Advertisement

ತಿರುವನಂತಪುರದಲ್ಲಿ ಯಾರ ಪರ ತೀರ್ಪು?

02:45 PM Apr 22, 2019 | Sriram |

ಕೇರಳದಲ್ಲಿ ಈ ಬಾರಿ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಕ್ಷೇತ್ರದಷ್ಟೇ ತಿರುವನಂತಪುರ ಲೋಕಸಭಾ ಕ್ಷೇತ್ರ ಕೂಡ ಮಹತ್ವ ಪಡೆದಿದೆ. ಕ್ಷೇತ್ರದ ಸಂಸದರಾಗಿರುವ ಶಶಿ ತರೂರ್‌ ಹ್ಯಾಟ್ರಿಕ್‌ ಗೆಲುವಿಗೆ ಹವಣಿಸುತ್ತಿದ್ದರೆ, ಈ ಬಾರಿ ಕಮಲ ಅರಳಿಸಲೇಬೇಕೆಂಬ ಪಣ ತೊಟ್ಟು ಬಿಜೆಪಿ ಅಖಾಡಕ್ಕಿಳಿದಿದೆ. ಆಡಳಿತರೂಢ ಎಲ್‌ಡಿಎಫ್ ಸಹ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಬಾರಿ ತಿರುವನಂತಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ.

Advertisement

ಎಲ್ಲಕ್ಕಿಂತ ಮುಖ್ಯವಾಗಿ ಶಬರಿಮಲೆ ದೇವಸ್ಥಾನ ವಿವಾದ, ಭಾವನಾತ್ಮಕ ವಿಷಯಗಳು ಈ ಚುನಾವಣೆ ವಿಷಯಗಳಾಗಿವೆ.ಶಶಿ ತರೂರ್‌ ಪ್ಲಸ್‌ ಪಾಯಿಂಟ್‌: ಶಶಿ ತರೂರ್‌ ಹೊರಗಿ ನವರಾಗಿದ್ದರೂ ತಿರುವನಂತಪುರದಲ್ಲಿ ಸತತ ಎರಡು ಬಾರಿ ಸಂಸದರಾಗಿದ್ದಾರೆ. ದೇಶದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ತರೂರ್‌ ಸಭ್ಯ, ವಿದ್ಯಾವಂತ ರಾಜಕಾರಣಿ ಎಂಬ ಖ್ಯಾತಿ ಪಡೆದಿದ್ದಾರೆ.

ಕೆಲ ವಿವಾದಿತ ಹೇಳಿಕೆಗಳ ಹೊರತಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ವಿಷಯಗಳನ್ನು ತಮ್ಮದೇ ಆದ ಧಾಟಿಯಲ್ಲಿ ವಿಶ್ಲೇಷಣೆ ಮಾಡುತ್ತಾ ರಾಷ್ಟ್ರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. “ಇಂತಹ ರಾಜಕಾರಣಿ ತಮ್ಮ ಕ್ಷೇತ್ರ ಪ್ರತಿನಿಧಿಸುತ್ತಿರುವುದೇ ಗೌರವ, ಹೆಮ್ಮೆಯ ಸಂಗತಿ, ಹೀಗಾಗಿ ಅವರಿಗೆ ನ‌ಮ್ಮ ಓಟು’ ಎನ್ನುತ್ತಾರೆ ಸ್ಥಳೀಯ ಮತದಾರರು.

ಬಿಜೆಪಿ ಪ್ಲಸ್‌ ಪಾಯಿಂಟ್‌: ಕಳೆದ ಚುನಾವಣೆಯಲ್ಲಿ ಶಶಿ ತರೂರ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಗೋಪಾಲ್‌ ಕೇವಲ 15 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಈ ಬಾರಿ ಕುಮ್ಮಾನಂ ರಾಜಶೇಖರನ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಿಜೋರಾಂ ರಾಜ್ಯಪಾಲರಾಗಿದ್ದ ಇವರು, ಶಬರಿಮಲೆ ದೇವಸ್ಥಾನ ವಿವಾದದಲ್ಲಿ ಹಿಂದೂಪರ ಸಂಘಟನೆಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಹಿಂದು ಮತಗಳನ್ನು ಕ್ರೋಡಿಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾವನಾತ್ಮಕ ವಿಷಯ ಈ ಬಾರಿ ಚುನಾವಣೆಯ ವಿಷಯವಾಗಿರುವುದರಿಂದ ಬಿಜೆಪಿ ಪರ ಹಿಂದುಗಳ ಒಲವು ಕಂಡು ಬರುತ್ತಿದೆ. ಸಾಂಪ್ರದಾಯಿಕ ನಾಯರ್‌ ಮತಗಳು ಈ ಬಾರಿ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಜತೆಗೆ ಮೋದಿ ಅಲೆ ಕೂಡ ಇದೆ. ಅಲ್ಲದೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತಬೇಟೆಗೆ ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ರಾಜಗೋಪಾಲ್‌ ಇದೀಗ ತಿರುವನಂತಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಿನೋಮ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ.

Advertisement

ಎಲ್‌ಡಿಎಫ್ ಪ್ಲಸ್‌ ಪಾಯಿಂಟ್‌: ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಅಭ್ಯರ್ಥಿ ಸಿ.ದಿವಾಕರನ್‌ ಸ್ಥಳೀಯರಾಗಿದ್ದು, ಟ್ರೇಡ್‌ ಯೂನಿಯನ್‌ ನಾಯಕರಾಗಿ ರಾಜ್ಯವ್ಯಾಪಿ ಹಲವಾರು ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರಿಗೆ ಚಿರಪರಿಚಿತರಾಗಿದ್ದಾರೆ. ಸ್ಥಳೀಯ ಸಮಸ್ಯೆಗಳು, ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದಾರೆ. “ಕಳೆದ ಹತ್ತು ವರ್ಷಗಳಲ್ಲಿ ಶಶಿ ತರೂರ್‌ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸುವ ಭರವಸೆ ಹುಸಿಯಾಗಿದೆ’ ಎನ್ನುತ್ತಾ ಶಶಿ ತರೂರ್‌ ವೈಫ‌ಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ಹೈಕಮಾಂಡ್‌ ಸಂಪರ್ಕ ಹೊಂದಿರುವ ಶಶಿ ತರೂರ್‌ ಸ್ಥಳೀಯ ನಾಯಕರು, ಕಾರ್ಯಕರ್ತರ ವಿಶ್ವಾಸ ಪಡೆದಿಲ್ಲ. ಈ ಭಿನ್ನಮತ ಎಲ್‌ಡಿಎಫ್ಗೆ ಅನುಕೂಲವಾಗುವ ಸಂಭವ ಇದೆ. ಜತೆಗೆ ಕ್ಷೇತ್ರದಲ್ಲಿ ಎಡರಂಗ ತಮ್ಮದೇ ಆದ ಹಿಡಿತ ಹೊಂದಿದೆ.

ತಿರುವನಂತಪುರ
ಹಾಲಿ ಸಂಸದ – ಶಶಿ ತರೂರ್‌
2014ರ ಫ‌ಲಿತಾಂಶ
ಶಶಿ ತರೂರ್‌(ಕಾಂಗ್ರೆಸ್‌) 2,97,806
ಒ.ರಾಜಗೋಪಾಲ್‌(ಬಿಜೆಪಿ) 2,82,336
ಬೆನ್ನೆಟ್‌ ಅಬ್ರಾಹಂ (ಸಿಪಿಐ) 2,48,941

Advertisement

Udayavani is now on Telegram. Click here to join our channel and stay updated with the latest news.

Next