Advertisement

ಮೇಲ್ಮನೆ ಮಾತಾದ ವೈಟ್‌ ಟಾಪಿಂಗ್‌ ವರದಿ

12:56 PM Feb 23, 2018 | Team Udayavani |

ವಿಧಾನ ಪರಿಷತ್ತು: ಬಿಬಿಎಂಪಿಯು ನಗರದಲ್ಲಿ ಅಭಿವೃದ್ಧಿಪಡಿಸಿರುವ ವೈಟ್‌ ಟಾಪಿಂಗ್‌ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ “ಉದಯವಾಣಿ’ ಗುರುವಾರ ಪುಟ 1 ಮತ್ತು ಪುಟ 4ರಲ್ಲಿ ಪ್ರಕಟಿಸಿದ ವರದಿ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.

Advertisement

ಪ್ರಶ್ನೋತ್ತರ ವೇಳೆಯಲ್ಲಿ “ವೈಟ್‌ ಟಾಪಿಂಗ್‌ ರಸ್ತೆ ಅಪಘಾತಕ್ಕೆ ಹರದಾರಿ’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಸ್ತಾಪಿಸಿದ ಬಿಜೆಪಿಯ ಹಿರಿಯ ಸದಸ್ಯ ರಾಮಚಂದ್ರಗೌಡ, ಸುಗಮ ಸಂಚಾರಕ್ಕಾಗಿ ಸರ್ಕಾರ ವೈಟ್‌ ಟಾಪಿಂಗ್‌ ವಿಧಾನದಡಿ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲಿ ಅಪಘಾತ ಹೆಚ್ಚಾಗುತ್ತಿರುವ ಬಗ್ಗೆ ಪತ್ರಿಕಾ ವರದಿ ಉಲ್ಲೇಖೀಸಿ ಆತಂಕ ವ್ಯಕ್ತಪಡಿಸಿದರು.

ಹೊರ ವರ್ತುಲ ರಸ್ತೆಯಲ್ಲಿ ಮೂರು ಕಿ.ಮೀ ಉದ್ದದ ವೈಟ್‌ ಟಾಪಿಂಗ್‌ ರಸ್ತೆಯಲ್ಲಿ ತಿಂಗಳ ಅಂತರದಲ್ಲಿ 8 ಅಪಘಾತ ಸಂಭವಿಸಿವೆ. ಇದರಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. 3 ಮಾರಣಾಂತಿಕ ಹಾಗೂ 5 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ ಎಂಬುದಾಗಿ ಉದಯವಾಣಿ ಪ್ರಕಟಿಸಿದ್ದ ವರದಿ ಉಲ್ಲೇಖೀಸಿದ ಅವರು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಾಕೀತು ಮಾಡಿದರು.

ಮೈಮೇಲಿನ ಬಟ್ಟೆ ಹರಿದಿದೆ: “ಮೈಮೇಲಿನ ಬಟ್ಟೆ ಹರಿದಿದೆ, ಟೈಲರ್‌ ಬಳಿ ಬಟ್ಟೆ ಹೊಲಿಸಲು ಹೋಗುತ್ತಿದ್ದೇವೆ’ ಎಂಬಂತಾಗಿದೆ ಬಿಬಿಎಂಪಿ ಕಾರ್ಯ ನಿರ್ವಹಣೆ. ರಸ್ತೆಗಳೆಲ್ಲಾ ಗುಂಡಿಬಿದ್ದು ಹಾಳಾಗಿರುವಾಗ ವೈಟ್‌ ಟಾಪಿಂಗ್‌ ಅಡಿ ಅಭಿವೃದ್ಧಿಪಡಿಸುವ ಅಗತ್ಯವಿದೆಯೇ. ಒಂದೆಡೆ ವೈಟ್‌ ಟಾಪಿಂಗ್‌ ರಸ್ತೆಯಲ್ಲಿ ಅಪಘಾತ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಸುಸ್ಥಿತಿಯ ಉತ್ತಮ ರಸ್ತೆಯನ್ನು ವೈಟ್‌ ಟಾಪಿಂಗ್‌ನಡಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

15 ದಿನದಲ್ಲಿ ಗುಂಡಿ ಮುಚ್ಚುವಿರಾ?: “ನನ್ನ ಅವಧಿಯಲ್ಲಿ 10,000 ಮದುವೆಗಳಿಗೆ ಹಾಜರಾಗಿದ್ದು, ನಗರದ ರಸ್ತೆಗಳ ಸ್ಥಿತಿಗತಿಯ ಸಂಪೂರ್ಣ ಅರಿವಿದೆ. ಪ್ರಮುಖ ಸಂಪರ್ಕ ರಸ್ತೆಗಳು, ಬಿಎಂಟಿಸಿ ಬಸ್‌ ಸಂಚರಿಸುವ ಮಾರ್ಗಗಳು ಗುಂಡಿಮಯವಾಗಿವೆ. ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿಪಡಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಬೇಕು. ಹೆಚ್ಚುವರಿ ಹಣ ನೀಡಿಯಾದರೂ ದುರಸ್ತಿ ಮಾಡಿಸಬೇಕು. 15 ದಿನದಲ್ಲಿ ರಸ್ತೆ ಗುಂಡಿ ಮುಚ್ಚುವಿರಾ?’ ಎಂದು ರಾಮಚಂದ್ರಗೌಡ ಪ್ರಶ್ನಿಸಿದರು.

Advertisement

ದಾಖಲೆ ಮಳೆಯಿಂದ ಹಿನ್ನಡೆ: ಇದಕ್ಕೆ ಉತ್ತರಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, “ನಗರದಲ್ಲಿ 14,000 ಕಿ.ಮೀ ಉದ್ದದ ರಸ್ತೆಗಳಿವೆ. ಮುಖ್ಯಮಂತ್ರಿಗಳ ನಗರೋತ್ಥಾನದಡಿ 2016-17 ಹಾಗೂ 2017-18ನೇ ಸಾಲಿನಲ್ಲಿ 2,300 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಬೇಕಿತ್ತು. ಮಳೆಗಾಲಕ್ಕೂ ಮುನ್ನ ಕೆಲಸ ಆರಂಭಕ್ಕೆ ಸಿದ್ಧತೆ ನಡೆಸಿತ್ತು. ಆದರೆ ದಾಖಲೆ ಮಳೆಯಾಗಿದ್ದರಿಂದ ಹಿನ್ನಡೆಯಾಯಿತು.

ನಗರದಲ್ಲಿ ವರ್ಷಕ್ಕೆ 900 ಮಿ.ಮೀ. ಮಳೆಯಾಗುತ್ತದೆ. ಆದರೆ ಕಳೆದ ಬಾರಿ ಎರಡು ತಿಂಗಳಲ್ಲಿ 700 ಮಿ.ಮೀ ಮಳೆಯಾಯಿತು. ಇದರಿಂದ ರಸ್ತೆಗಳು ಹಾಳಾದವು. ಇದೀಗ ರಸ್ತೆ ಅಭಿವೃದ್ಧಿ ಸಮರೋಪಾದಿಯಲ್ಲಿ ನಡೆದಿದೆ. ವೈಟ್‌ ಟಾಪಿಂಗ್‌ ರಸ್ತೆ 35ರಿಂದ 40 ವರ್ಷ ಬಾಳಿಕೆ ಬರುತ್ತದೆ. ಸಂಚಾರ ದಟ್ಟಣೆ ನಡುವೆ ಕೆಲಸ ಮಾಡಬೇಕಿರುವುದರಿಂದ ತುಸು ವಿಳಂಬವಾಗಿದೆ,’ ಎಂದು ತಿಳಿಸಿದರು.

ಜಾಗರೂಕರಾಗಿ ಚಾಲನೆ ಮಾಡಿ: “ವೈಟ್‌ ಟಾಪಿಂಗ್‌ನಡಿ ರಸ್ತೆ ಉತ್ತಮವಾಗಿದೆ ಎಂಬ ಕಾರಣಕ್ಕೆ ವೇಗವಾಗಿ ವಾಹನ ಚಾಲನೆ ಮಾಡದೆ ಜಾಗರೂಕತೆಯಿಂದ ಚಾಲನೆ ಮಾಡಬೇಕು. ರಸ್ತೆ ಚೆನ್ನಾಗಿದೆ ಎಂಬ ಕಾರಣಕ್ಕೆ ಅಪಘಾತ ಉಂಟಾಗುವುದು ವಿಪರ್ಯಾಸ. ವಿದೇಶಗಳಲ್ಲಿ ಸೂಕ್ತ ತರಬೇತಿ ನಂತರವಷ್ಟೇ ಚಾಲನಾ ಪರವಾನಗಿ ನೀಡಲಾಗುತ್ತದೆ. ನಮ್ಮಲ್ಲಿ ಉದಾರತೆಯಿಂದ ಚಾಲನಾ ಪರವಾನಗಿ ನೀಡಲಾಗುತ್ತದೆ. ವಾಹನ ಚಾಲನೆ ವೇಳೆ ಎಚ್ಚರ ವಹಿಸುವುದು ಮುಖ್ಯ,’ ಎಂದು ಸಚಿವ ಜಾರ್ಜ್‌ ಹೇಳಿದರು.

ನನ್ನ ಕಾಲದಲ್ಲೂ ಇತ್ತು- ನಿಮ್ಮ ಕಾಲದಲ್ಲೂ ಇದೆ: “ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ಹರಡುವುದರಿಂದ ಮಳೆ ಸುರಿದಾಗ ಅನಾಹುತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟಬೇಕಾದ ಎಂಜಿನಿಯರ್‌ಗಳು ಕಲೆಕ್ಷನ್‌ ಮಾಡಿಕೊಂಡು ಹೋಗುತ್ತಾರೆ. ನನ್ನ ಕಾಲದಲ್ಲೂ ಈ ಸಮಸ್ಯೆ ಇತ್ತು. ನಿಮ್ಮ ಕಾಲದಲ್ಲೂ ಇದೆ,” ಎಂದು ಬಿಜೆಪಿಯ ರಾಮಚಂದ್ರಗೌಡ ಹೇಳಿದರು. ಇದಕ್ಕೆ ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯಿಸಿ, “ಹಿಂದೆಲ್ಲಾ ಎಂಜಿನಿಯರ್‌ಗಳು ಎಲ್ಲ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಇದೀಗ ಎಲ್ಲ ಕೆಲಸವನ್ನು ಹೊರ ಗುತ್ತಿಗೆ ನೀಡಲಾಗಿದೆ. ಇಷ್ಟಾದರೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದಿಲ್ಲ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next