Advertisement

ರಾಜ್ಯೋತ್ಸವ-2022: ಕನ್ನಡ ಸಾಹಿತ್ಯ ಪರಿಷತ್ತನ್ನು ಕೈಬಿಡುವ ಅಗತ್ಯವೇನಿತ್ತು?

09:50 AM Nov 01, 2022 | Team Udayavani |

ಕಾನೂನು ನಿಶಕ್ತವಾಗ ಬಾರದು, ಪರಿಣಾಮಕಾರಿ ಹಾಗೂ ಶಕ್ತಿಯುತವಾದ ಕಾನೂನು ಜಾರಿ ಯಾಗಬೇಕು. ನ್ಯಾ| ಎಸ್‌. ಆರ್‌.ಬನ್ನೂರ ಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿ ಸರಕಾರ ಸದನದಲ್ಲಿ ಮಂಡಿಸಿರುವ ಕನ್ನಡಿಗರ ಬಹುನಿರೀಕ್ಷಿತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ದಿಂದ ಕನ್ನಡದ ಬೆಳವಣಿಗೆಗೆ ಅನಕೂಲವಾಗಲಿದೆ.

Advertisement

ಆದರೆ ಈ ಮಸೂದೆಯಲ್ಲಿ ಕೆಲವು ಕೊರತೆಗಳು ಕಂಡುಬರುತ್ತಿವೆ. ಮಸೂದೆಯಲ್ಲಿ ಎಲ್ಲ ಕನ್ನಡಿಗರನ್ನು ಪ್ರತಿ ನಿಧಿಸುವ ಅಂಶಗಳು ಕಂಡುಬರುತ್ತಿಲ್ಲ. ಮಸೂದೆಯಲ್ಲಿ ಕನ್ನಡಿಗ ಎನ್ನುವ ಪರಿಕಲ್ಪನೆ ಸಮರ್ಪಕವಾಗಿಲ್ಲ. ಅದು ಭೌಗೋಳಿಕ ವ್ಯಾಪ್ತಿಯನ್ನು ಮಾತ್ರ ಪರಿಗಣಿಸಿದ್ದು ಇದರಿಂದ ಹೊರನಾಡು, ಗಡಿನಾಡು ಹಾಗೂ ಹೊರ ದೇಶದ ಕನ್ನಡಿಗರಿಗೆ ತಾವು ಕನ್ನಡಿಗರಲ್ಲ ಎಂಬ ಭಾವನೆ ಬರುತ್ತದೆ. ಆದ್ದರಿಂದ “ಸಮಗ್ರ ಕನ್ನಡ’ ಎಂದರೆ ಕನ್ನಡಿಗ ರು ಎಂಬ ಭಾವನೆಯಲ್ಲಿ ವಿಶ್ವದಾದ್ಯಂತ ಇರುವ ಕನ್ನಡಿ ಗರ ಹಿತ ಕಾಪಾಡುವ ಅಭಿವೃದ್ಧಿಯ ಮಸೂದೆಯಾಗಬೇಕು.

ಜತೆಗೆ ಈಗಿರುವ ಮಸೂದೆಯಲ್ಲಿ ಕಾನೂನು ಅನುಷ್ಠಾನ ಕಾರ್ಯ ವ್ಯವಸ್ಥೆಯಲ್ಲಿ ಬರೀ ಅಧಿಕಾರಿಗಳದ್ದೇ ಪಾರುಪತ್ಯ ಕಂಡು ಬರುತ್ತಿದೆ. ಇದು ಅಧಿಕಾರಿಗಳ ಕೂಟ ವಾಗಿದೆ ಹಾಗೂ ಭಾಷಾಂತರಕ್ಕೆ ಸಂಬಂಧಿಸಿದಂತೆ ನಿವೃತ್ತ ಅಧಿಕಾರಿಗಳಿಗೆ ಪುನರ್ವಸತಿ ಕಲ್ಪಿಸಿ ಕೊಡಲು ಮಸೂದೆ ಮಾಡಲಾಗಿದೆ ಎಂಬ ಕಲ್ಪನೆ ಕಂಡುಬರುತ್ತದೆ.

ಕೇವಲ ಅಧಿಕಾರಿಗಳಿಂದ ಮಾತ್ರ ಸಮಗ್ರ ಕನ್ನಡ ಅಭಿ ವೃದ್ಧಿಯಾಗಲು ಸಾಧ್ಯವಿಲ್ಲ. ಇಷ್ಟೆಲ್ಲ ಕಾನೂನುಗಳು ಹಾಗೂ ನೂರಾರು ಸುತ್ತೋಲೆಗಳು ಬಂದಿದ್ದರೂ ಇಲ್ಲಿಯವರೆಗೆ ಏಕೆ ಕನ್ನಡದ ಅಭಿವೃದ್ಧಿಯಾಗಲಿಲ್ಲ ಎನ್ನುವ ಪ್ರಶ್ನೆ ನನ್ನದಾಗಿದೆ.

ಮುಖ್ಯವಾಗಿ ಕನ್ನಡಿಗರನ್ನು ಪ್ರತಿನಿಧಿಸುವ ಯಾವುದೇ ಸಂಸ್ಥೆಗಳನ್ನು ಅನುಷ್ಠಾನ ಕಾರ್ಯ ವ್ಯವಸ್ಥೆಯಲ್ಲಿ ಸೇರಿಸಿಲ್ಲ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರನ್ನು ಆಯಾ ಕಾರ್ಯ ಕ್ರಮ ಅನುಷ್ಠಾನ ಸಮಿತಿಗಳಲ್ಲಿ ಸೇರಿಸಬೇಕಾಗಿದೆ.

Advertisement

ಕಾರಣ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮತದಾರರು ಕನ್ನಡ ಒದು ಬರಹ ಬಲ್ಲವರಾದ ಸಂಪೂರ್ಣ ಕನ್ನಡದವರೇ ಆಗಿರುವುದರಿಂದ, ಚುನಾಯಿತರಾದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ತಾಲೂಕಾಧ್ಯಕ್ಷರು ಕನ್ನಡ/ ಕನ್ನಡಿಗರ ಧ್ವನಿಯಾಗಿರುತ್ತಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರನ್ನು ರಾಜ್ಯ ಸಮಿತಿಗೆ ಉಪಾಧ್ಯಕ್ಷರನ್ನಾಗಿ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರನ್ನು ಜಿಲ್ಲಾ ಸಮಿತಿಯಲ್ಲಿ ಸದಸ್ಯರಾಗಿ ಸೇರಿಸಿಕೊಳ್ಳಬೇಕು. ಪ್ರಸ್ತುತ ಮಸೂದೆಯು ಅಧಿಕಾರಿಗಳ ಮೂಲಕ ಆಡಳಿತ ನಡೆಸಲು ಹೊರಟಿದೆ. ಇದು ಪರಿಣಾಮಕಾರಿಯಾಗಲು ಸಾಧ್ಯವೇ ಇಲ್ಲ. ಸ್ವಾಯತ್ತತೆ ಇರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ವ್ಯವಸ್ಥೆಯಲ್ಲಿ ಇರಲೇ ಬೇಕು. ನ್ಯಾ| ಎಸ್‌.ಆರ್‌. ಬನ್ನೂರ ಮಠ ಅವರು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾ ವನೆಯಲ್ಲಿ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಸಮಿತಿಯ ಸದಸ್ಯರಾಗಿ ಇದ್ದರು.

ಸರಕಾರದ ಮಸೂದೆಯನ್ನು ವಿಧಾನ ಮಂಡಲದಲ್ಲಿ ಮಂಡಿಸುವಾಗ ಕನ್ನಡ ಸಾಹಿತ್ಯ ಪರಿಷತ್ತನ್ನು ಕೈ ಬಿಡಲು ಕಾರಣಗಳೇನಿತ್ತು ಎಂಬು ವುದನ್ನು ಕನ್ನಡಿಗರಿಗೆ ಸರಕಾರ ಉತ್ತರ ಕೊಡಬೇಕು. ಉತ್ತರ ಪಡೆಯುವುದು ಕನ್ನಡಿಗರ ಹಕ್ಕು ಹಾಗೂ ಉತ್ತರ ನೀಡುವುದು ಸರಕಾರದ ಬದ್ಧ ಕರ್ತವ್ಯವಾಗಿದೆ. ಹಾಗೆಯೇ ವಾಣಿಜ್ಯ ಮಳಿಗೆಗಳ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಈಗಿ ರುವ ಶೇ. 50ರ ಬದಲು ಶೇ.60ರಷ್ಟು ಭಾಗ ಕನ್ನಡ ವನ್ನು ಸ್ಪಷ್ಟವಾಗಿ ಬಳಸಬೇಕು ಎನ್ನುವ ಅಂಶ ಮಸೂದೆಯಲ್ಲಿ ಸೇರ್ಪಡೆಯಾಗಬೇಕು.

ಫಲಕಗಳ ಮೇಲ್ಗಡೆ ಸ್ಪಷ್ಟವಾಗಿ ಕಾಗುಣಿತದ ತಪ್ಪಿಲ್ಲದೆ ಕನ್ನಡದ ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ದಪ್ಪವಾಗಿ ಇರಬೇಕು. ಕನ್ನಡ ದಿನ ನಿತ್ಯದ ಭಾಷೆಯಾಗಬೇಕು ಎಂದಾದರೆ ಕನ್ನಡವನ್ನು ಕಾಟಾಚಾರಕ್ಕೆ ಕಲಿತ ಹೊರಗಿ ನಿಂದ ಬಂದ ಮತ್ತು ನಿವೃತ್ತ ಅಧಿಕಾರಿಗಳಿಂದ ಸಾಧ್ಯವಿಲ್ಲ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022 ಕಾನೂನಾಗಿ ಅನುಷ್ಠಾನಕ್ಕೆ ಬರುವಾಗ ಅಧಿಕಾರಿಗಳಿಂದ ರೂಪಿತ ನಿಶಕ್ತ ಕಾನೂನು ಆಗಬಾರದು. ಕನ್ನಡಿಗರ ಪ್ರಾತಿನಿಧಿಕ ಸ್ವಾಯತ್ತ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸ್ವಾತಂತ್ರ್ಯವುಳ್ಳ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕಾನೂನು ತಜ್ಞರು, ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲುಕೂ ಮಟ್ಟದ ಸಮಿತಿಗಳು ಇದ್ದರೆ ಮಾತ್ರ ಸಮಗ್ರ ಕನ್ನಡ ಅಭಿವೃದ್ಧಿ ಆಗಬಹುದು.
ಇಲ್ಲವಾದರೆ ಸ್ವಹಿತಾಸಕ್ತಿಯ ಕೂಟವಾಗಿ, ನಿವೃತ್ತ ಅಧಿಕಾರಿಗಳ ಪುನರ್ವಸತಿಯ ಗಂಜಿ ಕೇಂದ್ರವಾಗಿ, ಈಗಿರುವ ಕನ್ನಡವೂ ಮರೆಯಾಗುವುದರ ಜತೆಗೆ ಅವನತಿಯ ದಿಕ್ಕಿನಲ್ಲಿ ಸಾಗುವ ಸಂಕೇತ ಇದಾಗುವುದು.

ಡಿಸೆಂಬರ್‌ನಲ್ಲಿ ಮಸೂದೆ ಕಾನೂನು ಆಗುತ್ತೆ ಎಂಬ ನಂಬಿಕೆ ಇದೆ. ಮಸೂದೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬಿಟ್ಟರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದ ರಲ್ಲಿ ಯಾವುದೇ ಅರ್ಥವಿಲ್ಲ.

-ನಾಡೋಜ ಡಾ| ಮಹೇಶ ಜೋಶಿ
ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next