Advertisement

“ಅಮ್ಮಾ, ಬಾಬಾ ಹೇಗಿದ್ದಾರೆ?’ವಿಧವೆಯಂತೆ ಕಂಡ ತಾಯಿಗೆ ಜಾಧವ್‌

03:57 PM Dec 28, 2017 | Team Udayavani |

ಹೊಸದಿಲ್ಲಿ : ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಗಳ ಆರೋಪ ಹೊತ್ತು ಪಾಕ್‌ ಮಿಲಿಟರಿ ಕೋರ್ಟ್‌ ನಿಂದ ಮರಣ ದಂಡನೆಯ ಶಿಕ್ಷೆಗೆ ಗುರಿಯಾಗಿ ಅಲ್ಲಿನ ಜೈಲಿನಲ್ಲಿರುವ 47ರ ಹರೆಯದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಸೆರೆಯಾದ 22 ತಿಂಗಳ ಬಳಿಕ ಕೆಲ ದಿನಗಳ ಹಿಂದೆ ಇಸ್ಲಾಮಾಬಾದ್‌ ನಲ್ಲಿ ತನ್ನ ತಾಯಿ ಮತ್ತು ಪತ್ನಿಯೊಂದಿಗೆ ನಡೆಸಿದ ಅತ್ಯಂತ ಬಿಗಿ ಭದ್ರತೆಯ 40 ನಿಮಿಷಗಳ ಭೇಟಿಯ ಬಳಿಕ ಮನ ಕಲಕುವ ಹಲವು ವಿವರಗಳು ಬಯಲಾಗಿವೆ.

Advertisement

ಹಣೆಗೆ ಬಿಂದಿ, ಕುತ್ತಿಗೆಯಲ್ಲಿ ಮಾಂಗಲ್ಯ, ಕೈಗೆ ಬಳೆ ಇಲ್ಲದೆ ವಿಧವೆಯರ ರೀತಿಯಲ್ಲಿ ಕಂಡು ಬಂದ ತನ್ನ ತಾಯಿ ಮತ್ತು ಪತ್ನಿಯನ್ನು ತನ್ನ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಕಂಡಾಗ ಜಾಧವ್‌ ಆಘಾತಕ್ಕೆ ಗುರಿಯಾಗಿ ತಾಯಿಯಲ್ಲಿ ಕೇಳಿದ ಪ್ರಶ್ನೆ, “ಅಮ್ಮಾ, ಬಾಬಾ (ತಂದೆ) ಹೇಗಿದ್ದಾರೆ ? ಅವರಿಗೇನಾಗಿದೆ?’.

ತಾಯಿ ಆವಂತಿ ಮತ್ತು ಪತ್ನಿ ಚೇತನಾ, ಜಾಧವ್‌ ಜತೆಗೆ ಮನೆ ಭಾಷೆ ಮರಾಠಿಯಲ್ಲಿ ಮಾತನಾಡುವಾಗ ಇವರ ಮೇಲೆ ವಿಚಕ್ಷಣೆ ನಡೆಸುತ್ತಿದ್ದ ಪಾಕ್‌ ಅಧಿಕಾರಿಗಳು ಪದೇ ಪದೇ ಸಂವಹನಕ್ಕೆ ತಾಂತ್ರಿಕವಾಗಿ ತಡೆಯೊಡುತ್ತಿದ್ದರು. ಮೇಲಾಗಿ ಉಭಯತರ ನಡುವೆ ಭದ್ರತೆಯ ನೆಪದಲ್ಲಿ ಪಾಕಿಸ್ಥಾನ, ಗಾಜಿನ ಪರದೆಯನ್ನು ಕೂಡ ಅಳವಡಿಸಿ ಯಾವುದೇ ರೀತಿಯ, ಆಲಿಂಗನವೇ ಮೊದಲಾದ, ಭಾವನಾತ್ಮಕ ಸಮ್ಮಿಲನಕ್ಕೆ ಅವಕಾಶ ನೀಡಿರಲಿಲ್ಲ.

ಕುಲಭೂಷಣ್‌ ಜಾಧವ್‌ಗೆ ಅವರ ತಾಯಿ ಮತ್ತು ಪತ್ನಿಯನ್ನು ವಿಧವೆಯರಂತೆ ಕಾಣಿಸುವ ಮೂಲಕ ಮಾನಸಿಕವಾಗಿ ಜಾಧವ್‌ ಅವರನ್ನು ಇನ್ನಷ್ಟು ಜರ್ಜರಿತಗೊಳಿಸುವುದು ಪಾಕ್‌ ಹುನ್ನಾರವಾಗಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಇವಿಷ್ಟೂ ಸಾಲದೆಂಬಂತೆ ರಣಹದ್ದುಗಳಂತೆ ಈ ಇಬ್ಬರು ಮಹಿಳೆಯರ ಮೇಲೆ ಎರಗಿದ ಪಾಕ್‌ ಪತ್ರಕರ್ತರು ಇವರಿಗೆ ಕೇಳಿದ ಸಂದರ್ಭಕ್ಕೆ ಸಲ್ಲದ ಪ್ರಶ್ನೆಗಳು ಆಘಾತಕಾರಿಯಾಗಿವೆ. 

Advertisement

“ಸಾವಿರಾರು ಅಮಾಯಕ ಪಾಕಿಸ್ಥಾನೀಯರನ್ನು ಕೊಂದ ನಿಮ್ಮ ಪತಿಯ ಬಗ್ಗೆ ನೀವು ಏನು ಹೇಳುತ್ತೀರಿ ?’ “ಕೊಲೆಗಾರನಾಗಿರುವ ನಿಮ್ಮ ಮಗನನ್ನು ಭೇಟಿಯಾದ ಬಳಿಕ ನಿಮಗೇನು ಅನ್ನಿಸಿತು?” ಎಂಬ ಪ್ರಶ್ನೆಗಳನ್ನು ಪಾಕ್‌ ಪತ್ರಕರ್ತರು ಈ ಮಹಿಳೆಯರನ್ನು ತಿವಿಯುವ ರೀತಿಯಲ್ಲಿ, ದೈಹಿಕವಾಗಿ ಅವರ ಮೇಲೇರಿ ಹೋಗುವ ರೀತಿಯಲ್ಲಿ, ಕೇಳಿದರು. 

ಜಾಧವ್‌ ಭೇಟಿಯಾದ ಬಳಿಕ ಈ ಮಹಿಳೆಯರು, ಅದರ ಮೊದಲಿಗಿಂತಲೂ ಹೆಚ್ಚಿನ ಮಾನಸಿಕ ಖನ್ನತೆ ಮತ್ತು ಕ್ಷೋಭೆಯನ್ನು ಅನುಭವಿಸಿದರು ಎಂದು ಇವರ ಸಂಬಂಧಿಯೋರ್ವರು ಭಾರತೀಯ ಮಾಧ್ಯಮಕ್ಕೆ ಹೇಳಿದ್ದಾರೆ. 

ಜಾಧವ್‌, ಅವರ ತಾಯಿ ಮತ್ತು ಪತ್ನಿಯೊಂದಿಗೆ 22 ತಿಂಗಳ ಬಳಿಕ ನಡೆಸಿದ ಭಾವನಾತ್ಮಕ ಭೇಟಿಯನ್ನು ಪಾಕಿಸ್ಥಾನ ಕೇವಲ ತನ್ನ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಅತ್ಯಂತ ನೀಚತನವನ್ನು ತೋರಿತು ಎಂದು ಈ ಇಡಿಯ ಪ್ರಹಸನವನ್ನು ಸಂಸತ್ತಿನಲ್ಲಿ ಇಂದು ಗುರುವಾರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next