Advertisement

ಉಡುಪಿ ಪ್ರವಾಹದಿಂದ ಕಲಿಯುವುದೇನು

10:27 PM Oct 02, 2020 | mahesh |

ನಾಗರಿಕರ ಸಹಕಾರ ಬೇಕಾಗಿದೆ
ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿ ತುಂಬಾ ಹಾನಿಯಾಯಿತು. ವಾರ್ತೆಯನ್ನು ಟಿ.ವಿ. ಗಳಲ್ಲಿ ವೀಕ್ಷಿಸಿದ ಜನರು ಹಲವಾರು ದೂರದೂರುಗಳಿಂದ ತಮ್ಮ ಬಂಧುಬಾಂಧವರಿಗೆ ಫೋನ್‌ ಮಾಡಿ ಅವರ ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ಈ ಸಲದ ನೆರೆಯ ಕಾರಣವನ್ನು ನಾವು ಸ್ವಲ್ಪ ವಿವೇಚಿಸಬೇಕಾಗಿದೆ. ಮನೆಗಳಲ್ಲಿನ ಕಸವನ್ನು ಹಸಿಕಸ, ಒಣಕಸ ಮತ್ತು ಅಪಾಯಕಾರಿ ಕಸ ಎಂದು ವಿಂಗಡಿಸುವ ಪದ್ಧತಿ ಈಗ ಕೆಲವು ವರ್ಷಗಳಿಂದ ಜಾರಿಯಲ್ಲಿದೆ. ನಗರಸಭೆಯವರು ಒಣಕಸವನ್ನು ಬೇರೆಯೇ ಲಾರಿಗಳಲ್ಲಿ ಸಂಗ್ರಹಿಸುತ್ತಿದ್ದಾರೆ. ಹಸಿಕಸವನ್ನು ದಿನಾಲೂ ಒಯ್ಯುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲೇ ರಸ್ತೆ ಬದಿಯ ಚರಂಡಿಗಳನ್ನು ಸ್ವತ್ಛಗೊಳಿಸಿದ್ದಾರೆ. ಆದರೆ ಜನರ ನಿಷ್ಕಾಳಜಿಯ ವರ್ತನೆಯಿಂದ ತ್ಯಾಜ್ಯ, ಪ್ಲಾಸ್ಟಿಕ್‌ ಮತ್ತು ಗಾಜಿನ ಬಾಟ್ಲಿಗಳು, ಥರ್ಮೋಕೋಲಿನ ತುಂಡುಗಳು ಇವೆಲ್ಲ ತೋಡುಗಳನ್ನು ಸೇರಿದಾಗ ಮಳೆನೀರು ಹರಿದು ಹೋಗಲು ಸಾಧ್ಯವಾಗುವುದಿಲ್ಲ. ನಾಗರಿಕರು ತಮ್ಮ ಜವಾಬ್ದಾರಿಯನ್ನು ತಿಳಿದುಕೊಂಡು ಅದನ್ನು ಸರಿಯಾಗಿ ನಿಭಾಯಿಸುವಂತಾಗಲಿ.
– ಚಂದ್ರಕಲಾ, ಉಡುಪಿ

Advertisement

ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು
ಈ ಬಾರಿಯ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದನ್ನು ನಾವು ಕಂಡಿದ್ದೇವೆ. ಗಾಳಿ, ಅಗ್ನಿ, ಮಳೆಯನ್ನು ಯಾರೂ ತಡೆಯಲಾಗುವುದಿಲ್ಲ. ಆದ್ದರಿಂದ ನಾವು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಸ್ತೆ ಬದಿಯಲ್ಲಿರುವ ತೋಡು, ಚರಂಡಿಗಳನ್ನು ಮೊದಲು ಸ್ವತ್ಛವಾಗಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ನೆರೆ ಸಂಭವವನ್ನು ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿಡಬಹುದು. ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ನೀರು ಹಾದು ಹೋಗಲು ಕಾಲುವೆಗಳಿಗಾಗಿ ಸ್ಥಳವನ್ನು ಮೀಸಲಿಡುವುದು ಬಹಳ ಅಗತ್ಯವಾಗಿದೆ. ರಸ್ತೆಯಲ್ಲಿ ನಿಂತಿರುವ ನೀರು ಸುಲಭವಾಗಿ ಹಾದು ಹೋಗುತ್ತದೆ. ಮತ್ತು ನೀರು ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಕಸಗಳನ್ನು ತೋಡು, ನದಿಗಳಿಗೆ ಎಸೆಯುವುದು ತಡೆಯಬೇಕು. ನದಿ ತೋಡುಗಳ ಬದಿಯಲ್ಲಿರುವ ಮನೆಯವರು ಅಂಗಡಿಯವರು ಇದರ ಬಗ್ಗೆ ಗಮನದಲ್ಲಿಡಬೇಕು.
– ಸ್ಫೂರ್ತಿ, ಪರ್ಕಳ

ಅರಣ್ಯನಾಶ ಮತ್ತು ಅಸ್ತವ್ಯಸ್ತ ಚರಂಡಿ ವ್ಯವಸ್ಥೆ
ನೆರೆಯೂ ಸೇರಿ ಪ್ರಕೃತಿ ವಿಕೋಪಗಳೂ ಹೇಳಿಯೇ ಬರಬೇಕಿಲ್ಲ. ಈಗಿನ ಪ್ರಕೃತಿಯ ಮುನಿಸುಗಳು ನಾವೇ ಮಾಡಿಕೊಂಡ ಅನಾಹುತಗಳು, ಅರಣ್ಯನಾಶದ ಪರಿಣಾಮ ಸಣ್ಣಪುಟ್ಟ ಮಳೆಗೂ ಇವತ್ತು ನೆರೆ ಬರುವುದು ಸಹಜವೇ, ಮತ್ತು ನೀರು ಸರಾಗವಾಗಿ ಹರಿದು ಹೋಗಲು ಎಲ್ಲಿಯೂ ಕೂಡ ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದಿರುವುದು. ಮೊದಲು ಸರಿಯಾದ ರೀತಿಯಲ್ಲಿ ಚರಂಡಿಯ ವ್ಯವಸ್ಥೆ ಆಗಬೇಕು. ಮನುಷ್ಯನೇ ಮಾಡಿಕೊಳ್ಳುವ ಪರಿಸರ ಮಾಲಿನ್ಯಕ್ಕೆ ಜಿಲ್ಲಾಡಳಿತವನ್ನು ಹೊಣೆ ಮಾಡುವಂತಿಲ್ಲ . ನಮ್ಮ ಎಲ್ಲಾ ಸಮಸ್ಯೆಗೂ ಜಿಲ್ಲಾಡಳಿತವೇ ಪರಿಹಾರ ನೀಡಬೇಕು ಎಂದೂ ಕಾಯುವುದು ತಪ್ಪು , ಅದರೊಂದಿಗೆ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು. ಪರಿಸರವನ್ನು ನಾವೇ ರಕ್ಷಿಸಬೇಕು, ಏನಾದರೂ ಸಮಸ್ಯೆ ಬಂದಲ್ಲಿ ಅಲ್ಲಿಯ ಜನಪ್ರತಿನಿಧಿಗಳಿಗೆ ವಿಷಯದ ಮನವರಿಕೆ ಮಾಡಬೇಕು. ಗ್ರಾಮದ ಸಮಸ್ಯೆಗೆ ನಾವೇ ಸ್ವಯಂ ಸೇವಕರಾಗಿ ಶ್ರಮಿಸಬೇಕು.
– ಶಿಲ್ಪಾ ತಿಂಗಳಾಯ ಕಾನಂಗಿ, ಕೊಡವೂರು

ಪರಿಸರ ಮಾಲಿನ್ಯಗಳನ್ನು ತಡೆಗಟ್ಟೋಣ
ಪ್ರವಾಹಗಳು ಒಂದು ನೈಸರ್ಗಿಕ ವಿದ್ಯಮಾನವೇ ಆಗಿದ್ದರೂ, ಇದರಲ್ಲಿ ಮಾನವರ ಮಧ್ಯಪ್ರವೇಶವೂ ಸಹ ಪ್ರಮುಖ ಕಾರಣವಾಗಿದೆ. ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಬಂದ ಈ ಬೃಹತ್‌ ಪ್ರವಾಹದಿಂದ ನಾವು ಕಲಿಯುವುದು ಬಹಳಷ್ಟಿವೆ. ಈ ಸಮಯದಲ್ಲಿ ಚರಂಡಿಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತಿರಬೇಕು. ಆದ್ದರಿಂದ ಜಿಲ್ಲಾಡಳಿತ ಚರಂಡಿಗಳ ನಿರ್ಮಾಣ ಹಾಗೂ ಅದರ ಸ್ವತ್ಛತೆಯ ಕಡೆ ಹೆಚ್ಚು ಗಮನವಹಿಸಬೇಕಿದೆ. ಈ ಪ್ರವಾಹಗಳು ಬಾರದಿರಲು ನಾವು ಗಿಡ-ಮರಗಳನ್ನು ಹೆಚ್ಚು – ಹೆಚ್ಚು ಬೆಳೆಸಿ ಪರಿಸರ ಮಾಲಿನ್ಯಗಳನ್ನು ಕಡಿಮೆ ಮಾಡಬೇಕು. ನೀರಿನ ಆಕರಗಳಾದ ನದಿ, ಕೆರೆ-ಹೊಳೆ, ಇತ್ಯಾದಿ ಕಡೆಗಳಲ್ಲಿ ಕಸ- ಹೂಳೆತ್ತುವ ಕೆಲಸ ಮಳೆಗಾಲದ ಮೊದಲು ನಡೆಯಬೇಕು. ಜಿಲ್ಲಾಡಳಿತ ತಗ್ಗು ಪ್ರದೇಶದಲ್ಲಿ ವಾಸ ಮಾಡುವ ಜನರ ವಿವರಗಳನ್ನು ಪಡೆಯಬೇಕು ಹಾಗೂ ಇಂತಹ ಸಂದರ್ಭದಲ್ಲಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಜಿಲ್ಲಾಡಳಿತವು ಇಂತಹ ಹಲವಾರು ಕ್ರಮಗಳನ್ನು ಕೈಗೊಂಡು ಪ್ರವಾಹವನ್ನು ಎದುರಿಸಬೇಕಿದೆ.
– ಬಿ.ಪಿ. ಧೀರಜ್‌ ಪೈ, ಬ್ರಹ್ಮಾವರ

ತೋಡು ಮುಚ್ಚುವಿಕೆಯನ್ನು ತಡೆಯಬೇಕು
ರಸ್ತೆಯನ್ನು ಅಗಲಗೊಳಿಸಲು ತೋಡುಗಳನ್ನು ಕಾಂಕ್ರೀಟ್‌ ಸ್ಲಾéಬ್‌ಗಳಿಂದ (ಇಟncrಛಿಠಿಛಿ ಖlಚಚಿ) ಮುಚ್ಚಲಾಗುತ್ತದೆ. ಕೆಲವು ಕಡೆ ಇಂತಹ ತೋಡುಗಳಲ್ಲಿ ವಿದ್ಯುತ್‌ ಕಂಬಗಳನ್ನು ಹಾಕುತ್ತಾರೆ. ಮಳೆಗಾಲದಲ್ಲಿ ಇಂತಹ ತೋಡುಗಳಲ್ಲಿ ಕಸಗಳು ತುಂಬಿ ನೀರು ರಸ್ತೆಯ ಮೇಲೆಯೇ ಹೋಗುತ್ತದೆ. ಸ್ಲಾéಬ್‌ ಮುಚ್ಚಲ್ಪಟ್ಟ ಕಾರಣದಿಂದ ಜನಸಾಮಾನ್ಯರಿಗೆ ಇದನ್ನು ಸ್ವತ್ಛಗೊಳಿಸಲಾಗುವುದಿಲ್ಲ. ಜಿಲ್ಲಾಡಳಿತ‌ವೇ ಸ್ಲಾéಬ್‌ಗಳನ್ನು ತೆರವುಗೊಳಿಸಿ ಸ್ವತ್ಛಗೊಳಿಸಬೇಕು. ಇದು ಬಹಳ ಕಷ್ಟ. ಹಾಗಾಗಿ ನನ್ನ ಸಲಹೆ ಏನೆಂದರೆ ತೋಡುಗಳನ್ನು ಸ್ಲಾéಬ್‌ನಿಂದ ಮುಚ್ಚದೇ ಹಾಗೆಯೇ ಬಿಟ್ಟರೆ ಸ್ವತ್ಛಗೊಳಿಸುವುದು ಬಹಳ ಸುಲಭ. ಇಲ್ಲವಾದರೆ ಯಾರು ತೋಡುಗಳನ್ನು ಮುಚ್ಚಿದ್ದಾರೋ ಅವರೇ ವರ್ಷಕ್ಕೆರಡು ಬಾರಿ ಸ್ವತ್ಛಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
– ಪ್ರಸನ್ನ ಆಚಾರ್ಯ, ಪಣಿಯಾಡಿ ಉಡುಪಿ

Advertisement

ತೋಡುಗಳ ಹೂಳೆತ್ತಬೇಕು
ಉಡುಪಿ ಜಿಲ್ಲೆಗಳ ನದಿ ತೋಡುಗಳ ಕಸಕಡ್ಡಿಗಳನ್ನು ಹೂಳೆತ್ತಿ ಸ್ವತ್ಛಗೊಳಿಸಬೇಕು. ಉಡುಪಿ ಜಿಲ್ಲೆಯಲ್ಲಿರುವ ತಗ್ಗು ಪ್ರದೇಶದ ಜನರಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸಬೇಕು. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದ ಕಾರಣ ನೀರು ಅಲ್ಲಿ ಶೇಖರಣೆ ಆದಾಗ ಪ್ರವಾಹದಿಂದ ಇನ್ನಷ್ಟು ನೀರು ಹರಿದು ಹೋಗಲು ಅಡ್ಡಿಯಾಗುತ್ತದೆ. ಜನರು ಎಚ್ಚೆತ್ತುಕೊಳ್ಳಬೇಕು. ನದಿ ನೀರು ಹರಿಯುವ ಕಾಲುವೆಗಳಿಗೆ ತಾಜ್ಯ ವಸ್ತುಗಳನ್ನು ಬಿಸಾಡದಂತೆ ಕಠಿನ ಕ್ರಮಕೈಗೊಳ್ಳಬೇಕು.
– ರಂಜನಿ ಜೆ. ರಾವ್‌,  ಸಂತೆಕಟ್ಟೆ

ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ
ಅತಿಯಾದ ಮಾಲಿನ್ಯದ ಪರಿಣಾಮವಾಗಿಯೇ ನಾವು ನೋಡುತ್ತಿದ್ದ ಹವಮಾನ ಕಾಲಾವಧಿಗಳಲ್ಲಿ ಬದಲಾವಣೆಯಾಗುತ್ತಿರುವುದು. ಬೇಸಗೆಯಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯುವುದು, ಅಷ್ಟೇ ಬಿರುಬಿಸಿಲು ಸುಡುವುದು, ಮೈಮರಗಟ್ಟಿಸುವ ಚಳಿ, ಭೋರ್ಗರೆಯುವ ಮಳೆ, ಹವಮಾನ ತಜ್ಞರ ಲೆಕ್ಕಾಚಾರಗಳನ್ನು ಪದೇ ಪದೇ ತಲೆಕೆಳಗೆ ಮಾಡುತ್ತಿದ್ದ, ಜಾಗತಿಕ ತಾಪಮಾನ ಏರಿಕೆಯ ಬಿಸಿಯನ್ನು ಅನುಭವಿಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.  ಇದಕ್ಕೆಲ್ಲಾ ಪರಿಣಾಮವಾಗಿಯೇ ಹವಮಾನ ವೈಪರೀತ್ಯ ಉಂಟಾಗಿ ಜಾಗತಿಕ ತಾಪಮಾನವೂ ಹೆಚ್ಚುತ್ತಾ ಹೋದಂತೆ ಮೊನ್ನೆ ನಡೆದ ದೊಡ್ಡ ದುರಂತವನ್ನು ಎದುರಿಸಬೇಕಾಯಿತು. ಅದರಲ್ಲಿಯೂ ಜನಸಂಖ್ಯೆ ವಿಪರೀತವಾಗಿರುವ ಮತ್ತು ನಿಸರ್ಗದ ಮೇಲಿನ ಹಲ್ಲೆಯೂ ಅಷ್ಟೇ ಈ ರೀತಿಯ ದುರಂತಕ್ಕೆ ಕಾರಣವಾಗಿದೆ. ನೈಸರ್ಗಿಕ ಸಂಪತ್ತು ಕಣ್ಮನ ತಣಿಸುವ ರಮಣೀಯ ಸೌಂದರ್ಯ ಎಂದು ನಾವೆಲ್ಲರೂ ಹಾಡಿ ಹೊಗಳುತ್ತಿದ್ದ ಹಸುರು ಇಂದು ಬರೀ ಕೆಸರಾಗಿ ಕಾಣುತ್ತಿದೆ.  ಪ್ರಕೃತಿಯ ಕೋಪಕ್ಕೆ ನಾವೆಲ್ಲರೂ ತುತ್ತಾಗಿ ಎಲ್ಲವೂ ಛಿದ್ರವಾಗಿದೆ. ಪ್ರಕೃತಿ ಸ್ವತಃ ಕಟ್ಟಿಕೊಂಡಿದ್ದನ್ನು ಪ್ರಕೃತಿಯೇ ಕೆಡಹುವ ಪ್ರಕ್ರಿಯೆಗೆ ಮನುಷ್ಯನೇ ಮೊದಲ ಕಾರಣವಾಗಿರುವುದು ಬೇಸರದ ಸಂಗತಿ.ಇನ್ನಾದರೂ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಪರಿಸರ, ಹವಮಾನದ ಉಳಿವಿಗೆ ಸೂಕ್ತ ಕ್ರಮ ತೆಗೆದುಕೊಳ್ಳೋಣ. ಪ್ರಕೃತಿಯನ್ನು ಪ್ರೀತಿಸೋಣ. ಇನ್ನೊಮ್ಮೆ ಇಂತಹ ದುರಂತ ನಡೆಯದಿರಲಿ ಎಂದು ಬಯಸೋಣ.
-ನಾಗವೇಣಿ ಪ್ರಮೋದ್‌ರಾಜ್‌, ಉಡುಪಿ

ಒಳಚರಂಡಿ ವ್ಯವಸ್ಥೆಯಾಗಲಿ
ಅನುಪಯುಕ್ತ ಕಿಂಡಿ ಅಣೆಕಟ್ಟುಗಳನ್ನು ತೆರವುಗೊಳಿಸಬೇಕು. ಸುಸ್ಥಿರವಾದ ಒಳ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ, ಒಳ ಚರಂಡಿಯಿಂದ ಮಳೆ ನೀರನ್ನು ಬೇರ್ಪಡಿಸುವ ಕಾರ್ಯವಾಗಬೇಕು. ನೀರಿನ ಹರಿವನ್ನು ಸಂಗ್ರಹಿಸಿ, ನಿಧಾನವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆಯಾದ ಅಟೆನ್ಯೂಯೇಷನ್‌ ವಿಧಾನವನ್ನು ಹೆಚ್ಚು ಬಳಸಬೇಕು. ಹವಾಮಾನ ಎಚ್ಚರಿಕೆಯ ಕಾರ್ಯ ವಿಧಾನವನ್ನು ಸುಧಾರಿಸಿ, ಆಧುನಿಕ ಕಾರ್ಯ ಪಡೆಯನ್ನು ಸದಾ ಜಾಗೃತಾವಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳುಬೇಕು. ಕೆರೆಗಳ ಒತ್ತುವರಿಯನ್ನು ನಿಲ್ಲಿಸಿ, ಹೆಚ್ಚು ಉದ್ಯಾನ ವನಗಳನ್ನು ನಿರ್ಮಿಸಬೇಕು.
– ರಾಘವೇಂದ್ರ ಡಿ., ಶಿರೂರು

ನಿಮ್ಮ ಸಲಹೆ ನೀಡಿ
38 ವರ್ಷಗಳ ಬಳಿಕ ಉಡುಪಿಯಲ್ಲಿ ಉಂಟಾದ ಜಲಪ್ರಳಯ ಸಾಕಷ್ಟು ಹಾನಿ ಮಾಡುವ ಜತೆಗೆ ಭವಿಷ್ಯಕ್ಕೊಂದು ಉತ್ತಮ ಪಾಠ ಕಲಿಸಿದೆ. ಅಭಿವೃದ್ಧಿಯೊಂದಿಗೆ ದಾಪುಗಾಲು ಇಡುವಾಗ ಮುಂದೆ ಇಂಥ ಸಂದರ್ಭವನ್ನು ಮತ್ತಷ್ಟು ಸಮರ್ಥವಾಗಿ ನಿಭಾಯಿಸಲು ಯಾವ ರೀತಿ ನಾವು
ಸಜ್ಜಾಗಬೇಕು, ಏನೆಲ್ಲ ಯೋಜನೆಗಳನ್ನು ರೂಪಿಸಿಕೊಳ್ಳಬಹುದು, ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಜತೆಗೆ ಜಿಲ್ಲಾಡಳಿತದ ಹೊಣೆಗಾರಿಕೆ ಏನು ಎನ್ನುವ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next