಗೆ ಭಾರೀ ಪ್ರಮಾಣದ ತಪಾಸಣೆಗಳನ್ನು ಕೈಗೊಳ್ಳಲಾಗಿದೆ. ಚೀನ ಕೈಗೊಂಡ ಸಮರೋಪಾದಿ ತುರ್ತು ಕ್ರಮಗಳು, ಆ ದೇಶವನ್ನು ಇದೀಗ ವೈರಸ್‌ ಮುಕ್ತ ಮಾಡುವತ್ತ ಸಾಗುವಂತೆ ಮಾಡಿದೆ.

ಇದು ವೈರಲ್‌ ಕೋವಿಡ್- 19
ಕೋವಿಡ್- 19 ಭೀತಿ ಆನ್‌ಲೈನ್‌ ಅಲ್ಲಿ ದೇವರ ದರ್ಶನ ಮಾಡಿಸಿದೆ, ವಿಡಿಯೋ ಕಾಲ್‌ ಮೂಲಕ ಮದುವೆ ಮಾಡಿಸಿದೆ. ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಶುಭಸಮಾರಂಭಗಳಿಂದ ಹಿಡಿದು ಧಾರ್ಮಿಕ ಚಟುವಟಿಕೆ, ಔತಣ ಕೂಟ ಎಲ್ಲವನ್ನು ಮುಂದೂಡುತ್ತಿದ್ದಾರೆ. ಮೊದಲ ಬಾರಿಗೆ ರಾಜಕೀಯ ಅಥವಾ ಮತ್ಯಾವುದೋ ವಿಷಯಕ್ಕೆ ಸಂಬಂಧ ಪಟ್ಟಂತೆ ಬಂದ್‌ಗೆ ಕರೆ ನೀಡಿ ಲಕ್ಷಾಂತರ ರೂ. ವ್ಯರ್ಥ ಮಾಡುತ್ತಿದ್ದವರು, ತಮ್ಮ ಆರೋಗ್ಯಕ್ಕಾಗಿ ಚಾಚು ತಪ್ಪದಂತೆ ಸರಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳ ಮೂಲಕ ಕೋವಿಡ್- 19 ಹರಡುವಿಕೆ ಕುರಿತು ಜಾಗೃತಿ ಫೋಸ್ಟ್‌ಗಳು ವೈರಲ್‌ ಆಗುತ್ತಿದ್ದು, ಜನರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಕೋವಿಡ್- 19 ಗೆದ್ದವರು
ಹೊಸದಿಲ್ಲಿಯ ಒಂದೇ ಕುಟುಂಬದ 7 ಮಂದಿ ಇತ್ತೀಚೆಗೆ ಇಟಲಿ, ಹಂಗರಿ, ಆಮ್‌ಸ್ಟಾರ್‌ಡಾಮ್‌, ಐಸ್‌ಲ್ಯಾಂಡ್‌ ದೇಶಗಳನ್ನು ಸುತ್ತಿಕೊಂಡು ಮಾರ್ಚ್‌ 1ರಂದು ಭಾರತಕ್ಕೆ ಆಗಮಿಸಿದ್ದರು. ಆದರೆ ಅವರೊಂದಿಗೆ ಕೋವಿಡ್- 19ವು ದೇಶಕ್ಕೆ ಬಂದಿಳಿದಿತ್ತು. ಆದರೆ ಆತಂಕಕ್ಕೀಡಗಾದ ಆ ಕುಟುಂಬ ಇಂದು ಕೋವಿಡ್- 19 ವಿರುದ್ಧ ಬಡಿದಾಡಿ, ಸೋಂಕು ಮುಕ್ತವಾಗಿ ಹೊರಗೆ ಬಂದಿದ್ದು, ಸಮಾಜದಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ.

ಸೋಂಕು ತಗುಲಿದ್ದರೂ 14 ದಿನಗಳ ಕಾಲ ಕಟ್ಟುನಿಟ್ಟಾಗಿ ಚಿಕಿತ್ಸೆ ಪಡೆದು ಈಗ ಆರೋಗ್ಯದಿಂದ ಇದ್ದವರ ಕಥೆ ಇದು. ಪಾಸಿಟಿವ್‌ ಎಂದು ವರದಿ ಬಂದರೂ ಸಕಾರಾತ್ಮಕ ಮನಸ್ಸಿನಿಂದ ವಾಸ್ತವವನ್ನು ಅರಿತ ಆ ಕುಟುಂಬ ಧೈರ್ಯಗೆಡದೆ, ಕೆಚ್ಚೆದೆಯಿಂದ ಚಿಕಿತ್ಸೆ ಪಡೆದು ಈಗ ಅದನ್ನು ನೆಗೆಟಿವ್‌ ಮಾಡಿ ಗೆದ್ದು ಬಂದಿದ್ದಾರೆ. ಆಂಟಿ ಬ್ಯಾಕ್ಟಿರಿಯ ಔಷಧ, ಇತರೆ ಔಷಧದ ಜತೆಗೆ ಸ್ವಚ್ಛತೆಗೆ ಇನ್ನಷ್ಟು ಗಮನ ನೀಡಿದ ಆ ಕುಟುಂಬ 14 ದಿನಗಳ ಕಾಲ ಸಂಪೂರ್ಣವಾಗಿ ಪ್ರತ್ಯೇಕವಾಗಿ ಜೀವನ ಮಾಡಿದೇವು. ಇದರ ಜತೆಗೆ ಸಫಾªರ್‌ಜಂಗ್‌ ವೈದ್ಯರು ನಮಗೆ ಸೂಕ್ತ ಮಾರ್ಗದರ್ಶನ, ಚಿಕಿತ್ಸೆ ನೀಡಿದರು. ಸಾಮಾನ್ಯವಾಗಿ ಹಕ್ಕಿಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ನಾವು ಪಡೆದುಕೊಂಡೆವು. ಆರಂಭದ ದಿನಗಳು ನಿಜಕ್ಕೂ ತ್ರಾಸದಾಯಕವಾಗಿತ್ತು. ಆದರೆ ಇದರ ವಿರುದ್ಧ ಹೋರಾಡಲೇಬೇಕೆಂಬ ಛಲ ನಮ್ಮಲ್ಲಿ ಮನೆ ಮಾಡಿತ್ತು.
2 ವಾರಗಳ ಕಾಲ ಅನಂತರ ಕೊರೊನಾ ನಮ್ಮನ್ನು ಬಿಟ್ಟು ದೂರು ಹೋಗಿದೆ. ನಾವೆಲ್ಲರೂ ಈಗ ಆರೋಗ್ಯ ವಾಗಿದ್ದೇವೆ. ನಿಜಕ್ಕೂ ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ಇಂಥ ವಿಷಮ ಪರಿಸ್ಥಿತಿಯಲ್ಲಿ ವ್ಯವಸ್ಥೆಯೊಂದಿಗೆ ನಡೆಯಬೇಕು. ಸರಕಾರ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಕೊರೊನಾ ಭೂತವನ್ನು ನಾವು ಓಡಿಸಬಹುದು ಎಂದು ಹೇಳುತ್ತದೆ ಆ ಕುಟುಂಬ.

ವಿಶ್ವಸಂಸ್ಥೆಯಿಂದ ಮೆಚ್ಚುಗೆ
ಕೋವಿಡ್- 19 ಹರಡದಂತೆ ತಡೆಗಟ್ಟಲು ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಮಾ.22ರಂದು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದು, ಇವರ ಈ ನಿರ್ಣಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಜೈಕಾರ ಹಾಕಿದೆ.

ವೈರಲ್‌ ಆದ ಕೇರ್‌ ಫಾರ್‌ ಯೂ
ಕೋವಿಡ್- 19 ವೈರಸ್‌ ನಿಯಂತ್ರಣ ಹಿನ್ನೆಲೆ ಜನತಾ ಕರ್ಫ್ಯೂ ಘೋಷಣೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಅಗಾಧ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ಜನತಾ ಕರ್ಫ್ಯೂವನ್ನು ಸಾರ್ವಜನಿಕರು ಇದು ಬಂದ್‌ ಅಲ್ಲ ನಮ್ಮೆಡೆಗಿನ ಕಾಳಜಿ (ಇಟ್ಸ್‌ ನಾಟ್‌ ಕರ್ಫ್ಯೂ ಇಟ್ಸ್‌ ಕೇರ್‌ ಫಾರ್‌ ಯೂ) ಎಂದು ಬಿಂಬಿಸುತ್ತಿದ್ದಾರೆ. ಇನ್ನೂ ಸೋಂಕು ನಿಯಂತ್ರಣ ಕುರಿತಾದ ಚಟುವಟಿಕೆಯನ್ನು ಚುರುಕುಗೊಳಿಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ, ಸಾಧ್ಯವಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೇ ಕಾಲ ಕಾಲಕ್ಕೆ ಅರ್ಹ ಮಾರ್ಗಸೂಚಿಗಳನ್ನು ಹೊರಡಿಸಿ ಇದರ ಪಾಲನೆ ಮಾಡುವಂತೆ ಸಾರ್ವಜನಿಕರನ್ನು ಎಚ್ಚರಿಸುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ಅವರ ಘೋಷಣೆಗೆ ಒಕ್ಕೊರಳಿನಿಂದ ಸಮ್ಮತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next