Advertisement

“ಮಾಲ್ಯಾಧಾರಿತ’ರಾಜಕಾರಣ ಎಲ್ಲಿ ಹೋಯಿತು?

11:33 PM Jul 20, 2019 | Lakshmi GovindaRaj |

ಬೆಂಗಳೂರು: ಶಾಸಕರು ಕೋಟಿ ಕೋಟಿ ರೂ.ಗಳಿಗೆ ಮಾರಾಟದ ವಸ್ತುಗಳಾಗಿದ್ದಾರೆಂದು ವಿಧಾನಸಭೆಯಲ್ಲೇ ಪರಸ್ಪರ ಆರೋಪ -ಪ್ರತ್ಯಾರೋಪ ಮಾಡಿಕೊಳ್ಳುವ ಮೂಲಕ ರಾಜ್ಯ ವಿಧಾನಮಂಡಲ ಇತಿಹಾಸಕ್ಕೆ ಕಪ್ಪು ಚುಕ್ಕೆ ಬಿದ್ದಂತಾಗಿದೆ. ಗುರುವಾರ ಮತ್ತು ಶುಕ್ರವಾರ ವಿಧಾನಸಭೆಯಲ್ಲಿ ನಡೆದ ವಿದ್ಯಮಾನಗಳು ಒಂದು ಕಾಲದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕದ ಪ್ರಸ್ತುತ ರಾಜಕೀಯ ಯಾವ ಹಂತ ತಲುಪಿದೆ ಎಂಬುದಕ್ಕೆ ಸಾಕ್ಷಿಯಾದಂತಿತ್ತು.

Advertisement

ಸದನದ ಸದಸ್ಯರೇ, “ನನಗೆ ಮೂವತ್ತು ಕೋಟಿ ರೂ. ಆಫ‌ರ್‌ ಬಂದಿತ್ತು, ನನ್ನ ಮನೆ ಬಾಗಿಲಿಗೆ ಐದು ಕೋಟಿ ರೂ. ತಂದಿಟ್ಟುಹೋಗಿದ್ದರು’ ಎಂದು ಹೇಳಿದ್ದು, ಮತ್ತೂಬ್ಬ ಸದಸ್ಯರು, “ನಮ್ಮದೇ ಪಕ್ಷದ ಶಾಸಕರೊಬ್ಬರು ಸಾಲ ತೀರಿಸಬೇಕು ಎಂದು ಹಣಕ್ಕಾಗಿ ತನ್ನ ಬಳಿ ಬಂದಿದ್ದರು. ಬಿಜೆಪಿಯವರು ನನಗೆ ಇಂತಿಷ್ಟು ಕೋಟಿ ರೂ. ಆಫ‌ರ್‌ ಮಾಡಿದ್ದಾರೆ ಎಂದು ತಿಳಿಸಿದ್ದರು. ನನ್ನ ತಂದೆ-ತಾಯಿ, ಹೆಂಡತಿ-ಮಕ್ಕಳ ಮೇಲಾಣೆ ಇದು ಸತ್ಯ’ ಎಂದು ಹೇಳಿದ್ದು ಕಲಾಪದಲ್ಲಿ ದಾಖಲೆಯೂ ಆಗಿ ಹೋಯಿತು.

2006ರ ನಂತರ ರಾಜ್ಯದಲ್ಲಿ ಆರಂಭವಾದ ಅಧಿಕೃತ ರೆಸಾರ್ಟ್‌ ರಾಜಕಾರಣದ ಹಾದಿ ಹದಿಮೂರು ವರ್ಷಗಳಲ್ಲಿ ಈ ಹಂತಕ್ಕೆ ಬಂದು ತಲುಪಿದ್ದು, ಸದನವು ಒಳ ಒಪ್ಪಂದಗಳು ಹಾಗೂ ರಹಸ್ಯ ಮಾತುಕತೆಗಳು ಬಯಲಾಗುವ ವೇದಿಕೆಯಾದಂತಾಗಿದೆ. ವಿಧಾನಸಭೆ ದೇಗುಲ, ಇಲ್ಲಿ ಬರಲು ಪಡಬೇಕಾದ ಶ್ರಮ, ಹೋರಾಟ, ಎದುರಿಸಬೇಕಾದ ಸವಾಲು, ಲಕ್ಷಾಂತರ ಜನರ ಆಶಯಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಈ ಎಲ್ಲ ಅಂಶಗಳು “ನಗಣ್ಯ’ ಎಂಬಂತಾಗಿದೆ. ಇಷ್ಟು ದಿನ ಹೊರಗೆ ಕದ್ದು ಮುಚ್ಚಿ ನಡೆಯುತ್ತಿದ್ದ “ವ್ಯವಹಾರ’ಗಳು ಇದೀಗ ಸದನದಲ್ಲೇ ಚರ್ಚೆಯಾಗುವಂತಾಗಿದೆ.

ಎರಡು ದಿನಗಳ ಕಲಾಪದಲ್ಲಿ ವಿಶ್ವಾಸಮತ ನಿರ್ಣಯ ಮಂಡನೆ, ಚರ್ಚೆ, ಕ್ರಿಯಾಲೋಪ, ಸುಪ್ರೀಂಕೋರ್ಟ್‌ ತೀರ್ಪು, ವಿಪ್‌ ಹಾಗೂ ಅನರ್ಹತೆ ವಿಚಾರ, ರಾಜ್ಯಪಾಲರ ಕಾರ್ಯವ್ಯಾಪ್ತಿ, ಸ್ಪೀಕರ್‌ ಕಾರ್ಯವ್ಯಾಪ್ತಿ, ಮುಖ್ಯಮಂತ್ರಿ ಜವಾಬ್ದಾರಿ ಇದೆಲ್ಲವೂ ಎರಡು ದಿನಗಳಲ್ಲಿ ಚರ್ಚೆಯಾಗಿ ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷದ ಸ್ವರೂಪ ಪಡೆದಿದ್ದು ಒಂದು ಕಡೆ.

ಆದರೆ, ಸದನದಲ್ಲೇ ಆದ ಚರ್ಚೆಯಂತೆ ಮಾರುಕಟ್ಟೆಯಲ್ಲಿ ದನ, ಕರು, ವಸ್ತು ಖರೀದಿಸುವಂತೆ ಶಾಸಕರ ಖರೀದಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದು, ಖುದ್ದು ಸ್ಪೀಕರ್‌, ನಿಮ್ಮ ಹೊಲಸಿಗೆ, ಸ್ವಾರ್ಥಕ್ಕೆ, ವ್ಯಾಪಾರಕ್ಕೆ ಎಂಬ ಪದ ಬಳಸಿದ್ದು, ಹೊಟ್ಟೆಯಲ್ಲಿರುವ ಗಲೀಜೆಲ್ಲಾ ಹೊರಗೆ ಬರಲಿ, ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರು ಹೊಟ್ಟೆಗೆ ಏನು ತಿನ್ನುತ್ತಾರೆಂದು ಆಕ್ರೋಶ ಹೊರಹಾಕಿದ್ದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಹಾದಿ ಹಿಡಿದಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಟೇಪ್‌ ಹಗರಣ: ರಾಜ್ಯದಲ್ಲಿ ಶಾಸಕರನ್ನು ಸೆಳೆಯುವುದು ಹೊಸದಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೂ ಮುನ್ನ 1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಉರುಳಿಸಲು ವೀರಪ್ಪ ಮೊಯ್ಲಿ ಅವರು ಸಿ.ಬೈರೇಗೌಡರಿಗೆ ಹಣ ನೀಡಿ ಕಾಂಗ್ರೆಸ್‌ಗೆ ಸೆಳೆಯಲು ಯತ್ನಿಸಿದ್ದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ಯಡಿಯೂರಪ್ಪ ಅವರು ಗುರುಮಿಟ್ಕಲ್‌ ಶಾಸಕ ನಾಗನಗೌಡ ಕುಂದಕೂರ್‌ ಸೆಳೆಯಲು ಅವರ ಪುತ್ರನ ಮೂಲಕ ಯತ್ನಿಸಿದ್ದರು ಎಂಬ ಆಡಿಯೋ ಸಹ ದೊಡ್ಡ ಸದ್ದು ಮಾಡಿತ್ತು. ಸದನದಲ್ಲೂ ಇದು ಪ್ರತಿಧ್ವನಿಸಿತ್ತು. ಆದರೆ, ಈ ಬಾರಿ ಸದನದ ಸದಸ್ಯರೇ ಕೋಟಿ ಕೋಟಿ ರೂ. ಆಫ‌ರ್‌ ಬಗ್ಗೆ ಸದನದಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕೆ ಆಣೆ-ಪ್ರಮಾಣದ ಸಾಕ್ಷಿ ಒದಗಿಸುತ್ತಿದ್ದಾರೆ.

ಆಂಧ್ರದಲ್ಲೂ ಆಗಿತ್ತು: ಹಿಂದೊಮ್ಮೆ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್‌.ಟಿ.ರಾಮರಾವ್‌ ಅವರು 1984 ರಲ್ಲಿ ಹೃದಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಗ ಅವರದ್ದೇ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ನಾದೆಂಡ್ಲ ಭಾಸ್ಕರ್‌ರಾವ್‌ ಅವರು ಬಂಡಾಯ ಎದ್ದು ಶಾಸಕರ ಬಲ ತಮಗಿದೆ ಎಂದು ರಾಜ್ಯಪಾಲರಿಗೆ ಪತ್ರ ಸಲ್ಲಿಸಿ ಮುಖ್ಯಮಂತ್ರಿಯೂ ಆಗಿದ್ದರು. ಆಗ ರಾಮರಾವ್‌ ಅವರು “ಚೈತನ್ಯರಥಂ’ಯಾತ್ರೆ ನಡೆಸಿ ಎಲ್ಲ ಪಕ್ಷಗಳ ಬೆಂಬಲ ಪಡೆದು ಹೋರಾಟ ಮಾಡಿ ಮತ್ತೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಕರ್ನಾಟಕದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಮೆರಿಕಕ್ಕೆ ತೆರಳಿದ್ದಾಗ ತಮ್ಮ ಹಾಗೂ ಮೈತ್ರಿ ಪಕ್ಷದ ನಾಯಕರ ವಿಶ್ವಾಸಾರ್ಹ ಶಾಸಕರೇ ಸೈಲೆಂಟ್‌ ಆಪರೇಷನ್‌ಗೊಳಗಾಗಿ ಮುಂಬೈ ವಿಶೇಷ ವಿಮಾನ ಹತ್ತಿ ಹೋಟೆಲ್‌ ಸೇರಿಕೊಂಡರು.

150 ಶಾಸಕರ ಕೇರ್‌ ಆಫ್ ಅಡ್ರೆಸ್‌ ಹೋಟೆಲ್‌-ರೆಸಾರ್ಟ್‌: ಹದಿನೈದು ದಿನಗಳಿಂದ ರಾಜ್ಯದ 224 ಶಾಸಕರಲ್ಲಿ ಮೂರೂ ಪಕ್ಷದ ಸುಮಾರು 150 ಶಾಸಕರು ಹೋಟೆಲ್‌ ಹಾಗೂ ರೆಸಾರ್ಟ್‌ನಲ್ಲೇ ವಾಸ್ತವ್ಯ ಇದ್ದಾರೆ. ಕೆಲವು ಶಾಸಕರ ಫೋನ್‌ ಆನ್‌ ಇದೆ, ಕೆಲವರದ್ದು ನಾಟ್‌ ರೀಚಬಲ್‌ ಇದೆ, ಮತ್ತೆ ಕೆಲವರದು ಸಿಮ್‌ ಬದಲಾವಣೆಯಾಗಿ ಹೊಸ ನಂಬರ್‌ ಬಂದಿದೆ. ಆ ನಂಬರ್‌ ಸೀಮಿತ ಕರೆಗಳಿಗಷ್ಟೇ ಸಂಪರ್ಕ ಸಿಗುತ್ತಿದೆ. ಇದು ರಾಜ್ಯದ ಪರಿಸ್ಥಿತಿ. ಮೂರೂ ಪಕ್ಷಗಳ ನಾಯಕರು ತಮ್ಮ ಶಾಸಕರನ್ನೇ ನಂಬದ, ವಿಧಾನಸಭೆಯಲ್ಲಿ ಶೌಚಾಲಯಕ್ಕೆ ಹೋದರೂ, ಮೊಗಸಾಲೆಯಲ್ಲಿ ಕುಳಿತರೂ ಹಿಂಬಾಲಿಸುವ ಸ್ಥಿತಿಗೆ ಬಂದು ತಲುಪಿದೆ. ಗುರುವಾರ, ಶುಕ್ರವಾರದಂದು ವಿಧಾನಸಭೆಯಲ್ಲಿ ಶಾಸಕರ ಕಾಯಲು ನಾಯಕರೇ “ಬೌನ್ಸರ್‌’ಗಳಾಗಿದ್ದರು.

ಜಂಗೀಕುಸ್ತಿಗೆ ಸೀಮಿತ: ದಿಢೀರ್‌ ರಾಜಕೀಯ ವಿದ್ಯಮಾನಗಳು ನಡೆದಿರದಿದ್ದರೆ ಜುಲೈ 12 ರಂದು ನಿಗದಿಯಂತೆ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿ ಸಂತಾಪ ನಿರ್ಣಯದ ನಂತರ ಪ್ರಶ್ನೋತ್ತರ, ಜನಸಾಮಾನ್ಯರಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಪ್ರಸ್ತಾಪ ಸೇರಿ ಜುಲೈ 26 ರವರೆಗೆ ಕಲಾಪ ನಡೆಯಬೇಕಿತ್ತು. ಏಳು ದಿನ ಇದ್ಯಾವುದೂ ಇಲ್ಲದೆ ಅಂತ್ಯಗೊಂಡಿದೆ. ಈಗಿನ ಸ್ಥಿತಿ ನೋಡಿದರೆ ಮುಂದಿನ ವಾರವೂ ವಿಶ್ವಾಸಮತ ಬಿಟ್ಟು ಬೇರ್ಯಾವುದೇ ಕಾರ್ಯಕಲಾಪ ನಡೆಯುವುದು ಅನುಮಾನ. ಹೀಗಾಗಿ, ಹನ್ನೆರಡು ದಿನ ಸರ್ಕಾರ ಉಳಿಸಿಕೊಳ್ಳುವ ಹಾಗೂ ಪತನಗೊಳಿಸುವ ಜಂಗಿಕುಸ್ತಿಗಷ್ಟೇ ಸೀಮಿತವಾಗಬಹುದು.

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next