Advertisement

ಯಾರು ಹಿತವರು?

09:56 AM Dec 10, 2019 | Lakshmi GovindaRaj |

ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ. ಆದರೆ ಅವೆರಡಕ್ಕೂ ಅಜಗಜಾಂತರವಿದೆ. ನಗರಪ್ರದೇಶಗಳಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಪಡೆಯದಿದ್ದರೂ, ಇಂದಿಗೂ ಗ್ರಾಮೀಣ ಭಾಗಗಳ ಜನರಿಗೆ ಹತ್ತಿರವಾಗಿರುವುದು ಸಹಕಾರಿ ಬ್ಯಾಂಕುಗಳ ಹೆಗ್ಗಳಿಕೆ.

Advertisement

ದೇಶದಲ್ಲಿನ ಐದು ದೊಡ್ಡ ಸಹಕಾರಿ ಬ್ಯಾಂಕುಗಳಲ್ಲಿ ಒಂದು ಪಿ.ಎಮ್‌.ಸಿ (ಪಂಜಾಬ್‌ ಮತ್ತು ಮಹಾರಾಷ್ಟ್ರ ಕೋ- ಆಪರೇಟಿವ್‌) ಬ್ಯಾಂಕ್‌. ಏಳು ರಾಜ್ಯಗಳಲ್ಲಿ, ಒಟ್ಟು 187 ಶಾಖೆಗಳನ್ನು ಹೊಂದಿ 11,800 ಕೋಟಿ ರೂ. ಠೇವಣಿ ಮತ್ತು 8,500 ಕೋಟಿ ರೂ. ಸಾಲ ನೀಡುವ ಮೂಲಕ 52,000 ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದ ಈ ಸಹಕಾರಿ ಬ್ಯಾಂಕಿನ ಕಾರ್ಯಾಚರಣೆಗಳನ್ನು 6 ತಿಂಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಅದು, ಹೊಸ ಠೇವಣಿ ಸ್ವೀಕರಿಸುವಂತಿಲ್ಲ, ಹೊಸ ಸಾಲ ನೀಡುವಂತಿಲ್ಲ. ಹಳೇ ಸಾಲವನ್ನು ನವೀಕರಿಸುವಂತಿಲ್ಲ. ಗ್ರಾಹಕರು ಅರು ತಿಂಗಳಿನಲ್ಲಿ ಕನಿಷ್ಠ 50,000 ರೂ.ಯನ್ನು ತಮ್ಮ ಖಾತೆಯಿಂದ ಹಿಂಪಡೆಯಬಹುದು ಎಂಬುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಯಮಗಳನ್ನು ವಿಧಿಸಿತ್ತು. ಇದಾಗಿ ಸುಮಾರು ಐದು ತಿಂಗಳುಗಳು ಕಳೆದಿವೆ. ಗ್ರಾಹಕರು ಇನ್ನೂ ಪರದಾಡುತ್ತಿದ್ದಾರೆ.

ವ್ಯತ್ಯಾಸ ತುಂಬಾ ಇವೆ: 1947ರಿಂದ ಇಲ್ಲಿಯತನಕ, ದೇಶದ 739 ಬ್ಯಾಂಕುಗಳು ಪತನಗೊಂಡಿದ್ದು, ಅದರಲ್ಲಿ 350ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳಾಗಿವೆ. ದೇಶದ ಬ್ಯಾಂಕಿಂಗ್‌ ವ್ಯವಹಾರದ 11% ಪಾಲನ್ನು ಹೊಂದಿರುವ ಸಹಕಾರಿ ಬ್ಯಾಂಕುಗಳ ವೈಫ‌ಲ್ಯ, “ಸಹಕಾರಿ ವರ್ಸಸ್‌ ವಾಣಿಜ್ಯ ಬ್ಯಾಂಕ್‌’ ಎನ್ನುವ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. 2004ರಲ್ಲಿ ದೇಶದಲ್ಲಿ 1926 ಸಹಕಾರ ಬ್ಯಾಂಕುಗಳಿದ್ದವು. 2018ರಲ್ಲಿ ಈ ಸಂಖ್ಯೆ 1551ಕ್ಕೆ ಇಳಿದಿದೆ. ಅವುಗಳಲ್ಲಿ ಸುಮಾರು 129 ಸಹಕಾರಿ ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಸಹಕಾರಿ ಬ್ಯಾಂಕುಗಳ ಸಂಕಷ್ಟದ ಬಗೆಗೆ ವರದಿಗಳು ಆಗಾಗ್ಗೆ ಪ್ರಕಟಗೊಳ್ಳುತ್ತಲೇ ಇವೆ. ಮೇಲುನೋಟಕ್ಕೆ, ಜನಸಾಮಾನ್ಯರಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಏನೂ ವ್ಯತ್ಯಾಸ ಕಾಣುವುದಿಲ್ಲ. ಅಷ್ಟೇ ಅಲ್ಲ, ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ.

ರಾಜ್ಯಸರ್ಕಾರದ ಆಧೀನ: ಸಹಕಾರಿ ಬ್ಯಾಂಕುಗಳನ್ನು ಕೋ- ಅಪರೇಟಿವ್‌ ಅಕ್ಟ್ 1965ರ ಅಡಿಯಲ್ಲಿ ಸ್ಥಾಪಿಸಲಾಗುತ್ತಿದ್ದು, ಒಂದು ನಿರ್ದಿಷ್ಟ ತಾಲೂಕು, ಜಿಲ್ಲೆ ಮತ್ತು ರಾಜ್ಯಗಳಿಗೆ ಅದರ ಕಾರ್ಯ ವ್ಯಾಪ್ತಿ ಸೀಮಿತವಾಗಿರುತ್ತದೆ. ಅದರ ಉದ್ದೇಶ- ಸೇವಾ ವಲಯ, ಕೃಷಿ, ಸಣ್ಣ ಬಿಜಿನೆಸ್‌, ಗ್ರಾಮೀಣ ಉದ್ಯಮಗಳಿಗೆ, ವ್ಯಾಪಾರ- ವ್ಯವಹಾರಗಳಿಗೆ ಸಣ್ಣ ಪ್ರಮಾಣದ ಅರ್ಥಿಕ ನೆರವು ನೀಡುವುದು. ಗ್ರಾಹಕರಿಗೆ ಸೀಮಿತ ಬ್ಯಾಂಕಿಂಗ್‌ ಸೌಲಭ್ಯವನ್ನು ನೀಡುವುದು. ಸಹಕಾರಿ ಬ್ಯಾಂಕುಗಳಲ್ಲಿ, ವಿದೇಶಿ ವಿನಿಮಯ ವ್ಯವಹಾರ ಸಾಧ್ಯವಾಗುವುದಿಲ್ಲ. ಈ ಬ್ಯಾಂಕುಗಳ ನಿಯಂತ್ರಣ ರಿಜಿಸ್ಟ್ರಾರ್‌ ಆಫ್ ಕೋ- ಅಪರೇಟಿವ್‌ ಸೊಸೈಟಿ ಮೂಲಕ, ಸಂಬಂಧಪಟ್ಟ ರಾಜ್ಯ ಸರ್ಕಾರದ ಆಧೀನದಲ್ಲಿ ಇರುತ್ತದೆ. ಇದರ ವ್ಯವಹಾರಗಳೂ ಇತರ ಬ್ಯಾಂಕುಗಳಂತೆ “ಬ್ಯಾಂಕಿಂಗ್‌ ರೆಗ್ಯುಲೇಷನ್‌ ಆ್ಯಕ್ಟ್ 1949′ ಅನ್ವಯ, ರಿಸರ್ವ್‌ ಬ್ಯಾಂಕ್‌ನ ನಿರ್ದೇಶನದ ಅಡಿಯಲ್ಲಿ ನಡೆಯುತ್ತದೆ ನಿಜ. ಆದರೆ, ಸಹಕಾರಿ ಬ್ಯಾಂಕನ್ನು ಸೂಪರ್‌ ಸೀಡ್‌ ಮಾಡುವ ಅಧಿಕಾರ ರಿಸರ್ವ್‌ ಬ್ಯಾಂಕ್‌ಗೆ ಇರುವುದಿಲ್ಲ. ಮೇಲಿನ ಬಡ್ಡಿ ದರ ಮತ್ತು ಸಾಲದ ಮೇಲಿನ ಬಡ್ಡಿ ದರ ವಾಣಿಜ್ಯ ಬ್ಯಾಂಕ್‌ಗಳಿಗಿಂತ ತುಸು ಹೆಚ್ಚು ಎಂದು ಹೇಳಲಾಗುತ್ತದೆ.

ಕನಿಷ್ಠ ಬಂಡವಾಳ 25 ಲಕ್ಷ: ಸಹಕಾರಿ ಬ್ಯಾಂಕುಗಳಲ್ಲಿ ಸಿಬ್ಬಂದಿ ನೇಮಕಾತಿಯನ್ನು ಬಹುತೇಕ ಸ್ಥಳೀಯವಾಗಿ, ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಮಾಡಲಾಗುತ್ತದೆ. ಸಿಬ್ಬಂದಿಗಳ ಸಂಬಳ ಸೌಲಭ್ಯವನ್ನು ಸಂಬಂಧಪಟ್ಟ ಬ್ಯಾಂಕುಗಳೇ ನಿಗದಿಪಡಿಸುತ್ತವೆ. ಸಹಕಾರಿ ಬ್ಯಾಂಕುಗಳಲ್ಲಿ ಪ್ರಾಥಮಿಕ ಕ್ರೆಡಿಟ್‌ ಸೊಸೈಟಿಗಳು, ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳು ಎನ್ನುವ ಮೂರು ವಿಧಗಳಿವೆ. ಈ ಬ್ಯಾಂಕುಗಳ ಆಡಿಟ್‌ಅನ್ನು ರಾಜ್ಯ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ ಮಾಡುತ್ತವೆ. ಸಾಲಗಾರರು ಸದಸ್ಯರಾಗಿದ್ದರೆ, ಅವರಿಗೆ ಮತದಾನದ ಹಕ್ಕು ಇರುತ್ತದೆ. ಅವರು ಬ್ಯಾಂಕಿನ ನೀತಿ ನಿಯಮಾವಳಿಯನ್ನು ಬದಲಿಸಬಹುದು. ಒಂದು ಸಹಕಾರಿ ಬ್ಯಾಂಕನ್ನು ಆರಂಭಿಸಬೇಕಿದ್ದರೆ ಅರಂಭಿಕ ಮೂಲ ಬಂಡವಾಳ 25 ಲಕ್ಷ ರೂ. ಇರಬೇಕು. ಬ್ಯಾಂಕುಗಳಲ್ಲಿ ವ್ಯವಹಾರದ ಪ್ರಮಾಣ ಸಾಧಾರಣ ಮತ್ತು ಮಧ್ಯಮವಾಗಿದ್ದು, ದೇಶದ ಒಟ್ಟೂ ಬ್ಯಾಂಕ್‌ ವ್ಯವಹಾರದ 11% ವ್ಯವಹಾರ ನಡೆಯುತ್ತದೆ. ಗ್ರಾಹಕರ ಸಂಖ್ಯೆ ಕೂಡಾ ಬಹುತೇಕ ಕಡಿಮೆ ಇರುತ್ತದೆ. ಇವುಗಳ ಶೇರುಗಳು ಲಿಸ್ಟಿಂಗ್‌ ಆಗುವುದಿಲ್ಲ. ದೇಶದಲ್ಲಿ ಇರುವ ಒಟ್ಟು ಸಹಕಾರಿ ಬ್ಯಾಂಕುಗಳ ಸಂಖ್ಯೆ 1551. ಹೊಸ ಶಾಖೆ ತೆರೆಯುವುದಿದ್ದರೆ, ನಬಾರ್ಡ್‌ ಮೂಲಕ ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆಯಬೇಕು.

Advertisement

ಲಾಭ ಮತ್ತು ಸವಲತ್ತಿಗೆ ಪ್ರಾಮುಖ್ಯತೆ: ವಾಣಿಜ್ಯ ಬ್ಯಾಂಕುಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳು ಎನ್ನುವ ಮೂರು ವಿಧಗಳಿವೆ. ಈ ಬ್ಯಾಂಕುಗಳನ್ನು, ಬ್ಯಾಂಕಿಂಗ್‌ ರೆಗ್ಯುಲೇಷನ್‌ ಆ್ಯಕ್ಟ್ 1949ರ ಅಡಿಯಲ್ಲಿ ಸ್ಥಾಪಿಸಲಾಗುತ್ತದೆ. ಶೇರುದಾರರು ಇದರ ಮಾಲೀಕರು. ಇವು, ಒಂದು ರೀತಿಯಲ್ಲಿ ಜಾಯಿಂಟ್‌ ಸ್ಟಾಕ್‌ ಕಂಪನಿಯಂತೆ ಇರುತ್ತವೆ. ಇವುಗಳ ಕಾರ್ಯವ್ಯಾಪ್ತಿ ತೀರಾ ವಿಸ್ತಾರವಾಗಿದ್ದು ಅಖೀಲ ಭಾರತ ವ್ಯಾಪ್ತಿಯಲ್ಲಿ ಇರುತ್ತವೆ ಮತ್ತು ವಿದೇಶಗಳಲ್ಲೂ ಇರುತ್ತದೆ. ಈ ಬ್ಯಾಂಕುಗಳ ಉದ್ದೇಶ ವಾಣಿಜ್ಯ, ಉದ್ಯಮ, ವ್ಯವಹಾರಗಳಿಗೆ ಮತ್ತು ವೈಯಕ್ತಿಕ ಅವಶ್ಯಕತೆಗಳಿಗೆ ಸಾಲ ನೀಡಿ ಲಾಭ ಗಳಿಸುವುದು ಮತ್ತು ಗ್ರಾಹಕರಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್‌ ಸೌಲಭ್ಯದ ಜೊತೆ ಡೆಬಿಟ್‌- ಕ್ರೆಡಿಟ್‌ ಕಾರ್ಡ್‌ಗಳು, ವೆಲ್ತ್‌ ಮ್ಯಾನೇಜ್‌ಮೆಂಟ್‌, ಆಯಾತ- ನಿರ್ಯಾತ ಮತ್ತು ವಿದೇಶಿ ವಿನಿಮಯ ಮುಂತಾದ ಸವಲತ್ತುಗಳನ್ನು ಒದಗಿಸುವುದು. ಈ ಬ್ಯಾಂಕುಗಳು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ, ಹಣಕಾಸು ಮಂತ್ರಾಲಯ ಮತ್ತು ಪರೋಕ್ಷವಾಗಿ ಭಾರತೀಯ ಬ್ಯಾಂಕುಗಳ ಒಕ್ಕೂಟಗಳ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತವೆ.

ಗ್ರಾಹಕರೂ ಹೆಚ್ಚು, ವಹಿವಾಟೂ ಹೆಚ್ಚು: ಕಮರ್ಷಿಯಲ್‌ ಬ್ಯಾಂಕುಗಳಲ್ಲಿ ಸಿಬ್ಬಂದಿ ನೇಮಕಾತಿಯನ್ನು ಆಖRಆ, ಐಆಕಖಗಳು ಅಖೀಲ ಭಾರತ ಮಟ್ಟದಲ್ಲಿ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಮಾಡಿದರೆ Bank Board Bureo ಉನ್ನತ ಮಟ್ಟದ ನೇಮಕಾತಿ ಮತ್ತು ಬ್ಯಾಂಕುಗಳಿಗೆ “ನಿರ್ವಹಣೆ ಮತ್ತು ನಿಯಂತ್ರಣ’ ವಿಷಯವಾಗಿ ಮಾರ್ಗದರ್ಶನ ನೀಡುತ್ತದೆ. ರಾಜ್ಯ ಸರ್ಕಾರಗಳು ಸಿಬ್ಬಂದಿಗಳ ರಜೆ ಮತ್ತು ಸರ್ಕಾರದ ಜನಹಿತ ಕಾರ್ಯಕ್ರಮಗಳ ಅನುಷ್ಠಾನವನ್ನು ನೋಡಿಕೊಳ್ಳುತ್ತವೆ. ಭಾರತೀಯ ಬ್ಯಾಂಕುಗಳ ಒಕ್ಕೂಟ, ನೌಕರರ ಸಂಘಗಳ ಸಂಗಡ ಚರ್ಚಿಸಿ ಸಿಬ್ಬಂದಿಗಳ ಸಂಬಳ- ಸೌಲಭ್ಯವನ್ನು ನಿಗದಿಪಡಿಸುತ್ತದೆ. ವಾಣಿಜ್ಯ ಬ್ಯಾಂಕುಗಳ ಬಡ್ಡಿದರ (ಠೇವಣಿ ಮತ್ತು ಸಾಲದ ಮೇಲೆ) ತುಸು ಕಡಿಮೆ ಇರುತ್ತದೆ. ವಾಣಿಜ್ಯ ಬ್ಯಾಂಕುಗಳ ಆಡಿಟ್‌ಅನ್ನು ರಿಸರ್ವ್‌ ಬ್ಯಾಂಕ್‌ ಮತ್ತು Statutory Auditors ಮಾಡುತ್ತಾರೆ. ಸಾಲಗಾರರು ಖಾತೆ ಪೇಡಪ್‌ ಮೂಲ ಕ್ಯಾಪಿಟಲ್‌ 200 ಕೋಟಿ ಇರಬೇಕು ಮತ್ತು ಮೂರು ವರ್ಷಗಳ ಒಳಗೆ 300 ಕೋಟಿಗೆ ಹೆಚ್ಚಿಸಬೇಕು. ಗ್ರಾಹಕರ ಸಂಖ್ಯೆ ಗಣನೀಯವಾಗಿರುತ್ತದೆ ಮತ್ತು ವ್ಯವಹಾರದ ಪ್ರಮಾಣವೂ ಹೆಚ್ಚಿರುತ್ತದೆ. ಇದು, ದೇಶದ ಬ್ಯಾಂಕಿಂಗ್‌ ವ್ಯವಹಾರದ ಸುಮಾರು 74% ಇರುತ್ತದೆ. ಇವುಗಳ ಶೇರುಗಳು ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಆಗುತ್ತವೆ. ದೇಶದಲ್ಲಿ ಇರುವ ವಾಣಿಜ್ಯ ಬ್ಯಾಂಕುಗಳ ಸಂಖ್ಯೆ 92. ವಾಣಿಜ್ಯ ಬ್ಯಾಂಕುಗಳು ಹೊಸ ಶಾಖೆಯನ್ನು ತೆರೆಯುವುದಿದ್ದರೆ, ಅವು ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆಯಬೇಕಾಗುತ್ತದೆ.

ವಾಣಿಜ್ಯ ಬ್ಯಾಂಕುಗಳ ವೈಫ‌ಲ್ಯ ಅಪರೂಪ: ಸಹಕಾರಿ ಬ್ಯಾಂಕುಗಳಿಗೆ ಹೋಲಿಸಿದರೆ ವಾಣಿಜ್ಯ ಬ್ಯಾಂಕುಗಳು ವೈಫ‌ಲ್ಯ ಕಾಣುವುದು ತೀರಾ ಅಪರೂಪ ಅಥವಾ ಇಲ್ಲವೆಂದೇ ಹೇಳಬಹುದು. ಈವರೆಗೆ “ನ್ಯೂ ಬ್ಯಾಂಕ್‌ ಆಫ್ ಇಂಡಿಯಾ’ ಎನ್ನುವ ಒಂದೇ ಒಂದು ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕಿದ್ದು, ಅದನ್ನು 1993ರಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಜೊತೆ ವಿಲೀನಗೊಳಿಸಲಾಗಿತ್ತು. ಆ ಮೂಲಕ “ನ್ಯೂ ಬ್ಯಾಂಕ್‌ ಆಫ್ ಇಂಡಿಯಾ’ ಬ್ಯಾಂಕ್‌ನ ಗ್ರಾಹಕರ ಮತ್ತು ಸಿಬ್ಬಂದಿಗಳ ಹಿತ ಕಾಯಲಾಗಿತ್ತು. ಹಾಗೆಯೇ ಖಾಸಗಿ ಸ್ವಾಮ್ಯದ “ಗ್ಲೋಬಲ್‌ ಟ್ರಸ್ಟ್‌’ ಬ್ಯಾಂಕನ್ನು ಸರ್ಕಾರಿ ಸ್ವಾಮ್ಯದ “ಓರಿಯೆಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌’ನಲ್ಲಿ ವಿಲೀನಗೊಳಿಸಲಾಗಿತ್ತು.

ಭಾವನಾತ್ಮಕ ನಂಟು: ಬಹುತೇಕ ಸಹಕಾರಿ ಬ್ಯಾಂಕುಗಳು ಸ್ಥಳೀಯವಾಗಿದ್ದು, ಗ್ರಾಹಕರು ಅದರ ಜತೆ ಭಾವನಾತ್ಮಕ ನಂಟನ್ನು ಹೊಂದಿರುತ್ತಾರೆ. ತಮ್ಮ ಊರ ಬ್ಯಾಂಕ್‌ ಎಂದೋ, ತಮ್ಮ ಊರಿನ ಸಿಬ್ಬಂದಿಗಳಿರುವ ಬ್ಯಾಂಕ್‌ ಎಂದೆಲ್ಲಾ ಸಹಕಾರಿ ಬ್ಯಾಂಕಿಗೆ ಆದ್ಯತೆ ಕೊಟ್ಟಿರುತ್ತಾರೆ. ಗ್ರಾಹಕರ ಬ್ಯಾಂಕಿಂಗ್‌ ವ್ಯವಹಾರ ಒಂದು ನಿರ್ದಿಷ್ಟ ಪ್ರದೇಶದ ಗಡಿ ದಾಟಿದರೆ ಅಥವಾ ವ್ಯವಹಾರದ ಪ್ರಮಾಣ ಹೆಚ್ಚಿದ್ದರೆ ಅವರು ಸಾಮಾನ್ಯವಾಗಿ ಸಹಕಾರಿ ಬ್ಯಾಂಕ್‌ ಬಿಟ್ಟು ವಾಣಿಜ್ಯ ಬ್ಯಾಂಕುಗಳ ಕಡೆಗೆ ಮುಖ ಮಾಡುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ.

* ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next