Advertisement

ಜಾತಿಯಲ್ಲ, ಅಸ್ಮಿತೆಯೇ ಪ್ರಮುಖ ಅಸ್ತ್ರ

09:29 AM Mar 29, 2019 | mahesh |

ಈಶಾನ್ಯದ ಬಾಗಿಲು ಎಂದು ಕರೆಸಿಕೊಳ್ಳುವ ಅಸ್ಸಾಂನಲ್ಲಿ ಚುನಾವಣಾ ಕಹಳೆ ಮೊಳಗಿದ್ದು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳು ಭರದಿಂದ ಪ್ರಚಾರ ಕಾರ್ಯ ಮತ್ತು ರಣತಂತ್ರ ರೂಪಿಸುವಲ್ಲಿ ನಿರತವಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ಶನಿವಾರ ಅಸ್ಸಾಂನಲ್ಲಿ ಎರಡು ರ್ಯಾಲಿಗಳನ್ನೂ ನಡೆಸಲಿದ್ದು, ಇದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ, ಬಿಜೆಪಿ ನಾಯಕ ಸರ್ಬಾನಂದ ಸೋನೋವಾಲ್‌ ಮತ್ತು ವಿತ್ತ ಸಚಿವ ಹಿಮಾಂತಾ ಬಿಸ್ವಾ ಶರ್ಮಾ ಕೂಡ ತಯ್ನಾರಿ ನಡೆಸಿದ್ದಾರೆ.

Advertisement

ಬಿಜೆಪಿ ನೇತೃತ್ವದ ಮಿತ್ರಪಕ್ಷದ ಓಟವನ್ನು ತಡೆಯುವುದಕ್ಕಾಗಿ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಆಲ್‌ಇಂಡಿಯಾ ಡೆಮಾಕ್ರೆಟಿಕ್‌ ಫ್ರಂಟ್‌(ಎಐಯುಡಿಎಫ್) ಪ್ರಯತ್ನಿಸುತ್ತಿವೆ. ಅಸ್ಸಾಂನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ “ಅದ್ಭುತ’ಕ್ಕಿಂತ ಕಡಿಮೆಯೇನೂ ಇರಲಿಲ್ಲ. ಅದು 14ರಲ್ಲಿ 7 ಸ್ಥಾನಗಳಲ್ಲಿ ಗೆದ್ದು 37 ಪ್ರತಿಶತ ಮತಗಳನ್ನು ಪಡೆದಿತ್ತು. ಅದರ ಸನಿಹದ ಪ್ರತಿಸ್ಪರ್ಧಿ ಕಾಂಗ್ರೆಸ್‌ 3 ಸ್ಥಾನಗಳನ್ನು ಗೆದ್ದು 30 ಪ್ರತಿಶತ ಮತಗಳನ್ನು ಪಡೆದಿತ್ತು. 2009ರಲ್ಲಿ ಬಿಜೆಪಿ ಕೇವಲ 4 ಸ್ಥಾನಗಳಲ್ಲಿ ಗೆದ್ದು 16 ಪ್ರತಿಶತ ಮತಗಳನ್ನಷ್ಟೇ ಪಡೆದಿತ್ತು. ಹೀಗಾಗಿ, 2014ರಲ್ಲಿನ ಅದರ ಮತ ಪ್ರಮಾಣ ಮತ್ತು ಸ್ಥಾನಗಳು ದ್ವಿಗುಣಗೊಂಡಿದ್ದರಿಂದ ನಿಜಕ್ಕೂ ಆ ಸಾಧನೆಯನ್ನು ಅದ್ಭುತ ಎಂದೇ ಬಣ್ಣಿಸಲಾಗುತ್ತದೆ.

ಬಿಜೆಪಿಯು 2016ರ ವಿಧಾನಸಭಾ ಚುನಾವಣೆಯಲ್ಲೂ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿತು. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಆಡಳಿತದಲ್ಲಿದ್ದ ತರುಣ್‌ ಗೊಗೊಯ್‌ ಸರ್ಕಾರವನ್ನು ಕಿತ್ತೆಸೆದ ಸರ್ಬಾನಂದ್‌ ಸೋನೋವಾಲ್‌ ನೇತೃತ್ವದ ಬಿಜೆಪಿ, ನಂತರ ಬೋಡೋಪೀಪಲ್ಸ್‌ ಫ್ರಂಟ್‌ ಮತ್ತು ಅಸ್ಸಾಂ ಗಣ ಪರಿಷದ್‌(ಎಜಿಪಿ)ನೊಂದಿಗೆ ಸೇರಿ ಸರ್ಕಾರ ರಚಿಸಿತ್ತು.

ಹಾಗಿದ್ದರೆ ಬಿಜೆಪಿ ಈ ಬಾರಿಯೂ ಬಂಪರ್‌ ಪಡೆಯಲಿದೆಯೇ?
ಜಾತಿಯಲ್ಲ, ರಾಜ್ಯದ ಅಸ್ಮಿತೆಯೇ ಮುಖ್ಯ
ಅಸ್ಸಾಂನಲ್ಲಿ ಚುನಾವಣೆಗಳ ದಿಕ್ಕನ್ನು ನಿರ್ಧರಿಸುವುದು ಜಾತಿಯಲ್ಲ, ಬದಲಾಗಿ ರಾಜ್ಯದ ಅಸ್ಮಿತೆ. ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಮಸ್ಯೆಯಿಂದ ಹೈರಾಣಾಗಿರುವ ಅಸ್ಸಾಂನಲ್ಲಿ ಈಗ ಮೂಲ ನಿವಾಸಿಗಳು ವರ್ಸಸ್‌ ವಲಸಿಗರು ಎಂಬುದೇ ಪ್ರಧಾನ ವಿಷಯ. ಕಾಂಗ್ರೆಸ್‌ ಮತ್ತು ಬಿಜೆಪಿ ಈ ಬಾರಿಯೂ ಅಸ್ಸಾಂ ಅಸ್ಮಿತೆಯನ್ನು ಚುನಾವಣಾ ಅಸ್ತ್ರವಾಗಿಸಿಕೊಂಡಿವೆ. ವ್ಯತ್ಯಾಸವೇನೆಂದರೆ, ಬಿಜೆಪಿಯ ಅಸ್ಮಿತೆಯ ಹಾದಿಗೆ ಹಿಂದುತ್ವದ ಲೇಪನವಿದ್ದು, ಕಾಂಗ್ರೆಸ್‌ನ ಅಸ್ಮಿತೆಯ ಮಾತುಗಳಲ್ಲಿ ಮುಸಲ್ಮಾನರ ಪರ ಒಲವಿದೆ.

ತಾನು ಲೋಕಸಭೆಯಲ್ಲಿ ಗೆದ್ದರೆ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕುವುದಾಗಿ ಬಿಜೆಪಿ ಹೇಳುತ್ತದೆ. ಅಲ್ಲದೇ, ಬಾಂಗ್ಲಾದೇಶಿಯರು ಅಸ್ಸಾಂನ ಮೂಲನಿವಾಸಿಗಳಿಂದ ಅಕ್ರಮವಾಗಿ ವಶಪಡಿಸಿಕೊಂಡಿರುವ ಜಮೀನುಗಳನ್ನೂ ಮುಕ್ತಗೊಳಿಸುವುದಾಗಿ ಅದು ಭರವಸೆ ನೀಡುತ್ತಿದೆ. ಹೀಗೆ ಮಾಡುವುದರಿಂದ ಅಸ್ಸಾಂನ ಸಂಸ್ಕ ೃತಿ ಮತ್ತು ಅಸ್ಮಿತೆಯನ್ನು ಉಳಿಸಬಹುದು ಎನ್ನುವುದು ಅದರ ವಾದ. ಆದರೆ ಬಿಜೆಪಿ ಮುಖ್ಯವಾಗಿ ಟಾರ್ಗಟ್‌ ಮಾಡುತ್ತಿರುವುದು ಬಾಂಗ್ಲಾದೇಶಿ ಅಕ್ರಮ ಮುಸ್ಲಿಂ ವಲಸಿಗರನ್ನೇ ಹೊರತು, ಹಿಂದೂ ವಲಸಿಗರನ್ನಲ್ಲ. ಇದಷ್ಟೇ ಅಲ್ಲದೆ ಬಿಜೆಪಿ ಮೂಲ ನಿವಾಸಿಗಳಲ್ಲೂ ಪರಸ್ಪರ ವೈಮನಸ್ಸಿದ್ದವರನ್ನು ಜೋಡಿಸುವ ಕೆಲಸ ಮಾಡಿದೆ. ಒಂದು ಕಾಲದಲ್ಲಿ ಪರಸ್ಪರ ಕಣ್ಣೆತ್ತಿ ನೋಡುವುದಕ್ಕೂ ನಿರಾಕರಿಸುತ್ತಿದ್ದ ಬೋಡೋ ಮತ್ತು ರಾಭಾ ಜನಾಂಗಗಳು ಈಗ ಬಿಜೆಪಿಯ ಕಾರಣದಿಂದ ಒಂದಾಗಿ ನಿಂತಿವೆ.

Advertisement

ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ಅನೇಕ ಅಡ್ಡಿಗಳೂ ಎದುರಾಗುತ್ತಿವೆಯಾದರೂ, ಅದನ್ನು ನಿವಾರಿಸಿಕೊಳ್ಳುವಲ್ಲಿ ಅದು ಸಫ‌ಲವಾಗುತ್ತಿದೆ. ಕೆಲವೇ ತಿಂಗಳ ಹಿಂದಷ್ಟೇ ಅಸ್ಸಾಂ ಗಣ ಪರಿಷದ್‌ “ಪೌರತ್ವ ತಿದ್ದುಪಡಿ ಮಸೂದೆ(ಸಿಎಬಿ)’ ವಿಚಾರದಲ್ಲಿ ಬಿಜೆಪಿಯ ವಿರುದ್ಧ ಮುನಿಸಿಕೊಂಡು ಮೈತ್ರಿಕೂಟದಿಂದ ಹೊರ ಹೆಜ್ಜೆ ಇಟ್ಟಿತ್ತು. ಇನ್ನೂ ರಾಜ್ಯಸಭೆಯಲ್ಲಿರುವ ಈ ಮಸೂದೆಯನ್ನು ಬಿಜೆಪಿ ಬೆಂಬಲಿಸುತ್ತಿದ್ದು ಮುಸ್ಲಿàಮೇತರ ನಾಗರಿಕರಿಗೆ ಪೌರತ್ವ ದೊರಕಿಸುವ ಪ್ರಕ್ರಿಯೆ ಸುಲಭವಾಗುವಂತೆ ರೂಪಿತವಾಗಿದೆ ಈ ಮಸೂದೆ. ಆದರೆ ಸ್ಥಳೀಯರು ಮಾತ್ರ ಯಾವುದೇ ಧರ್ಮದ ವಲಸಿಗರೂ ತಮಗೆ ಬೇಡ ಎನ್ನುತ್ತಾ ಈ ಮಸೂದೆಯ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದರು. ಇನ್ನು ಎನ್‌ಆರ್‌ಸಿ ಕೂಡ ಅಸ್ಸಾಂನಲ್ಲಿ ನಿಜಕ್ಕೂ ವಿವಾದಾಸ್ಪದ ವಿಷಯವೇ ಸರಿ.

ಆದರೆ ಕೊನೆಗೂ ಬಿಜೆಪಿ ಈ ಮಸೂದೆಯನ್ನು ಮರುತಿದ್ದುವ ಭರವಸೆ ನೀಡಿ, ಅಸ್ಸಾಂ ಗಣ ಪರಿಷದ್‌ಗೆ 3 ಲೋಕಸಭೆ ಮತ್ತು 1 ರಾಜ್ಯಸಭೆ ಸ್ಥಾನವನ್ನು ಬುಟ್ಟಿಕೊಟ್ಟು ಮೈತ್ರಿಯನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದೆ. ಅದಾಗ್ಯೂ ಅಸ್ಸಾಂ ಗಣ ಪರಿಷದ್‌ ಕಳೆದ ಬಾರಿಯ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈ ಬಾರಿಯೂ ಗೆಲ್ಲುವ ಸಾಧ್ಯತೆ ಇಲ್ಲ. ಆದರೂ ಅದರ ಜೊತೆಗಿನ ಮೈತ್ರಿಯು ಅಸ್ಸಾಂ ಅಸ್ಮಿತೆಯ ಪ್ರಚಾರಕ್ಕೆ ಮುಖ್ಯವಾಗುತ್ತದೆ ಎಂದು ಬಿಜೆಪಿ ಭಾವಿಸುತ್ತದೆ.

ಕಾಂಗ್ರೆಸ್‌- ಎಐಯುಡಿಎಫ್ ರಹಸ್ಯ ಒಪ್ಪಂದ?
ಇತ್ತ ಕಾಂಗ್ರೆಸ್‌ನ ವಿಷಯಕ್ಕೆ ಬರುವುದಾದರೆ ಸೋಮವಾರವಷ್ಟೇ ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯ್‌ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಎಲ್ಲಾ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ತಮ್ಮೊಂದಿಗೆ ಕೈ ಜೋಡಿಸಬೇಕೆಂದು ಹೇಳಿದ್ದಾರೆ. ಅವರು ಅಸ್ಸಾಂ ಅಸ್ಮಿತೆಯ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಈ ಮಾತು ಹೇಳಿರುವುದು ಸ್ಪಷ್ಟ. ಇನ್ನೊಂದೆಡೆ, ಈ ಬಾರಿ ತಾನು 14 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದ ಮತ್ತೂಂದು ಪ್ರತಿಪಕ್ಷ ಎಐಯುಡಿಎಫ್ ಈಗ ಮುಸ್ಲಿಂ ಬಾಹುಳ್ಯವಿರುವ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದೆ. “ಜಾತ್ಯತೀತ’ ಮತ್ತು “ಬಿಜೆಪಿ ವಿರೋಧಿ’ ಮತಗಳು ಹಂಚಿಹೋಗಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿರುವುದಾಗಿ ಪಕ್ಷದ ಅಧ್ಯಕ್ಷ ಮೌಲಾನಾ ಬದ್ರುದ್ದೀನ್‌ ಅಜ್ಮಲ್‌ ಹೇಳುತ್ತಿದ್ದಾರೆ. “ಕಾಂಗ್ರೆಸ್‌ ಮತ್ತು ಎಐಯುಡಿಎಫ್ ರಹಸ್ಯ ಒಪ್ಪಂದ ಮಾಡಿಕೊಂಡಿವೆ’ ಎಂದು ಮೊದಲಿನಿಂದಲೂ ಭಾರತೀಯ ಜನತಾ ಪಾರ್ಟಿ ಹೇಳುತ್ತಾ ಬರುತ್ತಿತ್ತು. ಈ ಮಾತಿಗೆ ಈಗ ಪುಷ್ಟಿಯಂತೂ ಸಿಕ್ಕಿದೆ.

ಆದರೆ ಎಐಯುಡಿಎಫ್ ಕೇವಲ 3 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಮತ್ತೂಂದು ಕಾರಣವೂ ಇರಬಹುದು. ಕಳೆದ ವರ್ಷದ ಪಂಚಾಯತಿ ಚುನಾವಣೆಯಲ್ಲಿ ಅದು ಬಿಜೆಪಿಯ ಮುಂದೆ ಹೀನಾಯ ಪ್ರದರ್ಶನ ತೋರಿತ್ತು. ಆಗ ಒಟ್ಟು ಸ್ಥಾನಗಳಲ್ಲಿ ಬಿಜೆಪಿಯೇ 50 ಪ್ರತಿಶತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಇನ್ನು ಮುಸ್ಲಿಂ ಬಾಹುಳ್ಯವಿರುವ ಮೂರು ಜಿಲ್ಲೆಗಳನ್ನು ಬಿಟ್ಟರೆ ಬೇರಾವ ಕಡೆಯಲ್ಲೂ ಅದಕ್ಕೀಗ ಮನ್ನಣೆ ಇಲ್ಲ. ಒಟ್ಟಾರೆಯಾಗಿ, ಅಸ್ಸಾಂನಲ್ಲಿ ಬಿಜೆಪಿಗೆ ಅಡ್ಡಿಗಳಂತೂ ಎದುರಾಗುತ್ತಿವೆಯಾದರೂ, ಕಾಂಗ್ರೆಸ್‌ ಮತ್ತು ಎಐಯುಡಿಎಫ್ಗೆ ಅಡ್ಡಗೋಡೆಯೇ ಎದುರಾಗಿದೆ.

ಪ್ರಮುಖ ನಾಯಕರು
ಬಿಜೆಪಿ: ಸರ್ಬಾನಂದ ಸೋನೋವಾಲ್‌,  ಹಿಮಾಂತಾ ಬಿಸ್ವಾಸ್‌ ಶರ್ಮಾ
ಕಾಂಗ್ರೆಸ್‌: ತರುಣ್‌ ಗೊಗೊಯ್‌, ಸುಶ್ಮಿತಾ ದೇವ್‌
ಎಐಯುಡಿಎಫ್: ಮೌಲಾನಾ ಬದ್ರುದ್ದಿನ್‌ ಅಜ್ಮಲ್‌

ರಾಜ್ಯ ಚಿತ್ರಣ
ಲೋಕಸಭಾ ಸ್ಥಾನಗಳು 14
ಬಿಜೆಪಿ 07
ಎಐಯುಡಿಎಫ್ 03
ಕಾಂಗ್ರೆಸ್‌ 03
ಸ್ವತಂತ್ರ 01

ಅಭ್ಯರ್ಥಿಗಳೇನೋ ಗೆದ್ದಿದ್ದರೂ, ಜನರಿಗೆ ಸಮಾಧಾನ ಇರಲಿಲ್ಲ!
2014ರ ಲೋಕಸಭೆ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳೇನೋ ಗೆದ್ದು ಮೀಸೆ ತಿರುವಿದರು. ಆದರೆ ನಿಜಕ್ಕೂ ಜನರು ಮನಸ್ಸಿಟ್ಟು ಅವರನ್ನು ಗೆಲ್ಲಿಸಿದ್ದಲ್ಲ! ಇದು ಅವರು ಪಡೆದ ಶೇಕಡಾವಾರು ಮತಗಳಲ್ಲೇ ತಿಳಿಯುತ್ತದೆ. ವಿವಿಧ ಪಕ್ಷಗಳು, ಕೆಲವು ಅಭ್ಯರ್ಥಿಗಳ ಪಡೆದ ಶೇಕಡಾವಾರು ಮತಗಳು ಈ ವಿವರಗಳನ್ನು ಬಿಚ್ಚಿಟ್ಟಿವೆ. ಇದನ್ನು ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌ì ಮತ್ತು ರಾಷ್ಟ್ರೀಯ ಚುನಾವಣಾ ವೀಕ್ಷಕ ಸಂಸ್ಥೆಗಳ ಸಂಶೋಧನೆ ಹೇಳಿದೆ. ರಾಷ್ಟ್ರೀಯ ಜನತಾ ದಳ (ಬಿಜೆಡಿ), ಶಿರೋಮಣಿ ಅಕಾಲಿದಳ (ಎಸ್‌ಎಡಿ), ಆಮ್‌ ಆದ್ಮಿ ಪಾರ್ಟಿ (ಎಎಪಿ)ಯ ಗೆದ್ದ ಅಭ್ಯರ್ಥಿಗಳು ಪಡೆದ ಮತ ಶೇ. 50 ಕ್ಕಿಂತಲೂ ಕಡಿಮೆ. ಆದ ಮತದಾನ ಶೇ. 47. ವಿಜೇತ 331 ಅಭ್ಯರ್ಥಿಗಳು ಪಡೆದ ಮತ ಶೇ. 50ಕ್ಕಿಂತ ಕಡಿಮೆ. 99 ಮಂದಿ ಶೇ. 40ರಷ್ಟು . 4 ಮಂದಿ ಶೇ. 30ಕ್ಕಿಂತಲೂ ಕಡಿಮೆ ಮತ.

ಉಪಗ್ರಹ ನಾಶಕ ಕ್ಷಿಪಣಿಗಳ ಅಭಿವೃದ್ಧಿ ಆರಂಭವಾಗಿದ್ದೇ ಮನಮೋಹನ್‌ ಸಿಂಗ್‌ ಅವರ ಸರ್ಕಾರದಲ್ಲಿ. ಆದರೆ ಅವರು ಇದನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ನಿಜಕ್ಕೂ ಅವರು ಮೌನಮೋಹನ್‌ ಸಿಂಗ್‌ ಆಗಿದ್ದರು.
ಜೈನಾಬ್‌ ಸಿಕಂದರ್‌, ಲೇಖಕಿ

ಮಿಷನ್‌ ಶಕ್ತಿ ಪರೀಕ್ಷೆಗಳನ್ನು ನಡೆಸಲು ನಾವು ಅಂದಿನ ಯುಪಿಎ ಸರ್ಕಾರಕ್ಕೆ ಪ್ರಸ್ತಾವನೆ ಇಟ್ಟಿದ್ದೆವು. ದುರದೃಷ್ಟವಶಾತ್‌ ನಮಗೆ ಅಂದಿನ ಸರ್ಕಾರದಿಂದ ಮುಂದುವರಿಯಲು ಅನುಮತಿ ಸಿಗಲಿಲ್ಲ.
ಡಾ. ವಿ.ಕೆ. ಸಾರಸ್ವತ್‌, ಡಿಆರ್‌ಡಿಒ ಮಾಜಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next