Advertisement

ಮತ್ತೂಮ್ಮೆ ಕೋವಿಡ್-19 ಸೋಂಕು ರಹಿತ ಪ್ರಮಾಣ ಪತ್ರ ನೀಡಿಕೆಗೆ ಡಬ್ಲ್ಯೂಎಚ್‌ಒ ಆಕ್ಷೇಪ

08:26 AM Apr 27, 2020 | Sriram |

ವಿಶ್ವಸಂಸ್ಥೆ/ನವದೆಹಲಿ: ಗುಣಮುಖರಾದವರಿಗೆ ಕೂಡಾ ಮತ್ತೆ ಸೋಂಕು ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್‌ಒ)ಶನಿವಾರ ಮತ್ತೂಮ್ಮೆ ಎಚ್ಚರಿಕೆ ನೀಡಿದೆ.

Advertisement

ಒಮ್ಮೆ ಗುಣಮುಖರಾದವರಿಗೆ ಸೋಂಕು ಬರುವುದಿಲ್ಲ. ಹೀಗಾಗಿ ಅಂಥವರಿಗೆ ಮತ್ತೂಮ್ಮೆ ಸೋಂಕು ಬರಲಾರದು ಎಂಬ ಪ್ರಮಾಣ ಪತ್ರ (ಇಮ್ಯೂನಿಟಿ ಪಾಸ್‌ಪೋರ್ಟ್‌) ಅಥವಾ ರಿಸ್ಕ್-ಫ್ರೀ ಪ್ರಮಾಣ ಪತ್ರಗಳನ್ನು ನೀಡುವ ಪರಿ ಕಲ್ಪನೆಗೆ ಡಬ್ಲ್ಯೂ ಎಚ್‌ಒ ವಿರೋಧಿಸಿದೆ. ಇಂಥ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಸೋಂಕು ಮುಕ್ತರಾದವರಿಗೆ ತಮ್ಮ ಕೆಲಸಗಳಿಗೆ ಮರಳಲು ಅನುಮತಿ ನೀಡಬೇಕೆಂಬ ಸಲಹೆಗಳು ಕೇಳಿಬಂದಿದ್ದರಿಂದ ಡಬ್ಲ್ಯೂಎಚ್‌ಒ ಈ ಎಚ್ಚರಿಕೆ ನೀಡಿದೆ.

“ಒಮ್ಮೆ ಕೋವಿಡ್-19 ಸೋಂಕಿನಿಂದ ಪಾರಾದ ವ್ಯಕ್ತಿಯಲ್ಲಿ ಪ್ರತಿಕಾಯಗಳು (ಆ್ಯಂಟಿ ಬಾಡೀಸ್‌) ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುತ್ತವೆ. ಹಾಗಾಗಿ, ಅವರು ಮತ್ತೆ ಸೋಂಕಿಗೆ ಒಳಗಾಗುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇದನ್ನು ಮನಗಾಣಲು, ಇನ್ನೂ ಸಾಕಷ್ಟು ಅಧ್ಯ ಯನ, ಸಂಶೋಧನೆಗಳ ಅಗತ್ಯವಿದೆ’ ಎಂದು ಡಬ್ಲ್ಯೂ ಎಚ್‌ಒ ಹೇಳಿದೆ.

ಇತ್ತೀಚೆಗೆ ಚೇತರಿಸಿಕೊಂಡ ವ್ಯಕ್ತಿಗಳ ಅಧ್ಯಯನ ವರದಿಗಳನ್ನು ಉದಾಹರಣೆಯಾಗಿ ನೀಡಿರುವ ಡಬ್ಲ್ಯೂ ಎಚ್‌ಒ, “ಸೋಂಕಿನಿಂದ ಪಾರಾದ ವ್ಯಕ್ತಿಗಳು ತಮ್ಮಲ್ಲಿನ ಜೀವಕಣಗಳ ಮಟ್ಟದ ರೋಗ ನಿರೋಧಕ ಶಕ್ತಿ ವೃದ್ಧಿಸಿದ್ದರಿಂದಲೇ ಗುಣ ಮುಖರಾಗಿದ್ದಾರೆ. ಅವರು ಯಾರೂ ಕೇವಲ ಪ್ರತಿಕಾಯಗಳ ಹೆಚ್ಚಳದಿಂದ ವೈರಾಣುಗಳನ್ನು ಹಿಮ್ಮೆಟ್ಟಿಸಿಲ್ಲ. 2020ರ ಏ. 24ರವರೆಗೆ ಎಲ್ಲಾ ದೇಶಗಳಲ್ಲಿ ನಡೆಸಲಾಗಿರುವ ಅಧ್ಯ ಯನಗಳಿಂದ ಈ ವಿಚಾರ ತಿಳಿದುಬಂದಿದೆ. ಹಾಗಿರುವಾಗ, ಕೇವಲ ಪ್ರತಿಕಾಯಗಳ ಸಂಖ್ಯೆ ಹೆಚ್ಚಳವಾಗುವುದರಿಂದಲೇ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದಿದೆ.

ಹೀಗಾಗಿ. ಸರ್ಕಾರಗಳು ತಮ್ಮ ಜನರಿಗೆ “ಇಮ್ಯೂನಿಟಿ ಪಾಸ್‌ಪೋರ್ಟ್‌’ ಅಥವಾ “ರಿಸ್ಕ್-ಫ್ರೀ ಪ್ರಮಾಣ ಪತ್ರ’ ಗಳನ್ನು ನೀಡಿದರೆ, ಅವನ್ನು ಪಡೆದ ಜನರು, ತಮ್ಮಲ್ಲಿ ಪ್ರತಿ ಕಾಯಗಳ ಸಂಖ್ಯೆ ಹೆಚ್ಚಾಗಿದೆ. ಅದರಿಂದ ತಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಗಾಧವಾಗಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾರೆ. ಆಗ, ಅವರು ಮುನ್ನೆಚ್ಚರಿಕೆ ನಿಯಮಗಳನ್ನು ಗಾಳಿಗೆ ತೂರಬಹುದು. ತಮಗೆ ಅರಿವಿಲ್ಲದೆಯೇ ತಮ್ಮನ್ನು ತಾವು ಸೋಂಕಿಗೆ ಒಗ್ಗಿಕೊಳ್ಳಬಹುದು. ಅಲ್ಲದೆ, ಪದೇ ಪದೇ ಸೋಂಕಿಗೆ ತುತ್ತಾಗಿ, ಅದನ್ನು ಇತರರಿಗೂ ಹರಡಬಹುದು’ ಎಂದು ಡಬ್ಲ್ಯೂಎಚ್‌ಒ ಎಚ್ಚರಿಸಿದೆ.

Advertisement

ದೇಶಾದ್ಯಂತ ನಿಗಾದಲ್ಲಿ 9.5 ಲಕ್ಷ ಮಂದಿ
ಕೋವಿಡ್-19 ವಿರುದ್ಧ ದೇಶವು ಸಮರ್ಥವಾಗಿ ಹೋರಾಟ ನಡೆಸುತ್ತಿದೆ. ಇದರ ಹೊರತಾಗಿಯೂ ಬೇರೆ ಬೇರೆ ಕಾರಣಗಳಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶಾದ್ಯಂತ ಪ್ರಸ್ತುತ ಸುಮಾರು 9.5 ಲಕ್ಷ ಮಂದಿ ನಿಗಾದಲ್ಲಿದ್ದಾರೆ. ಜನವರಿಯಲ್ಲಿ ಅಂದರೆ ಕೊರೊನಾ ವೈರಸ್‌ ಭಾರತಕ್ಕೆ ಪ್ರವೇಶ ಪಡೆದ ಆರಂಭದಲ್ಲಿ ಕೇವಲ 13 ಮಂದಿ ಮಾತ್ರ ನಿಗಾವಣೆ ಯಲ್ಲಿದ್ದರು. ಆ ಸಂಖ್ಯೆ ಈಗ ಹಲವು ಪಟ್ಟು ಹೆಚ್ಚಾಗಿದೆ. ಕೋವಿಡ್-19 ಸೋಂಕಿತರ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿ ರುವಂಥ ಅಥವಾ ವಿದೇಶಗಳಿಗೆ ಪ್ರಯಾಣ ಬೆಳೆಸಿ ವಾಪಸಾಗಿರುವಂಥ ವ್ಯಕ್ತಿಗಳು ನಿಗಾದಲ್ಲಿರುತ್ತಾರೆ. ಇಲ್ಲಿ ನಿಗಾ ಎಂದರೆ, ಶಂಕಿತರನ್ನು ಕ್ವಾರಂಟೈನ್‌ ನಲ್ಲಿಡುವುದು ಅಥವಾ ಸಾಮುದಾಯಿಕ ನಿಗಾ ದಲ್ಲಿಡುವುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಜ.23ರ ವೇಳೆಗೆ 13 ಮಂದಿ ನಿಗಾದಲ್ಲಿದ್ದರು. ಜ.30ರ ವೇಳೆಗೆ ಈ ಸಂಖ್ಯೆ 1,088 ಆಯಿತು. ರಾಷ್ಟ್ರವ್ಯಾಪಿ ಲಾಕ್‌ ಡೌನ್‌ ಘೋಷಣೆಯಾಗುವ ಸ್ವಲ್ಪ ಮುನ್ನ ಅಂದರೆ ಮಾ.19ರಂದು ದೇಶಾದ್ಯಂತ ನಿಗಾದಲ್ಲಿದ್ದವರ ಸಂಖ್ಯೆ 90,459ಕ್ಕೇರಿತ್ತು.

ಲೆಕ್ಕಾಚಾರ ಹೇಗೆ?
ಒಟ್ಟಾರೆ ಸೋಂಕಿತರ ಸಂಖ್ಯೆಯಿಂದ ಹೊಸ ಪ್ರಕರಣಗಳ ಸಂಖ್ಯೆಯನ್ನು ಭಾಗಿಸುವ ಮೂಲಕ ಪ್ರಕರಣಗಳ ಏರಿಕೆಯ ದರವನ್ನು ಲೆಕ್ಕ ಹಾಕಲಾಗುತ್ತದೆ. ಹಾಗೆಯೇ ಒಟ್ಟಾರೆ ಸೋಂಕಿತರ ಸಂಖ್ಯ ಯಿಂದ ಗುಣಮುಖರಾದವರ ಸಂಖ್ಯೆಯನ್ನು ಭಾಗಿಸುವ ಮೂಲಕ ಗುಣ ಮುಖರಾದವರ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅದೇ ರೀತಿ, ಸೋಂಕಿತರ ಸಂಖ್ಯೆಯು ಎರಡು ಪಟ್ಟು ಆಗಲು ತಗಲುವ ಅವಧಿ ಎಷ್ಟೆಂದು ನೋಡುವ ಮೂಲಕ ದ್ವಿಗುಣಗೊಳ್ಳುವ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next