Advertisement

ಸೈಕಲ್‌ ಹೇಗಿದೆ? ಅಧಿಕಾರಿಗಳು ನೋಡ್ತಿಲ್ಲ!

11:21 AM Jun 12, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರವು 8ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುವ ಸೈಕಲ್‌ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ ಹತ್ತು ದಿನ ಕಳೆದರೂ, ಒಂದೇ ಒಂದು ಜಿಲ್ಲೆಯ ಅಧಿಕಾರಿಗಳು ಇದಕ್ಕೆ ಸೂಕ್ತ ಸ್ಪಂದನೆ ನೀಡಿಲ್ಲ.

Advertisement

ಶಾಲಾ ಮಕ್ಕಳಿಗೆ ಸೈಕಲ್‌ ವಿತರಿಸುವಾಗ ಪ್ರತಿ ವರ್ಷವೂ ವಿಳಂಬವಾಗುತ್ತದೆ. ಅಲ್ಲದೇ ಬಹುತೇಕ ಸೈಕಲ್‌ ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಗುಣಮಟ್ಟ ಪರಿಶೀಲಿಸಿ, ವಿಳಂಬವಿಲ್ಲದೆ ಸೈಕಲ್‌ ವಿತರಿಸಬೇಕೆಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ಹಂಚಿಕೆಯಾಗಲಿರುವ ಸೈಕಲ್‌ನ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಎರಡು ಪ್ರತ್ಯೇಕ ಸಮಿತಿ ರಚಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಸಂಬಂಧಪಟ್ಟ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ(ಡಿವೈಪಿಸಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒಳಗೊಂಡ ಜಿಲ್ಲಾಮಟ್ಟದ ತಂಡ ಹಾಗೂ ನಾಲ್ಕು ವಿಭಾಗದ ಸಹ ನಿರ್ದೇಶಕರು, ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು ಮತ್ತು ಸಂಬಂಧಿಸಿದ ಜಿಲ್ಲಾ ಡಯಟ್‌ ಪ್ರಾಂಶುಪಾಲರು ಸೇರಿರುವ ವಿಭಾಗೀಯ ಮಟ್ಟದ ತಂಡ ರಚಿಸಲಾಗಿದೆ.

ಸರ್ಕಾರಿ ಅನುದಾನಿತ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ವಿದ್ಯಾರ್ಥಿನಿಲಯದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸುವ ಸೈಕಲ್‌ ಗುಣಮಟ್ಟ ಪರಿಶೀಲನೆಯ ತಂಡದ ಕಾರ್ಯ ವೈಖರಿ ಹೇಗಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ವಿತರಣಾ ಪೂರ್ವದಲ್ಲಿ ಬೈಸಿಕಲ್‌ ಜೋಡಣೆ, ಸುರಕ್ಷತೆ ಇತ್ಯಾದಿ ಮಾರ್ಗಸೂಚಿ ನೀಡಲಾಗಿದೆ. ಆದರೂ, ಪರಿಶೀಲನಾ ವರದಿ ಸೂಕ್ತ ಸಮಯದಲ್ಲಿ ಬಂದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳಿಂದಲೇ ವಿಳಂಬ:
ಸೈಕಲ್‌ ವಿತರಿಸುವ ಮೊದಲು ಸೈಕಲ್‌ನ ಗುಣಮಟ್ಟ, ಬಣ್ಣ ಹಾಗೂ ಸೈಕಲ್‌ನ ಎಲ್ಲಾ ಭಾಗವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎರಡು ತಂಡಕ್ಕೂ ಸೂಚಿಸಲಾಗಿದೆ. ಜತೆಗೆ ಪ್ರತಿ ಶನಿವಾರ ಅದರ ಪರಿಷ್ಕೃತ ವರದಿಯನ್ನು ತುರ್ತಾಗಿ ಶಿಕ್ಷಣ ಇಲಾಖೆಗೆ ಇ- ಮೇಲ್‌ ಮಾಡುವಂತೆ ಸೂಚಿಸಿ, ಇ-ಮೇಲ್‌ ಐಡಿ ಕೂಡ ನೀಡಲಾಗಿದೆ. ಆದರೆ, ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಕೂಡ ಈವರೆಗೂ ವರದಿಯನ್ನು ಇಲಾಖೆಗೆ ಸಲ್ಲಿಸಿಲ್ಲ. ಇನ್ನು ಕೆಲವು ಜಿಲ್ಲೆಗಳಲ್ಲಿ ಸೈಕಲ್‌ ಹೇಗಿದೆ ಎಂಬುದನ್ನೇ ಪರಿಶೀಲಿಸಿಲ್ಲ. ಸಮಿತಿಯಲ್ಲಿರುವ ಅಧಿಕಾರಿಗಳ ವಿಳಂಬ ಧೋರಣೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಖುದ್ದಾಗಿ ಪರಿಶೀಲನೆ ನಡೆಸಿದ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಸೈಕಲ್‌ ಗುಣಮಟ್ಟ ಪರಿಶೀಲಿಸಿ, ತಯಾರಿಕಾ ದೋಷ ಇಲ್ಲದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಸೈಕಲ್‌ ವಿತರಣೆ ನಂತರ ತಪಾಸಣೆಗಾಗಿ ತಾಲೂಕುಗಳಲ್ಲಿ ಹಂಚಿಕೆ ಮಾಡಲಾಗುತ್ತಿರುವ ಸೈಕಲ್‌ಗ‌ಳಲ್ಲಿ ನಾಲ್ಕು ವಿಭಾಗದ 40 ಸೈಕಲ್‌ನ (20 ಹುಡುಗರ ಹಾಗೂ 20 ಹುಡುಗಿಯರ) ಕ್ರ್ಯಾಷ್‌ ಟೆಸ್ಟ್‌ಗಾಗಿ ಆರ್‌ ಮತ್ತು ಡಿ ಸೆಂಟರ್‌ ಲೂಧಿಯಾನಕ್ಕೆ ಕಳುಹಿಸಲು ಆದೇಶಿಸಲಾಗಿದೆ. ಹಾಗೆಯೇ ಸೈಕಲ್‌ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಬದಲಾವಣೆ ಮಾಡಿಕೊಡಲು ಅವಕಾಶವಿದೆ. ತಾಲೂಕು, ಜಿಲ್ಲೆ ಹಾಗೂ ವಿಭಾಗಿಯ ಮಟ್ಟದಲ್ಲಿ ಪರಿಶೀಲನೆ ನಡೆಯಬೇಕಿದ್ದು, ಇನ್ನು ಮೊದಲ ಹಂತದ ವರದಿಯೇ ಇಲಾಖೆಗೆ ಸಲ್ಲಿಕೆಯಾಗಿಲ್ಲ.

ಸೈಕಲ್‌ ವಿತರಣೆ ವಿಳಂಬವಾಗಬಾರದು ಮತ್ತು ಗುಣಮಟ್ಟದ ಸೈಕಲ್‌ ವಿತರಿಸಬೇಕೆಂಬ ಉದ್ದೇಶದಿಂದ ಮೂರು ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನಾ ವರದಿಯ ಶಿಫಾರಸಿನಂತೆ ಸೈಕಲ್‌ ಬದಲಾವಣೆ ಮಾಡಬೇಕು ಎಂದಾದರೆ ತಕ್ಷಣವೇ ಬದಲಾಯಿಸಲಿದ್ದೇವೆ. ಎಲ್ಲಾ ಜಿಲ್ಲೆಯ ಪರಿಶೀಲನಾ ವರದಿಗಾಗಿ ಕಾಯುತ್ತಿದ್ದೇವೆ.
– ಬಿ.ಕೆ.ಬಸವರಾಜು, ನಿರ್ದೇಶಕ ಪ್ರಾಥಮಿಕ ಶಿಕ್ಷಣ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next