Advertisement

ಜನರಿಗೆ ಸರ್ಕಾರದ ಕೊಡುಗೆ ಏನು?

12:47 PM Apr 24, 2020 | Suhan S |

ಬಾಗಲಕೋಟೆ: ಲಾಕ್‌ಡೌನ್‌ನಿಂದ ಸಮಾಜದ ಪ್ರತಿಯೊಂದು ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ 1 ಸಾವಿರ ಕೋಟಿ ಪ್ಯಾಕೇಜ್‌ ಘೋಷಿಸಬೇಕು ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಒತ್ತಾಯಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲೂ ನಮ್ಮ ಸರ್ಕಾರ ಬಂದರೆ, ಸಾವಿರಾರು ಕೋಟಿ ಅನುದಾನ ರಾಜ್ಯಕ್ಕೆ ತರುತ್ತೇವೆ ಎಂದು ಹೇಳಿದ್ದರು. ಆದರೆ, ರಾಜ್ಯಕ್ಕೆ ಬರಬೇಕಾದ 13 ಸಾವಿರ ಕೋಟಿ ಹಣವನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಜನಕಲ್ಯಾಣ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಬೆಳೆದ ಬೆಳೆ ಮಾರಾಟ ಮಾಡಲು ಆಗಿಲ್ಲ. ಈ ಕುರಿತು ಅ ವೇಶನ ಮತ್ತು ಸರ್ವ ಪಕ್ಷಗಳ ಸಭೆಯ ವೇಳೆಯೇ ಪ್ರತಿ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲು ಹೇಳಿದ್ದೇವು. ಅಸಂಘಟಿತ ಮತ್ತು ವಲಸೆ ಕಾರ್ಮಿಕರ ಸಹಾಯಕ್ಕೆ ಬರಬೇಕು, 6ರಿಂದ 8 ಸಾವಿರ ಕೋಟಿ ಇರುವ ಆವೃತ್ತ ನಿಧಿ  ಬಳಸಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದೆಲ್ಲ ಹೇಳಿದ್ದೇವು. ಆದರೆ, ಸರ್ಕಾರ ಯಾವ ಕ್ರಮವೂ ಕೈಗೊಂಡಿಲ್ಲ ಎಂದು ದೂರಿದರು. ವಲಸೆ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ತಮ್ಮದೇ ಗ್ರಾಮಕ್ಕೆ ಬರಲೂ ಆಗುತ್ತಿಲ್ಲ. ಅವರಿದ್ದ ಸ್ಥಳದಲ್ಲಿ ಊಟಕ್ಕೂ ಗತಿ ಇಲ್ಲ. ಪಡಿತರ ಬಿಟ್ಟರೆ ಬೇರೇನೂ ಕೊಟ್ಟಿಲ್ಲ. ಕ್ಷೌರಿಕರು, ಮಡಿವಾಳರು, ಬಡಿಗರು, ಕುಂಬಾರ, ಕಂಬಾರ, ನೇಕಾರ, ಚಮ್ಮಾರ, ಅಕ್ಕಸಾಲಿಗರು, ಬೀದಿ ವ್ಯಾಪಾರಸ್ಥರು, ದೇವಸ್ಥಾನಗಳ ಅರ್ಚಕರು, ಫೋಟೋಗ್ರಾಫರ್‌ ಗಳು, ಕೆಲ ವಕೀಲರು ಹೀಗೆ ಎಲ್ಲ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಉದ್ಯೋಗವಿಲ್ಲದೇ ಮನೆಯಲ್ಲಿದ್ದಾರೆ ಅವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಜ. 30ರಂದು ಮೊದಲ ಸೋಂಕು ಪತ್ತೆಯಾಗಿದೆ. ಫೆಬ್ರವರಿ 1ರಿಂದಲೇ ವಿದೇಶದಿಂದ ಬರುವ ಜನರನ್ನು ನಿಲ್ದಾಣದಲ್ಲೇ ಕ್ವಾರಂಟೈನ್‌ ಮಾಡಬೇಕಿತ್ತು. ಸೋಂಕು ಬರಲು ದೆಹಲಿಯ ಧರ್ಮ ಸಭೆ ಕಾರಣವೆಂದು ಹೇಳುತ್ತಿದ್ದಾರೆ. ಮಾರ್ಚ್‌ನಲ್ಲಿ ಇದಕ್ಕೆ ಪರವಾನಗಿ ಕೊಟ್ಟಿದ್ದೇ ಕೇಂದ್ರಗೃಹ ಇಲಾಖೆ. ಇದು ಅಮಿತ್‌ ಶಾ, ಮೂಗಿನ ನೇರದಲ್ಲೇ ಇದೆ. ಅದಕ್ಕೇ ಏಕೆ ಪರವಾನಗಿ ಕೊಟ್ಟರು. ಅದೇ ರೀತಿಯ ಸಭೆ ಮಹಾರಾಷ್ಟ್ರದಲ್ಲಿ ಮಾ.13, 14ರಂದು ನಡೆಸಲು ಕೇಳಿದಾಗ, ಅಲ್ಲಿನ ಸರ್ಕಾರ ನಿರಾಕರಿಸಿತು.

ಅದೇ ರೀತಿ ಕೇಂದ್ರವೂ ನಿರಾಕರಿಸಬೇಕಿತ್ತು. 40 ದೇಶಗಳನ್ನು ಜನರು, ದೆಹಲಿಗೆ ಬರಲು ವೀಸಾ ಪರವಾನಗಿಯೂ ನೀಡಿದ್ದು ಕೇಂದ್ರ ಸರ್ಕಾರವೇ. ಹೀಗಾಗಿ ಕೋವಿಡ್ 19 ಸೋಂಕಿನ ಇಂದಿನ ಪರಿಸ್ಥಿತಿಗೆ ಕೇಂದ್ರವೇ ಹೊಣೆ ಎಂದರು.

Advertisement

ಕೊಳ್ಳೆ ಹೊಡೆದ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ ನಮ್ಮ ದೇಶದ ಪರಿಸ್ಥಿತಿ ಆಗಿದೆ. ಫೆಬ್ರವರಿ, ಮಾರ್ಚ್‌ನಲ್ಲಿ 6 ಲಕ್ಷ ಜನ ವಿದೇಶದಿಂದ ಬಂದಿದ್ದಾರೆ. ಏಪ್ರಿಲ್‌ನಲ್ಲಿ 26 ಸಾವಿರ ಜನ ಬಂದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರವೇ ವಿವಿಧ ರಾಷ್ಟ್ರಗಳಲ್ಲಿದ್ದ 5 ಲಕ್ಷ ಜನರಿಗೆ ವಿಶೇಷ ವಿಮಾನ ಕಳುಹಿಸಿ ಕರೆಸಿಕೊಂಡಿದೆ. ಅದೇ ಬಡವರು, ದುಡಿಯಲು ವಲಸೆ ಹೋಗಿರುವ ಸ್ಥಳದಲ್ಲಿ ತಮ್ಮೂರಿಗೆ ಹೋಗಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬೋಟ್‌ನಲ್ಲಿ ಕಳ್ಳಭಟ್ಟಿ: ನವನಗರದ ಪೊಲೀಸರು ಮನಬಂದಂತೆ ವರ್ತಿಸುತ್ತಿದ್ದಾರೆ. ಪಾಸ್‌ ಇದ್ದವರ ವಾಹನವೂ ಸೀಜ್‌ ಮಾಡುತ್ತಿದ್ದಾರೆ. ಈ ಕುರಿತು ಎಸ್ಪಿ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯಲ್ಲಿ ಕಳ್ಳಭಟ್ಟಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ವಿಜಯಪುರ ಜಿಲ್ಲೆಯಿಂದ ಬೋಟ್‌ ಮೂಲಕ ನಮ್ಮ ಜಿಲ್ಲೆಗೆ ಕಳ್ಳಭಟ್ಟಿ ಬರುತ್ತಿದೆ. ಈ ಕುರಿತು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇನೆ. ಅಲ್ಲದೇ ನಮ್ಮ ಜಿಲ್ಲೆಯಲ್ಲೂ ಕಳ್ಳಭಟ್ಟಿ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೋವಿಡ್‌-19ರ ಕಾಂಗ್ರೆಸ್‌ ಟಾಸ್ಕ್ಫೋರ್ಸ್‌ ಸಮಿತಿ ಜಿಲ್ಲಾ ಅಧ್ಯಕ್ಷ ಜೆ.ಟಿ. ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next