Advertisement
ಖರೋಲಾ ಅವರನ್ನು ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೇ ಮಾಡಲಾಗಿದ್ದು, ಈ ಮೂಲಕ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವರ್ಗಾವಣೆ ಊಹಾಪೋಹಗಳಿಗೆ ತೆರೆಬಿದ್ದಿದೆ. ಇದೇ ವೇಳೆ ತೆರವಾದ ಸ್ಥಾನಕ್ಕೆ ರಾಜ್ಯ ಸರ್ಕಾರ ಮತ್ತೂಬ್ಬ ಐಎಎಸ್ ಅಧಿಕಾರಿಯನ್ನು ನಿಯೋಜಿಸಲಿದ್ದು, ಅಲ್ಲಿಯವರೆಗೆ ಪ್ರದೀಪ್ಸಿಂಗ್ ಖರೋಲ ಮುಂದುವರಿಯಲಿದ್ದಾರೆ.
Related Articles
Advertisement
ಯೋಜನೆ ಪ್ರಗತಿ ಆಮೆಗತಿ: ಆದರೆ, ಒಟ್ಟಾರೆ ಯೋಜನೆಯ ಪ್ರಗತಿ ಅವಲೋಕನ ಮಾಡಿದರೆ, “ನಮ್ಮ ಮೆಟ್ರೋ’ ಯೋಜನೆಯ ವೇಗ ಮಂದಗತಿಯಲ್ಲಿ ಸಾಗಿತು. ಮೊದಲ ಹಂತದ ಲೋಕಾರ್ಪಣೆ ಗಡುವು ಹಲವಾರು ಬಾರಿ ವಿಸ್ತರಣೆಗೊಂಡಿತು. ಅಂತಿಮವಾಗಿ ಐದು ತಿಂಗಳ ಹಿಂದೆ ಲೋಕಾರ್ಪಣೆಗೊಂಡಿತು.
ಇನ್ನು 2014ರಲ್ಲೇ ಎರಡನೇ ಹಂತದ ಯೋಜನೆಗೆ ಅನುಮೋದನೆ ದೊರೆತರೂ, ಇನ್ನೂ ಟೆಂಡರ್ ಹಂತದಲ್ಲೇ ಸಾಗಿದೆ. ಇದೆಲ್ಲವೂ ಯೋಜನಾ ವೆಚ್ಚದ ಮೇಲೆ ಪರಿಣಾಮ ಬೀರಿತು. ಅಲ್ಲದೆ, ಮೆಟ್ರೋ ಮಾರ್ಗಗಳ ಬದಲಾವಣೆಯಿಂದಲೂ ಪ್ರದೀಪ್ಸಿಂಗ್ ಖರೋಲ ಸುದ್ದಿಯಾದರು. ಜಯನಗರ ಲಕ್ಷ್ಮಣ್ರಾವ್ ಉದ್ಯಾನದಲ್ಲಿ ಹಾದುಹೋಗಲಿರುವ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ಎದುರಿಸಬೇಕಾಯಿತು.
ಆದರೆ, ವಾಸ್ತವವಾಗಿ ಈ ಮಾರ್ಗ ಬದಲಾವಣೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಮಾಡಿದ್ದರು. ಅದೇ ರೀತಿ, ಕಂಟೋನ್ಮೆಂಟ್ ಮಾರ್ಗ ಬದಲಾವಣೆಯಿಂದಾಗಿ ರೈಲ್ವೆ ಹೋರಾಟಗಾರರ ಕೆಂಗಣ್ಣಿಗೆ ಖರೋಲ ಗುರಿಯಾದರು. ಈ ಸಂಬಂಧದ ಪರ-ವಿರೋಧ ಈಗಲೂ ಮುಂದುವರಿದಿದೆ. ಅಷ್ಟರಲ್ಲಿ ಖರೋಲ ನಿರ್ಗಮಿಸುತ್ತಿದ್ದಾರೆ.
“ನಮ್ಮ ಮೆಟ್ರೋ’ ಸಾರಥ್ಯ ಯಾರಿಗೆ?: ತೆರವಾದ ಬಿಎಂಆರ್ಸಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಟಿ-ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಬಿಎಂಆರ್ಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಸರ್ಕಾರ ಈ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರ ಹೆಸರು ಸೂಚಿಸಿತ್ತು ಎಂದೂ ಮೂಲಗಳು ತಿಳಿಸಿವೆ.
ಹಿಂದಿ ವಿವಾದದಿಂದ ಕೆಂಗಣ್ಣಿಗೆ ಗುರಿ: ನಿಲ್ದಾಣದಲ್ಲಿ ಹಿಂದಿಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಪ್ರದೀಪ್ಸಿಂಗ್ ಖರೋಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಈ ಸಂಬಂಧ ವಿವಿಧ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯು ಹಿಂದಿ ನಾಮಫಲಕಗಳಿಗೆ ಮಸಿ ಬಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದು ಹೆಜ್ಜೆ ಮುಂದೆಹೋಗಿ, “ಹಕ್ಕುಚ್ಯುತಿಗೆ ಶಿಫಾರಸು ಮಾಡುವುದಾಗಿ’ ಎಚ್ಚರಿಕೆ ನೀಡಿತ್ತು.
ಮೆಟ್ರೋ ಯೋಜನೆಯ ವ್ಯವಸ್ಥಾಪಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದು ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಮೊದಲ ಹಂತ ಲೋಕಾರ್ಪಣೆಗೊಂಡಿತು. ಇದೆಲ್ಲವೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಇತರೆ ಏಜೆನ್ಸಿಗಳ ಸಹಕಾರ ಮತ್ತು ಜನರ ಸಹಕಾರದಿಂದ ಸಾಧ್ಯವಾಯಿತು. ಯೋಜನೆ ತುಸು ವಿಳಂಬವಾಗಿದ್ದು ನಿಜ. ಆದರೆ, ಇದಕ್ಕೆ ಹಲವು ಕಾರಣಗಳು ಮತ್ತು ಸವಾಲುಗಳಿವೆ. ಅವೆಲ್ಲವನ್ನೂ ನಾವು ನಿಭಾಯಿಸಿ ಪೂರ್ಣಗೊಳಿಸಿದ್ದೇವೆ. ಖುಷಿ ತಂದಿದೆ.-ಪ್ರದೀಪ್ಸಿಂಗ್ ಖರೋಲ, ಬಿಎಂಆರ್ಸಿಎಲ್ ಎಂಡಿ