Advertisement

ನದಿ ಸಂರಕ್ಷಣೆ ನಾವೇನು ಮಾಡೋಣ?

06:00 AM Aug 13, 2018 | |

ನೀರು ಕುಡಿಯುವ ಎಲ್ಲರ ಕರ್ತವ್ಯದು. ಮಿತ ಬಳಕೆಯ ಸೂತ್ರ ಅನುಸರಿಸುತ್ತ  ಕಾಡು, ನೀರುಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಉಪದೇಶ, ಘೋಷಣೆ, ಭಾಷಣಗಳಲ್ಲಿ ಮಾತು ಸೋತಿದೆ. ನದಿ ಸಂರಕ್ಷಣೆಗೆ ರಚನಾತ್ಮಕ ಹೆಜ್ಜೆಗಳು ಬೇಕಾಗಿದೆ.  

Advertisement

ತೀವ್ರ ಜಲಕ್ಷಾಮದಲ್ಲಿ ಕಲಬುರ್ಗಿಯ ಆಳಂದದ ದುತ್ತರಗಾಂವ ಹಳ್ಳಿಗೆ ಟ್ಯಾಂಕರ್‌ ನೀರು ಬರುತ್ತಿತ್ತು. ಒಂದು ದಿನಕ್ಕೆ ಸಿಗುತ್ತಿದ್ದ ಐದು ಬಿಂದಿಗೆಯಲ್ಲಿ ಕುಟುಂಬಗಳು ಬದುಕಿದವು. ಅಲ್ಲಿನ ಜನ ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದರು. ಆಗಲೂ ಬುಟ್ಟಿಯಲ್ಲಿ ನಿಂತು ಸ್ನಾನ ಮಾಡಿ ಸ್ನಾನದ ನೀರನ್ನು ದನಕರುಗಳಿಗೆ ಕುಡಿಯಲು, ಬಟ್ಟೆ ತೊಳೆಯಲು ಮರು ಬಳಕೆ ಮಾಡುತ್ತಿದ್ದರು. ಐದು ಹತ್ತು ಲೀಟರ್‌ ಮಿತಿಯಲ್ಲಿ ದನಕರುವಿಗೆ ನೀರು ಕೊಡುತ್ತಿದ್ದರು.  ಮೇವು, ನೀರಿಲ್ಲದ ಕಡಗಂಚಿ, ಕೌಲಗಾ ಮುಂತಾದ ಹಳ್ಳಿಗರು ಉಳುಮೆ ಎತ್ತುಗಳನ್ನು ಮಾರಾಟ ಮಾಡಿ, ಮುಂಬೈ ನಗರಕ್ಕೆ ವಲಸೆ ಹೋದರು. ಎರಡು ವರ್ಷದ ಹಿಂದೆ ರಾಜ್ಯದ 137 ತಾಲೂಕುಗಳಲ್ಲಿ ಬರಗಾಲ ಘೋಷಣೆಯಾಗಿತ್ತಲ್ಲವೇ? ಅವತ್ತಿನ ಆಳಂದದ ಪ್ರತ್ಯಕ್ಷ ದರ್ಶನದ ಸಂಕ್ಷೀಪ್ತ¤  ನೋಟವಿದು. ನಾಳಿನ ನೀರಿನ ಕಷ್ಟ ನಮಗೂ ಹೇಗೆ ಬರಬಹುದೆಂದು ಎಂಬುದಕ್ಕೆ ಇದು ಒಂದು ಪರಿಚಯ ಮಾತ್ರ.

ಮಳೆ ಬರಲಿಲ್ಲ, ಬರಗಾಲವೆಂದು ಸರಳಕ್ಕೆ ಹೇಳಬಹುದು. ಹೇರಳ ಮಳೆ ಸುರಿದರೂ ಜಲಕ್ಷಾಮ ಬರುವಂಥ ಪರಿಸ್ಥಿತಿಗೆ ಈಗ ರಾಜ್ಯ ನೂಕಲ್ಪಟ್ಟಿದೆ, ನೀರಿನ ಬಳಕೆ ಹೆಚ್ಚಿದೆ. ಅಣೆಕಟ್ಟೆಯಲ್ಲಿ ನೀರು ಹಿಡಿದು ಜನರನ್ನು ಬದುಕಿಸುವ ದಾರಿ ಎಷ್ಟು ಮುಖ್ಯವೋ, ನದಿಯಲ್ಲಿ ವರ್ಷವಿಡೀ ಮೇಲ್ಮೆ„ಯಲ್ಲಿ ನೀರು ಹರಿಯುವುದೂ ಅಷ್ಟೇ ಮುಖ್ಯ. ನದಿ ನೀರು ಬಳಕೆಯ ನೇತಾರರಾದ ಮನುಷ್ಯ ಕುಲದ ನಾವು ಟಿಎಮ್‌ಸಿ ಲೆಕ್ಕದಲ್ಲಿ ನದಿ ನೋಡುವುದನ್ನು ಕಲಿತಿದ್ದೇವೆ. ಒಟ್ಟೂ ಮೊತ್ತದ ನೀರು ನೋಡುತ್ತಿದ್ದೇವೆಯೇ ಹೊರತು, ನದಿಮೂಲದ ಅರಣ್ಯ ಸಂರಕ್ಷಣೆ ಪ್ರಜ್ಞೆ ಇಲ್ಲ. ಹಸು ಜಾಸ್ತಿ ಹಾಲು  ಕೊಡಬೇಕು, ಇದಕ್ಕೆ ಮೇವು ನೀಡುವುದು ಹೋಗಲಿ, ಕೆಚ್ಚಲು ಕೊಯ್ಯುವ ಕೃತ್ಯಗಳು ನದಿ ವಿಚಾರದಲ್ಲಿ ನಡೆಯುತ್ತಿವೆ. ಕಠಿಣ ಪರಿಸರ ಪರಿಸ್ಥಿತಿ ಎದುರಾಗಿದೆ.  

ನೀರಿನ ಸಂಬಂಧಗಳು ನಲ್ಲಿಗೆ ಸೀಮಿತವಾಗಿವೆ. ನಲ್ಲಿಯ ನೀರು ಬರದಿದ್ದರೆ ಟ್ಯಾಂಕರ್‌ ನೀರು ಖರೀದಿಸಬಹುದು. ಆದರೆ ಜೀವನದಿಗಳ ಆಯುಷ್ಯ ತೀರಿದರೆ ಎಷ್ಟೇ ಹಣ ಖರ್ಚುಮಾಡಿ ಸಾವಿರ ಅಡಿ ಕೊರೆದರೂ  ನೀರು ಸಿಗುವುದಿಲ್ಲ. ಈಗಾಗಲೇ ನೀರಿನ ಮಾರುಕಟ್ಟೆ  ವಿಸ್ತರಿಸುತ್ತಿದೆ. ದಾವಣಗೆರೆಯ ಸನಿಹದ ಶಾಮನೂರಿನ ಬರದ ನೀರಿನ ನೋಟ ಚಿತ್ರವಾಗಿತ್ತು. ಭತ್ತ ಬೆಳೆದರೆ ಫ‌ಸಲು ಸಿಗಲು ಮೂರು ನಾಲ್ಕು ತಿಂಗಳು ಬೇಕು. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಸಿಗುವುದು ಕಡಿಮೆ. ಲಾಭದ ಲೆಕ್ಕ ಹಾಕಿದವರು ಭತ್ತ ಬೆಳೆಯದೇ ಬಾವಿಯ ನೀರನ್ನು ನಿತ್ಯ ಟ್ಯಾಂಕರ್‌ ಮೂಲಕ ಹೊಸ ಬಡಾವಣೆಗಳಿಗೆ ಮಾರುತ್ತಿದ್ದರು. ಸುತ್ತಲಿನ ಯಾವ ಹಳ್ಳಿಯಲ್ಲೂ ನೀರಿಲ್ಲದ್ದರಿಂದ ಹಾವೇರಿಯ ಸವಣೂರಿನ ಮೋತಿ ತಲಾಬ್‌ ಸನಿಹದ ಎರಡು ಖಾಸಗಿ ಕೊಳವೆ ಬಾವಿಗಳ ನೀರು ಸುಮಾರು 28 ಕಿಲೋ ಮೀಟರ್‌ ದೂರದ ಹಳ್ಳಿಗಳಿಗೂ ಮಾರಾಟವಾಗುತ್ತಿತ್ತು. ಕೋಲಾರ ಪೇಟೆಯಲ್ಲಿ ಟ್ಯಾಂಕರ್‌ ನೀರಿನ ದೊಡ್ಡ ಸಂತೆ, ನಡು ರಾತ್ರಿಯಲ್ಲಿ ನೀರು ತುಂಬಿಸುವ ಗಲಾಟೆ ಸಾಮಾನ್ಯ. ನೀರಿಗಾಗಿ ಕೊಲೆಯೂ ನಡೆದು ಹೋಗಿ,  ರಾಜ್ಯದಲ್ಲಿ  ಈಗಾಗಲೇ ಪ್ರಕರಣವೊಂದು ದಾಖಲಾಗಿದೆ. ಒಂದು ಬಿಂದಿಗೆ ನೀರು ತುಂಬಿಸಲು ಹೆಣ್ಣು ಮಕ್ಕಳು ನೂರಾರು ಅಡಿ ಆಳದ ಕಲ್ಲಿನ ಬಾವಿಗೆ ಇಳಿಯುವುದನ್ನು ಬೆಳಗಾವಿಯ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಕಾಣಬಹುದು. ಬರದ ಕಾಲಕ್ಕೆ ಆಂಧ್ರ, ತಮಿಳುನಾಡಿನಿಂದ ಕೊಳವೆ ಬಾವಿ ಕೊರೆಯುವ ಯಂತ್ರಗಳು ಸಾಲು ಹಚ್ಚಿ ರಾಜ್ಯಕ್ಕೆ ನುಗ್ಗಿದವು. ಸುಮಾರು 15,000 ಯಂತ್ರಗಳು ಕಾರ್ಯನಿರ್ವಹಿಸಿದವು. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಯಂತ್ರಗಳು, ನದಿ ಮೂಲದ ಮಲೆನಾಡು, ಕರಾವಳಿಯಲ್ಲಿ ಕೊಳವೆ ಬಾವಿ ಕೊರೆದವು. ಎಷ್ಟು ಸಾವಿರ ಕೋಟಿ ಜನರ ಹಣ ಕೊಳವೆ ಬಾಗೆ ಬಿತ್ತು?  ಲೆಕ್ಕವಿಲ್ಲ.

ಮನೆ ಮನೆಯಲ್ಲಿ ನೀರಿನ ಮಿತಬಳಕೆ ನದಿ ಸಂರಕ್ಷಣೆಯ ಮೊದಲ ಹೆಜ್ಜೆ. ಅಡುಗೆ, ಸ್ನಾನ, ಶೌಚ, ಕೈತೋಟಗಳಿಗೆ ಎಷ್ಟು ಬಳಸುತ್ತೇವೆಂದು ಲೆಕ್ಕ ಬೇಕು. ಸ್ನಾನದ ನೀರು ಕೈತೋಟಕ್ಕೆ ಮರುಬಳಕೆಯಾದರೆ ಅಷ್ಟು ಶುದ್ಧ ನೀರು ಉಳಿಯುತ್ತದಲ್ಲವೇ? ಬಳಸುವ ನೀರು ಏಲ್ಲಿಂದ ಬರುತ್ತಿದೆ? ಎಷ್ಟು ಆಳದ ಬಾವಿ, ಕೊಳವೆ ಬಾವಿಯಿಂದ ಪಡೆಯುತ್ತಿದ್ದೇವೆಂಬ ತಿಳುವಳಿಕೆ ಬೇಕು. ಎಷ್ಟು ಕಿಲೋ ಮೀಟರ್‌ ದೂರದ ನದಿಯ ನೀರು ಪೂರೈಕೆಯಾಗುತ್ತಿದೆಯೆಂದು ಗೊತ್ತಿರಬೇಕು. ಮನೆ ಸನಿಹದ ಬಾವಿ, ಕೆರೆಗಳ ನೀರು ಯಾವಾಗ ಮಾಯವಾಯೆ¤ಂದು ಯೋಚಿಸಬೇಕು. ಆಗ ಮಾತ್ರ ನೆಲದ ಉತ್ತರಗಳು ಸಿಗುತ್ತವೆ. ನದಿ ಸಾವಿನ ಕಾರಣಗಳು ಯಾವಾಗಲೂ ನಮ್ಮ ಕಾಲುಬುಡದಿಂದಲೇ ಶುರುವಾಗುತ್ತವೆ.  ಮನೆ ಬಳಕೆಯ ತ್ಯಾಜ್ಯ ನೀರನ್ನು ಗಿಡ, ಮರ, ಕೈತೋಟ, ಶೌಚಾಲಯ ಸ್ವತ್ಛತೆಗೆ  ಬಳಸಬಹುದು.  ಡಿಟೆರ್ಜೆಂಟ್‌ ಬಳಕೆ ನಿಲ್ಲಿಸಿ ಮಾಲಿನ್ಯ ತಡೆಯುವ ಕೆಲಸ ಮಾಡಬಹುದು. ಸರಕಾರ ಕಾನೂನು ಹಿಡಿದು ನೀರಿನ ಮರು ಬಳಕೆಯ ಜಾಗೃತಿಗೆ ಸ್ನಾನದ ಕೋಣೆಗೆ ಬರಬೇಕಾಗಿಲ್ಲ. ಬಳಕೆಯಲ್ಲಿ ಸ್ವಯಂ ನಿಯಂತ್ರಣ ಸಾಧಿಸಿ ನೀರು ಉಳಿಸುವ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಸುತ್ತಲಿನ ಕೆರೆ ಪರಿಸರ ಅರಿತು ಪುನಶ್ಚೇತನಕ್ಕೆ ಮುಂದಾಗಬೇಕು. ಬಾಟಲ್‌, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬೀದಿ, ಹಳ್ಳಗಳಿಗೆ ಎಸೆಯುವುದು ಹಲವರ ಅಭ್ಯಾಸ. ಅವು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ನದಿಯ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇದನ್ನು ತಡೆಯಲು ಸಮುದಾಯ ಜಾಗೃತಿ ಬೇಕು.

Advertisement

ಕ್ರಿ.ಶ. 1973 ರಲ್ಲಿ ಬೆಂಗಳೂರಿನ ಒಟ್ಟೂ ಭೂಮಿಯಲ್ಲಿ ಶೇಕಡಾ 8ರಷ್ಟು ಜಾಗದಲ್ಲಿ ಮಾತ್ರ ಮನೆಗಳಿದ್ದವು. ಈಗ ಶೇ. 77 ರಷ್ಟು ಪ್ರದೇಶ ಮನೆಗಳಾಗಿ ನೆಲವೆಲ್ಲ ಕಾಂಕ್ರೀಟಾಗಿದೆ. ಮಳೆ ನೀರು ಭೂಮಿಗೆ ಇಂಗುತ್ತಿಲ್ಲ. 30 ವರ್ಷಗಳ ಹಿಂದೆ 5000 ಕೊಳವೆ ಬಾವಿಗಳ ನಾಡಾಗಿದ್ದ ಬೆಂಗಳೂರು, ಇಂದು 4.5 ಲಕ್ಷ ಬಾವಿಗಳ ನೆಲೆಯಾಗಿದೆ. 2031 ರ ಹೊತ್ತಿಗೆ ಜನಸಂಖ್ಯೆ ಮೂರು ಕೋಟಿ ದಾಟಲಿದೆ. ರಾಜ್ಯದ ಎಲ್ಲೆಡೆಯೂ ಇದೇ ಕಥೆ, ನದಿಗಳ ಜೀವಾಳವಾದ ಗುಡ್ಡಬೆಟ್ಟಗಳು ಪೇಟೆ ಪಟ್ಟಣಗಳಾಗಿ ನೀರಿನ ಬ್ಯಾಂಕುಗಳಾದ ಕಾಡು ದಿವಾಳಿಯಾಗಿದೆ. ಆಳ ನೀರಿನ ಮೂಲ ಠೇವಣಿಗೇ ನಾವು ಕೈ ಹಾಕಿದ್ದೇವೆ. ನದಿಯ ಸಮಗ್ರ ಅರಿವು ಪಡೆಯುವತ್ತ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಬೇಕು. 

ಪ್ರಾಥಮಿಕ, ಪ್ರೌಢಶಾಲೆ ಓದುತ್ತಿರುವ ಮಕ್ಕಳಿಗೆ, ಹಿಮಾಲಯ ಪರ್ವತದ ಸ್ಪಷ್ಟ ಪರಿಚಯವಿದೆ. ಆದರೆ ನಮ್ಮ ಕಾವೇರಿ, ಕೃಷ್ಣಾ, ತುಂಗಭದ್ರಾ, ನೇತ್ರಾವತಿ ಮುಂತಾದ ನದಿಗಳ ಪರಿಚಯವಿಲ್ಲ. ಪ್ರತಿ ನದಿಗೂ ಚೆಂದದ ಕತೆಗಳಿವೆ. ಆಸಕ್ತಿ ಮೂಡಿಸುವ ಕೌತುಕದ ವಿಚಾರ ಹೇಳುತ್ತ ಅವರಲ್ಲಿ ಕುತೂಹಲ ಮೂಡಿಸಬೇಕು. ನದಿ ಕುರಿತ ಚಿತ್ರ ಬರೆಯುವುದು, ಭಾಷಣ, ಹಾಡು, ನಿಬಂಧ ಸ್ಪರ್ಧೆ, ಸಾಮಾನ್ಯ ಜಾnನ ಪರೀಕ್ಷೆ ಮೂಲಕವೂ ಇದನ್ನು ಮಾಡಬಹುದು. ಪಾಲಕರು, ಶಿಕ್ಷಕರು ಒಂದಾಗಿ ನದಿ ಶಿಕ್ಷಣ ಕಾರ್ಯ ಕೈಗೆತ್ತಿಕೊಳ್ಳಬೇಕು. ನದಿ  ಸಾಕ್ಷ್ಯಚಿತ್ರ ಪ್ರದರ್ಶಿಸಬಹುದು. ಒಟ್ಟಿನಲ್ಲಿ ನದಿ ಮೂಲ, ಅರಣ್ಯ ವಿಶೇಷ, ವನ್ಯಸಂಕುಲ, ಜಲಚರ, ನದಿ ದಂಡೆಯ ಕಾಡು, ತೀರ್ಥ ಕ್ಷೇತ್ರ, ಮಳೆಯ ಸ್ಥಿತಿ, ಕೃಷಿ ವಿಶೇಷ ಬಿತ್ತರಿಸಬೇಕು. ನದಿ ಜೊತೆಗಿರುವ ಸಂಬಂಧ ಸೂಕ್ಷ್ಮ. ಅದನ್ನು ವಿವರಿಸಲು ಸಾಕಷ್ಟು ವಿಷಯಗಳಿವೆ. ಜಾnನ, ಜನಪದ, ಇತಿಹಾಸ, ಪುರಾಣ ಪುಣ್ಯಕತೆಗಳ ಮೂಲಕವೂ ನದಿ ಉಳಿಸುವ ಕೆಲಸ ಮಾಡಬಹುದು. ನದಿ ಒಣಗಲು,  ಮಾಲಿನ್ಯಕ್ಕೆ ಒಳಗಾಗಲು ಯಾರು ಕಾರಣರು ಎಂಬುದಕ್ಕಿಂತ ನಾವುಗಳೆಲ್ಲ ಸೇರಿ ಈಗ ಏನು ಮಾಡಬೇಕೆಂಬ ಕ್ರಿಯಾತ್ಮಕ ಯೋಜನೆ ಬೇಕು. ಭೂಮಿ ಎಲ್ಲರ ಭಾಗ, ಇಲ್ಲಿ ಅಬ್ಬರದ ಮಾತುಗಾರ ಮನುಷ್ಯನಷ್ಟೇ ಎಲೆಮರೆಯ ಇರುವೆಯ ಇರುವಿಕೆಯೂ ಮುಖ್ಯ. ನದಿಗಳಿಗೆ  ಮನುಷ್ಯರಿಗಿಂತ ಮರ, ಹುಲ್ಲು, ಮರಳು, ಕಲ್ಲು, ಮಣ್ಣು ಬೇಕು. ದೇಹದ ಯಾವುದೇ ಭಾಗಕ್ಕೆ ಗಾಯವಾದರೆ ಸಮಸ್ಯೆಯಾಗುತ್ತದೆ. ಹೊಸ ಬಡಾವಣೆ,  ರಸ್ತೆ, ಉದ್ಯಮಗಳ ಅಭಿವೃದ್ಧಿ ಜೀವ ನದಿಗಳಿಗೆ ಏಲ್ಲಿ ಎಂಥ ಅಪಾಯ ತರುತ್ತಿದೆಯೆಂಬ ಎಚ್ಚರಬೇಕಲ್ಲವೇ? ಹಸಿರಿಗೆ ಹೊಂದಿಕೊಳ್ಳಲು ಪರಿಸರಸ್ನೇಹಿ ನಡುವಳಿಕೆ ಮುಖ್ಯ. 

ಸರಕಾರಿ ಕಚೇರಿ, ದೇಗುಲ, ಶಾಲಾ ಆವರಣ, ಆಸ್ಪತ್ರೆ ಸೇರಿದಂತೆ ಜನ ಸೇರುವಲ್ಲಿ ನದಿ ಕಣಿವೆಯ ಪರಿಣಾಮಕಾರಿ ಪರಿಚಯ ಫ‌ಲಕ ಬರೆಯಬಹುದು. ಅರಣ್ಯ ಅಭಿವೃದ್ಧಿಗೆ ಜಾಗೃತಿ ಮೂಡಿಸಬಹುದು. ಮರ ಬೆಳೆಸುವ ಉತ್ತಮ ಮಾದರಿ, ಸಾಧಕರ ವಿವರ ತಿಳಿಸಿದರೆ ಇನ್ನಷ್ಟು ಜನ ಅದನ್ನು ಅನುಸರಿಸಬಹುದು. ಅರಣ್ಯ ಸಸ್ಯ ಪೂರೈಸುವ ನರ್ಸರಿಗಳ ವಿವರ ಬಿತ್ತರಿಸಿದರೆ ನೆಡುವವರಿಗೆ ಅನುಕೂಲ. ಹಳೆಯ ಕೆರೆಗಳ ಹೂಳೆತ್ತುವುದು, ಹೊಸ ಕೆರೆಗಳ ನಿರ್ಮಾಣಗಳನ್ನು ಸರಕಾರದ ಯೋಜನೆ, ಉದ್ಯಮ, ದೇಗುಲ, ಮಠ, ದಾನಿಗಳ ಸಹಾಯದಿಂದ ಮಾಡಬಹುದು. ಪಕ್ಷ, ಜಾತಿ, ಪ್ರಾದೇಶಿಕ ತಾರತಮ್ಯ ಹೊರತಾಗಿ ಕಣಿವೆಯ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ  ಅಗತ್ಯ.  ನದಿಗಳು ಕೋಟ್ಯಾಂತರ ವರ್ಷಗಳಿಂದ ಹೇಗೆ ಬದುಕಿದ್ದವು ಎಂಬುದಕ್ಕಿಂತ ಈ ತಲೆಮಾರಿನ ಎದುರು ಹೇಗೆ ಸಾಯುತ್ತಿವೆಯೆಂದು ಅರ್ಥಮಾಡಿಕೊಳ್ಳಬೇಕು. 

ನಿಜ, ನಿಸರ್ಗ ದೋಚುವವರು ಯಾವತ್ತೂ ಇದ್ದಾರೆ. ಅವರಿವರು ಏನು ಮಾಡಿದರೆಂಬುದಕ್ಕಿಂತ ರಚನಾತ್ಮಕ ಹೆಜ್ಜೆಗಳು ಮೊದಲು ನಮ್ಮಿಂದ ಶುರುವಾದರೆ ಸಂರಕ್ಷಣೆಯ ಸಮರದಲ್ಲಿ ಜಲಕ್ಷಾಮ ಗೆಲ್ಲಬಹುದು, ನದಿ ಬದುಕು ಬದಲಿಸಬಹುದು.

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next