Advertisement

ಸಂಸತ್‌: ಬಾಲಿವುಡ್‌ ಡ್ರಗ್‌ ಗಲಾಟೆ

07:14 AM Sep 16, 2020 | mahesh |

ಹೊಸದಿಲ್ಲಿ: ಬಾಲಿವುಡ್‌ “ಮಾದಕ ನಂಟು’ ವಿಚಾರ ಸಂಸತ್‌ ಅಧಿವೇಶನದ ಎರಡನೇ ದಿನವೂ ಪ್ರತಿಧ್ವನಿಸಿದ್ದು ಮಾತ್ರವಲ್ಲದೆ, ಸಂಸತ್‌ ಸದಸ್ಯರು ಹಾಗೂ ಬಾಲಿವುಡ್‌ನ‌ ನಟ-ನಟಿಯರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.

Advertisement

ಹಿರಿಯ ನಟಿ ಹಾಗೂ ರಾಜ್ಯಸಭೆ ಸದಸ್ಯೆಯಾಗಿ ರುವ ಜಯಾ ಬಚ್ಚನ್‌ ಅವರು ಮಂಗಳವಾರದ ಕಲಾಪದ ವೇಳೆ ಈ ಕುರಿತು ಪ್ರಸ್ತಾವಿಸಿದ್ದಲ್ಲದೆ, ಬಾಲಿವುಡ್‌ಗೆ ಕಳಂಕ ತರಲು ನಡೆಯುತ್ತಿರುವ ಪ್ರಯತ್ನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇಂಡಸ್ಟ್ರಿಯಲ್ಲಿ ಇರುವವರೇ ಬಾಲಿವುಡ್‌ ಬಗ್ಗೆ ಅವಹೇಳನ ಮಾಡುತ್ತಿದ್ದು, ತಮಗೆ ಅನ್ನ ನೀಡುವ ಕೈಗಳನ್ನೇ ಕಚ್ಚುವಂಥ ಕೆಲಸ ಮಾಡುತ್ತಿದ್ದಾರೆ ಎನ್ನುವ ಮೂಲಕ ಜಯಾ ಅವರು, ಲೋಕಸಭೆಯಲ್ಲಿ ಸೋಮವಾರ ಬಾಲಿವುಡ್‌ ಡ್ರಗ್‌ ನಂಟು ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ಸಂಸದ ರವಿ ಕಿಶನ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

ಮನೋರಂಜನ ಕ್ಷೇತ್ರವನ್ನು ಕೆಲವರು “ಚರಂಡಿ’ ಎಂದು ಕರೆದಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಯಾರೋ ಒಂದಿಬ್ಬರು ಮಾಡಿದ ಕೆಲಸಕ್ಕೆ ಇಡೀ ಇಂಡಸ್ಟ್ರಿಯನ್ನು ತೆಗಳುವುದು ಸರಿಯಲ್ಲ. ಸಿನೆಮಾ ಕ್ಷೇತ್ರದಲ್ಲೇ ಇರುವ ಲೋಕಸಭೆ ಸದಸ್ಯರೊಬ್ಬರು ಸೋಮವಾರ ನೀಡಿದ ಹೇಳಿಕೆ ನಾಚಿಕೆಗೇಡಿನದ್ದು. ದೇಶದಲ್ಲಿ ಪ್ರಾಕೃತಿಕ ವಿಕೋಪ ಸೇರಿದಂತೆ ಯಾವುದೇ ಸಂಕಷ್ಟದ ಸಮಯದಲ್ಲೂ ಬಾಲಿವುಡ್‌ ಸ್ಪಂದಿಸಿದೆ. ಈಗ ಸರಕಾರವು ಬಾಲಿವುಡ್‌ನ‌ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಜಯಾ ಆಗ್ರಹಿಸಿದ್ದಾರೆ.

ಜಯಾ ಅವರ ಹೇಳಿಕೆಗೆ ಬಾಲಿವುಡ್‌ನ‌ ಪ್ರಮುಖರಾದ ಅನುಭವ್‌ ಸಿನ್ಹಾ, ಫ‌ರ್ಹಾನ್‌ ಅಖ್ತರ್‌, ಸೋನಂ ಕಪೂರ್‌, ತಪ್ಸಿ ಪನ್ನು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಣತ್ಯಾಗಕ್ಕೂ ಸಿದ್ಧ: ಜಯಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ರವಿಕಿಶನ್‌, “ನಮ್ಮ ಸಿನೆಮಾ ಕ್ಷೇತ್ರವನ್ನು ಮುಗಿಸಲು ಸಂಚು ಮಾಡಲಾಗಿದೆ. ಆ ಕ್ಷೇತ್ರದ ಜವಾಬ್ದಾರಿಯುತ ಸದಸ್ಯನಾಗಿ ಸಂಸತ್‌ನಲ್ಲಿ ಈ ಕುರಿತು ಪ್ರಸ್ತಾವಿಸುವುದು ನನ್ನ ಕರ್ತವ್ಯ. ಇದನ್ನು ಜಯಾ ಅವರು ಅರ್ಥ ಮಾಡಿಕೊಳ್ಳಬೇಕು. ಡ್ರಗ್‌ ಸೇವನೆಯು ಈಗ ಬಾಲಿವುಡ್‌ನ‌ಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. 90ರ ದಶಕದಲ್ಲಿ ಇದು ಇರಲಿಲ್ಲ. ನಾನು ಡ್ರಗ್‌ನಿಂದ ಚಿತ್ರರಂಗವನ್ನು ರಕ್ಷಿಸಲು ಯತ್ನಿಸಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ಬಾಲಿವುಡ್‌ ಡ್ರಗ್‌ ಕೇಸಿನ ಬಗ್ಗೆ ನಾನು ಧ್ವನಿಯೆತ್ತುತ್ತೇನೆ’ ಎಂದಿದ್ದಾರೆ.

Advertisement

ಕಂಗನಾ ಕಿಡಿ: ಜಯಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣೌತ್‌, “ನಿಮ್ಮ ಮಗ-ಮಗಳಿಗೆ ಸಮಸ್ಯೆಯಾಗಿದ್ದರೂ ನೀವು ಇದೇ ಮಾತನ್ನು ಹೇಳುತ್ತಿದ್ದಿರೇ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಪ್ರೊಡಕ್ಷನ್‌ ಹೌಸ್‌ಗಳಲ್ಲಿ ತಮ್ಮ ಮೇಲೆ ದೌರ್ಜನ್ಯವಾದರೆ ದೂರು ನೀಡಲು ಮಹಿಳೆಯರ ಪರವಾದ ಒಂದು ಎಚ್‌ಆರ್‌ ವಿಭಾಗವಿಲ್ಲ, 8 ಗಂಟೆಗಳ ಶಿಫ್ಟ್ ಎಂಬುದಿಲ್ಲ, ರಿಸ್ಕ್ನಲ್ಲೇ ಬದುಕುವ ಹೆಣ್ಣುಮಕ್ಕಳಿಗೆ ಸುರಕ್ಷತೆಯೂ ಇಲ್ಲ, ವಿಮೆಯೂ ಇಲ್ಲ ಎಂದೂ ಕಂಗನಾ ಹೇಳಿದ್ದಾರೆ. ಈ ಮಧ್ಯೆ, ಸಿನಿಮಾ ಕ್ಷೇತ್ರದಲ್ಲಿರುವ ಮಂದಿ ಮತ್ತು ಡ್ರಗ್‌ ಕಳ್ಳಸಾಗಣೆದಾರರ ನಡುವೆ ನಂಟಿರುವ ಬಗ್ಗೆ ಇನ್ನೂ ಸ್ಪಷ್ಟವಾದಂಥ ಯಾವುದೇ ಸಾಕ್ಷ್ಯ ಎನ್‌ಸಿಬಿಗೆ ಸಿಕ್ಕಿಲ್ಲ ಎಂದು ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಸಾಮಾಜಿಕ ಅಂತರ ಬೇಡ; ಶಾರೀರಿಕ ಅಂತರವಿರಲಿ
ಕೊರೊನಾ ಹಿನ್ನೆಲೆ ಬಳಸಲಾಗುವ “ಸಾಮಾಜಿಕ ಅಂತರ’ ಎಂಬ ಪದದ ಬದಲಿಗೆ “ಶಾರೀರಿಕ ಅಂತರ’ ಎಂಬ ಪದಬಳಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ರಾಜ್ಯಸಭೆಯಲ್ಲಿ ವ್ಯಕ್ತವಾಯಿತು. ಸಾಮಾಜಿಕ ಅಂತರ ಎಂಬ ಪದದಿಂದಾಗಿ ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರು ಸಾಮಾಜಿಕ ಕಳಂಕ ಎದುರಿಸಿದಂತಾಗುತ್ತಿದೆ. ಅವರನ್ನು ಎಲ್ಲರೂ ದೂರವಿಟ್ಟು ಬಹಿಷ್ಕರಿಸಿದಂಥ ಭಾವನೆ ಮೂಡುತ್ತದೆ. ಹಾಗಾಗಿ, ಈ ಪದದ ಬಳಕೆಯ ಬದಲಿಗೆ ಶಾರೀರಿಕ ಅಂತರ ಎಂಬ ಪದಬಳಕೆ ಮಾಡುವುದು ಉತ್ತಮವಲ್ಲವೇ ಎಂದು ಟಿಎಂಸಿ ನಾಯಕ ಶಾಂತನು ಸೇನ್‌ ಪ್ರಶ್ನಿಸಿದರು. ಈ ಸಲಹೆಗೆ ಒಪ್ಪಿದ ಸಭಾಪತಿ ವೆಂಕಯ್ಯ ನಾಯ್ಡು, ಸೂಕ್ತ ಪದವನ್ನೇ ಬಳಕೆ ಮಾಡುವಂತೆ ಹೇಳಿದರು.

ಗುಜರಾತ್‌ ಸಂಸ್ಥೆಗೆ ಮಾತ್ರವೇಕೆ ಮನ್ನಣೆ?
ಗುಜರಾತ್‌ನ ಜಾಮ್‌ನಗರದಲ್ಲಿರುವ ಆಯುರ್ವೇದ ಸಂಸ್ಥೆಗೆ “ರಾಷ್ಟ್ರೀಯ ಮಹತ್ವದ ಸಂಸ್ಥೆ’ ಎಂಬ ಮಾನ್ಯತೆ ನೀಡುವ “ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಮಸೂದೆ 2020’ನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್‌ ರಾಜ್ಯಸಭೆಯಲ್ಲಿ ಮಂಡಿಸಿದರು. ಅದನ್ನು ವಿರೋಧಿಸಿ ಕರ್ನಾಟಕದ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡಾ| ಎಲ್‌.ಹನುಮಂತಯ್ಯ ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿ ಎಲ್ಲ ರಾಜ್ಯಗಳಲ್ಲಿ ಹಾಸುಹೊಕ್ಕಾಗಿದೆ. ಕರ್ನಾಟಕ, ತಮಿಳುನಾಡು, ಕೇರಳಗಳೂ ಆಯುರ್ವೇದ ಪದ್ಧತಿಗೆ ಗಣನೀಯ ಕೊಡುಗೆ ನೀಡಿವೆ. ಹೀಗಾಗಿ, ಗುಜರಾತ್‌ನ ಒಂದು ಸಂಸ್ಥೆಗೆ ಮಾತ್ರ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂಬ ಮಾನ್ಯತೆ ನೀಡುವುದು ಪ್ರಶ್ನಾರ್ಹ ಎಂದು ಟೀಕಿಸಿದರು. ಕರ್ನಾಟಕದಲ್ಲಿ 68 ಆಯುರ್ವೇದ ಕಾಲೇಜುಗಳು ಇವೆ ಎಂದೂ ಹನುಮಂತಯ್ಯ ಪ್ರತಿಪಾದಿಸಿದ್ದಾರೆ.

6 ತಿಂಗಳಲ್ಲಿ 138 ಉಗ್ರರ ಹತ್ಯೆ
ಪ್ರಸಕ್ತ ವರ್ಷದ ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಭದ್ರತಾ ಪಡೆಗಳು ಒಟ್ಟಾರೆ 138 ಉಗ್ರರನ್ನು ಹೊಡೆದುರುಳಿಸಿವೆ ಎಂದು ಲೋಕಸಭೆಗೆ ಸಚಿವ ಕಿಶನ್‌ ರೆಡ್ಡಿ ಮಾಹಿತಿ ನೀಡಿದ್ದಾರೆ. ಜತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ 223 ಮಂದಿ ವಶದಲ್ಲಿದ್ದಾರೆ. ಆದರೆ ಗೃಹಬಂಧನದಲ್ಲಿ ಯಾರೂ ಇಲ್ಲ ಎಂದೂ ತಿಳಿಸಿದ್ದಾರೆ.

ಏರ್‌ಕ್ರಾಫ್ಟ್ ಕಾಯ್ದೆಗೆ ಅಸ್ತು
ದೇಶದ ವಿಮಾನಯಾನ ಸುರಕ್ಷತೆ ರೇಟಿಂಗ್‌ ಅನ್ನು ಸುಧಾರಿಸುವ ಮತ್ತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ದಂತಹ ಸಂಸ್ಥೆಗಳಿಗೆ ಶಾಸನಬದ್ಧ ಸ್ಥಾನಮಾನ ಕಲ್ಪಿಸುವ ಏರ್‌ಕ್ರಾಫ್ಟ್ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಸಂಸದರ ವೇತನವನ್ನು ಒಂದು ವರ್ಷ ಕಾಲ ಶೇ.30ರಷ್ಟು ಕಡಿತ ಮಾಡುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

ಜಯಾ ಬಚ್ಚನ್‌ ಅವರೇ, ನಿಮ್ಮ ಮಗ ಅಭಿಷೇಕ್‌ ಬಚ್ಚನ್‌ ಆತ್ಮಹತ್ಯೆ ಮಾಡಿಕೊಂಡಿದ್ದರೆ ನೀವು ಹೀಗೆ ಹೇಳುತ್ತಿದ್ದಿರೇ? ನಿಮ್ಮ ಮಗಳು ಶ್ವೇತಾ ಮೇಲೆ ಹದಿಹರೆಯದಲ್ಲಿ ಹಲ್ಲೆ ನಡೆಸಿ, ಒತ್ತಾಯಪೂರ್ವಕ ಡ್ರಗ್‌ ಕೊಡಿಸಿ, ದೌರ್ಜನ್ಯವೆಸಗಿದ್ದರೆ ನೀವು ಈ ರೀತಿ ಹೇಳುತ್ತಿ ದ್ದಿರೇ? ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿಸಿ.
ಕಂಗನಾ ರಣೌತ್‌, ಬಾಲಿವುಡ್‌ ನಟಿ

Advertisement

Udayavani is now on Telegram. Click here to join our channel and stay updated with the latest news.

Next