Advertisement
ಪುತ್ತೂರಿನಿಂದ 2 ಕಿ.ಮೀ. ಮುಂದಕ್ಕೆ ಸಾಗಿದರೆ ದರ್ಬೆ ವೃತ್ತ ಎದುರಾಗುತ್ತದೆ. ಇಲ್ಲಿ ರಸ್ತೆ ವಿಭಜನೆ ಆಗಿದ್ದು, ಒಂದು ರಸ್ತೆ ಸುಳ್ಯಕ್ಕೆ ಹಾಗೂ ಇನ್ನೊಂದು ಕಾಣಿಯೂರಿಗೆ ಸಾಗುತ್ತದೆ. ಪುತ್ತೂರಿನಿಂದ ಹೋಗುವ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಈ ಎರಡು ರಸ್ತೆಗಳಿಂದ ಪುತ್ತೂರಿಗೆ ಆಗಮಿಸುವ ವಾಹನಗಳು ಅಪಾಯವನ್ನು ಎದುರು ನೋಡುತ್ತಿವೆ.
ದರ್ಬೆ ರಸ್ತೆಯ ಅವೈಜ್ಞಾನಿಕ ವೃತ್ತದ ಬಗ್ಗೆ ಈ ಹಿಂದೆಯೇ ನಗರಸಭೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆ ಸಂದರ್ಭ, ಅಶ್ವತ್ಥ ಕಟ್ಟೆಯ ಬಳಿ ಹಂಪ್ಸ್ ಹಾಕಲಾಗಿತ್ತು. ಇದರಿಂದ ಕಾಣಿಯೂರು ಭಾಗದಿಂದ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಸುಲಭ ಸಾಧ್ಯವಾಯಿತು. ವಾಹನ ಸವಾರರು ಸ್ವಲ್ಪ ಸಮಯ ನಿರಾಳರಾಗಿದ್ದರು. ಇದೀಗ ಹಂಪ್ಸ್ ಕಿತ್ತು ಹೋಗಿವೆ. ಮತ್ತೆ ಸಮಸ್ಯೆ ಮುನ್ನೆಲೆಗೆ ಬಂದಿದೆ. ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನಗಳು ಕಾಣಿಯೂರು ರಸ್ತೆಯಿಂದ ವೇಗವಾಗಿ ಸುಳ್ಯ- ಪುತ್ತೂರು ರಸ್ತೆಗೆ ಧಾವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Related Articles
Advertisement
ವೇಗಕ್ಕೆ ಕಡಿವಾಣಸುಳ್ಯ ಕಡೆಯಿಂದ ಆಗಮಿಸುವ ವಾಹನಗಳು ವೇಗವಾಗಿ ಮುಖ್ಯರಸ್ತೆಯಿಂದ ಸಾಗುತ್ತದೆ. ಇಲ್ಲಿ ಡಿವೈಡರ್ ಇದೆಯಾದರೂ, ಕಾಣಿಯೂರು ಭಾಗದ ವಾಹನಗಳನ್ನು ನಿಯಂತ್ರಿಸಲು ಅಥವಾ ಸುಳ್ಯ ಭಾಗದಿಂದ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಇದು ಸಮರ್ಥವಾಗಿಲ್ಲ. ಕಾಣಿಯೂರು ಭಾಗದ ವಾಹನಗಳು ನೇರವಾಗಿ ಮುಖ್ಯರಸ್ತೆಗೆ ಬಂದರೆ, ಸುಳ್ಯ ಕಡೆಯಿಂದ ಬರುವ ವಾಹನಗಳಿಗೆ ಢಿಕ್ಕಿ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಮಾತ್ರವಲ್ಲ, ಕಾಣಿಯೂರು ಭಾಗದ ವಾಹನಗಳು ನೇರವಾಗಿ ಬರುವುದರಿಂದ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಹೋಗುವ ವಾಹನಗಳ ಚಾಲಕರು ಗಲಿಬಿಲಿಗೆ ಒಳಗಾಗುತ್ತಾರೆ. ವೃತ್ತ ಅಭಿವೃದ್ಧಿಗೆ ಕ್ರಮ
ಪುತ್ತೂರು ಪೇಟೆಯ ಮೂರು ವೃತ್ತಗಳನ್ನು ಅಭಿವೃದ್ಧಿ ಪಡಿಸಲಿದ್ದು, ಇದರಲ್ಲಿ ದರ್ಬೆ ವೃತ್ತವೂ ಸೇರಿದೆ. ಇದನ್ನು ಯಾವ ರೀತಿ ಅಭಿವೃದ್ಧಿ ಪಡಿಸುವುದು ಎಂಬ ಬಗ್ಗೆ ಎಸ್ಟಿಮೇಷನ್ ಸಿದ್ಧ ಪಡಿಸಲು ತಿಳಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸದ್ಯ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ.
- ರೂಪಾ ಶೆಟ್ಟಿ, ಪೌರಾಯುಕ್ತೆ,
ಪುತ್ತೂರು ನಗರಸಭೆ ಗಣೇಶ್ ಎನ್. ಕಲ್ಲರ್ಪೆ