Advertisement

ಬೆಳಗ್ಗೆ ಎದ್ದಾಕ್ಷಣ ಏನು ಸೇವಿಸುತ್ತೀರಿ?

10:14 AM Dec 16, 2019 | mahesh |

ಜಗತ್ತನ್ನು ಕಾಡುತ್ತಿರುವ ಈ ಸಮಯದ ಅತಿದೊಡ್ಡ ಸಮಸ್ಯೆಯೆಂದರೆ ಅನೇಕರ ಭಾವನಾತ್ಮಕ ಆರೋಗ್ಯ (ಎಮೋಷನಲ್‌ ಹೆಲ್ತ್‌) ಹದಗೆಟ್ಟಿರುವುದು. ಭಾವನಾತ್ಮಕ ಆರೋಗ್ಯ ಸರಿಯಾಗಿ ಇರಬೇಕು ಎಂದರೆ, ನಾವು ದಿನವೂ ಏನನ್ನು ಕೇಳುತ್ತೇವೆ, ಏನನ್ನು ನೋಡುತ್ತೇವೆ ಮತ್ತು ಏನನ್ನು ಓದುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

Advertisement

ದಿನವೂ ಬೆಳಗ್ಗೆ ಎದ್ದಾಕ್ಷಣ ನೀವು ಸುದ್ದಿ ಪತ್ರಿಕೆಗಳನ್ನು ಓದುತ್ತೀರಿ, ನ್ಯೂಸ್‌ ಚಾನೆಲ್‌ಗಳನ್ನು ನೋಡುತ್ತೀರಿ ಎಂದರೆ ಏನಾಗುತ್ತದೆ? ಬೆಳಗ್ಗೆಯೇ ನೀವು ಕೆಟ್ಟ ಸುದ್ದಿಯನ್ನು, ಋಣಾತ್ಮಕ ಅಂಶಗಳನ್ನು ನಿಮ್ಮ ತಲೆಗೆ ಸೇರಿಸಿಬಿಡುತ್ತೀರಿ ಎಂದರ್ಥ. ಒಮ್ಮೆ ನಕಾರಾತ್ಮಕ ಸಂಗತಿಗಳು ತಲೆಯನ್ನು ಹೊಕ್ಕವೆಂದರೆ ಆನಂತರ ದಿನವಿಡೀ ಪಾಸಿಟಿವ್‌ ಭಾವನೆಗಳನ್ನು ಸೃಷ್ಟಿಸುವುದು ಕಷ್ಟವಾಗಿಬಿಡುತ್ತದೆ. ಹೀಗಾಗಿ ಭಾವನಾತ್ಮಕ ಆರೋಗ್ಯಸುಧಾರಿಸಬೇಕು ಎಂದರೆ, ಮಾಹಿತಿಯ ಸೇವನೆಯನ್ನು, ಅದರ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕಾಗುತ್ತದೆ.

ಕಳೆದ 20 ವರ್ಷಗಳಿಂದ ಏನಾಗುತ್ತಿದೆಯೆಂದರೆ, ಮಾನವನ ಬಳಿ ಅತಿ ಎನ್ನಿಸುವಷ್ಟು ಮಾಹಿತಿ ಹರಿದುಬರಲಾರಂಭಿಸಿದೆ. ಮೊದಲು ಒಂದೆರಡು ಸುದ್ದಿವಾಹಿನಿಗಳು, ಪತ್ರಿಕೆಗಳು ಇದ್ದವು. ಈಗ ನೂರಾರು ನ್ಯೂಸ್‌ ಚಾನೆಲ್‌ಗಳು, ಪತ್ರಿಕೆಗಳು ಬಂದಿವೆ.

ಸೋಷಿಯಲ್‌ ಮೀಡಿಯಾಗಳು ಬಂದಿವೆ, ಈಗ ಯೂಟ್ಯೂಬ್‌ನಂಥ ಸಾವಿರಾರು ಡಿಜಿಟಲ್‌
ವೇದಿಕೆಗಳು ಹುಟ್ಟಿಕೊಂಡಿವೆ. ಇವೆಲ್ಲವುಗಳೂ ಮಾಹಿತಿಯನ್ನು ಸೃಷ್ಟಿಸುತ್ತಿವೆ. ಒಟ್ಟಲ್ಲಿ ನಿತ್ಯವೂ ಮಾಹಿತಿಯ ಬೃಹತ್‌ ಅಲೆಗಳು ಸೃಷ್ಟಿಯಾಗಿ ಅವು ನಮ್ಮನ್ನು ಬಂದಪ್ಪಳಿಸುತ್ತಿವೆ. ಒಂದೇ ನಿಮಿಷವೂ ನಾವು ಈ ಮಾಹಿತಿಗಳ ಸೇವನೆಯಿಂದ ಮುಕ್ತರಾಗುತ್ತಿಲ್ಲ, ಬಿಡುವು ತೆಗೆದುಕೊಳ್ಳುತ್ತಿಲ್ಲ. ಪ್ರತಿ ಕ್ಷಣವೂ ಹೊಸ ಹೊಸ ಮಾಹಿತಿಯನ್ನು ಸೇವಿಸುತ್ತಲೇ ಇದ್ದೇವೆ. ಮಾಹಿತಿಯೇನೋ ಭರಪೂರ ಸಿಗುತ್ತಿದೆ, ಅದರ ಗುಣಮಟ್ಟ ಮಾತ್ರ ಕುಸಿದುಹೋಗುತ್ತಿದೆ. ನೀವು ಇಂದು ಏನನ್ನಾದರೂ ನೋಡಿ, ಏನನ್ನಾದರೂ ಕೇಳಿ, ಏನನ್ನಾದರೂ ಓದಿ. ಅವರು ಇವರ ಬಗ್ಗೆ ಹೀಗೆಂದರು, ಇವರು ಅವರಿಗೆ ಹೀಗೆ ಪ್ರತಿಕ್ರಿಯೆ ನೀಡಿದರು, ಅವರು ಇವರನ್ನು ಜಾಡಿಸಿದರು, ಇವರು ಅವರಿಗೆ ಪಾಟೀ ಸವಾಲೆಸೆದರು…ಬಹುತೇಕ ಇಂಥ ಋಣಾತ್ಮಕ ಸಂಗತಿಗಳೇ ಇರುತ್ತವೆ. ಅವಷ್ಟೇ ಎಂದಲ್ಲ ಇಂದು ಜೋಕುಗಳೂ ಕೂಡ ಇನ್ನೊಬ್ಬರ ಚಾರಿತ್ರಹರಣ ಮಾಡುವಂತೆ ರೂಪುಗೊಂಡಿರುತ್ತವೆ.

ಒಂದು ವಿಷಯ ಅರ್ಥಮಾಡಿಕೊಳ್ಳಿ; ನೀವು ಏನನ್ನು ನೋಡುತ್ತೀರೋ, ಏನನ್ನು ಕೇಳುತ್ತೀರೋ, ಏನನ್ನು ಓದುತ್ತೀರೋ, ಅದೇ ಆಗುತ್ತೀರಿ! ಈ ಸಂಗತಿಗಳೆಲ್ಲ ಪರಸ್ಪರ ಬೆಸೆದುಕೊಂಡಿವೆ.

Advertisement

ನಿಮಗೆ ನಿಮ್ಮ ಸಂಸ್ಕಾರಗಳನ್ನು ಉತ್ತಮ
ಪಡಿಸಿಕೊಳ್ಳಬೇಕು ಎಂದರೆ, ನಿಮ್ಮ ಭಾವನಾತ್ಮಕ ಬ್ಯಾಟರಿಯನ್ನು ಚಾರ್ಜ್‌ ಮಾಡಿಕೊಳ್ಳಬೇಕು ಎಂದರೆ, ಸ್ವಲ್ಪ ಸಮಯದವರೆಗೆ ಈ ರೀತಿಯ ನೆಗೆಟಿವ್‌ ಮಾಹಿತಿಯ ಸೇವನೆಯನ್ನು ನಿಲ್ಲಿಸಿಬಿಡಿ. ಯಾವ ಮಾಹಿತಿಯು ನಮಗೆ ಪ್ರಸ್ತುತವೋ, ಯಾವ ಮಾಹಿತಿಯು ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿಸಬಲ್ಲದೋ, ನಮ್ಮೊಳಗಿನ ಚೇತನಕ್ಕೆ ಪ್ರೇರಣೆಯನ್ನು ನೀಡಬಲ್ಲದೋ, ನಮ್ಮನ್ನು ಆಶಾವಾದಿಗಳನ್ನಾಗಿಸುತ್ತದೋ ಅವನ್ನು ಮಾತ್ರ ಒಳಗೆ ಬಿಟ್ಟುಕೊಳ್ಳಿ.

ನಾವು ಸಹಾನುಭೂತಿ, ಮಾನವೀಯತೆಯ ಮಾತನಾಡುತ್ತೇವೆ. ಆದರೆ ನಮ್ಮಲ್ಲಿ ಸಹಾನುಭೂತಿ ಮತ್ತು ಮಾನವೀಯತೆಯ ಅಂಶಗಳನ್ನು ತುಂಬಿಕೊಂಡಾಗ ಮಾತ್ರವೇ ಇಡೀ ದಿನ ನಾವು ಸಹಾನುಭೂತಿಯನ್ನು ಪಸರಿಸಬಹುದಲ್ಲವೇ? ಆದರೆ ಅಷ್ಟೊಂದು ಪ್ರಮಾಣದ ಸಹಾನುಭೂತಿ ನಮ್ಮೊಳಗೆ ಸೃಷ್ಟಿಯಾಗಬೇಕೆಂದರೆ, ಸಹಾನುಭೂತಿಯನ್ನು ಸೃಷ್ಟಿಸುವಂಥ ಅಂಶಗಳನ್ನು ನಾವು ಸೇವಿಸಬೇಕಾಗುತ್ತದೆ.

ಬ್ರಹ್ಮಕುಮಾರಿ ಸಂಸ್ಥೆಗಳಿಗೆ ಬರುವವರಲ್ಲಿ ಅನೇಕರು ಕುಟುಂಬಸ್ಥರಿದ್ದಾರೆ, ವ್ಯಾಪಾರಿಗಳಿದ್ದಾರೆ, ನೌಕರಸ್ಥರಿದ್ದಾರೆ….ಅವರೆಲ್ಲ ಏನು ಮಾಡುತ್ತಾರೆ ಗೊತ್ತೇ? ಎಲ್ಲರೂ ಪ್ರತಿ ದಿನ ಸೆಂಟರ್‌ಗೆ ಬಂದು ಪ್ರೇರಣಾದಾಯಕ ಪ್ರವಚನವನ್ನು ಕೇಳುತ್ತಾರೆ ಇಲ್ಲವೇ ಧ್ಯಾನ ಮಾಡುತ್ತಾರೆ. ದಿನದ ಆರಂಭವು
ಸಕಾರಾತ್ಮಕವಾಗಿದ್ದಾಗ, ಉತ್ತಮ ಜ್ಞಾನದಿಂದ ತುಂಬಿದ್ದಾಗ(ಶಾಂತಿ, ಪ್ರೀತಿ, ಸಹಾನುಭೂತಿ, ಏಕತೆ ಅಂಶ ಒಳಗೊಂಡಿದ್ದಾಗ) ಬೃಹತ್‌ ವೈಬ್ರೇಷನ್‌ಗಳು ನಮ್ಮ ಮಿದುಳನ್ನು ಪ್ರವೇಶಿಸುತ್ತವೆ. ಈ ಗುಣಾತ್ಮಕ
ವೈಬ್ರೇಷನ್‌ ಇಡೀ ದಿನ ನಮ್ಮನ್ನು ಉತ್ತಮ ನಡೆಯಿಡಲು ಪ್ರೇರೇಪಿಸುತ್ತದೆ. ಆದರೆ ಇದರ ಬದಲು ಬರೀ ಕೆಟ್ಟ ಸಂಗತಿಗಳನ್ನು, ಋಣಾತ್ಮಕ ಅಂಶಗಳನ್ನು, ನಿಂದೆಯ ಹೇಳಿಕೆಗಳನ್ನು ತಲೆಯಲ್ಲಿ ತುಂಬುತ್ತಾ ಹೋದರೆ, ಆ ನೆಗೆಟಿವ್‌ ವೈಬ್ರೇಷನ್‌ ನಿಮ್ಮನ್ನು ಇಡೀ ದಿನ ನಿಯಂತ್ರಿಸುತ್ತದೆ. ಬೆಳಗ್ಗೆ ಎದ್ದತಕ್ಷಣ ತಲೆಯಲ್ಲಿ ಏನು ತುಂಬಿಕೊಳ್ಳುತ್ತೀರಿ ಎನ್ನುವುದು ಮುಖ್ಯ.

ನೀವು ನ್ಯೂಸ್‌ ನೋಡಿ; ಬೇಡ ಎನ್ನುವುದಿಲ್ಲ, ಟಿವಿ ಸೀರಿಯಲ್‌ಗಳನ್ನೂ ನೋಡಿ, ಸಿನೆಮಾಗಳನ್ನೂ ನೋಡಿ, ಹಾಡುಗಳನ್ನೂ ಕೇಳಿ, ಕಾಮಿಡಿ ಶೋಗಳನ್ನೂ ನೋಡಿ. ಆದರೆ ಅವು ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಅವುಗಳನ್ನು ಸೇವಿಸಿ. ನೀವು ಬರೀ ಕ್ರೈಂ ಶೋಗಳನ್ನೇ ನೋಡುತ್ತಾ ಹೋದರೆ, ಭಯ,
ಅನುಮಾನ, ಆತಂಕಗಳೇ ನಿಮ್ಮ ಸಂಸ್ಕಾರಗಳಾಗುತ್ತವೆ. ನಿಮ್ಮ ಎಮೋಷನಲ್‌ ಡಯಟ್‌ನ ಬಗ್ಗೆ ಎಚ್ಚರಿಕೆ ವಹಿಸಿ, ಪ್ರತಿ ದಿನ ಒಂದು ಗಂಟೆ ಬಹಳ ಶುಭ್ರವಾದ ಸಂಗತಿಗಳು ನಿಮ್ಮ ಮನಸ್ಸನ್ನು ಪ್ರವೇಶಿಸುವಂತೆ ನೋಡಿಕೊಳ್ಳಿ. ಉತ್ತಮ ಆಹಾರದಂತೆಯೇ, ಉತ್ತಮ ಮಾಹಿತಿಯ ಸೇವನೆಯು ನಮ್ಮನ್ನು ಆರೋಗ್ಯಯುತರನ್ನಾಗಿಸುತ್ತದೆ. ಫ‌ಲಿತಾಂಶ ಒಂದೇ ದಿನದಲ್ಲಿ ಕಾಣಿಸದೇ ಇರಬಹುದು, ಆದರೆ ನೀವು ಮಾನಸಿಕವಾಗಿ ಆರೋಗ್ಯಯುತ ವ್ಯಕ್ತಿಗಳಾಗುವುದಂತೂ ನಿಶ್ಚಿತ. ಇದರಲ್ಲಿ ಅನುಮಾನವೇ ಬೇಡ.

ಲೇಖಕರ ಕುರಿತು
ಸಹೋದರಿ ಶಿವಾನಿ “ಬ್ರಹ್ಮಕುಮಾರಿ ವಿಶ್ವ ಆಧ್ಯಾತ್ಮಿಕ ವಿವಿಯಲ್ಲಿ’ ಶಿಕ್ಷಕರಾಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಪ್ರೇರಣಾದಾಯಕ ಬೋಧನೆಗಳು ಯೂಟ್ಯೂಬ್‌ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿವೆ.

– ಬಿ.ಕೆ ಶಿವಾನಿ

Advertisement

Udayavani is now on Telegram. Click here to join our channel and stay updated with the latest news.

Next