Advertisement

Guarantee ಬಗ್ಗೆ ಬೇರೆ ರಾಜ್ಯದಲ್ಲಿ ಮಾತನಾಡಲು ಹೋಗಿ ಮುಖಭಂಗ ಅನುಭವಿಸಿದ್ದಾರೆ:ಕುಮಾರಸ್ವಾಮಿ

01:02 PM Nov 12, 2023 | Team Udayavani |

ಬೆಂಗಳೂರು: ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಆಡಳಿತಕ್ಕೆ‌ ಬಂದಿದೆ. ಬದುಕಿನ ಭಾಗ್ಯದ ಬಾಗಿಲು ತೆಗೆದಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಪ್ರತಿ ದಿನ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಐದು ಗ್ಯಾರಂಟಿಗಳ ಭಜನೆಗಳನ್ನು ನಿತ್ಯ ಕೇಳುತ್ತಿದ್ದೇವೆ. ಐದು ಗ್ಯಾರಂಟಿ ಪೈಕಿ ನಾಲ್ಕು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಗ್ಯಾರಂಟಿಗಳನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಹೊರಟಿದೆ. ಪಂಚ ರಾಜ್ಯದ ಚುನಾವಣೆಯಲ್ಲೂ ಇದೇ ಮಾದರಿ ಜಾರಿಗೆ ತರಲು ಕಾಂಗ್ರೆಸ್ ಹೊರಟಿದೆ. ಆದರೆ ಗ್ಯಾರಂಟಿಗಳು ಜನರ ಬದುಕಿಗೆ ಆಶಾದಾಯಕವಾಗಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟೀಕಿಸಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮೊದಲು ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್ ನಿಂಗೂ ಫ್ರೀ ಎಂದು ಘೋಷಿಸಿದ್ದರು. ಆದರೆ ಈಗ ಮಹದೇವಪ್ಪ ನಿಂಗೂ ಕತ್ತಲು ಕಾಕಾ ಪಾಟೀಲ್ ನಿಂಗೂ ಕತ್ತಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗೃಹಜ್ಯೋತಿ ಹೆಸರಿನಲ್ಲಿ ಹೊರ ರಾಜ್ಯದಿಂದ ವಿದ್ಯುತ್ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಇಲಾಖೆ ಅಧೋಗತಿಗೆ ತಲುಪಿದೆ. ಗೃಹ ಜ್ಯೋತಿ ಹೆಸರಲ್ಲಿ ಕತ್ತಲ ಭಾಗ್ಯ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.

ರೈತರಿಗೆ 24 ಗಂಟೆ ವಿದ್ಯುತ್ ನೀಡದ ಸರ್ಕಾರ ಬೇರೆ ರಾಜ್ಯದಲ್ಲಿ 24 ಗಂಟೆ ವಿದ್ಯುತ್ ನೀಡುವ ಕುರಿತಂತೆ ಮಾತನಾಡುತ್ತಾರೆ ಎಂದ ಎಚ್ ಡಿಕೆ, ಉಚಿತ ವಿದ್ಯುತ್ ಹೆಸರಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿದರು.

ತೆಲಂಗಾಣ ಚುನಾವಣೆಗೆ ಸಿಎಂ, ಡಿಸಿಎಂ (ಟೆಂಪ್ರವರಿ ಚೀಫ್ ಮಿನಿಸ್ಟರ್, ಡ್ಯುಪ್ಲಿಕೇಟ್ ಚೀಫ್ ಮಿನಿಸ್ಟರ್) ಉಸ್ತುವಾರಿ ಇದ್ದಾರೆ. ಐದು ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳಲು ಹೋಗಿ ಬೇರೆ ರಾಜ್ಯದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಗ್ಯಾರಂಟಿಗಳು ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿವೆ. ಹೀಗಾಗಿ ರಾಜ್ಯದಲ್ಲಿರುವ ಗ್ಯಾರಂಟಿಗಳ ವಾಸ್ತವ ಸ್ಥಿತಿ ತಿಳಿಸುವ ಕೆಲಸವಾಗುತ್ತಿದೆ. ಗ್ಯಾರಂಟಿಗಳ ಬಗ್ಗೆ ಮಾತನಾಡಲು ಹೋಗಿ ಮುಖಭಂಗ ಅನುಭವಿಸಿದೆ ಎಂದು ವ್ಯಂಗ್ಯವಾಡಿದರು.

ನಮ್ಮ ಡ್ಯುಪ್ಲಿಕೇಟ್ ಸಿಎಂ ಭಾಷಣವನ್ನೂ ಮಾಡಿದ್ದಾರೆ. 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸಿದ್ದರು. ಆ ಅವಧಿಯಲ್ಲಿ ಎರಡೂ ಮುಕ್ಕಾಲು ಲಕ್ಷ ಸರ್ಕಾರಿ ನೌಕರರ ನೇಮಕಾತಿ ಆಗಿಲ್ಲ. ಸದ್ಯ ರಾಜ್ಯದಲ್ಲಿ ಎರಡುವರೆ ಸಾವಿರ ಲಕ್ಷ ಸರ್ಕಾರಿ ಹುದ್ದೆ ಖಾಲಿಯಿದೆ. ರಾಜ್ಯದಲ್ಲಿ ಯಾಕೆ ನೇಮಕಾತಿ ಮಾಡುತ್ತಿಲ್ಲ? ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ನೌಕರರ ಕೊರತೆ ಇದೆ. ಬೇರೆ ರಾಜ್ಯದ ಪ್ರಣಾಳಿಕೆಯಲ್ಲಿ ಘೋಷಿಸುವ ಬದಲು ಮೊದಲು ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರರ ನೇಮಕ ಮಾಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Advertisement

ಬಿಜೆಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ಕೊಡುತ್ತಿತ್ತು. ತೆಲಂಗಾಣದಲ್ಲಿ ರೈತರಿಗೆ 15 ಸಾವಿರ ಕೊಡುತ್ತೇವೆಂದು‌ ಡ್ಯುಪ್ಲಿಕೇಟ್ ಸಿಎಂ ಹೇಳುತ್ತಾರೆ. ಆದರೆ ರಾಜ್ಯದ ರೈತರ ಹಿತ ಕಾಪಾಡುವ ಕೆಲಸ ಮರೆತು ಹೋಯ್ತಾ.? ರೈತರಿಗೆ ಈ ಹಿಂದೆ ಕೊಡುತ್ತಿದ್ದ ನಾಲ್ಕು ಸಾವಿರ ಯಾಕೆ ಕಡಿತ ಮಾಡಿದಿರಿ ಎಂದು ಪ್ರಶ್ನಿಸಿದರು.

ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ತಲುಪುತ್ತಿಲ್ಲ ಹಣ. ಕೇವಲ ನಾಮಾಕಾವಸ್ತೆ ಎನ್ನುವಂತೆ ಯೋಜನೆ ಜಾರಿ ಮಾಡಲಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ ಒಂದೂ ಮುಕ್ಕಾಲು ಫಲಾನುಭವಿಗಳಿಗೆ ಮೊದಲ ಕಂತು ಹಣ ತಲುಪಿಲ್ಲ. ತೆಲಂಗಾಣದಲ್ಲಿ ಅತ್ತೆಗೆ ನಾಲ್ಕು ಸಾವಿರ ಸೊಸೆಗೆ ಎರಡು ಸಾವಿರ ಕೊಡುತ್ತೇವೆ ಎನ್ನುತ್ತಾರೆ, ಅಲ್ಲಿ ಕೊಡುತ್ತೇವೆ ಎಂದಾದರೆ ಇಲ್ಲಿ ಯಾಕೆ ಅಷ್ಟು ಹಣ ಘೋಷಣೆ ಮಾಡಿಲ್ಲ ಎಂದು ಎಚ್ ಡಿಕೆ ಪ್ರಶ್ನೆ ಮಾಡಿದರು.

ಶಕ್ತಿ ಯೋಜನೆಯಡಿ ಉಚಿತ ಬಸ್ ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ. ಜೆಸಿಬಿಗಳ ಮೂಲಕ ಮಕ್ಕಳು ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಕ್ಯಾಂಟೀನ್, ಗುತ್ತಿಗೆದಾರರಿಂದ ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡುತ್ತಿರುವುದು ಸರಿಯಾ? ಗ್ಯಾರಂಟಿ ಸ್ಕೀಂ ಎಂದು ಉದ್ದುದ್ದ ಭಾಷಣ ಮಾಡುತ್ತಿದ್ದಾರೆ ಆದರೆ ಗ್ಯಾರಂಟಿ ಜಾರಿಗಾಗಿ ಸಾಲ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next