Advertisement

ಯತ್ರ ನಾರ್ಯಸ್ತು ಪೂಜ್ಯಂತೇ…

09:15 AM Mar 05, 2020 | mahesh |

ನಾವೂ ಗಂಡು ಹುಡುಗರಂತೆ ಗೋಲಿಯಾಡುತ್ತಿದ್ದೆವು. ಸೈಕಲ್‌ ಹೊಡೆಯುತ್ತಿದ್ದೆವು. ಈಜು ಕಲಿಯಲು ಹೋಗುತ್ತಿದ್ದೆವು. ಗಾಳಿಪಟ ಹಾರಿಸುತ್ತಿದ್ದೆವು. ಅವರು ನೀರಿನ ಕೊಡ ಹೆಗಲ ಮೇಲೆ ಹೊತ್ತು ತಂದರೆ, ನಾವು ಸೊಂಟದಲ್ಲಿ. ಅಷ್ಟೇ ವ್ಯತ್ಯಾಸ. ಆದರೆ, ವಯಸ್ಸು ಮಾಗಿದಂತೆಲ್ಲಾ ಲಿಂಗ ತಾರತಮ್ಯದ ಕುರಿತು ತುಸು ತಿಳಿಯತೊಡಗಿತ್ತು…

Advertisement

ಚಿಕ್ಕಂದಿನಲ್ಲಿ “ಕೊಂಡಾಡಿರಿ ಮಹಿಳೆಯಾಗಿರುವುದರ ಮಹದಾನಂದವನ್ನು…’ ಎಂಬ ಟ್ಯಾಗ್‌ಲೈನ್‌ ಹೊಂದಿದ ಗಾರ್ಡನ್‌ ವರೇಲಿಯ ವಿಜ್ಞಾಪನೆಯನ್ನು ಪತ್ರಿಕೆಗಳಲ್ಲಿ ನೋಡಿದಾಗಲೆಲ್ಲ “ವ್ಹಾ, ನಾನು ಹೆಣ್ಣು. ನಾನು ಅದೃಷ್ಟವಂತೆ’ ಅನ್ನಿಸುತ್ತಿತ್ತು. ಬರಬರುತ್ತಾ ಬಂಗಾರದ ಅಂಗಡಿಗಳಲ್ಲಿ, ಬಟ್ಟೆ ಬರೆಗಳಲ್ಲಿ ನಮಗಿರೋ ಆಯ್ಕೆ ನೆನೆದು “ಛೆ ಪಾಪ, ಗಂಡು ಮಕ್ಕಳಿಗೆ ಏನೇನೂ ಇರಲ್ಲ. ಅವೇ ಅಂಗಿ, ಚಡ್ಡಿ..’ಅನ್ನಿಸೋದು ಬಿಟ್ರೆ ವಿಶೇಷ ಯಾವ ಯೋಚನೆಯೂ ಬರುತ್ತಲೇ ಇರಲಿಲ್ಲ. ನಾವೂ ಗಂಡು ಹುಡುಗರಂತೆ ಗೋಲಿಯಾಡುತ್ತಿದ್ದೆವು. ಸೈಕಲ್‌ ಹೊಡೆಯುತ್ತಿದ್ದೆವು. ಈಜು ಕಲಿಯಲು ಹೋಗುತ್ತಿದ್ದೆವು. ಗಾಳಿಪಟ ಹಾರಿಸುತ್ತಿದ್ದೆವು. ಅವರು ನೀರಿನ ಕೊಡ ಹೆಗಲ ಮೇಲೆ ಹೊತ್ತು ತಂದರೆ, ನಾವು ಸೊಂಟದಲ್ಲಿ. ಅಷ್ಟೇ ವ್ಯತ್ಯಾಸ. ಇನ್ನು ಅವರಿಗೆ ನಮ್ಮ ಹಾಗೆ ಹೂಮಾಲೆ ಕಟ್ಟಲು ಬರುವುದಿಲ್ಲ. ರಂಗೋಲಿಯೂ ಬರಲ್ಲ. ಆದ್ದರಿಂದ ಅವರಿಗಿಂತ ಹೆಣ್ಣು ಮಕ್ಕಳಾದ ನಾವೇ ಜಾಣರು ಅಷ್ಟೇ.

“ಏ ಏನ ಗುರುರಾಜ ಅವರಿಗೆ ಮಗಳು ಹುಟ್ಯಾಳಂತ. ಜಿಲೇಬಿ ತಂದಾರ. ಬಾ’… ಒಂದಿನ ಅಪ್ಪ, ಅಮ್ಮನನ್ನು ಕರೆದದ್ದು ಕೇಳಿ, ಒಂಚೂರು ಕನ್‌ಫ್ಯೂಸ್‌ ಆಗಿದ್ದಂತೂ ಹೌದು. ಹೋದವಾರ ಹಿಂದಿನ ಮನೆಯ ಕುಲಕರ್ಣಿ ಅವರ ಮನೆಯಲ್ಲಿ ಗಂಡು ಹುಟ್ಟಿತ್ತು ಅಂತ ಅವರು ಫೇಡೆ ತಂದು ಕೊಟ್ಟಿದ್ದರು. ತಡೆಯಲಾಗದೇ ಅಪ್ಪನನ್ನು ಕೇಳಿದ್ದೆ. “ಅಪ್ಪ, ಗಂಡು ಹುಟ್ಟಿದರ ಫೇಡೆ, ಹೆಣ್ಣು ಹುಟ್ಟಿದರೆ ಜಿಲೇಬಿ.. ಹಿಂಗ್ಯಾಕಪಾ ಹಂಚತಾರ?’ ಅಪ್ಪ ಮಾತನಾಡುವುದಕ್ಕಿಂತ ಮೊದಲೇ ಹೊರಗೆ ಕಟ್ಟೆಯ ಮೇಲೆ ಕುಳಿತು ಹೂ ಬತ್ತಿ ಮಾಡುತ್ತಿದ್ದ ಅಜ್ಜಿ, “ಹುಚ್ಚಖೋಡಿ,ಗಂಡಸಮಕ್ಕಳು ಬಯಲುಬಂಗಾರ. ಅದಕ್ಕೇ ಅವು ಹುಟ್ಟಿದರ ಫೇಡೆ. ಖೋಡಿ ಹೆಣ್ಣಿನ ಜನ್ಮಕ್ಕ ಜಿಗಿಜಿಗಿ ಹತ್ತಿಕೊಂಡು ಬಂದದ್ದು. ಅದಕ್ಕೇ ಹೆಣ್ಣು ಮಕ್ಕಳು ಹುಟ್ಟಿದರ ಜಿಲೇಬಿ ಹಂಚೋದು.. ತಿಳಕೋ’ ಅಂದಾಗ ನಾಲ್ಕನೇ ಇಯತ್ತೆಯಲ್ಲಿದ್ದ ನಾನು ಏನೊಂದೂ ಅರಿಯದೇ ಪಿಳಿಪಿಳಿ ಕಣ್ಣು ಬಿಟ್ಟಿದ್ದೆ. “ಏ ಅವ್ವಾ ಸುಮ್ಮನಿರು’ ಅಂತ ಅಪ್ಪ ಅಜ್ಜಿಯನ್ನು ಗದರಿದ್ದರು.

ನಮ್ಮ ಮಧ್ಯಮ ವರ್ಗದ ಸಾಮಾನ್ಯ ಸಮಾಜದಲ್ಲಿ ಯಾವತ್ತೂ ಆಚರಣೆಗಳು ಅತಿಯಾದ ಮಹತ್ವ ಗಳಿಸಿಯೇ ಇಲ್ಲ. ಅಪರೂಪದ ಮಕ್ಕಳ ಹುಟ್ಟಿದ ದಿನವನ್ನೂ ಮುಂದೆ ಬರುವ ಹಬ್ಬದ ದಿನ ಆಚರಿಸುವ ಜನ ನಾವು. ಒಂದು ಎಣ್ಣೆ ನೀರು, ಪಾಯಸದೂಟವೇ ಆಚರಣೆ. ಇನ್ನು ಬಡತನದಿಂದ ಬಳಲಿದ ಜೀವಿಗಳಿಗೆ ಒಂದು ಹೊತ್ತಿನ ಊಟದ ಚಿಂತೆಯೇ ನಿತ್ಯದ್ದಾದಾಗ, ದಿನಾಚರಣೆ, ಅದೂ ಮಹಿಳೆಯರಿಗೆ… ಯಾರ ಕನಸು ಮನಸ್ಸಿನಲ್ಲೂ ಬಂದಿರಲಿಕ್ಕಿಲ್ಲ. ದಬ್ಟಾಳಿಕೆಯ ಸಹಿಸುವಿಕೆ, ಕ್ರೂರ ಸಮಾಜದಲ್ಲಿ ಮೌನದ ಸಹನೆ… ಯಾರು ಏನೇ ಹೆಸರು ಕೊಡಲಿ, ಎಂದಿಗೂ ಭಾವೋದ್ರೇಕಗಳು ಅಲುಗಾಡಿಸದ ಸಮಾಜ ವ್ಯವಸ್ಥೆ ಭಾರತೀಯ ಸಮಾಜದ್ದು. ಹೆಣ್ಣಿನ ಸಹನೆ, ಮೌನಗಳು ಇದರ ಬುನಾದಿ ಎಂಬುವುದರಲ್ಲಿ ಮಾತ್ರ ಎರಡು ಮಾತಿಲ್ಲ.

ಭಾರತೀಯ ಸಾಮಾಜಿಕ ವ್ಯವಸ್ಥೆಗಿಂತ ತುಸು ಭಿನ್ನವಾದ, ಸರ್ವರೂ ಸ್ವತಂತ್ರರೆಂಬ ಭಾವದ ವಿದೇಶೀ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಈ ಮಹಿಳಾ ದಿನಾಚರಣೆಯ ಪರಿಕಲ್ಪನೆ ಕಂಡಿದ್ದು. ಅಮೆರಿಕದ ಗಾರ್ಮೆಂಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು, ಲಿಂಗ ತಾರತಮ್ಯದ ವಿರುದ್ಧ ಪ್ರತಿಭಟಿಸಲು ಮಾರ್ಚ್‌ 19ರಂದು ಮಹಿಳಾ ದಿನಾಚರಣೆ ಆಚರಿಸಿರಾದರೂ ಒಂದು ನಿರ್ದಿಷ್ಟ ದಿನಾಂಕ ನಿರ್ಧಾರ ಆಗಿರಲಿಲ್ಲ. ಮುಂದೆ ಹಲವಾರು ವರ್ಷಗಳು ಆಗೀಗ ಸಂಭ್ರಮಾಚರಣೆ ನಡೆದರೂ ಈಗಿನ ಮಾರ್ಚ್‌ 8, ಎಂಬ ದಿನ 199 ದೇಶಗಳಿಂದ ಅಧಿಕೃತವಾಗಿ 1975 ರಲ್ಲಿ ಅಂಗೀಕೃತವಾಯಿತು. ಬಹುಶಃ ಒಂದು ಅಡಗಿದ ನೊಂದ ಧ್ವನಿಗೆ ಉಸಿರಾಗುವ ಉದ್ದೇಶದಿಂದ ಮಹಿಳಾ ದಿನಾಚರಣೆ ಆರಂಭವಾಯಿತು ಎಂದುಕೊಳ್ಳಬಹುದು.

Advertisement

ವಯಸ್ಸು ಮಾಗಿದಂತೆಲ್ಲಾ ಲಿಂಗ ತಾರತಮ್ಯದ ಕುರಿತು ತುಸು ತಿಳಿಯತೊಡಗಿತ್ತು. ರಾತ್ರಿ ಕುಡುಕ ಗಂಡನ ಏಟು ಸಹಿಸಿಕೊಂಡು ತುಟಿಯ ಗಾಯ ಕಾಣದಂತೆ ಸೆರಗು ಕಚ್ಚಿ ಪಾತ್ರೆ ತಿಕ್ಕಲು ಬರುತ್ತಿದ್ದ ಫಾತೀಮಾಳ ಜೀವನವೇ ಒಂದು ಪ್ರಶ್ನೆಯಾಗಿತ್ತು. ಕೋಟ್ಯಧಿಪತಿ ಗಂಡನ ಜೊತೆಗೆ ವರ್ಷಾನುವರ್ಷ ಸಂಸಾರ ಮಾಡಿದರೂ ಕನ್ಯಾಸೆರೆಯ ಬಂಧಿಯಾಗಿದ್ದ ಸರೋಜಾ, ಯಾವಾಗಲೂ ನಗುತ್ತಲೇ ಇರುತ್ತಿದ್ದಳು. ತಾನು ತುಟಿ ಕಚ್ಚಿ ಹಿಡಿದ ಬಿಕ್ಕು ಯಾರಿಗೂ ಕೇಳಗೊಡುತ್ತಿರಲಿಲ್ಲ. ಮೈಮೇಲೆ ಹ¨ªೆರಗಿದ ಗಿಣಿಮರಿಯಂತಹ ಎಳೆಯ ಕಂದಮ್ಮಗಳ ಧ್ವನಿ ನೋಟಿನ ಬಂಡಲ್ಲುಗಳಲ್ಲೋ, ಚಿನ್ನದ ಇಟ್ಟಿಗೆಗಳ ಕೆಳಗೋ ಹೂತು ಹೋಗುತ್ತಿತ್ತು. ಮೊದಲೇ ಮದುವೆಯಾಗಿದ್ದ ಗೆಳತಿಯ ಗಂಡ, ಪೋಷಕರ ಒತ್ತಾಯಕ್ಕೆ ಇವಳನ್ನೂ ಮದುವೆಯಾಗಿ ಪೋಷಕರೊಟ್ಟಿಗೇ ಬಿಟ್ಟು ಕೈತೊಳೆದುಕೊಂಡಿದ್ದ. ಹೆಂಡತಿ ಸತ್ತ ವರ್ಷದೊಳಗೆ ಮತ್ತೆ ಮದುವೆಯಾಗಿ ಹಾಯಾಗಿರುತ್ತಿದ್ದ ಗಂಡಸರೂ, ಗಂಡ ಸತ್ತ ದಿನದಿಂದ ಅತ್ಯಂತ ಪ್ರೀತಿಯ ಸಂಪಿಗೆ ಹೂವನ್ನೂ ಕದ್ದು ಮೂಸುವ ಹೆಂಗಸರ ಮಧ್ಯೆ ಏಕೀ ತಾರತಮ್ಯ.. ಕೊನೆಗೂ ತಿಳಿಯಲೇ ಇಲ್ಲ. ಮುಂದೆ ತುಸು ಓದು… ಅವಳು ಕ್ಷೇತ್ರ, ಸಂತತಿ ಸದೃಢವಾಗಿರಲೆಂದು ಈ ವ್ಯವಸ್ಥೆ.. “ಓಹ್‌. ಇದ್ದರೂ ಇರಬಹುದು. ಯತ್ರ ನಾರ್ಯಸ್ತು ಪೂಜ್ಯಂತೇ ಅಂದವರಲ್ಲವೇ ನಾವು. ಆದಿಶಕ್ತಿಯ ರೂಪದಲ್ಲಿ ಹೆಣ್ಣನ್ನು ಕಂಡವರು. ಆದರೂ ಎಲ್ಲಿ ಎಡವಟ್ಟಾಯಿತು?ಬಹುಶಃ ಹೊಡೆತದ ಮೇಲೆ ಸೆರಗು ಮುಚ್ಚಿಕೊಳ್ಳುವ ಹೆಣ್ಣಾಗಿ, ಸುಳ್ಳು ಹೇಳುವ ಅಮ್ಮನಾಗಿ, ನೋವ ನುಂಗುವ ಅವಳ ಈ ಗುಣಗಳೇ ಅವಳಿಗೆ ಮುಳುವಾಗಿಬಿಟ್ಟವೇ? ಬಹುಶಃ ಸರಳರೇಖೆಯಂತಹ ಜೀವನ ಪಡೆದ ಕೆಲ ಭಾಗ್ಯಶಾಲಿಗಳಿಗೆ ಬಹುಶಃ ಈ ತೊಳಲಾಟ ಅರಿವಿಗೆ ಬರಲಿಕ್ಕಿಲ್ಲ. ಆಸ್ಪತ್ರೆಯ ವಾರ್ಡ್‌ ಮೇಲೆ ವರ್ಷಾನುಗಟ್ಟಲೇ ನರಳಿ ಇಚ್ಛಾಮರಣ ಕೋರಿದ ಅರುಣಾ ಶಾನಭಾಗ್‌ ಅಂಥವರ ನೆನಪಾದರೆ ದೇವರೇ ಹೆಣ್ಣು ಮಕ್ಕಳನ್ನು ಕೊಡಬೇಡ.’ ಎನ್ನುವಂತಾಗುವುದು ನಿಜ.

ಏನೆಲ್ಲಾ ಸಾಧಿಸಿಯಾಯಿತು ನಾವು. ಕವಿಯೊಬ್ಬನ ಮಾತಿನಂತೆ ಹೆಣ್ಣೆಂದರೆ ಒಂದು ಕನಸು.. ಹೆಣ್ಣೆಂದರೆ ಅದೇ ವಾಸ್ತವ. ಎಂತಹ ವಿರೋಧಾಭಾಸವಿದು. ಹೌದು. ಹೀಗೆಯೇ ಹೆಣ್ಣಿನ ಜೀವನ. ಗಗನಕ್ಕೆ ಹಾರಿದರೂ, ನಾಳಿನ ತಿಂಡಿಯ ಚಿಂತೆ ಹೊತ್ತು. ಸಾಗರದಾಳಕ್ಕೆ ಇಳಿದರೂ, ತೇಲಿಸುವ ಮನೆಯ ಚಿಂತೆ. ತನ್ನತನಕ್ಕಾಗಿ ಬಡಿದಾಡುವ ಅನಿವಾರ್ಯತೆಯಲ್ಲಿ ಅವಳು ಪಾಶ್ಚಾತ್ತೀಕರಣಕ್ಕೆ ತುಸು ತುಸುವಾಗಿ ಬಾಗುತ್ತಿರುವುದೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಯಾವುದೇ ಒತ್ತಾಯವಿರದೇ ಆಕೆಗೆ ಸಿಗಬೇಕಾದ ಗೌರವ ಆಕೆಗೆ ಸಿಗಲಿ. ಸುಭದ್ರ, ಸತ್ವಯುತ ಬಾಳು ಅನಾಯಸವಾಗಿ ಆಕೆಗೆ ಒದಗಲಿ. ಇಂತಹ ಒಂದು ದಿನದ ಆಚರಣೆಯ ಅವಶ್ಯಕತೆ ಮಹಿಳೆಗೆ ಬಾರದೇ ಹೋಗಲಿ ಎಂಬುದೇ ಆಶಯ.

-ದೀಪಾ ಜೋಷಿ

Advertisement

Udayavani is now on Telegram. Click here to join our channel and stay updated with the latest news.

Next